ರಿಯಾದ್ (ಸೌದಿ ಅರೇಬಿಯಾ), ಮಾರ್ಚ್ 9: ಮಧ್ಯಪ್ರಾಚ್ಯದಲ್ಲಿನ ಯುದ್ಧದ (Iran- Israel War) ಜ್ವಾಲೆ ಇದೀಗ ಭಾರತೀಯ ಕುಟುಂಬಗಳಿಗೂ ವಿಸ್ತರಿಸುತ್ತಿದೆ. ಸೌದಿ ಅರೇಬಿಯಾದ (Saudi Arabia) ರಾಜಧಾನಿ ರಿಯಾದ್ (Riyadh) ನಲ್ಲಿ ಅಲ್-ಖರ್ಜ್ ನಗರದ ವಸತಿ ಪ್ರದೇಶದ ಮೇಲೆ ಇರಾನ್ (Iran) ನಡೆಸಿದ ಕ್ಷಿಪಣಿ ದಾಳಿಯಲ್ಲಿ (Missile attack) ಒಬ್ಬ ಭಾರತೀಯ ಸೇರಿದಂತೆ ಇಬ್ಬರು ವಿದೇಶಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಾರ್ಚ್ 8, 2026 ರಂದು ನಡೆದ ಈ ದಾಳಿಯಲ್ಲಿ ಒಟ್ಟು ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಬಾಂಗ್ಲಾದೇಶದ ಪ್ರಜೆಯಾಗಿದ್ದಾರೆ.
ಇರಾನ್ನ ಕ್ರಾಂತಿಕಾರಿ ಗಾರ್ಡ್ಗಳು ಅಲ್-ಖರ್ಜ್ನಲ್ಲಿರುವ ರೇಡಾರ್ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ್ದವು. ಈ ವೇಳೆ ಒಂದು ಕ್ಷಿಪಣಿ ಜನವಸತಿ ಪ್ರದೇಶಕ್ಕೆ ಬಿದ್ದಿದ್ದರಿಂದ ಸಾವು-ನೋವು ಸಂಭವಿಸಿದೆ. ಘಟನೆಯ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ ಇಲಾಖೆಯು “ಈ ಘಟನೆಯು ಇಂದು ಮುಂಜಾನೆ ಅಲ್-ಖಾರ್ಜ್ ನಗರದಲ್ಲಿ ನಡೆದಿದ್ದು, ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ಈ ದಾಳಿಯು ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ" ಎಂದು ದಾಳಿಯನ್ನು ಖಂಡಿಸಿದ್ದಾರೆ. ಜೊತೆಗೆ ಇಬ್ಬರು ಬಲಿಯಾದವರು ವಿದೇಶಿ ಪ್ರಜೆಗಳು - ಒಬ್ಬರು ಭಾರತೀಯ ಮತ್ತು ಒಬ್ಬರು ಬಾಂಗ್ಲಾದೇಶಿ - ಗಾಯಗೊಂಡ 12 ಮಂದಿಯೂ ಬಾಂಗ್ಲಾದೇಶದ ನಿವಾಸಿಗಳು ಎಂದು ತಿಳಿಸಿದೆ.
1700ರ ಗಡಿ ದಾಟಿದ ಸಾವಿನ ಸಂಖ್ಯೆ
ಅಮೆರಿಕ, ಇಸ್ರೇಲ್-ಇರಾನ್ ನಡುವಿನ ಸಂಘರ್ಷ 9ನೇ ದಿನ ತೀವ್ರ ಸ್ವರೂಪ ಪಡೆದುಕೊಂಡಿದೆ. ದಾಳಿ-ಪ್ರತಿದಾಳಿಯ ಕಿಚ್ಚಿಗೆ ಬಲಿಯಾದವರ ಸಂಖ್ಯೆ 1,700ರ ಗಡಿ ದಾಟಿದೆ. ಇರಾನ್ ಪ್ರತೀಕಾರದ ದಾಳಿಯಲ್ಲಿ ಅಮೆರಿಕದ 25 ಯೋಧರು ಹತರಾಗಿದ್ದಾರೆ. ತೈಲ ಸಂಗ್ರಹಾಗಾರಗಳ ಮೇಲಿನ ದಾಳಿಯಿಂದ ಟೆಹ್ರಾನ್ ನಗರ ಬೆಂಕಿ ಉಂಡೆಗಳ ಮಳೆಯ ಸುಳಿಗೆ ಸಿಲುಕಿದೆ. ಹತರಾದ ಇರಾನ್ ಪರಮೋಚ್ಚ ನಾಯಕ ಅಯಾತೊಲ್ಲಾ ಖಮೇನಿ ಅವರ ಉತ್ತರಾಧಿಕಾರಿ ಆಯ್ಕೆ ನಡುವೆಯೇ ಭಾನುವಾರ ಇರಾನ್ನ ಐದು ಪ್ರಮುಖ ತೈಲಾಗಾರ, ಸಂಸ್ಕರಣಾ ಘಟಕಗಳು, 25 ತೈಲ ಟ್ಯಾಂಕರ್ಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ.
