ತಿರುಮಲ, ಸೆ.16: ತಿರುಪತಿಯ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಹಸಿರು ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಸಮಾಜ ಕಲ್ಯಾಣ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿರುವ ರಿಲಯನ್ಸ್ ಫೌಂಡೇಶನ್ (Reliance Foundation), ತಿರುಮಲ ತಿರುಪತಿ ದೇವಸ್ಥಾನ ಮಂಡಳಿಗೆ (ಟಿಟಿಡಿ) 25 ಅತ್ಯಾಧುನಿಕ ಎಲೆಕ್ಟ್ರಿಕ್ ಬಸ್ಗಳು ಹಾಗೂ ಪ್ರತ್ಯೇಕ ಇವಿ ಚಾರ್ಜಿಂಗ್ ಕೇಂದ್ರವನ್ನು ಹಸ್ತಾಂತರಿಸಿದೆ.
ತಿರುಮಲದಲ್ಲಿ ಈ ಸಂಬಂಧ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಈ ಬಸ್ಗಳಿಗೆ ಹಸಿರು ನಿಶಾನೆ ತೋರಿದರು. ತಿರುಪತಿಯಲ್ಲಿ ಮುಂಬರುವ ಎರಡು ಶ್ರೀವಾರಿಯ ಬ್ರಹ್ಮೋತ್ಸವಗಳಿಗೂ ಮುನ್ನ ಈ ಬಸ್ಗಳನ್ನು ನೀಡಲಾಗಿದ್ದು, ಇದು ಲಕ್ಷಾಂತರ ಯಾತ್ರಾರ್ಥಿಗಳಿಗೆ ಸುಲಭ ಮತ್ತು ಸ್ವಚ್ಛ ಪ್ರಯಾಣ ಒದಗಿಸಲು ಸಹಕಾರಿಯಾಗಿದೆ.
ಭರವಸೆ ಈಡೇರಿಕೆ: ಕಳೆದ ಜೂನ್ 2026ರಲ್ಲಿ ತಿರುಮಲಕ್ಕೆ ಭೇಟಿ ನೀಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಅವರು ಈ ಬಸ್ಗಳನ್ನು ನೀಡುವುದಾಗಿ ನೀಡಿದ್ದ ಭರವಸೆಯನ್ನು ಈಗ ಈಡೇರಿಸಿದ್ದಾರೆ.
ಜಿಯೋ-ಬಿಪಿ ಸಹಯೋಗ: ರಿಲಯನ್ಸ್ ಫೌಂಡೇಶನ್ನ ಆರ್ಥಿಕ ನೆರವಿನೊಂದಿಗೆ ಹಾಗೂ ಜಿಯೋ-ಬಿಪಿ ಸಂಸ್ಥೆಯ ತಾಂತ್ರಿಕ ಪರಿಣತಿಯೊಂದಿಗೆ ಈ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗಿದೆ.
ಬೆಂಗಳೂರು ಏರ್ಪೋರ್ಟ್ ಪ್ರಯಾಣಿಕರಿಗೆ ಸಿಗಲಿದೆ ವಿಐಪಿ ಅನುಭವ; ಕೇರ್ ಬೈ ಬಿಎಲ್ಆರ್ ಪ್ರೀಮಿಯಂ ಸೇವೆ ಆರಂಭ
ಈ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ, "ತಿರುಮಲದ ಪವಿತ್ರ ಗಿರಿಧಾಮಕ್ಕೆ ಬರುವ ಭಕ್ತರ ಪ್ರಯಾಣವನ್ನು ಸುಖಕರವಾಗಿಸುವುದು ಮತ್ತು ಈ ಪ್ರದೇಶದ ಜೀವವೈವಿಧ್ಯವನ್ನು ಸಂರಕ್ಷಿಸಲು ಟಿಟಿಡಿ ಕೈಗೊಳ್ಳುತ್ತಿರುವ ಪ್ರಯತ್ನಗಳಿಗೆ ನಾವು ಶ್ರದ್ಧಾಪೂರ್ವಕವಾಗಿ ಈ ಕೊಡುಗೆಯನ್ನು ನೀಡುತ್ತಿದ್ದೇವೆ " ಎಂದು ತಿಳಿಸಿದರು. ಈ ಗ್ರೀನ್ ಮೊಬಿಲಿಟಿ ಉಪಕ್ರಮವು ತಿರುಮಲದಲ್ಲಿ ಮಾಲಿನ್ಯವನ್ನು ತಡೆಯಲು ಮತ್ತು ಪರಿಸರ ಸಂರಕ್ಷಣೆಗೆ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ.