ಬೆಂಗಳೂರು, ಮೇ 17: ಪಿಯುಸಿ ಬಳಿಕ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾಗುವ ಪ್ರವೇಶ ಪರೀಕ್ಷೆ ನೀಟ್ (NEET)ನಲ್ಲಿ ಪಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪರೀಕ್ಷೆಯನ್ನೇ ರದ್ದುಪಡಿಸಲಾಗಿದೆ (NEET Tragedy). ಇದರಿಂದ ಮನನೊಂದು ಬೆಂಗಳೂರು ಸೇರಿದಂತೆ ದೇಶಾದ್ಯಂತ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೇ 3ರಂದು ನೀಟ್ ನಡೆಸಲಾಗಿತ್ತು. ಬಳಿಕ ಪ್ರಶ್ನೆ ಪತ್ರಿಕೆ ಸೋರಿಕೆಯಾದ ವಿಚಾರ ಹೊರ ಬೀಳುತ್ತಿದ್ದಂತೆ ಪರೀಕ್ಷೆಯನ್ನೇ ರದ್ದು ಪಡಿಸಿ ಜೂನ್ ಜೂನ್ 21ಕ್ಕೆ ಮರುನಿಗದಿಪಡಸಿಲಾಗಿದೆ. ಆದರೆ ಪರೀಕ್ಷೆ ರದ್ದಾಗಿದ್ದು ನಾಲ್ವರು ವಿದ್ಯಾರ್ಥಿಗಳ ಪ್ರಾಣಕ್ಕೆ ಎರವಾಗಿದೆ.
ಮೂಲಗಳ ಪ್ರಕಾರ ಆತ್ಮಹತ್ಯೆಗೆ ಶರಣಾದ ಈ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಕಠಿಣ ತಯಾರಿ ನಡೆಸಿದ್ದರು. ಹಗಲಿರುಳು ಶ್ರಮ ಪಟ್ಟಿದ್ದರು. ಜತೆಗೆ ಉತ್ತಮ ಅಂಕ ಗಳಿಸುವ ವಿಶ್ವಾಸದಲ್ಲಿದ್ದರು. ಆದರೆ ಯಾರೋ ಮಾಡಿದ ತಪ್ಪಿಗೆ ಇವರ ಕನಸೆಲ್ಲ ಕಮರಿದ್ದು, ಜೀವವನ್ನೇ ಕಳೆದುಕೊಂಡಿದ್ದಾರೆ.
ಜೂನ್ 21ರಂದು ನೀಟ್ ಮರು ಪರೀಕ್ಷೆ; ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ನಂತರ ಎನ್ಟಿಎ ಹೊಸ ದಿನಾಂಕ ಪ್ರಕಟ
ಮೃತರಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿಯೂ ಇದ್ದಾನೆ ಎನ್ನಲಾಗಿದ್ದು, ಆತ ಗೋವಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ಗುರುತು ಪತ್ತೆಯಾಗಿಲ್ಲ. ಇನ್ನು ರಾಜಸ್ಥಾನದ ಪ್ರದೀಪ್ ಮೇಘ್ವಾಲ್ ಜೀವ ಕಳೆದುಕೊಂಡಿದ್ದು, ಆತ 720ಕ್ಕೆ 650 ಅಂಕ ಗಳಿಸುವ ವಿಶ್ವಾಸದಲ್ಲಿದ್ದ. ಆತ್ಮಹತ್ಯೆ ಮಾಡಿಕೊಂಡ ಇತರ ಇಬ್ಬರನ್ನು ಉತ್ತರ ಪ್ರದೇಶದ ರಿತಿಕಾ ಮಿಶ್ರಾ ಮತ್ತು ದೆಹಲಿಯ ಅನ್ಶಿಕಾ ಪಾಂಡೆ ಎಂದು ಗುರುತಿಸಲಾಗಿದೆ.
ನೀಟ್ ರದ್ದಾದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ:
ಮುಖ್ಯ ಆರೋಪಿ ಸೆರೆ
ಈ ಮಧ್ಯೆ ನೀಟ್ನ ಜೀವಶಾಸ್ತ್ರದ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ, ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬಳಾದ ಮಹಾರಾಷ್ಟ್ರದ ಪುಣೆಯ ಕಾಲೇಜೊಂದರ ಸಸ್ಯಶಾಸ್ತ್ರ ಪ್ರಾಧ್ಯಾಪಕಿ ಮನೀಷಾ ಗುರುನಾಥ ಮಾಂಧರೆಯನ್ನು ಶನಿವಾರ ಕೇಂದ್ರ ತನಿಖಾ ದಳ (CBI) ಬಂಧಿಸಿದೆ. ಇದರೊಂದಿಗೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೆ ಏರಿದೆ.
ಅಚ್ಚರಿ ಎಂದರೆ ಮನೀಷಾಳನ್ನು ವಿಷಯ ತಜ್ಞರಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೇಮಕ ಮಾಡಿಕೊಂಡಿತ್ತು. ಈಕೆಯನ್ನು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಪ್ರಕ್ರಿಯೆಗಾಗಿಯೂ ಎನ್ಟಿಎ ನೇಮಿಸಿಕೊಂಡಿತ್ತು ಎಂದು ಸಿಬಿಐ ತಿಳಿಸಿದೆ. ಈ ಹಿಂದೆ ಬಲೆಗೆ ಬಿದ್ದಿರುವ ಮನೀಶಾ ವಾಗ್ಮೊರೆ ಮೂಲಕವೇ ಮನೀಷಾ ನೀಟ್ ವಿದ್ಯಾರ್ಥಿಗಳನ್ನು ಸಪರ್ಕಿಸುತ್ತಿದ್ದಳು ಎನ್ನಲಾಗಿದೆ. ಅವರಿಗೆ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ಪ್ರಮುಖ ಪ್ರಶ್ನೆಗಳನ್ನು ಬಹಿರಂಗಪಡಿಸಿದ್ದಳು. ಜತೆಗೆ ನೀಟ್ ಪ್ರಶ್ನೆಗೆ ಉತ್ತರಿಸುವ ಬಗ್ಗೆ ಪುಣೆಯ ತನ್ನ ಮನೆಯಲ್ಲೇ ತರಬೇತಿಯನ್ನೂ ನೀಡುತ್ತಿದ್ದಳು ಎಂದು ಸಿಬಿಐ ತಿಳಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ; ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆ ರದ್ದು
6 ಸ್ಥಳಗಳಲ್ಲಿ ಶೋಧ
ಶುಕ್ರವಾರ ಮತ್ತು ಶನಿವಾರ ಸಿಬಿಐ ದೇಶಾದ್ಯಂತ ಸುಮಾರು 6 ಸ್ಥಳಗಳಲ್ಲಿ ಶೋಧ ನಡೆಸಿ, ಅಪರಾಧ ದಾಖಲೆಗಳು, ಲ್ಯಾಪ್ಟಾಪ್ಗಳು, ಬ್ಯಾಂಕ್ ಸ್ಟೇಟ್ಮೆಂಟ್ಗಳು ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆ ರದ್ದತಿಗೆ ಸಂಬಂಧಿಸಿ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹಲವೆಡೆ ಪ್ರತಿಭಟನೆಗಳು ನಡೆದಿವೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.