ಜೈಪುರ: ರಾಜಸ್ಥಾನದ ಕೋಟಾದಲ್ಲಿ ಭಾನುವಾರ (ಸೆಪ್ಟೆಂಬರ್ 28) ಮುಂಜಾನೆ ಸುಮಾರು 2 ಗಂಟೆಗೆ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಾಲಿವುಡ್, ಕಿರುತೆರೆಯ ಬಾಲನಟ 10 ವರ್ಷದ ಬಾಲಕ ಮತ್ತು ಆತನ 15 ವರ್ಷದ ಸಹೋದರ ಮೃತಪಟ್ಟಿದ್ದಾರೆ (Fire Accident). ಮೃತರನ್ನು ನಟಿ ರೀಟಾ ಶರ್ಮಾ (Rita Sharma) ಅವರ ಮಕ್ಕಳಾದ ವೀರ್ ಶರ್ಮಾ (Veer Sharma) ಮತ್ತು ಶೌರ್ಯ ಶರ್ಮಾ (Shourya Sharma) ಎಂದು ಗುರುತಿಸಲಾಗಿದೆ. ಕೋಟಾದ ಅನಂತಪುರದಲ್ಲಿರುವ ದೀಪ್ಶ್ರೀ ಅಪಾರ್ಟ್ಮೆಂಟ್ನ ಇವರ ನಿವಾಸದಲ್ಲಿ ದುರಂತ ಸಂಭವಿಸಿದೆ. ಘಟನೆ ವೇಳೆ ಮಕ್ಕಳ ಪೋಷಕರಾದ ರೀಟಾ ಶರ್ಮಾ ಮತ್ತು ಜಿತೇಂದ್ರ ಶರ್ಮಾ ಮನೆಯಲ್ಲಿರಲಿಲ್ಲ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ರಾತ್ರಿ ಮನೆಯೊಳಗಿನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಧಾವಿಸಿ ಬಂದಾಗ ಮಕ್ಕಳಿಬ್ಬರು ಅಸುನೀಗಿದ್ದರು. ಈ ವೇಳೆ ಕಾರ್ಯ ನಿಮಿತ್ತ ರೀಟಾ ಮುಂಬೈಗೆ ತೆರಳಿದ್ದರೆ ಜಿತೇಂದ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೊರಗಡೆ ಹೋಗಿದ್ದರು. ಮನೆಯಲ್ಲಿ ಮಕ್ಕಳಿಬ್ಬರೇ ಇದ್ದರು ಎನ್ನಲಾಗಿದೆ. ಹೊಗೆಯಿಂದ ಉಸಿರುಗಟ್ಟಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Fire Accident: ಪ್ರಯಾಗ್ರಾಜ್ನಲ್ಲಿ ಮತ್ತೆ ಬೆಂಕಿ ಅವಘಡ-ಹೊತ್ತಿ ಉರಿದ ಕಾರುಗಳು!
ಬಾಲಕ ಲಕ್ಷ್ಮಣ ಪಾತ್ರದಲ್ಲಿ ಮಿಂಚಿದ್ದ ವೀರ್
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ 'ವೀರ್ ಹನುಮಾನ್'ನಲ್ಲಿ ವೀರ್ ಬಾಲಕ ಲಕ್ಷ್ಮಣ ಪಾತ್ರ ನಿರ್ವಹಿಸಿದ್ದ. ಹಿಂದಿ ಚಿತ್ರವೊಂದರಲ್ಲಿ ಸೈಫ್ ಆಲಿ ಖಾನ್ ಅವರ ಬಾಲ್ಯದ ಪಾತ್ರದಲ್ಲಿ ನಟಿಸುತ್ತಿದ್ದ. ಜತೆಗೆಕೆಲವು ರಾಜಸ್ಥಾನಿ ಆಲ್ಬಂ ಹಾಡಿನಲ್ಲೂ ಕಾಣಿಸಿಕೊಂಡಿದ್ದ. ಈತನ ಸಹೋದರ ಶೌರ್ಯ ಶರ್ಮಾ ಐಐಟಿ ಎಂಟ್ರಸ್ ಪರೀಕ್ಷೆಯ ಸಿದ್ಧತೆಯಲ್ಲಿದ್ದ ಎನ್ನಲಾಗಿದೆ.
ಬಾಲಿವುಡ್ ನಟಿ ರೀಟಾ ಶರ್ಮಾ ಹಲವು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರೀಟಾ ಶರ್ಮಾ ʼಕ್ರಾಶ್ ಕೋರ್ಸ್ʼ (2022), ʼಕ್ರೈಮ್ಸ್ ಆ್ಯಂಡ್ ಕನ್ಫೆಷನ್ಸ್ʼ (2021), ʼಚಹಟೈನ್ʼ (2025) ಮುಂತಾದ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಿಸ್ ಬಲ್ಗೇರಿಯಾ ಟೈಟಲ್ ವಿಜೇತರಾದ ಅವರು ಶೂಟಿಂಗ್ ನಿಮಿತ್ತ ಮುಂಬೈಗೆ ತೆರಳಿದ್ದರು. ಜಿತೇಂದ್ರ ಶರ್ಮಾ ಕೋಚಿಂಗ್ ಸೆಂಟರ್ನಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಘಟನೆಯ ಭೀಕರತೆ ತೆರೆದಿಟ್ಟ ಪೊಲೀಸರು
ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ತೇಜಸ್ವಿನಿ ಗೌತಮ್, ʼʼಬೆಂಕಿಯಿಂದ ಡ್ರಾಯಿಂಗ್ ರೂಮ್, ಪೀಠೋಪಕರಣ, ಎಸಿ, ಟಿವಿ ಮತ್ತು ಇತರ ವಿದ್ಯುತ್ ಉಪಕರಣಗಳು ನಾಶವಾಗಿವೆ. ಕರ್ಟನ್ಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಹೊಗೆಯಿಂದ ಉಸಿರುಗಟ್ಟಿ ಅವರು ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆʼʼ ಎಂದು ವಿವರಿಸಿದ್ದಾರೆ.
ನೇತ್ರದಾನ
ಸದ್ಯ ಬಾಲಕರಿಬ್ಬರ ಹೆತ್ತವರು ನೇತ್ರದಾನಕ್ಕೆ ನಿರ್ಧರಿಸಿದ್ದಾರೆ. ಆ ಮೂಲಕ ಬಾಲಕರಿಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆಯಲಿದ್ದಾರೆ.