ಹೊಸದಿಲ್ಲಿ: ಭಾರತೀಯ ಸೇನೆ ಮೇ 7ರಂದು ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ಮೂಲಕ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ನಡೆಸಿ ಉಗ್ರರನ್ನು ಸದೆಬಡಿದಿದೆ. ಮೇ 8ರಂದು ಆಪರೇಷನ್ ಸಿಂದೂರ್ ಮುಂದುವರಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ವಿದೇಶಾಂಗ ಇಲಾಖೆಯ ಅಧಿಕಾರಿಗಳು, ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಲು ಯತ್ನಿಸಿದೆ. ಆದರೆ ಪಾಕಿಸ್ತಾನ ಭಾರತದ ದಾಳಿಯನ್ನು ದಿಟ್ಟವಾಗಿ ಎದುರಿಸಿದೆ. ಡ್ರೋನ್ ಮತ್ತು ಕ್ಷಿಪಣಿ ಮೂಲಕ ದಾಳಿ ನಡೆಸಲು ಪಾಕ್ ಪ್ರಯತ್ನಿಸಿದ್ದು, ಸಿಕ್ಕಿರುವ ಅವಶೇಷವೇ ಅದಕ್ಕೆ ಸಾಕ್ಷಿ. ಪಾಕಿಸ್ತಾನದ ಈ ಪ್ರಯತ್ನವನ್ನು ಭಾರತ ವಿಫಲಗೊಳಿಸಿದೆ. ನಮ್ಮ ಸೇನಾ ಗುರಿಗಳ ಮೇಲೆ ಯಾವುದೇ ದಾಳಿ ನಡೆದರೆ ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು ಎಂದು ಪುನರುಚ್ಚರಿಸಿದ್ದಾರೆ.
ಭಾರತ ಎಂದಿಗೂ ಪ್ರಚೋದನೆ ನಡೆಸಿಲ್ಲ. ಪಾಕ್ ಪ್ರಾಯೋಜಿತ ಟಿಆರ್ಎಫ್ನಿಂದ ಪಹಲ್ಗಾಮ್ ದಾಳಿ ನಡೆದಿದೆ. ಮೋಸ್ಟ್ ವಾಂಟೆಡ್ ಉಗ್ರರಿಗೆ ಪಾಕಿಸ್ತಾನ ಮನೆಯಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ವಿವರಿಸಿದ್ದಾರೆ.
ವಿದೇಶಾಂಗ ಇಲಾಖೆಯ ಅಧಿಕಾರಿಗಳ ಸುದ್ದಿಗೋಷ್ಠಿ:
ಭಾರತದ ದಾಳಿಯಲ್ಲಿ ಸಾವನ್ನಪ್ಪಿದವರಿಗೆ ಅಲ್ಲಿನ ಸರ್ಕಾರಿ ಅಧಿಕಾರಿಗಳು ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಆಪರೇಷನ್ ಸಿಂದೂರ್ ಕಾರ್ಯಾಚರಣೆ ಮೂಲಕ ಸಾವನ್ನಪ್ಪಿದ ಮೂವರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನಾ ಸಿಬ್ಬಂದಿ ಭಾಗವಹಿಸುತ್ತಿರುವ ಫೋಟೊವನ್ನು ಅವರು ಪ್ರದರ್ಶಿಸಿದ್ದಾರೆ. 'ಆಪರೇಷನ್ ಸಿಂದೂರ್' ಭಾಗವಾಗಿ ಭಾರತೀಯ ಪಡೆಗಳು ಮುರಿಡ್ಕೆಯಲ್ಲಿರುವ ಭಯೋತ್ಪಾದಕ ಗುಂಪಿನ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಖಾರಿ ಅಬ್ದುಲ್ ಮಲಿಕ್, ಖಾಲಿದ್ ಮತ್ತು ಮುದಸ್ಸಿರ್ ಸಾವನ್ನಪ್ಪಿದ್ದರು. ಇವರ ಅಂತ್ಯಕ್ರಿಯೆಯನ್ನು ಬಿಗಿ ಭದ್ರತೆಯಲ್ಲಿ ನಡೆಸಲಾಯಿತು.
ಈ ಸುದ್ದಿಯನ್ನೂ ಓದಿ: Sudarshan Chakra: ಪಾಕ್ ಡ್ರೋನ್, ಕ್ಷಿಪಣಿಯನ್ನು ಹೊಡೆದುರುಳಿಸಿದ ಸುದರ್ಶನ ಚಕ್ರ; ಏನಿದರ ವೈಶಿಷ್ಟ್ಯ?
"ಪಾಕಿಸ್ತಾನ ಹುಟ್ಟಿದ ಕೂಡಲೇ ಸುಳ್ಳು ಹುಟ್ಟಿದೆ. 1947ರಲ್ಲಿ, ಪಾಕಿಸ್ತಾನಿ ಸೇನೆಯು ಜಮ್ಮು ಮತ್ತು ಕಾಶ್ಮೀರದ ಮೇಲೆ ಹಕ್ಕು ಸಾಧಿಸಲು ಮುಂದಾಗಿ ವಿಶ್ವಸಂಸ್ಥೆಗೆ ಸುಳ್ಳು ಹೇಳಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಹಲ್ಗಾಮ್ ಕುರಿತು ಮಾತುಕತೆ ನಡೆಯುತ್ತಿರುವಾಗ ಪಾಕಿಸ್ತಾನ ಪಹಲ್ಗಾಮ್ ದಾಳಿಯಲ್ಲಿ ಟಿಆರ್ಎಫ್ (ದಿ ರೆಸಿಸ್ಟೆನ್ಸ್ ಫ್ರಂಟ್) ಪಾತ್ರ ಇಲ್ಲ ಎಂದು ವಾದಿಸಿತ್ತು. ಆದ್ರೆ ಸ್ವತಃ ಟಿಆರ್ಎಫ್ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಇದೇ ಕಾರಣಕ್ಕೆ ನಾವು ಉಗ್ರರ ನೆಲೆಗಳನ್ನು ಗುರಿಯಾಗಿರಿಸಕೊಂಡು ದಾಳಿ ನಡೆಸಬೇಕಾಯಿತುʼʼ ಎಂದು ವಿವರಿಸಿದ್ದಾರೆ.
ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮಾತನಾಡಿ, “ಇಂದು ಬೆಳಗ್ಗೆ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ವಾಯು ರಕ್ಷಣಾ ರಾಡಾರ್ಗಳು ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ಲಾಹೋರ್ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ತಟಸ್ಥಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಪಾಕಿಸ್ತಾನವು ನಿಯಂತ್ರಣ ರೇಖೆಯಾದ್ಯಂತ ತನ್ನ ಅಪ್ರಚೋದಿತ ಗುಂಡಿನ ದಾಳಿಯ ತೀವ್ರತೆಯನ್ನು ಹೆಚ್ಚಿಸಿದೆ. ಪಾಕಿಸ್ತಾನದ ಗುಂಡಿನ ದಾಳಿಯಿಂದಾಗಿ ಮೂವರು ಮಹಿಳೆಯರು ಮತ್ತು ಐದು ಮಕ್ಕಳು ಸೇರಿದಂತೆ 16 ಅಮಾಯಕರು ಬಲಿಯಾಗಿದ್ದಾರೆ. ಪಾಕಿಸ್ತಾನದ ಈ ದಾಳಿಯನ್ನು ನಿಲ್ಲಿಸಲು ಭಾರತವು ಪ್ರತಿಕ್ರಿಯಿಸಬೇಕಾಯಿತು” ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹೇಳಿದ್ದಾರೆ.