Suniel Shetty: ಆ್ಯಕ್ಟಿಂಗ್ ಬಿಟ್ಟು ಇಡ್ಲಿ, ವಡಾ ಮಾರುವ ಕೆಲಸ ಮಾಡಿ; ಸುನೀಲ್ ಶೆಟ್ಟಿಗೆ ಹೀಗೆ ಹೇಳಿದ್ಯಾರು?
ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಅವರಿಗೆ ವಯಸ್ಸು 63 ಆಗಿದ್ದರೂ ಈಗಲೂ ಟೀನೇಜ್ ಹುಡುಗರಂತೆ ಕಾಣುತ್ತಾರೆ. ಇವರ ಫಿಟ್ನೆಸ್ ಮತ್ತು ಯಂಗ್ ಚಾರ್ಮ್ ಲುಕ್ನಿಂದಲೇ ಅಭಿಮಾನಿಗಳ ಮನ ಗೆದ್ದು ಅನೇಕ ಹಿಟ್ ಸಿನಿಮಾಗಳನ್ನು ನೀಡಿ ಖ್ಯಾತಿ ಪಡೆದಿದ್ದಾರೆ. 'ಫಿರ್ ಹೇರಾಪೇರಿ', 'ಎನಿಮಿ', ಶೂಟ್ಔಟ್ʼನಂತಹ ವಿವಿಧ ಜಾನರ್ ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟ ಸುನೀಲ್ ಶೆಟ್ಟಿ ಕೂಡ ಒಂದು ಕಾಲದಲ್ಲಿ ಆ್ಯಕ್ಟಿಂಗ್ ವಿಚಾರಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು ಎಂದರೆ ನಿಮಗೂ ಕೂಡ ಆಶ್ಚರ್ಯ ಎನಿಸಬಹುದು. ಆ ಕುರಿತಾದ ವಿವರ ಇಲ್ಲಿದೆ.
ನಟ ಸುನೀಲ್ ಶೆಟ್ಟಿ ಅವರಿಗೆ ನಟನೆ ಬರೊಲ್ಲ. ಹಾಗಾಗಿ ಹೊಟೇಲ್ ಕೆಲಸ ಮಾಡು ಎಂದು ವಿಮರ್ಶಕರೊಬ್ಬರು ಟೀಕೆ ಮಾಡಿದ್ದರು. ಈ ವಿಚಾರವನ್ನು ಸ್ವತಃ ಸುನೀಲ್ ಶೆಟ್ಟಿ ಅವರೇ ಹೇಳಿಕೊಂಡಿದ್ದಾರೆ. 1992ರಲ್ಲಿ ʼಬಲ್ವನ್ʼ ಚಿತ್ರದ ಮೂಲಕ ಸುನೀಲ್ ಶೆಟ್ಟಿ ತಮ್ಮ ವೃತ್ತಿಜೀವನ ಆರಂಭಿಸಿದರು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭಾರಿ ಯಶಸ್ಸನ್ನು ಕಂಡರೂ ಒಬ್ಬ ವಿಮರ್ಶಕ ಮಾತ್ರ ಅವರ ಮೊದಲ ಸಿನಿಮಾ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ ಎಂಬ ವಿಚಾರವನ್ನು ನಟ ಸುನೀಲ್ ಶೆಟ್ಟಿ ಇತ್ತೀಚೆಗೆ ನೀಡಿದ್ದ ಸಂದರ್ಶನ ಒಂದರಲ್ಲಿ ಬಹಿರಂಗಪಡಿಸಿದ್ದಾರೆ.
ʼಬಲ್ವಾನ್ʼ ಸಿನಿಮಾದಲ್ಲಿ ದಿವ್ಯ ಭಾರತಿ ಕೂಡ ನಟಿಸಿದ್ದಾರೆ. ಆದರೆ ಈ ಸಿನಿಮಾದಲ್ಲಿ ನಟ ಸುನೀಲ್ ಶೆಟ್ಟಿ ಅಭಿನಯಕ್ಕೆ ಕೆಲವು ನೆಗೆಟಿವ್ ಕಾಮೆಂಟ್ಗಳು ವ್ಯಕ್ತವಾಗಿದ್ದವು. ನಟ ಸುನೀಲ್ ಶೆಟ್ಟಿ ಅವರ ಫಸ್ಟ್ ಲುಕ್ ನೋಡಿ ಅವನಿಗೆ ನಟನೆ ಗೊತ್ತಿಲ್ಲ, ನಡೆಯಲು ಗೊತ್ತಿಲ್ಲ, ಅಭಿನಯ ಸರಿಯಾಗಿ ಮಾಡೊಲ್ಲ, ಆ್ಯಕ್ಟಿಂಗ್ ಮಾಡುವ ಬದಲು ರೆಸ್ಟೋರೆಂಟ್ನಲ್ಲಿ ಇಡ್ಲಿ ಮತ್ತು ವಡಾ ಮಾರಾಟ ಮಾಡುವುದು ಉತ್ತಮ ಎಂದು ವಿಮರ್ಶಕ ತಮ್ಮ ನಟನೆ ಬಗ್ಗೆ ಟೀಕೆ ಮಾಡಿದ್ದರು ಎಂದು ನಟ ಸುನೀಲ್ ಶೆಟ್ಟಿ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.
