PM Narendra Modi: ಕಾಂಗ್ರೆಸ್ ಆಡಳಿತದಲ್ಲಿ ದಿಲ್ಲಿಯಿಂದ 1ರೂ. ಕಳಿಸಿದ್ರೆ 15ಪೈಸೆ ಜನರ ಕೈ ಸೇರುತ್ತಿತ್ತು-ಪ್ರಧಾನಿ ಮೋದಿ ಟಾಂಗ್
ಬಜೆಟ್ ಅಧಿವೇಶನಕ್ಕೂ ಮುನ್ನ ನಡೆದ ರಾಷ್ಟ್ರಪತಿ ಭಾಷಣಕ್ಕೆ ಪ್ರತಿಪಕ್ಷಗಳು ಟೀಕೆವ್ಯಕ್ತಪಡಿಸಿದ್ದವು. ಇದೀಗ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರ ನೀಡಿದ್ದಾರೆ. ಆ ಮೂಲಕ ಪ್ರತಿಪಕ್ಷಗಳ ಟೀಕೆಗೆ ಟಾಂಗ್ ಕೊಟ್ಟಿದ್ದಾರೆ.
ನವದೆಹಲಿ: ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಇಂದು ಲೋಕಸಭೆಯಲ್ಲಿ ಉತ್ತರಿಸುವ ಮೂಲಕ ಪ್ರತಿಪಕ್ಷಗಳಿಗೆ ಟಾಂಗ್ ಕೊಟ್ಟರು. ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಲು ದೇಶದ ಜನರು ನನಗೆ 14 ನೇ ಬಾರಿಗೆ ಅವಕಾಶ ನೀಡಿರುವುದು ನನ್ನ ಅದೃಷ್ಟ. ಆದ್ದರಿಂದ, ನಾನು ಜನರಿಗೆ ಗೌರವಯುತವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಭಾಷಣ ಆರಂಭಿಸಿದ ಅವರು, ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಏನು ಬದಲಾಗಿದೆ ಎಂಬುದನ್ನು ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ತೆರೆದಿಟ್ಟಿದ್ದಾರೆ. ಈ ಹಿಂದೆ ಗರೀಬಿ ಹಠಾವೋ ಘೋಷಣೆ ಮಾಡಿದವರು ಬಡವರಿಗಾಗಿ ಏನನ್ನೂ ಮಾಡಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ಗೆ ನೇರವಾಗಿ ತಿವಿದರು.
ಒಂದು ಕಾಲದಲ್ಲಿ ಹಳ್ಳಿಯಿಂದ ದಿಲ್ಲಿವರೆಗೆ ಅವರದ್ದೇ ಸರ್ಕಾರ ಇತ್ತು. ಕಾಂಗ್ರೆಸ್ ಆಡಳಿತದಲ್ಲಿ ದಿಲ್ಲಿಯಿಂದ 1ರೂ. ಕಳಿಸಿದ್ರೆ 15ಪೈಸೆ ಜನರ ಕೈ ಸೇರುತ್ತಿತ್ತು. ಮೊದಲೆಲ್ಲಾ ಸರ್ಕಾರದ ಹಗರಣಗಳದ್ದೇ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಬರುತ್ತಿತ್ತು. ಆದರೆ ಈಗ ಎಲ್ಲಾ ಬದಲಾಗಿದೆ. ಜನರಿಗಾಗಿಯೇ ನಮ್ಮ ಸರ್ಕಾರ ಇದೆ. ಯಾವುದೇ ಹಗರಣ ಮಾಡದೇ ಒಂದು ಲಕ್ಷ ಕೋಟಿ ರೂ. ಉಳಿಸಿದ್ದೇವೆ. ವಿಕಾಸದ ಹಾದಿಗೆ ದೇಶವನ್ನುತೆರೆದಿದ್ದೇವೆ ಎಂದು ಹೇಳಿದರು.
ಮೋದಿ ಭಾಷಣದ ಪ್ರಮುಖಾಂಶಗಳು ಹೀಗಿವೆ
- ಬಡವರ ಗುಡಿಸಲುಗಳಲ್ಲಿ ಫೋಟೋ ಸೆಷನ್ ಮಾಡಿಸುವವರಿಗೆ ಸಂಸತ್ತಿನಲ್ಲಿ ಬಡವರ ಬಗ್ಗೆ ಮಾತನಾಡುವುದು ಬೇಸರವಾಗುತ್ತದೆ.
- ಸ್ವಚ್ಛ ಭಾರತ್ ಮಿಷನ್ ಬಗ್ಗೆ ಗೇಲಿ ಮಾಡಿದರು, ಆದರೆ ಸರ್ಕಾರ ಮರುಬಳಕೆಗಾಗಿ ಕಸವನ್ನು ಮಾರಾಟ ಮಾಡುವ ಮೂಲಕ 2,300 ಕೋಟಿ ರೂ. ಗಳಿಸಿದೆ.
