ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಕ್ಕಿಯನ್ನು ಎಥೆನಾಲ್‌ ಉತ್ಪಾದಕರಿಗೆ ಶೇಕಡಾ 40ರಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡುತಿದ್ಯಾ ಕೇಂದ್ರ? ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದೇಕೆ?

Priyank Kharge: ಆಹಾರ ಭದ್ರತೆಗಾಗಿ ಮೀಸಲಿಟ್ಟಿರುವ ಧಾನ್ಯವನ್ನು ಎಥನಾಲ್‌ ಉತ್ಪಾದನೆಗೆ ಬಳಸುವ ನೀತಿಯ ಆರ್ಥಿಕ, ಸಾಮಾಜಿಕ ಮತ್ತು ಸಾರ್ವಜನಿಕ ಹಿತಾಸಕ್ತಿಯ ಪರಿಣಾಮಗಳ ಕುರಿತು ಕೇಂದ್ರ ಸರ್ಕಾರ ಪಾರದರ್ಶಕವಾಗಿ ಲೆಕ್ಕ ನೀಡಬೇಕು ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ (ಸಂಗ್ರಹ ಚಿತ್ರ).

ಬೆಂಗಳೂರು, ಆ. 25: ಆಹಾರ ಭದ್ರತೆಗಾಗಿ ತೆರಿಗೆದಾರರ ಹಣದಲ್ಲಿ ಭತ್ತವನ್ನು ಖರೀದಿಸಿ, ಅದನ್ನು ಸಂಗ್ರಹಿಸಿ, ಸಾಗಣೆ ವೆಚ್ಚ ಭರಿಸಿ, ಬಳಿಕ ಭಾರತೀಯ ಆಹಾರ ನಿಗಮ (FCI) ಮೂಲಕ ಎಥೆನಾಲ್‌ ಉತ್ಪಾದಕರಿಗೆ ಅದರ ಸ್ವಾಧೀನ ವೆಚ್ಚಕ್ಕಿಂತ ಸುಮಾರು ಶೇ. 40ರಷ್ಟು ಕಡಿಮೆ ದರದಲ್ಲಿ ಅಕ್ಕಿಯನ್ನು ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿಯನ್ನು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಪ್ರಶ್ನಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, “ಭಾರತದ ಎಥೆನಾಲ್‌ ಗಣಿತವೇ ಸರಿಯಾಗಿ ಹೊಂದಿಕೆಯಾಗುತ್ತಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

ಆಹಾರ ಭದ್ರತೆಗಾಗಿ ಸರ್ಕಾರ ರೈತರಿಂದ ಭತ್ತವನ್ನು ಖರೀದಿಸುತ್ತದೆ. ಇದಕ್ಕಾಗಿ ತೆರಿಗೆದಾರರ ಹಣವನ್ನು ಬಳಸಲಾಗುತ್ತದೆ. ನಂತರ ಖರೀದಿಸಿದ ಧಾನ್ಯವನ್ನು ಸಂಗ್ರಹಿಸುವುದು, ಸಾಗಣೆ ಮಾಡುವುದು ಸೇರಿದಂತೆ ಸರ್ಕಾರದ ಮೇಲೆ ಮತ್ತಷ್ಟು ವೆಚ್ಚದ ಹೊರೆ ಬೀಳುತ್ತದೆ. ಇಷ್ಟೆಲ್ಲ ವೆಚ್ಚ ಮಾಡಿದ ಬಳಿಕ ಅದೇ ಅಕ್ಕಿಯನ್ನು ಎಥೆನಾಲ್‌ ಉತ್ಪಾದಕರಿಗೆ ಸ್ವಾಧೀನ ವೆಚ್ಚಕ್ಕಿಂತ ಸುಮಾರು ಶೇ. 40ರಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವುದು ಯಾವ ರೀತಿಯ ಆರ್ಥಿಕ ನೀತಿ ಎಂದು ಅವರು ಪ್ರಶ್ನಿಸಿದ್ದಾರೆ.

ತೆರಿಗೆದಾರರ ಹಣದಲ್ಲಿ ಧಾನ್ಯಕ್ಕೆ ಸಬ್ಸಿಡಿ; ಅದರ ಖರೀದಿ, ಸಂಗ್ರಹಣೆ ಮತ್ತು ಸಾಗಣೆಗೆ ಸರ್ಕಾರದ ವೆಚ್ಚ; ನಂತರ ಅದೇ ಧಾನ್ಯವನ್ನು ಎಥೆನಾಲ್‌ ಉತ್ಪಾದಕರಿಗೆ ರಿಯಾಯಿತಿ ದರದಲ್ಲಿ ಮಾರಾಟ—ಹಾಗಾದರೆ ಈ ಸಂಪೂರ್ಣ ವ್ಯವಸ್ಥೆಯಿಂದ ನಿಜವಾಗಿ ಲಾಭ ಪಡೆಯುತ್ತಿರುವವರು ಯಾರು? ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ತುರ್ತಾಗಿ ಸೃಷ್ಟಿಸಲಾದ ಎಥೆನಾಲ್‌ ಉತ್ಪಾದನಾ ಸಾಮರ್ಥ್ಯಕ್ಕೆ ಅಗತ್ಯವಾದ ಕಚ್ಚಾ ವಸ್ತು ಒದಗಿಸುವ ಉದ್ದೇಶದಿಂದ ಆಹಾರ ಧಾನ್ಯವನ್ನು ದೊಡ್ಡ ಪ್ರಮಾಣದಲ್ಲಿ ಎಥೆನಾಲ್‌ ಉತ್ಪಾದನೆಗೆ ತಿರುಗಿಸಲಾಗುತ್ತಿದೆಯೇ ಎಂಬ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದಾರೆ.