ʼಬಲ್ವಾನ್ʼ ಬಿಡುಗಡೆಯಾದಾಗ ಅದು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಆದರೆ ಈ ಸಿನಿಮಾದಲ್ಲಿ ನನ್ನ ಅಭಿನಯ ಸಾಕಷ್ಟು ಟೀಕೆಗೆ ಗುರಿಯಾಗುವಂತೆ ಮಾಡಿತು. ನನಗೆ ನಟನೆ ಗೊತ್ತಿಲ್ಲದ ಕಾರಣ ತನ್ನ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡಿದರೆ ಉತ್ತಮ ಎಂದು ಅವರು ಅಭಿಪ್ರಾಯ ಪಟ್ಟಿದ್ದರು. ವಿಮರ್ಶಕ ನನ್ನನ್ನು ಅವಮಾನಿಸುತ್ತಿದ್ದಾನೆಂದು ಭಾವಿಸದೆ ನಾನು ಅವರ ಮಾತನ್ನೇ ಚಾಲೆಂಜ್ ಆಗಿ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.
ನನಗೆ ಇಡ್ಲಿ-ವಡೆ ಮಾರಲು ತಿಳಿಸಿದ್ದಾಗ ನಾನು ಅದನ್ನು ಪರ್ಯಾಯ ಜೀವನೋಪಾಯ ಮಾರ್ಗವೆಂದು ಭಾವಿಸಿದೆ. ಇಂತಹ ಹೊಟೇಲ್ ಉದ್ಯಮಗಳು ಕೂಡ ಒಳ್ಳೆಯ ಜೀವನೋಪಾಯ ವಾಗಿರುತ್ತೆ. ವಿಮರ್ಶಕನ ಟೀಕೆಯೇ ಚಾಲೆಂಜ್ ಆಗಿ ಸ್ವೀಕರಿಸಿ 35 ವರ್ಷಗಳ ಕಾಲ ಸಿನಿಮಾ ಉದ್ಯಮದಲ್ಲಿ ಉಳಿದುಕೊಂಡಿರುವುದಾಗಿ ತಿಳಿಸಿದ್ದಾರೆ. ನನ್ನ ವೃತ್ತಿ ಜೀವನ ಆರಂಭ ಆದಾಗಿನಿಂದ ಇಲ್ಲಿಯ ತನಕವೂ ನಾನು ಸುನೀಲ್ ಶೆಟ್ಟಿ ಆಗಿಯೇ ಉಳಿದಿದ್ದೇನೆ. ನಿಶ್ಚಲವಾದ ಗುರಿಯಿದ್ದರೆ ಯಾವ ಟೀಕೆಗೂ ಅಂಜಬೇಕಾಗಿಲ್ಲ ಎಂದು ಅವರು ತಿಳಿಸಿದರು.
ಸದ್ಯ ನಟ ಸುನೀಲ್ ಶೆಟ್ಟಿ ಅವರು 'ಕೇಸರಿ ವೀರ್: ಲೆಜೆಂಡ್ಸ್ ಆಫ್ ಸೋಮನಾಥ್'ನ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಇವರು ಯೋಧ ವೇಗ್ಡಾ ಜಿ ಪಾತ್ರದಲ್ಲಿ ನಟಿಸಿದ್ದಾರೆ. ಸುನೀಲ್ ಶೆಟ್ಟಿ, ವಿವೇಕ್ ಒಬೆರಾಯ್, ಸೂರಜ್ ಪಾಂಚೋಲಿ ಸೇರಿದಂತೆ ಅನೇಕ ತಾರಾಗಣದ ಸಂಗಮ ಈ ಸಿನಿಮಾದಲ್ಲಿ ಇರಲಿದೆ. ʼಕೇಸರಿ ವೀರ್ʼ ಚಿತ್ರವನ್ನು ಪ್ರಿನ್ಸ್ ಧಿಮಾನ್ ನಿರ್ದೇಶಿಸಿದ್ದಾರೆ ಮತ್ತು ಚೌಹಾಣ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾನು ಚೌಹಾಣ್ ನಿರ್ಮಿಸಿದ್ದಾರೆ. ಇದೇ ಮೇ 16ರಂದು ರಿಲೀಸ್ ಆಗಲಿದೆ.