ಹೊಸದಿಲ್ಲಿ: ಪಾಕಿಸ್ತಾನದ ವಿರುದ್ದ ಭಾರತ ಮೇ 8ರಂದು 2ನೇ ದಿನವೂ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯನ್ನು ಮುಂದುವರೆಸಿದೆ. ಈ ಮಧ್ಯೆ ಪಾಕಿಸ್ತಾನವೂ ಪ್ರತಿ ದಾಳಿ ನಡೆಸಿ ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿ ಸಂಪೂರ್ಣವಾಗಿ ವಿಫಲವಾಗಿದೆ. ಪಾಕ್ ಸೇನೆಯು ಭಾರತದ ವಾಯು ನೆಲೆಗಳ ಮೇಲೆ ವಾಯು ದಾಳಿ ನಡೆಸಿದೆ. ಆದರೆ ಭಾರತದ ಶಕ್ತಿಯುತ S 400 ಏರ್ ಡಿಫೆನ್ಸ್ ಸಿಸ್ಟಮ್ ವಿರೋಧಿ ಸೇನೆಯ ಅಷ್ಟೂ ಡ್ರೋನ್ಗಳನ್ನು ಹೊಡೆದುರುಳಿಸಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ನಿವಾಸದಲ್ಲಿ ತುರ್ತು ಸಭೆ ಕರೆದಿದ್ದಾರೆ. ರಾಷ್ಷ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ (Ajit Doval) ಮೋದಿ ಅವರಿಗೆ ಭಾರತದ ಪ್ರತಿ ದಾಳಿಯ ಕುರಿತು ಮಾಹಿತಿಯನ್ನು ನೀಡುತ್ತಿದ್ದಾರೆ. ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಕೂಡ ತುರ್ತು ಸಭೆಯಲ್ಲಿ ಭಾಗವಹಿಸಿದ್ದಾರೆ.
ಪಾಕ್ ಪ್ರಯೋಗ ಮಾಡಿದ ಜೆಟ್, ಐವತ್ತಕ್ಕೂ ಹೆಚ್ಚು ಡ್ರೋನ್ಗಳು, ಶೆಲ್ ಮತ್ತು ಕ್ಷಿಪಣಿಗಳು ಟುಸ್ ಪಟಾಕಿಯಂತೆ ನೆಲಕ್ಕೆ ಉರುಳಿವೆ. S 400 ಡಿಫೆನ್ಸ್ ಸಿಸ್ಟಮ್ ಎದುರು ಪಾಕ್ನ ಎಲ್ಲ ಶಸ್ತಾಸ್ತ್ರಗಳು ತರೆಗೆಲೆಯಂತೆ ಅಲ್ಲಾಡಿ ಹೋಗಿವೆ. ಹಾಗಾಗಿ ಪಾಕ್ನ ಅಷ್ಟು ದಾಳಿಯೂ ವಿಫಲವಾಗಿದ್ದು ಭಾರತದ ವಾಯು ನೆಲೆಗಳಾದ ಪಠಾಣ್ ಕೋಟ್, ಜೈಸಲ್ಮೇರ್ ಸುರಕ್ಷಿತವಾಗಿವೆ ಎಂಬ ಮಾಹಿತಿಯಿದೆ. ಜೈಸಲ್ಮೇರ್ನಲ್ಲಿ 200 ಕ್ಷಿಪಣಿ ದಾಳಿಗೆ ಪಾಕ್ನವರು ಯತ್ನಿಸಿದರೂ ಅದು ವಿಫಲವಾಗಿದೆ. ಇನ್ನು ದಾಳಿ ನಡೆದ ವಿವಿಧ ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು ಬ್ಲ್ಯಾಕ್ ಔಟ್ ಘೋಷಿಸಲಾಗಿದೆ. ಸ್ಥಳೀಯ ನಾಗರಿಕರನ್ನು ಸುರಕ್ಷಿತವಾದ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಸ್ವತಃ ಪಾಕಿಸ್ತಾನದ ಸೇನೆಯು ಭಾರತ ಜೆಟ್ ವಿಮಾನಗಳನ್ನು ಹೊಡೆದುರುಳಿಸಿರುವುದನ್ನು ಖಚಿತಪಡಿಸಿದೆ.
ಭಾರತದಿಂದ ಪ್ರತಿ ದಾಳಿ: ಲಾಹೋರ್ನತ್ತ ಸೇನೆ
ಭಾರತದ ಗಡಿಯಿಂದ 24 ಕಿ.ಮೀ ದೂರದಲ್ಲಿರುವ ಲಾಹೋರ್ನತ್ತ ಭಾರತದ ಕ್ಷಿಪಣಿಗಳು ಧಾವಿಸಿವೆ. ಉಗ್ರ ನೆಲೆಯನ್ನು ಗುರಿಯಾಗಿಸಿ ಈ ದಾಳಿ ನಡೆಯುತ್ತಿದೆ. ಈ ಮೂಲಕ ಭಾರತದ ಸೇನೆಯು ಪಾಕಿಸ್ತಾನಕ್ಕೆ ಖಡಕ್ ಉತ್ತರ ನೀಡಲು ಮುಂದಾಗಿದೆ.ಲಾಹೋರ್ನಲ್ಲಿ ಬೀಡು ಬಿಟ್ಟಿರುವ ಲಷ್ಕರ್ ಎ ತಯ್ಯಬ ಮುಖ್ಯಸ್ಥ ಉಗ್ರಗಾಮಿ ಹಫೀಸ್ ಸಯೀದ್ ಮನೆಯನ್ನು ಭಾರತೀಯ ಸೇನೆ ಟಾರ್ಗೆಟ್ ಮಾಡಿದೆ. ಅವನ ಮನೆಯನ್ನು ಧ್ವಂಸಗೊಳಿಸುವ ಎಲ್ಲ ಮುನ್ಸೂಚನೆಯೂ ಇದೆ.
ಜೈಶಂಕರ್ ಎಚ್ಚರಿಕೆ
ಪಾಕಿಸ್ತಾನದ ಪ್ರತಿದಾಳಿಯನ್ನು ವಿರೋಧಿಸಿರುವ ವಿದೇಶಾಂಗ ಸಚಿವ ಜೈಶಂಕರ್ ಯುದ್ಧ ಪ್ರಚೋದನೆಯನ್ನು ನಿಲ್ಲಿಸುವಂತೆ ಪಾಕ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಮೆರಿಕಾದ ಜತೆಗೂ ಈ ಕುರಿತು ಮಾತನಾಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.