ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

New Delhi Stampede: ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ; ಕುಂಭಮೇಳಕ್ಕೆ ಹೊರಟ 15 ಮಂದಿಗೆ ಗಾಯ

ಕುಂಭಮೇಳಕ್ಕೆ ತೆರಳುವ ರೈಲು ತಡವಾಗಿ ಬಂದ ಕಾರಣ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿ ಸುಮಾರು 15 ಮಂದಿ ಗಾಯಗೊಂಡಿರುವ ಘಟನೆ ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಶನಿವಾರ (ಫೆ. 15) ರಾತ್ರಿ ಸುಮಾರು 9:55 ಗಂಟೆಗೆ ನಡೆದಿದೆ.

ಹೊಸದಿಲ್ಲಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ (Maha Kumbh Mela) ದಿನದಿಂದ ದಿನಕ್ಕೆ ಭಕ್ತರನ್ನು ಸೆಳೆಯುತ್ತಿದ್ದು, ಇದಕ್ಕಾಗಿ ದೇಶದ ವಿವಿಧ ಭಾಗಗಳಿಂದ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಇದೀಗ ಕುಂಭಮೇಳಕ್ಕೆ ತೆರಳುವ ರೈಲು ತಡವಾಗಿ ಬಂದ ಕಾರಣ ನೂಕುನುಗ್ಗಲು ಉಂಟಾಗಿ, ಕಾಲ್ತುಳಿತ ಸಂಭವಿಸಿ ಸುಮಾರು 15 ಮಂದಿ ಗಾಯಗೊಂಡಿರುವ ಘಟನೆ ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಶನಿವಾರ (ಫೆ. 15) ರಾತ್ರಿ ಸುಮಾರು 9:55 ಗಂಟೆಗೆ ನಡೆದಿದೆ (New Delhi Stampede). ಫ್ಲಾಟ್‌ಫಾರ್ಮ್‌ ನಂಬರ್‌ 14 ಮತ್ತು 15ರಲ್ಲಿ ಈ ದುರಂತ ಸಂಭವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.

"ಹೊಸದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿ 15 ಜನರು ಗಾಯಗೊಂಡಿದ್ದಾರೆ ಎಂಬ ಕರೆ ಬಂದ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ಧಾವಿಸಿದೆವು. ಘಟನಾ ಸ್ಥಳದಲ್ಲಿ 4 ಅಗ್ನಿಶಾಮಕ ವಾಹನಗಳು ಕಾರ್ಯಾಚರಿಸುತ್ತಿವೆʼʼ ಎಂದು ಹೊಸದಿಲ್ಲಿ ಅಗ್ನಿಶಾಮಕ ಸೇವೆಯ ಸಿಬ್ಬಂದಿ ತಿಳಿಸಿದ್ದಾರೆ.



ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ 14 ಮತ್ತು 15ರಲ್ಲಿ ಈ ಘಟನೆ ನಡೆದಿದೆ. ಪ್ರಯಾಗ್‌ರಾಜ್‌ಗೆ ಹೋಗುವ 2 ರೈಲುಗಳನ್ನು ತಡವಾದ ಹಿನ್ನೆಲೆಯಲ್ಲಿ ಕಾಲ್ತುಳಿತ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Maha Kumbh Fire: ಪ್ರಯಾಗ್‌ರಾಜ್‌ನಲ್ಲಿ ಮತ್ತೊಂದು ಅಗ್ನಿ ಅವಘಢ; ಹೊತ್ತಿ ಉರಿದ ಡೇರೆಗಳು

ಮಹಾಕುಂಭ ಮೇಳಕ್ಕೆ ಜನ ಪ್ರವಾಹ

ದೇಶದ ಬಹುತೇಕ ರೈಲ್ವೇ ಸ್ಟೇಷನ್‌ನಲ್ಲಿ ಜನ ಪ್ರವಾಹವೇ ಕಂಡು ಬರುತ್ತಿದೆ. ಉತ್ತರ ಪ್ರದೇಶ ಸರ್ಕಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಶನಿವಾರ ಅಪರಾಹ್ನ 2 ಗಂಟೆಯವರೆಗೆ 92.10 ಲಕ್ಷಕ್ಕೂ ಹೆಚ್ಚು ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಫೆಬ್ರವರಿ 14ರವರೆಗೆ ಅಂದಾಜು 50 ಕೋಟಿಗೂ ಹೆಚ್ಚು ಜನರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಶನಿವಾರ ಬೆಳಗ್ಗೆ 6 ಗಂಟೆಯ ವೇಳೆಗೆ 2.79 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಗರಾಜ್‌ ರೈಲ್ವೆ ನಿಲ್ದಾಣದಿಂದ ಪ್ರಯಾಣಿಸಿದ್ದಾರೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.



ಶುಕ್ರವಾರ (ಫೆ. 14) ಪ್ರಯಾಗ್‌ರಾಜ್‌ನಿಂದ ಒಟ್ಟು 328 ರೈಲುಗಳಲ್ಲಿ 10.47 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ವಿವಿಧ ಕಡೆಗಳಿಗೆ ತೆರಳಿದ್ದರು.