Iran-Israel War: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್
ಟೆಹ್ರಾನ್ ನಗರದ ಸುತ್ತಮುತ್ತಲ ಪ್ರಮುಖ 5 ಪ್ರಮುಖ ತೈಲ ಸಂಗ್ರಹಾರಗಳನ್ನು ಇಸ್ರೇಲ್ ಧ್ವಂಸಗೊಳಿಸಿದೆ. ಶಹರಾನ್, ಅಘ್ದಾಸಿಯೆ ತೈಲ ಡಿಪೋ ಸೇರಿದಂತೆ ಹಲವು ತೈಲಗಾಲಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ. ತೈಲ ಸಾಗಿಸುತ್ತಿದ್ದ 25 ಟ್ಯಾಂಕರ್ಗಳನ್ನು ಧ್ವಂಸಗೊಳಿಸಿದೆ. ಇಸ್ರೇಲ್ ಬಾಂಬ್ ದಾಳಿ ಪರಿಣಾಮ ಟೆಹ್ರಾನ್ ನಗರದಾದ್ಯಂತ ಆಗ್ನಿಯ ಜ್ವಾಲೆ ಆವರಿಸಿಕೊಂಡಿದೆ. ಆಗಸದಲ್ಲಿ ಬೆಂಕಿಯ ಕಿಡಿಗಳು ಮಳೆಯಂತೆ ಸುರಿಯುತ್ತಿದ್ದು, ಜನ ಭೀತರಾಗಿದ್ದಾರೆ. ವೈಮಾನಿಕ ದಾಳಿಯಲ್ಲಿ ತೈಲ ಟ್ಯಾಂಕರ್ಗಳ ಇಬ್ಬರು ಚಾಲಕರು ಸೇರಿ 4 ಮಂದಿ ಮೃತಪಟ್ಟಿದ್ದಾರೆ.
Iran- Israel War: ಖಮೇನಿ ಹತ್ಯೆ ಖಂಡಿಸಿ ಪ್ರತಿಭಟಿಸಿದ ಕಾಂಗ್ರೆಸ್ ಶಾಸಕನಿಗೆ ಈಗ ಸಂಕಷ್ಟ
ಅಮೆರಿಕ ಯೋಧರ ಹತ್ಯೆ
ಅಮೆರಿಕ ಹಾಗೂ ಅದರ ಮಿತ್ರಕೂಟದ ವಿರುದ್ಧ ಇರಾನ್ ಪ್ರತೀಕಾರದ ದಾಳಿ ಮುಂದುವರಿಸಿದೆ. ಬಹರೇನ್ನ ಮನಾಮದಲ್ಲಿರುವ ಅಮೆರಿಕ ನೌಕಾಪಡೆಯ ಪ್ರಧಾನ ಕಚೇರಿ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿಅಮೆರಿಕದ 21 ಯೋಧರು ಹತರಾಗಿದ್ದಾರೆ. ಹಿಂದೂ ಮಹಾಸಾಗರದಲ್ಲಿ ಐರಿಸ್ ದೇನಾ ಹಡಗು ಮುಳುಗಿಸಿ ತನ್ನ 87 ಯೋಧರನ್ನು ಕೊಂದಿದ್ದ ಅಮೆರಿಕ ವಿರುದ್ಧ ಇರಾನ್ ಸೇಡು ತೀರಿಸಿಕೊಂಡಿದೆ.
ಇನ್ನೊಂದೆಡೆ ನಾರ್ವೆಯ ಒಸ್ಲೊದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಬಾಂಬ್ ದಾಳಿಯಲ್ಲಿ ಕಚೇರಿಗೆ ಸಣ್ಣಪುಟ್ಟ ಹಾನಿಯಾಗಿದೆ. ಆದರೆ, ಯಾವುದೇ ಸಾವು-ನೋವು ಸಂಭವಿಸಿಲ್ಲ. ದಾಳಿ ನಡೆಸಿದವರು ಯಾರು ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ನಾರ್ವೆ ಅಧಿಕಾರಿಗಳು ತಿಳಿಸಿದ್ದಾರೆ.