ಬೆಂಗಳೂರು, ಸೆ.8: ರಾಜ್ಯದಲ್ಲಿ ಬರ ಪರಿಶೀಲನೆ ಮುಕ್ತಾಯವಾಗಿಲ್ಲ. ಹಂತ ಹಂತವಾಗಿ ನಡೆಯುತ್ತಿದೆ. ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದ್ದು, ಎರಡನೇ ಹಂತದ ಪರಿಶೀಲನೆ ನಡೆಯುತ್ತಿದೆ. 25 ತಾಲೂಕುಗಳು ಬರ ಪೀಡಿತ ಪ್ರದೇಶಗಳೆಂದು ಘೋಷಣೆಗೆ ಅರ್ಹತೆ ಪಡೆದಿದ್ದು, ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ (Dr G Parameshwar) ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬರ ಪೀಡಿತ ಪ್ರದೇಶಗಳ ಘೋಷಣೆ ಪ್ರಕ್ರಿಯೆ ವಿಳಂಬವಾಗಿಲ್ಲ. ಮುಂಗಾರು ಹಾಗೂ ಹಿಂಗಾರು ಕಡಿಮೆ ಆಗುವವರೆಗೂ ಪರಿಶೀಲನೆ ಮುಂದುವರಿಯುತ್ತದೆ. ಕಳೆದ ಬಾರಿ ಸುಮಾರು 200 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿತ್ತು. ಈ ಬಾರಿಯೂ 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಿಸಲ್ಪಡುವ ಪರಿಸ್ಥಿತಿ ಇದೆ. ಕರಾವಳಿ ಪ್ರದೇಶವನ್ನು ಹೊರತುಪಡಿಸಿ ಉಳಿದೆಲ್ಲೆಡೆ ಬರ ಪರಿಸ್ಥಿತಿ ಇದೆ ಎಂದರು.
ಬೇಕೆಂದೆ ಬರಪೀಡಿತ ತಾಲೂಕುಗಳನ್ನು ಕೈಬಿಟ್ಟಿಲ್ಲ
ಕೆಲವು ಶಾಸಕರು ತಮ್ಮ ತಾಲೂಕುಗಳನ್ನು ಬೇಕೆಂದೇ ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತೀವ್ರ ಬರ ಇದ್ದರೂ ತಮ್ಮ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿಲ್ಲ ಎಂದು ಯಾರೂ ಆತಂಕಪಡುವ ಅಗತ್ಯವಿಲ್ಲ. ಇಡೀ ರಾಜ್ಯವೇ ಇಂದು ಬರಗಾಲವನ್ನು ಎದುರಿಸುತ್ತಿದೆ. ಬರಪೀಡಿತ ಪ್ರದೇಶಗಳೆಂದು ಘೋಷಿಸುವ ವಿಚಾರದಲ್ಲಿ ರಾಜ್ಯ ಸರ್ಕಾರದ ಯಾರೊಬ್ಬರ ಪಾತ್ರವೂ ಇಲ್ಲ. ಬೇಕೆಂದೆ ಕೆಲವು ತಾಲ್ಲೂಕುಗಳನ್ನು ಕೈಬಿಟ್ಟಿದ್ದಾರೆ ