ದೆಹಲಿ, ಜೂ. 30: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮಂಗಳವಾರ (ಜೂನ್ 30) ಇರಾನ್ ಅಧ್ಯಕ್ಷ ಮಸೂದ್ ಪೆಜೆವಶ್ಕಿಯನ್ (Dr Masoud Pezeshkian) ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು. ಮಾತುಕತೆ ಮೂಲಕವಷ್ಟೆ ಪಶ್ಚಿಮ ಏಷ್ಯಾದಲ್ಲಿ ಶಾಂತಿ (West Asia Peace) ನೆಲೆಸಬಹುದು ಎಂದು ಮೋದಿ ಈ ವೇಳೆ ಹೇಳಿದರು. ಮಸೂದ್ ಪೆಜೆವಶ್ಕಿಯನ್ ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದರು. ಇತ್ತೀಚೆಗೆ ಹೆಚ್ಚುತ್ತಿರುವ ಉದ್ವಿಗ್ನ ಸ್ಥಿತಿಯ ಕುರಿತೂ ಉಭಯ ನಾಯಕರು ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಮೂಲಗಳ ಪ್ರಕಾರ, ಪೆಜೆಶ್ಕಿಯನ್ ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ಮತ್ತು ಮುಂದಿನ ನಡೆಯ ಬಗ್ಗೆಯೂ ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದರು. ಮಾತುಕತೆ ಸಮಯದಲ್ಲಿ ಮೋದಿ ಎಲ್ಲ ವಿವಾದಗಳನ್ನು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕು ಎಂಬ ಭಾರತದ ದೀರ್ಘಕಾಲದ ನಿಲುವನ್ನು ಪುನರುಚ್ಚರಿಸಿದರು.
ಪ್ರಧಾನಿ ಮೋದಿ ಎಕ್ಸ್ ಪೋಸ್ಟ್:
ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ನಿರಂತರ ಪ್ರಯತ್ನಗಳ ಅಗತ್ಯವನ್ನು ಮೋದಿ ಒತ್ತಿ ಹೇಳಿದರು. ನೌಕಾಯಾನ ಸ್ವಾತಂತ್ರ್ಯ ರಕ್ಷಿಸುವ ಮಹತ್ವವನ್ನು ಎತ್ತಿ ಹಿಡಿದರು. ಜತೆಗೆ ಹೊರ್ಮುಜ್ ಜಲಸಂಧಿಯಲ್ಲಿನ ಗೊಂದಲ ನಿವಾರಿಸುವ ಬಗ್ಗೆಯೂ ಮೋದಿ ಚರ್ಚೆ ನಡೆಸಿದರು.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ
ಈ ಬಗ್ಗೆಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡ ಮೋದಿ, "ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಇರಾನ್ ಅಧ್ಯಕ್ಷ ಮಸೂದ್ ಪೆಜೆವಶ್ಕಿಯನ್ ಅವರೊಂದಿಗೆ ಸಮಾಲೋಚನೆ ನಡೆಸಿದೆ. ಇತ್ತೀಚೆಗೆ ಮಾತುಕತೆಗಳಲ್ಲಿ ಆಗಿರುವ ಪ್ರಗತಿಯನ್ನು ಸ್ವಾಗತಿಸಲಾಯಿತು ಮತ್ತು ನಿರಂತರ ಪ್ರಯತ್ನಗಳು ಈ ಪ್ರದೇಶದಲ್ಲಿ ಶಾಶ್ವತ ಶಾಂತಿ ಸ್ಥಾಪನೆಗೆ ಕಾರಣವಾಗುತ್ತವೆ ಎಂಬ ಭರವಸೆಯನ್ನು ವ್ಯಕ್ತಪಡಿಸಲಾಯಿತು. ಭಾರತ ಮತ್ತು ಜಗತ್ತಿಗೆ ಹೊರ್ಮುಜ್ ಜಲಸಂಧಿಯಲ್ಲಿನ ನೌಕಾಯಾನ ಸ್ವಾತಂತ್ರ್ಯದ ಮಹತ್ವವನ್ನು ಪುನರುಚ್ಚರಿಸಲಾಯಿತು" ಎಂದು ಹೇಳಿದರು.
ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನಿನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಮೃತಪಟ್ಟ ನಾಲ್ಕು ತಿಂಗಳ ಬಳಿಕ ಇದೀಗ ಅಂತ್ಯ ಸಂಸ್ಕಾರ ನಡೆಸಲು ಸಿದ್ದತೆ ನಡೆಸುತ್ತಿರುವ ಮಧ್ಯೆ ಈ ಬೆಳವಣಿಗೆ ಸಂಭವಿಸಿದೆ. ಖಮೇನಿ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವಂತೆ ಭಾರತಕ್ಕೆ ಈಗಾಗಲೇ ಇರಾನ್ ಆಹ್ವಾನ ನೀಡಿದೆ. ಖಮೇನಿ ಅವರನ್ನು ಜುಲೈ 9ರಂದು ಮಷಾದ್ನಲ್ಲಿರುವ ಇಮಾಮ್ ರೆಜಾ ಅವರ ದೇಗುಲದ ಬಳಿ ಸಮಾಧಿ ಮಾಡಲಾಗುತ್ತದೆ. ಜುಲೈ 4ರಂದು ಟೆಹರಾನ್ನಲ್ಲಿ ವಿಧಿ ವಿಧಾನ ಪ್ರಾರಂಭವಾಗಲಿದೆ. ಇರಾನ್ ಅಧ್ಯಕ್ಷರು ಇದೇ ವೇಳೆ ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಆಹ್ವಾನಿಸಿದರು.
ಇತ್ತ ಅಮೆರಿಕ-ಇರಾನ್ ಮಧ್ಯೆ ಮಾತುಕತೆ ಮುಂದುವರಿದಿದೆ. ಜೂನ್ 17ರಂದು ವಾಷಿಂಗ್ಟನ್ ಮತ್ತು ಟೆಹರಾನ್ ಮಧ್ಯೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರಲ್ಲಿ ಹೊರ್ಮುಜ್ ಜಲಸಂಧಿಯ ಮೇಲಿನ ಇರಾನ್ನ ನಿರ್ಬಂಧಗಳನ್ನು ಕೊನೆಗೊಳಿಸುವುದು, ಈ ಪ್ರದೇಶದಲ್ಲಿ ಅಮೆರಿಕದ ಮಿಲಿಟರಿ ಸಂಖ್ಯೆಯನ್ನು ಕಡಿಮೆ ಮಾಡುವುದು ಮುಂತಾದ ಅಂಶಗಳಿವೆ. ಬಳಿಕ ಜೂನ್ 21 ಮತ್ತು 22ರಂದು ಸ್ವಿಟ್ಜರ್ಲ್ಯಾಂಡ್ನ ಬರ್ಗೆನ್ಸ್ಟಾಕ್ ರೆಸಾರ್ಟ್ನಲ್ಲಿ ಅಮೆರಿಕ, ಇರಾನ್ ಮತ್ತು ಮಧ್ಯವರ್ತಿಗಳಾದ ಕತಾರ್ ಮತ್ತು ಪಾಕಿಸ್ತಾನದ ನಡುವೆ ಔಪಚಾರಿಕ ಸಭೆ ನಡೆಯಿತು. ಇತ್ತೀಚೆಗೆ ಮತ್ತೆ ಪಶ್ಚಿಮ ಬಂಗಾಳದಲಲಿ ಮತ್ತೆ ದಾಳಿ ನಡೆಯುತ್ತಿರುವುದು ಆತಂಕ ಮೂಡಿಸಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.