Rukmini Vasanth: 'ಕಾಂತಾರʼದ ಕನಕವತಿ ರುಕ್ಮಿಣಿ ವಸಂತ್ ಈಗ ಹೊಸ ನ್ಯಾಷನಲ್ ಕ್ರಶ್; ಅಪ್ಪಟ ಕನ್ನಡತಿಯ ಸಿನಿಜರ್ನಿ ಹೇಗಿದೆ?
ಈ ವರ್ಷದ ಬಹುನಿರೀಕ್ಷಿತ ʼಕಾಂತಾರ: ಚಾಪ್ಟರ್ 1ʼ ಚಿತ್ರ ತೆರೆಗೆ ಅಪ್ಪಳಿಸಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ-ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್ನ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿದೆ. ಕನ್ನಡ ಮಾತ್ರವಲ್ಲ ವಿವಿಧ ಭಾಷೆಗಳ ಪ್ರೇಕ್ಷಕರನ್ನು ಸೆಳೆದಿದ್ದು, ಬಿಡುಗಡೆಯಾದ ನಾಲ್ಕೇ ದಿನಕ್ಕೆ 200 ಕೋಟಿ ರೂ. ಕಲೆಕ್ಷನ್ ಮಾಡಿದೆ. ರಿಷಬ್ ಶೆಟ್ಟಿ ಜತೆಗೆ ನಾಯಕಿ ರುಕ್ಮಿಣಿ ವಸಂತ್ ಅಭಿನಯಕ್ಕೂ ನೋಡಿಗರು ಫಿದಾ ಆಗಿದ್ದಾರೆ. ರಾಜಕುಮಾರಿ ಕನಕವತಿ ಪಾತ್ರದಲ್ಲಿ ರುಕ್ಮಿಣಿ ಕಾಣಿಸಿಕೊಂಡಿದ್ದು, ಸ್ನಿಗ್ಧ ಸೌಂದರ್ಯದ ಜತೆಗೆ ವಿವಿಧ ಶೇಡ್ಗಳಲ್ಲಿ ಮಿಂಚಿದ್ದಾರೆ. ಈ ಚಿತ್ರದ ನಂತರ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದು, ಅವರನ್ನು ನ್ಯಾಷನಲ್ ಕ್ರಶ್ ಎಂದೇ ಕರೆಯತೊಡಗಿದ್ದಾರೆ.

-


2022ರಲ್ಲಿ ತೆರೆಕಂಡ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ʼಕಾಂತಾರ: ಚಾಪ್ಟರ್ 1'. ಅಂದರೆ ʼಕಾಂತಾರʼದ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್ ಶೆಟ್ಟಿ ಈ ಭಾಗದಲ್ಲಿ ಹೇಳಿದ್ದಾರೆ. ಕದಂಬರು ರಾಜ್ಯವನ್ನು ಆಳುತ್ತಿದ್ದಾಗ ಕರಾವಳಿ ಕರ್ನಾಟಕದಲ್ಲಿ ಏನಾಯ್ತು ಎನ್ನುವ ಕಾಲ್ಪನಿಕ ಕಥೆಯನ್ನು ರಿಷಬ್ ಶೆಟ್ಟಿ ಅದ್ಧೂರಿಯಾಗಿ ತೆರೆಮೇಲೆ ತಂದಿದ್ದಾರೆ. ಈ ದೃಶ್ಯ ವೈಭವಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಚಿತ್ರದಲ್ಲಿ ಬಾಂಗ್ರಾದ ಸಾಮಂತ ರಾಜ ಮನೆತನ ಮತ್ತು ಬುಡಕಟ್ಟು ಜನಾಂಗದ ಸಂಘರ್ಷದ ಕಥೆ ಇದ್ದು, ರಾಜಕುಮಾರಿ ಕನಕವತಿ ಪಾತ್ರಕ್ಕೆ ರುಕ್ಮಿಣಿ ವಸಂತ್ ಜೀವ ತುಂಬಿದ್ದಾರೆ.