- ಜನೌಷಧಿ ಕೇಂದ್ರಗಳಿಂದಾಗಿ ದೇಶದ ಜನರು ಔಷಧಿಗಳ ಮೇಲೆ 30,000 ಕೋಟಿ ರೂ.ಗಳನ್ನು ಉಳಿಸಿದ್ದಾರೆ. ಆಯುಷ್ಮಾನ್ ಯೋಜನೆಯಿಂದಾಗಿ ಜನರು ವೈದ್ಯಕೀಯ ಬಿಲ್ಗಳಿಗೆ ಖರ್ಚು ಮಾಡಬೇಕಾಗಿದ್ದ 1.2 ಲಕ್ಷ ಕೋಟಿ ರೂ.ಗಳನ್ನು ಉಳಿಸಿದ್ದಾರೆ
- ಕಳೆದ 10 ವರ್ಷಗಳಲ್ಲಿ ಆದಾಯ ತೆರಿಗೆಯನ್ನು ಕಡಿಮೆ ಮಾಡಲಾಗಿದೆ, ಇದು ಮಧ್ಯಮ ವರ್ಗಕ್ಕೆ ಪ್ರಯೋಜನವನ್ನು ನೀಡುತ್ತದೆ. 2014 ಕ್ಕಿಂತ ಮೊದಲು, ತೆರಿಗೆ ಸ್ಲ್ಯಾಬ್ಗಳು ಜನರಿಗೆ ಹೊರೆಯಾಗಿದ್ದವು, 2013 ರಲ್ಲಿ ಸ್ಲ್ಯಾಬ್ ಅನ್ನು 2 ಲಕ್ಷ ರೂ.ಗೆ ನಿಗದಿಪಡಿಸಲಾಗಿತ್ತು. ಆದರೆ ಈಗ ಅದನ್ನು 12 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ.
- ಅರವಿಂದ್ ಕೇಜ್ರಿವಾಲ್ ಅವರ ಶೀಷ್ಮಹಲ್ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಕೆಲವರು ಐಷಾರಾಮಿ ಬದುಕಿನ ಬಗ್ಗೆ ಗಮನ ಹರಿಸುತ್ತಿದ್ದರೆ ನಮ್ಮ ಸರ್ಕಾರ ಜನರಿಗೆ ಜಲಜೀವನ್ ಅಭಿಯಾನದಡಿಯಲ್ಲಿ ಜನ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ.
- ನಾವು ಅಧಿಕಾರಕ್ಕೆ ಬರುವ ಮೊದಲು, ಎಲ್ಇಡಿ ಬಲ್ಬ್ಗಳನ್ನು ₹400 ಗೆ ಮಾರಾಟ ಮಾಡಲಾಗುತ್ತಿತ್ತು. ವಿವಿಧ ಉಪಕ್ರಮಗಳ ಮೂಲಕ, ನಾವು ಬೆಲೆಯನ್ನು ₹40 ಕ್ಕೆ ಇಳಿಸಿದೆವು. ಎಲ್ಇಡಿ ಬಲ್ಬ್ಗಳು ಇಂಧನ ಸಂರಕ್ಷಣೆಗೆ ಸಹಾಯ ಮಾಡಿದವು, ಇದರ ಪರಿಣಾಮವಾಗಿ ದೇಶದ ಜನರಿಗೆ ಸುಮಾರು ₹20,000 ಕೋಟಿ ಉಳಿತಾಯವಾಯಿತು.
- ಜಾತಿ ಜನಗಣತಿಗೆ ಕೃತಕ ಬುದ್ಧಿಮತ್ತೆಯನ್ನು ಬಳಸಬೇಕೆಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಗುರಿಯಾಗಿಸಿಕೊಂಡು ಮಾತನಾಡಿದ ಪ್ರಧಾನಿ ಮೋದಿ, ಕೆಲವರು ಕೃತಕ ಬುದ್ಧಿಮತ್ತೆಯನ್ನು ಒಂದು ಮೋಜಿನ ವಿಚಾರ ಎಂದುಕೊಂಡಿದ್ದಾರೆ. ಎನ್ಡಿಎ ಸರ್ಕಾರಕ್ಕೆ AI ಎಂದರೆ ಕೃತಕ ಬುದ್ಧಿಮತ್ತೆ ಮತ್ತು ಈ ಪದದ ಇನ್ನೊಂದು ಅರ್ಥ aspiring India.
- ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ನಮ್ಮ ಭರವಸೆಯನ್ನು ಈಡೇರಿಸಿದ್ದೇವೆ.
- ಸುಳ್ಳು ಭರವಸೆಗಳ ಮೂಲಕ ಪ್ರತಿಪಕ್ಷಗಳು ಭಾರತದ ಯುವಕರನ್ನು ವಂಚಿಸುತ್ತಿವೆ.
- ತ್ರಿವಳಿ ತಲಾಖ್ ರದ್ದುಗೊಳಿಸಿ ಮುಸ್ಲಿಂ ಮಹಿಳೆಯರಿಗೆ ವಿಶೇಷ ಹಕ್ಕು ನೀಡಿದ್ದೇವೆ.
- ಜಾತಿ ಬಗ್ಗೆ ಮಾತನಾಡುವವರು ಎಸ್ಸಿ/ಎಸ್ಟಿ ಸಮುದಾಯವನ್ನು ಹೇಗೆ ಸಶಕ್ತಗೊಳಿಸಿದರು?