ನವದೆಹಲಿ: ಸಿನಿಮಾ ರಂಗದಲ್ಲಿ ಹಣಕಾಸಿನ ವಿಚಾರದಲ್ಲಿ ಆಗಾಗ ಸಮಸ್ಯೆ ಆಗುತ್ತಲೇ ಇರುತ್ತದೆ. ನಟನೆಗೆ ಅವಕಾಶ ನೀಡುವುದಾಗಿ ನಂಬಿಸಿ ಹಣ ಪಡೆದು ಬಳಿಕ ಕೈಕೊಡುವುದು ಒಂದೆಡೆಯಾದರೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುವುದು ಇನ್ನೊಂದು ವಿಧದ ವಂಚನೆ. ಕಾನೂನಿಗೆ ಹೆದರದೆ ಕೆಲವರು ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಒಡ್ಡುವುದು ಇದೆ. ಅಂತೆಯೇ ಮಹಾರಾಷ್ಟ್ರದ ಬಿಜೆಪಿ ಉಪಾಧ್ಯಕ್ಷೆ, ನಟಿ ನಿಖಿತಾ ಘಾಗ್ (Nikita Ghag) ಕೂಡ ಇಂತಹದ್ದೇ ಹಣಕಾಸಿನ ಪ್ರಕರಣ ಒಂದರಲ್ಲಿ ಸಿಲುಕಿದ್ದಾರೆ. ಹಣಕ್ಕಾಗಿ ಬೇಡಿಕೆ ಇಟ್ಟು ನಿರ್ಮಾಪಕರೊಬ್ಬರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದಾರೆ ಎಂದು ನಿಖಿತಾ ಘಾಗ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು ಸಿನಿಮಾ , ವೆಬ್ ಸೀರೀಸ್ ಹಾಗೂ ರಾಜಕೀಯ ರಂಗದಲ್ಲಿ ಖ್ಯಾತಿ ಪಡೆದ ನಟಿ ನಿಖಿತಾ ಘಾಗ್ ಇಂತಹ ದೊಡ್ಡ ಅಪರಾಧ ಮಾಡಿದ್ದಾರಾ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ನಟಿ ನಿಖಿತಾ ಘಾಗ್ ಬಹುಮುಖ ಪ್ರತಿಭೆ ಹೊಂದಿದ್ದು ಬರವಣಿಗೆಯಲ್ಲೂ ತಮ್ಮಧೆ ಛಾಪು ಮೂಡಿಸಿದ್ದಾರೆ. ಹಿಂದಿಯ 'ಬೆಕಾಬೂ 3', ' 'ಗಂದಿ ಬಾತ್', 'ಫುಹ್ ಸೆ ಫ್ಯಾಂಟಸಿ', 'ನಶಿಲಾ ಹುಸ್ನ್' ಸೇರಿದಂತೆ ಅನೇಕ ಹಿಂದಿ ವೆಬ್ ಸರಣಿಯಲ್ಲಿ ಅಭಿನಯಿಸಿರುವ ನಟಿ ನಿಖೀತಾ ಘಾಗ್ 'ಫ್ರೆಂಡ್ಶಿಪ್ ಬ್ಯಾಂಡ್' ಎಂಬ ಮರಾಠಿ ಚಿತ್ರದಲ್ಲಿ ಕೂಡ ಅಭಿನಯಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ಕಳೆದ ವರ್ಷ ನ್ಯೂಡ್ ಫೋಟೊಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ದೊಡ್ಡ ಮಟ್ಟಿಗೆ ಸಂಚಲನ ಮೂಡಿಸಿದ್ದರು.
ಇದೀಗ ಇದೇ ನಿಖಿತಾ ಘಾಗ್ ಅವರ ವಿರುದ್ಧ ನಿರ್ಮಾಪಕರೊಬ್ಬರು 10 ಲಕ್ಷ ರೂಪಾಯಿ ಹಣ ದೋಚಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ನಿರ್ಮಾಪಕ ಕೃಷ್ಣ ಕುಮಾರ್ ವೀರ್ ಸಿಂಗ್ ಮೀನಾ ಅಲಿಯಾಸ್ ಕೆ.ಕುಮಾರ್ ಅವರು ನಿಖಿತಾ ಘಾಗ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಂಧೇರಿಯಲ್ಲಿರುವ ನಿರ್ಮಾಪಕ ಕೃಷ್ಣಕುಮಾರ್ ಅವರ ಚಿತ್ರಲೇಖಾ ಹೆರಿಟೇಜ್ ಸ್ಟುಡಿಯೋಗೆ ನಟಿ ನಿಖಿತಾ 15 ಜನರನ್ನು ಕರೆದುಕೊಂಡು ಬಂದಿದ್ದರಂತೆ. ಈ ವೇಳೆ ತನಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ:Ghaati Movie: ʼಘಾಟಿʼ ಚಿತ್ರಕ್ಕೆ ಶುಭವಾಗಲೆಂದು ಅನುಷ್ಕಾ ಶೆಟ್ಟಿಗೆ ಹಾರೈಸಿದ ಪ್ರಭಾಸ್
ಕೃಷ್ಣಕುಮಾರ್ ನೀಡಿದ್ದ ದೂರಿನಲ್ಲಿ ನಟಿ ನಿಖಿತಾ ತಮ್ಮ ಕಚೇರಿಗೆ ಬಂದು ಬೆದರಿಕೆ ಹಾಕಿ 3 ಗಂಟೆಗೂ ಅಧಿಕ ಕಾಲ ನನ್ನದೇ ಕಚೇರಿಯಲ್ಲಿ ಕೂಡಿ ಹಾಕಿದ್ದಾರೆ. ನಿಖಿತಾ ಘಾಗ್ ಅವರ ಜೊತೆ ವಿವೇಕ್ ಜಗತಾಪ್ ಎನ್ನುವ ವ್ಯಕ್ತಿ ಕೂಡ ಇದ್ದರು. ಅವರೆಲ್ಲ ಒಟ್ಟಾಗಿ ಸೇರಿ ಕೊಂಡು ಪಿಸ್ತೂಲ್ ತೋರಿಸಿ 25 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು ನನಗೆ ಬೆದರಿಕೆ ಹಾಕಿದ್ದಾರೆ. ನಾನು ನಿರಾಕರಿಸಿದಾಗ ನನ್ನನ್ನು ಥಳಿಸಿ ಚಾಕು ತೋರಿಸಿದರು. ಹೀಗಾಗಿ ಭಯಗೊಂಡು 10 ಲಕ್ಷ ರೂಪಾಯಿ ಹಣವನ್ನು ನಾನು ಅವರಿಗೆ ಆನ್ಲೈನ್ ಮೂಲಕ ವರ್ಗಾಯಿಸಿದೆ ಎಂದು ಉಲ್ಲೇಖಿಸಿದ್ದಾರೆ.
ಕೃಷ್ಣಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ದಂಡ ಸಂಹಿತೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದ್ದು ಆರೋಪ ಸಾಬೀತಾದರೆ ಕಠಿಣ ಶಿಕ್ಷೆ ಆಗುವ ಸಾಧ್ಯತೆ ಕೂಡ ಇದೆ.