ದಿಸ್ಪುರ, ಮಾ. 29: ರಾಮನವಮಿ ಮೆರವಣಿಗೆ (Ram Navami Procession) ವೇಳೆ ಬಿಜೆಪಿ ಶಾಸಕ ನವೀನ್ ಜೈನ್ (Naveen Jain) ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಒಡಿಶಾದಲ್ಲಿ ನಡೆದಿದ್ದು, ಕೆಲ ಹೊತ್ತು ಭಯದ ವಾತಾವರಣ ಕಂಡುಬಂತು. ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರ ಬಳಸಿದ ನವೀನ್ ಜೈನ್ ವಿರುದ್ಧ ದೂರು ದಾಖಲಿಸಲಾಗಿದೆ. ಒಡಿಶಾದ ಬಲಂಗಿರ್ ಜಿಲ್ಲೆಯಲ್ಲಿ ನಡೆದ ರಾಮನವಮಿ ಮೆರವಣಿಗೆ ವೇಳೆ ನವೀನ್ ಗುಂಡು ಹಾರಿಸಿದ್ದರು. ಇದು ನೆರೆದಿದ್ದ ಭಕ್ತರಲ್ಲಿ ಗೊಂದಲಕ್ಕೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದರು.
ಶುಕ್ರವಾರ (ಮಾರ್ಚ್ 27) ನಡೆದ ರಾಮನವಮಿ ಮೆರವಣಿ ವೇಳೆ ನವೀನ್ ಜೈನ್ ಅತಿರೇಕದ ವರ್ತನೆ ತೋರಿದರು ಎಂದು ವರದಿಯಲ್ಲಿ ವಿವರಿಸಲಾಗಿದೆ. ಇದಲ್ಲದೆ ರಾಜ್ಯಾದ್ಯಂತ ಇಂತಹ ಅಸಹಜ ಘಟನೆ ನಡೆದಿದ್ದು, ದೂರು ದಾಖಲಾಗಿದೆ. ಕೆಲವು ಪ್ರದೇಶಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸುವುದು ಕಷ್ಟವಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ವಿಡಿಯೊ ಇಲ್ಲಿದೆ:
ಘಟನೆ ವಿವರ
ವರದಿಯ ಪ್ರಕಾರ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡ ಶಾಸಕ ನವೀನ್ ಜೈನ್ ಗಾಳಿಯಲ್ಲಿ ಗುಂಡು ಹಾರಿಸಿದರು. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಅದಾಗ್ಯೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ನೂರಾರು ಭಕ್ತರಲ್ಲಿ ಈ ಘಟನೆ ಗೊಂದಲಕ್ಕೆ ಕಾರಣವಾಯಿತು. ʼʼಸಾರ್ವಜನಿಕ ಸಭೆಯ ಮಧ್ಯದಲ್ಲಿ ಗುಂಡು ಹಾರಿಸಿರುವ ಘಟನೆ ಸುರಕ್ಷತಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿದೆ ಮತ್ತು ಸಾರ್ವಜನಿಕ ಭದ್ರತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆʼʼ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಮನವಮಿ ಆಚರಣೆ ವೇಳೆ ಹಿಂದೂಗಳ ಮೇಲೆ ಕಲ್ಲು ತೂರಾಟ: ಮುರ್ಷಿದಾಬಾದ್ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ
ಘಟನೆಯ ನಂತರ, ಶಾಸಕರ ವೈಯಕ್ತಿಕ ಭದ್ರತಾ ಅಧಿಕಾರಿ (PSO) ಪ್ರೇಮ್ಚಂದ್ ನಾಗ್ ಅವರನ್ನು ಅಮಾನತುಗೊಳಿಸಲಾಗಿದೆ. ಶನಿವಾರ ಬಲಂಗೀರ್ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪ್ರೇಮ್ಚಂದ್ ನಾಗ್ ಅವರನ್ನು ವಿಚಾರಣೆಗೆ ಒಳಪಡಿಸಿ ಬಳಿಕ ಅಮಾನತುಗೊಳಿಸಲಾಯಿತು.
ʼʼಪಿಎಸ್ಒ ಪ್ರೇಮ್ಚಂದ್ ನಾಗ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಶಾಸಕರ ಭದ್ರತಾ ಕರ್ತವ್ಯದಿಂದ ತೆಗೆದುಹಾಕಲಾಗಿದೆʼʼ ಎಂದು ಬಲಂಗೀರ್ ಎಸ್ಪಿ ಅಭಿಲಾಷ್ ಜಿ. ದೃಢಪಡಿಸಿದ್ದಾರೆ.
ತಿತ್ಲಗಢ ಪೊಲೀಸರು ಶಾಸಕ ಮತ್ತು ಪಿಎಸ್ಒ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 125 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25ರ ಅಡಿಯಲ್ಲಿಯೂ ದೂರು ದಾಖಲಿಸಲಾಗಿದೆ. ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ.
ಬಲಂಗೀರ್ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಿಮಾಂಶು ಬೆಹೆರಾ ಮಾತನಾಡಿ, ಎಫ್ಐಆರ್ ದಾಖಲಿಸಲಾಗಿದ್ದು, ಸಂಬಂಧಪಟ್ಟ ವ್ಯಕ್ತಿಗಳಿಗೆ ನೋಟಿಸ್ ನೀಡಲಾಗಿದೆ ಎಂದಿದ್ದಾರೆ. "ಘಟನೆ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ ಮತ್ತು ಸಂಬಂಧಪಟ್ಟ ವ್ಯಕ್ತಿಗಳಿಗೆ ನೋಟಿಸ್ ನೀಡಲಾಗಿದೆ. ಇದಲ್ಲದೆ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಮತ್ತು ಪಿಎಸ್ಒ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
ರಾಮನವಮಿ ಆಚರಣೆ: ಪಾನಕ, ಮಜ್ಜಿಗೆ, ಕೋಸಂಬರಿ ಹಂಚಿದ ಶ್ರೀರಾಮ ಭಕ್ತರು
ಪಶ್ಚಿಮ ಬಂಗಾಳದಲ್ಲಿ ಸಂಘರ್ಷ
ಇನ್ನು ರಾಮನವಮಿ ಆಚರಣೆ ವೇಳೆ ಪಶ್ವಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುರ್ಷಿದಾಬಾದ್ ಜಿಲ್ಲೆಯ ಜಂಗೀಪುರದಲ್ಲಿ ಶುಕ್ರವಾರ ಸಂಜೆ ಶ್ರೀ ರಾಮನವಮಿ ಮೆರವಣಿ ಸಾಗುತ್ತಿದ್ದಾಗ ಮುಸ್ಲಿಮರು ಮರೆಯಿಂದ ಕಲ್ಲೆಸೆದಿದ್ದರು. ಈ ವೇಳೆ ಸುಮಾರು 15 ರಾಮ ಭಕ್ತರು ಗಾಯಗೊಂಡಿದ್ದರು. ಈ ಸಂಬಂಧ 12 ಮಂದಿಯನ್ನು ಬಂಧಿಸಲಾಗಿದೆ