ನವದೆಹಲಿ: ಈ ಬಾರಿಯ ದೀಪಾವಳಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi )ಯವರಿಗೆ ಭಾರತೀಯ ನೌಕಾಪಡೆ(Navy) ಅಪರೂಪದ ಉಡುಗೊರೆಯೊಂದನ್ನು ನೀಡಿದೆ. ಪ್ರಧಾನಿ ಮೋದಿಗಾಗಿ ಆಪರೇಷನ್ ಸಿಂಧೂರ್(Operation Sindoor) ಕುರಿತಾದ 'ಕಸಮ್ ಸಿಂಧೂರ್ ಕೀ' ಎಂಬ ಹಾಡನ್ನು ಬರೆದು, ಅವರ ಮುಂದೆಯೇ ನೌಕಾಪಡೆಯ ಸಿಬ್ಬಂದಿ ಒಟ್ಟಾಗಿ ಹಾಡಿದ್ದಾರೆ. ಈ ಮಧುರ ಕ್ಷಣಕ್ಕೆ ಸಾಕ್ಷಿಯಾಗಿದ್ದು ಭಾರತದ ಮೊದಲ ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ (INS Vikrant) ಹಡಗು.
ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ದೀಪಾವಳಿಯನ್ನು ಗೋವಾ(Goa) ಮತ್ತು ಕಾರವಾರ(Karwar) ಕರಾವಳಿಯಲ್ಲಿ ಐಎನ್ಎಸ್ ವಿಕ್ರಾಂತ್ನಲ್ಲಿ ನೌಕಾಪಡೆಯ ಸಿಬ್ಬಂದಿಯೊಂದಿಗೆ ಆಚರಿಸಿದ್ದಾರೆ. ಈ ಆಚರಣೆ ವೇಳೆ ತಮಗಾಗಿ ಹಾಡಿರುವ ಈ ಹಾಡವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಮೋದಿ, "ನಿನ್ನೆ ಸಂಜೆ ಐಎನ್ಎಸ್ ವಿಕ್ರಾಂತ್ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನನ್ನ ನೆನಪಿನಲ್ಲಿ ಸದಾ ಉಳಿಯಲಿದೆ. ಈ ಪವಿತ್ರ ಹಬ್ಬವನ್ನು ನೌಕಪಡೆಯೊಂದಿಗೆ ಆಚರಿಸುತ್ತಿರುವುದು ನನ್ನ ಅದೃಷ್ಟ. ನೌಕಾ ಸಿಬ್ಬಂದಿಯು ಬಹುಮುಖ ಪ್ರತಿಭೆಗಳಾಗಿದ್ದು, ಅವರು ಬರೆದ ‘ಕಸಂ ಸಿಂಧೂರ್ ಕೀ’ ಎಂಬ ಗೀತೆ ನನ್ನ ಮನ ಮುಟ್ಟಿದೆ." ಎಂದು ಬರೆದುಕೊಂಡಿದ್ದಾರೆ.
ಐಎನ್ಎಸ್ ವಿಕ್ರಾಂತ್ನಲ್ಲಿ ದೀಪಾವಳಿ ಆಚರಿಸಿದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷ ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ಈ ಬಾರಿಯ ಬೆಳಕಿನ ಹಬ್ಬವನ್ನು ಅವರು ಐಎನ್ಎಸ್ ವಿಕ್ರಾಂತ್ನಲ್ಲಿ ನೌಕಾಪಡೆಯೊಂದಿಗೆ ಆಚರಿಸಿರುವುದು ವಿಶೇಷ. ಭಾರತದ ಮೊದಲ ದೇಶೀಯವಾಗಿ ನಿರ್ಮಿಸಲಾದ ವಿಮಾನವಾಹಕ ನೌಕೆ ಇದಾಗಿದ್ದು, ಇದು ಭಾರತದ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಆಪರೇಷನ್ ಸಿಂಧೂರ್ ವೇಳೆ ಕೆಲವೇ ದಿನಗಳಲ್ಲಿ ಪಾಕಿಸ್ತಾನವನ್ನು ಮಣಿಸಿತ್ತು, ಎಂದು ಪ್ರಧಾನಿ ಮೋದಿ ಸ್ಮರಿಸಿದರು.
ಪ್ರಧಾನಿ ಮೋದಿ ಭಾನುವಾರ ಸಂಜೆ ಗೋವಾ ಕರಾವಳಿಯಿಂದ ಬಂದಿಳಿದ ನಂತರ, ನೌಕಾಪಡೆ ಅಧಿಕಾರಿಗಳು ಮತ್ತು ನಾವಿಕರೊಂದಿಗೆ ಸಂವಾದ ನಡೆಸಿದರು. ಮಿಗ್ -29 ಕೆ ಯುದ್ಧ ವಿಮಾನಗಳಿಂದ ತುಂಬಿದ್ದ ವಿಮಾನ ಡೆಕ್ನಲ್ಲಿ ಹಗಲು ಮತ್ತು ರಾತ್ರಿಯ ಟೇಕ್-ಆಫ್ ಮತ್ತು ಲ್ಯಾಂಡಿಂಗ್ಗಳನ್ನು ವೀಕ್ಷಿಸಿದ ಅವರು, ಈ ಅನುಭವ ಸ್ಪೂರ್ತಿದಾಯಕ ಎಂದು ಹೇಳಿದ್ದಾರೆ.
ಈಸುದ್ದಿಯನ್ನು ಓದಿ: Viral Video: ಉದ್ಯೋಗಿಗಳಿಗೆ ಈ ಮಾಲೀಕ ನೀಡಿದ ಉಡುಗೊರೆ ಕೇಳಿದ್ರೆ ಶಾಕ್ ಆಗ್ತೀರಾ; ಹೃದಯಸ್ಪರ್ಶಿ ವಿಡಿಯೋ ಇಲ್ಲಿದೆ
ಇನ್ನೂ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತವು ಮೇ 7ರಂದು ಪಾಕಿಸ್ತಾನದ ವಿರುದ್ಧ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (PoK)ದ ಒಂಬತ್ತು ಭಯೋತ್ಪಾದಕ ಶಿಬಿರಗಳ ನಿಖರವಾದ ದಾಳಿ ನಡೆಸಿ, ಪಹಲ್ಗಾಮ್ ದಾಳಿಗೆ ಪ್ರತಿಕಾರ ತೀರಿಸಿಕೊಂಡಿತ್ತು. ಈ ಕಾರ್ಯಾಚರಣೆ ಭಾರತ 'ಆಪರೇಷನ್ ಸಿಂಧೂರ್' ಎಂದು ಹೆಸರಿಟ್ಟಿತ್ತು.