ಮುಂಬೈ: ಮಹಾರಾಷ್ಟ್ರದ ಮಾಜಿ ಶಾಸಕ, ಬೀಡ್ ಜಿಲ್ಲೆಯ ಬಿಜೆಪಿ ನಾಯಕ ಆರ್.ಟಿ.ದೇಶ್ಮುಖ್ (RT Deshmukh) ಲಾತೂರ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ (ಮೇ 26) ಸಂಜೆ ಈ ದುರ್ಘಟನೆ ನಡೆದಿದೆ (Road Accident). ದೇಶ್ಮುಖ್ ತುಲ್ಜಾಪುರ-ಲಾತೂರ್ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಮಧ್ಯ ಮಹಾರಾಷ್ಟ್ರ ಜಿಲ್ಲೆಯ ಬೆಲ್ಕುಂಡ್ ಗ್ರಾಮದ ಬಳಿಯ ಫ್ಲೈಓವರ್ನಲ್ಲಿ ಸಂಜೆ 4.15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
"ಕಾರು ಫ್ಲೈಓವರ್ಗೆ ಪ್ರವೇಶಿಸಿದ ತಕ್ಷಣ ಎರಡು ಬಾರಿ ಪಲ್ಟಿಯಾಗಿ ಕೆಳಗುರುಳಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ನಾಲ್ವರು ಪೊಲೀಸರು ಸ್ಥಳೀಯರ ಸಹಾಯದಿಂದ ಚಾಲಕ ಮತ್ತು ದೇಶಮುಖ್ ಅವರನ್ನು ಕಾರಿನಿಂದ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದರು" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತೀವ್ರ ಗಾಯಗೊಂಡಿದ್ದ, ಕಾರಿನ ಮುಂಭಾಗದಲ್ಲಿದ್ದ ದೇಶಮುಖ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.
ಕಾರು ಚಾಲಕ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶಮುಖ್ 2014ರಿಂದ 2019ರವರೆಗೆ ಬೀಡ್ ಜಿಲ್ಲೆಯ ಮಜಲ್ಗಾಂವ್ನ ಬಿಜೆಪಿ ಶಾಸಕರಾಗಿದ್ದರು.
ಈ ಸುದ್ದಿಯನ್ನೂ ಓದಿ: Scientist Srinivasan: ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ವಿಜ್ಞಾನಿ ಎಂ.ಆರ್.ಶ್ರೀನಿವಾಸನ್ ನಿಧನ
ಬಾಲಿವುಡ್ ಖ್ಯಾತ ನಟ ಮುಕುಲ್ ದೇವ್ ನಿಧನ
ಮುಂಬೈ: ಬಾಲಿವುಡ್ ನಟ ಮುಕುಲ್ ದೇವ್ (Mukul Dev) ಶುಕ್ರವಾರ ತಡರಾತ್ರಿ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ಹಾಗಾಗಿ ಅವರನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಹಿಂದಿ, ಪಂಜಾಬಿ ಮತ್ತು ದಕ್ಷಿಣ ಭಾರತೀಯ ಚಲನಚಿತ್ರಗಳು ಹಾಗೂ ದೂರದರ್ಶನದಲ್ಲಿ ಇವರು ಅಭಿನಯಿಸಿದ್ದರು. ಮುಕುಲ್ ದೇವ್ ಅವರಿಗೆ 54 ವರ್ಷ ವಯಸ್ಸಾಗಿತ್ತು.
ಮುಕುಲ್ ದೇವ್ ದಿಲ್ಲಿಯ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಜಲಂಧರ್ ಬಳಿಯ ಹಳ್ಳಿ ಇವರ ಮೂಲ. ಅವರ ತಂದೆ ಹರಿ ದೇವ್, ಸಹಾಯಕ ಪೊಲೀಸ್ ಆಯುಕ್ತರಾಗಿದ್ದರು. ʼದಸ್ತಕ್ʼ (1996) ಹಿಂದಿ ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. ಅದರಲ್ಲಿ ಸುಶ್ಮಿತಾ ಸೇನ್ ಕೂಡ ಅಭಿನಯಿಸಿದ್ದರು. ನಂತರ ಮುಕುಲ್ ʼಯಮ್ಲಾ ಪಗ್ಲಾ ದೀವಾನಾʼ, ʼಸನ್ ಆಫ್ ಸರ್ದಾರ್ʼ, ʼಆರ್...ರಾಜ್ಕುಮಾರ್ʼ ʼಜೈ ಹೋʼ ಮುಂತಾದ ಹಲವು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.