Bullet Kannada Movie: ಬಿಗ್ಬಾಸ್ನಿಂದ ಹೊರಬಂದ ಮೇಲೆ ಸಿಕ್ಕಾಪಟ್ಟೆ ಬ್ಯುಸಿಯಾದ ಧರ್ಮ ಕೀರ್ತಿರಾಜ್; ಬಹುಭಾಷಾ ನಟನ ಚಿತ್ರದಲ್ಲಿ ಸಿಕ್ತು ಚಾನ್ಸ್
Dr. Sathyajith: ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿರುವ ಸತ್ಯಜಿತ್ ಶಬ್ಬೀರ್ ನಿರ್ಮಿಸಿ, ನಿರ್ದೇಶಿಸಿರುವ ಹಾಗೂ ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸಿರುವ 'ಬುಲೆಟ್' ಚಿತ್ರದ (Bullet Kannada Movie) ಟೀಸರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಆರ್.ಎಂ.ಎನ್. ರಮೇಶ್ ಹಾಗೂ ನಟಿ ನಿಖಿತಾ ಸ್ವಾಮಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಟೀಸರ್ ಹಾಗೂ ಹಾಡುಗಳನ್ನು ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.



ಸತ್ಯಜಿತ್ ಶಬ್ಬೀರ್ ಮಾತನಾಡಿ, ʼʼನಾನು ಭಾರತಿರಾಜ ಅವರ ನಿರ್ದೇಶನದ ʼಪದಿನಾರು ವಯದಿನಿಲೆʼ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಈ ಚಿತ್ರದ ಸಂಗೀತ ನಿರ್ದೇಶಕರಾದ ಇಳಯರಾಜ ಶಬ್ಬೀರ್ ಅಂತ ಇದ್ದ ನನ್ನ ಹೆಸರಿನ ಮುಂದೆ ಸತ್ಯಜಿತ್ ಎಂದು ಸೇರಿಸಿದರು. ಅಂದಿನಿಂದ ನನ್ನ ಹೆಸರು ಸತ್ಯಜಿತ್ ಶಬ್ಬೀರ್. ಈವರೆಗೂ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳ 75 ಚಿತ್ರಗಳಲ್ಲಿ ನಟಿಸಿದ್ದೇನೆ. ಮೂಲತಃ ಕರ್ನಾಟಕದವನಾಗಿರುವ ನಾನು ಆನಂತರ ಚೆನ್ನೈ ಹಾಗೂ ಮುಂಬೈನಲ್ಲಿ ನೆಲೆಸಿದ್ದೆ. ಮೊದಲ ಚಿತ್ರವನ್ನು ಕನ್ನಡದಲ್ಲೇ ನಿರ್ಮಿಸಿ, ನಿರ್ದೇಶಿಸಬೇಕೆಂಬ ಆಸೆಯಿತ್ತು. ಅದು ಈಗ ಈಡೇರಿದೆʼʼ ಎಂದು ತಿಳಿಸಿದರು.

ʼʼಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ʼಬುಲೆಟ್ʼ ಚಿತ್ರದ ನಾಯಕನಾಗಿ ಧರ್ಮ ಕೀರ್ತಿರಾಜ್ ಅಭಿನಯಿಸಿದ್ದಾರೆ. ಶ್ರೀಯಾ ಶುಕ್ಲ ನಾಯಕಿ. ಹಿರಿಯ ನಟಿ ಭವ್ಯಾ, ಶೋಭರಾಜ್, ಶಿವ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಪಿ.ವಿ.ಆರ್. ಸ್ವಾಮಿ ಛಾಯಾಗ್ರಹಣ, ರಾಜ್ ಭಾಸ್ಕರ್ ಸಂಗೀತ ನಿರ್ದೇಶನ ಹಾಗೂ ಗುರುಪ್ರಸಾದ್ ಸಂಕಲನ ಈ ಚಿತ್ರಕ್ಕಿದೆ. ಚಿತ್ರತಂಡದ ಸಹಕಾರದಿಂದ ಒಂದೊಳ್ಳೆ ಚಿತ್ರ ಮೂಡಿಬಂದಿದೆ. ಜೂ. 20ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಜಯದೇವ ಫಿಲಂಸ್ ಮೂಲಕ ಮರಿಸ್ವಾಮಿ ವಿತರಣೆ ಮಾಡಲಿದ್ದಾರೆʼʼ ಎಂದು ಅವರು ವಿವರಿಸಿದರು.

ʼʼಸತ್ಯಜಿತ್ ಶಬ್ಬೀರ್ ನಿರ್ದೇಶನದಲ್ಲಿ ಉತ್ತಮ ಚಿತ್ರ ನಿರ್ಮಾಣವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಈ ವರ್ಷದಲ್ಲಿ ನಾನು ನಾಯಕನಾಗಿ ನಟಿಸಿ ಬಿಡುಗಡೆಯಾಗುತ್ತಿರುವ 3ನೇ ಚಿತ್ರ ಇದುʼʼ ಎಂದು ನಾಯಕ ಧರ್ಮ ಕೀರ್ತಿರಾಜ್ ತಿಳಿಸಿದರು.

ʼಬಲೆಟ್ʼ ನನ್ನ ಛಾಯಾಗ್ರಹಣದ 50ನೇ ಚಿತ್ರ ಎಂದು ಛಾಯಾಗ್ರಾಹಕ ಪಿ.ವಿ.ಆರ್. ಸ್ವಾಮಿ ಸಂತಸ ವ್ಯಕ್ತಪಡಿಸಿದರು. ಚಿತ್ರದಲ್ಲಿ ನಾಲ್ಕು ಹಾಡುಗಳಿದೆ ಎಂದು ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ರಾಜ್ ಭಾಸ್ಕರ್ ಮಾಹಿತಿ ನೀಡಿದರು. ಹಾಡು ಬರೆದಿರುವ ಮನು ಕುಮಾರ್, ನಟ ಶರತ್, ವಿತರಕ ಜಯದೇವ ಫಿಲಂಸ್ ಮರಿಸ್ವಾಮಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

'ಬಿಗ್ ಬಾಸ್' ರಿಯಾಲಿಟಿ ಶೋಗೆ ಹೋಗಿಬಂದ ಮೇಲೆ ನಟ ಧರ್ಮ ಕೀರ್ತಿರಾಜ್ಗೆ ಅವಕಾಶಗಳು ಜಾಸ್ತಿ ಆಗಿವೆ. ತೆಲುಗಿನಲ್ಲೂ ಧರ್ಮ ಚಾನ್ಸ್ ಪಡೆದುಕೊಂಡಿದ್ದಾರೆ. ಜತೆಗೆ ನಾಯಕನಾಗಿ ನಟಿಸುತ್ತಿರುವ 'ಸಿಂಧೂರಿ' ಕನ್ನಡ ಸಿನಿಮಾ ಸೆಟ್ಟೇರಿದೆ.