ಇನ್ನೊಂದೆಡೆ, ಸರ್ಕಾರವೇ ಎಥೆನಾಲ್‌ ಉತ್ಪಾದಕರಿಂದ ಹೆಚ್ಚಿನ ಬೆಲೆಗೆ ಎಥೆನಾಲ್‌ ಖರೀದಿಸಿ, ಅದನ್ನು ಪೆಟ್ರೋಲ್‌ನಲ್ಲಿ ಮಿಶ್ರಣ ಮಾಡುತ್ತಿದೆ. ಹೀಗಿರುವಾಗ ಧಾನ್ಯವನ್ನು ಕಡಿಮೆ ದರದಲ್ಲಿ ನೀಡುವುದು, ಬಳಿಕ ಅದೇ ಉದ್ಯಮದಿಂದ ಹೆಚ್ಚಿನ ಬೆಲೆಗೆ ಎಥೆನಾಲ್‌ ಖರೀದಿಸುವುದರಿಂದ ಅಂತಿಮವಾಗಿ ಸಾಮಾನ್ಯ ಗ್ರಾಹಕನಿಗೆ ಆಗುವ ಲಾಭವೇನು? ಎಂದು ಅವರು ಪ್ರಶ್ನಿಸಿದ್ದಾರೆ.

ಎಥೆನಾಲ್‌ ಮಿಶ್ರಣದ ಪರಿಣಾಮವಾಗಿ ಪೆಟ್ರೋಲ್‌ ಬೆಲೆ ಸಾಮಾನ್ಯ ಜನರಿಗೆ ಕಡಿಮೆಯಾಗಿದೆಯೇ? ವಾಹನಗಳ ಮೈಲೇಜ್‌ ಮತ್ತು ನಿರ್ವಹಣಾ ವೆಚ್ಚದ ಮೇಲೆ ಉಂಟಾಗುವ ಪರಿಣಾಮವನ್ನು ಯಾರು ಪರಿಗಣಿಸುತ್ತಿದ್ದಾರೆ? ಎಂಬ ಪ್ರಶ್ನೆಗಳನ್ನೂ ಅವರು ಮುಂದಿಟ್ಟಿದ್ದಾರೆ.

ಯಾರನ್ನು ಯಾರು ಸಬ್ಸಿಡಿ ಮಾಡುತ್ತಿದ್ದಾರೆ? ಈ ವ್ಯವಸ್ಥೆಯಲ್ಲಿ ನಿಜವಾದ ಲಾಭ ಯಾರಿಗೆ?” ಎಂಬುದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಉತ್ತರಿಸಬೇಕಾದ ಪ್ರಶ್ನೆಯಾಗಿದೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಆಹಾರ ಭದ್ರತೆಗಾಗಿ ಮೀಸಲಿಟ್ಟಿರುವ ಧಾನ್ಯವನ್ನು ಎಥೆನಾಲ್‌ ಉತ್ಪಾದನೆಗೆ ತಿರುಗಿಸುವ ನೀತಿಯ ಆರ್ಥಿಕ, ಸಾಮಾಜಿಕ ಮತ್ತು ಸಾರ್ವಜನಿಕ ಹಿತಾಸಕ್ತಿಯ ಪರಿಣಾಮಗಳ ಕುರಿತು ಕೇಂದ್ರ ಸರ್ಕಾರ ಪಾರದರ್ಶಕವಾಗಿ ಲೆಕ್ಕ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವಾಹನ ಸವಾರರ ಗಮನಕ್ಕೆ: ಈದ್ ಮಿಲಾದ್ ಆಚರಣೆ ಪ್ರಯುಕ್ತ ನಾಳೆ ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

“ಭಾರತದ ಎಥೆನಾಲ್‌ ಗಣಿತ ಸರಿಯಾಗಿ ಹೊಂದಿಕೆಯಾಗುತ್ತಿಲ್ಲ” ಎಂಬ ತಮ್ಮ ಅಭಿಪ್ರಾಯದ ಮೂಲಕ ಕೇಂದ್ರದ ನೀತಿಯಲ್ಲಿರುವ ಈ ವೈರುಧ್ಯವನ್ನು ಸಾರ್ವಜನಿಕರ ಮುಂದಿಟ್ಟಿರುವುದಾಗಿ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.