ಕನಕವತಿ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದ್ದು, ಸಿನಿಮಾದುದ್ದಕ್ಕೂ ಸಾಗುತ್ತದೆ. ಕೇವಲ ಹಾಡಿಗೆ, ಒಂದೆರಡು ದೃಶ್ಯಕ್ಕೆ ರುಕ್ಮಿಣಿ ಇಲ್ಲಿ ಸೀಮಿತವಾಗಿಲ್ಲ. ಇಡೀ ಚಿತ್ರಕ್ಕೆ ತಿರುವು ನೀಡುವ ಪಾತ್ರ ಇದಾಗಿದ್ದು, ರುಕ್ಮಿಣಿ ಅಷ್ಟೇ ಸಮರ್ಥವಾಗಿ ಈ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಸೌಂದರ್ಯದಿಂದ ಜತೆಗೆ ಸಹಜ ಅಭಿನಯಿಂದಲೂ ಗಮನ ಸೆಳೆದಿದ್ದಾರೆ.

ರುಕ್ಮಿಣಿ ವಸಂತ್ ತೆರೆಮೇಲೆ ಬಂದಾಗಲೆಲ್ಲ ರಾಜ ಕುಮಾರಿ ಎಂದರೆ ಹೀಗೇ ಇದ್ದಿರಬಹುದು ಎಂದೆನಿಸಿಬಿಡುತ್ತದೆ. ಅಷ್ಟರಮಟ್ಟಿಗೆ ಅವರು ಈ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಕನಕವತಿ ಪಾತ್ರಕ್ಕೆ ಹಲವು ಶೇಡ್ಗಳಿದ್ದು, ಕೊನೆಯಲ್ಲಿ ಸಿಗುವ ಟ್ವಿಸ್ಟ್ಗೆ ಪ್ರೇಕ್ಷಕರು ದಂಗಾಗಿದ್ದಾರೆ.

ರುಕ್ಮಿಣಿ ವಸಂತ್ ನಟನೆಯ ಜತೆಗೆ ಕುದುರೆ ಸವಾರಿ, ಫೈಟಿಂಗ್ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ನಾಯಕ ಬೆರ್ಮೆ (ರಿಷಬ್ ಶೆಟ್ಟಿ)ಯ ಎದುರು ತೊಡೆತಟ್ಟಿ ನಿಂತಿದ್ದಾರೆ. ಕನ್ನಡ ಮಾತ್ರವಲ್ಲ ವಿವಿಧ ಚಿತ್ರರಂಗದವರೂ ರುಕ್ಮಿಣಿಯನ್ನು ಮೆಚ್ಚಿಕೊಂಡಿದ್ದು, ಸದ್ಯ ನಾಯಕಿಯೊಬ್ಬರಿಗೆ ಸಿಕ್ಕ ಅತ್ಯುತ್ತಮ ಪಾತ್ರ ಎಂದು ಕರೆಯುತ್ತಿದ್ದಾರೆ.

ಈಗಾಗಲೇ ರುಕ್ಮಿಣಿಯನ್ನು ಹಲವರು ನ್ಯಾಷನಲ್ ಕ್ರಶ್ ಎಂದೇ ಕರೆಯಲು ಆರಂಭಿಸಿದ್ದಾರೆ. ಈಗಾಗಲೇ ರುಕ್ಮಿಣಿ ಕನ್ನಡದ ಜತೆಗೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿಯೂ 2023ರಲ್ಲಿ ರಿಲೀಸ್ ಆದ ರಕ್ಷಿತ್ ಶೆಟ್ಟಿ ಜತೆಗಿನ ʼಸಪ್ತ ಸಾಗರಾಚೆ ಎಲ್ಲೋʼ ಸೈಡ್ ಎ ಮತ್ತು ಬಿ ಸಿನಿಮಾಗಳ ಬಳಿಕ ಅವರ ಅದೃಷ್ಟ ಖುಲಾಯಿಸಿದೆ. ಪರಭಾಷಿಕರನ್ನೂ ಈ ಚಿತ್ರದ ಮೂಲಕ ಸೆಳೆದಿದ್ದಾರೆ. ರುಕ್ಮಿಣಿ 2019ರಲ್ಲಿ ಬಿಡುಗಡೆಯಾದ ʼಬೀರ್ಬಲ್ ತ್ರಯಾಲಜಿʼ ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಇದೀಗ ಯಶ್ ಮತ್ತು ಜೂ. ಎನ್ಟಿಆರ್ ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ.