ತಿರುವನಂತಪುರಂ, ಮೇ 4: ಇಡೇ ದೇಶದ ಗಮನ ಸೆಳೆದ ಪಂಚ ವಿಧಾನಸಭೆಗಳ ಚುನಾವಣೆ ಫಲಿತಾಂಶ (Assembly Election Result 2026) ಹೊರ ಬೀಳುತ್ತಿದ್ದು, ಸರ್ಕಾರ ರಚನೆಯ, ಅಧಿಕಾರ ಹಿಡಿಯುವ ಲೆಕ್ಕಾಚಾರ ಚರ್ಚೆ ಆರಂಭವಾಗಿದೆ. ಎಕ್ಸಿಟ್ ಪೋಲ್ ವರದಿಯಂತೆ ಕೇರಳಂನಲ್ಲಿ ಎಡಪಕ್ಷ ನೇತೃತ್ವದ ಎಲ್ಡಿಎಫ್ಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ರಚನೆಯತ್ತ ಮುನ್ನಡೆಯುತ್ತಿದ್ದು, ಬಿಜೆಪಿಯೂ ತನ್ನ ಪ್ರಭಾವ ಬೀರತೊಡಗಿರುವ ಸ್ಪಷ್ಟ ಸೂಚನೆ ಸಿಕ್ಕಿದೆ.
ಈಗ ಬಂದಿರುವ ಪ್ರಕಾರ ಯುಡಿಎಫ್ 92 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಎಲ್ಡಿಎಫ್ 46 ಕಡೆಗಳಿಗೆ ಸೀಮಿತವಾಗಿದೆ. ಇನ್ನು ಎನ್ಡಿಎ 2 ಕ್ಷೇತ್ರಗಳಲ್ಲಿ ಮುಂದಿದೆ. ಕೇರಳಂನಲ್ಲಿ ಒಟ್ಟು 140 ಕ್ಷೇತ್ರಗಲಿದ್ದು, ಮ್ಯಾಜಿಕ್ ನಂಬರ್ 71.
ಬಹುತೇಕ ಎಕ್ಸಿಟ್ ಪೋಲ್ಗಳು ಯುಡಿಎಫ್ ಸರ್ಕಾರ ರಚನೆಯ ಭವಿಷ್ಯ ನುಡಿದಿದ್ದವು. ಆ ಮೂಲಕ ಸತತ 2 ಅವಧಿಯ ಎಲ್ಡಿಎಫ್ ಸರ್ಕಾರ ಪತನವಾಗಲಿದೆ ಎಂದಿದ್ದವು. ಈ ಭವಿಷ್ಯ ಬಹುತೇಕ ನಿಜವಾಗುತ್ತಿದ್ದು, ಮೂರನೇ ಬಾರಿಗೆ ಮುಖ್ಯಮಂತ್ರಿಯಾಗುವ ಪಿಣರಾಯಿ ವಿಜಯನ್ ಕನಸು ಭಗ್ನವಾದಂತಿದೆ.
ಪಶ್ಚಿಮ ಬಂಗಾಳದಲ್ಲಿ ಅಧಿಕಾರದತ್ತ ಬಿಜೆಪಿ: ಸುವೇಂದು ವಿರುದ್ಧ ಮಮತಾ ಮುನ್ನಡೆ
ಸಚಿವರೇ ಹಿನ್ನಡೆಯಲ್ಲಿ...
ಅಚ್ಚರಿ ಎಂದರೆ ಆಡಳಿತರೂಢ ಎಲ್ಡಿಎಫ್ ಸಂಪುಟದ ಕನಿಷ್ಠ 12 ಸಚಿವರು ಹಿನ್ನಡೆಯಲ್ಲಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಭದ್ರಕೋಟೆ ಎಂದು ಪರಿಗಣಿಸಲಾದ ಮತ್ತು ಅವರ ಗ್ರಾಮ ಪಿಣರಾಯಿಗೆ ಸೇರುವ ಧರ್ಮಡಂನಲ್ಲಿಯೂ ಸಹ ಎಲ್ಡಿಎಫ್ ಹಿನ್ನಡೆಯಲ್ಲಿದೆ. ವಿವಿಧ ವರದಿಗಳ ಪ್ರಕಾರ, ಸಚಿವರಾದ ವೀಣಾ ಜಾರ್ಜ್, ಎಂ.ಬಿ. ರಾಜೇಶ್, ಒ.ಆರ್. ಕೇಳು, ಆರ್. ಬಿಂದು, ಜೆ. ಚಿಂಚುರಾಣಿ, ಪಿ. ರಾಜೀವ್, ಕೆ.ಬಿ. ಗಣೇಶ್ ಕುಮಾರ್, ವಿ.ಎನ್. ವಾಸವನ್, ವಿ. ಶಿವನ್ ಕುಟ್ಟಿ, ವಿ.ಅಬ್ದುಲ್ ರಹಿಮಾನ್, ಎ.ಕೆ. ಸಸೀಂದ್ರನ್ ಮತ್ತು ರೋಶಿ ಅಗಸ್ಟೀನ್ ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆಯಲ್ಲಿದ್ದಾರೆ. ಇನ್ನು ಬಿಜೆಪಿ ನೇತೃತ್ವದ ಎನ್ಡಿಎ ಉತ್ತಮ ಪ್ರದರ್ಶನ ತೋರಿದ್ದು, ಕನಿಷ್ಠ 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಹಲವು ದಶಕಗಳಿಂದ ಇಲ್ಲಿ ಎಡಪಕ್ಷಗಳ ನೇತೃತ್ವದ ಎಲ್ಡಿಎಫ್ ಮತ್ತು ಕಾಂಗ್ರೆಸ್ ಮುಂದಾಳತ್ವದ ಯುಡಿಎಫ್ ಪರ್ಯಾಯ ಅವಧಿಗೆ ಸರ್ಕಾರ ರಚಿಸುತ್ತಲೇ ಬಂದಿವೆ. ಅಂದರೆ ಒಂದು ಅವಧಿಗೆ ಎಲ್ಡಿಎಫ್ ಸರ್ಕಾರ ರಚಿಸಿದರೆ ಮತ್ತೊಂದು ಅವಧಿಗೆ ಯುಡಿಎಫ್ ಅಧಿಕಾರ ಹಿಡಿಯುತ್ತಿತ್ತು. ಆದರೆ 10 ವರ್ಷಗಳಿಂದ ಎಲ್ಡಿಎಫ್ ಸರ್ಕಾರ ಅಸ್ತಿತ್ವದಲ್ಲಿದೆ. ಈ ಬಾರಿ ಮತ್ತೆ ಎಲ್ಡಿಎಫ್ ಅಧಿಕಾರಕ್ಕೇರುವ ಸಾಧ್ಯತೆ ಕಮರಿದೆ.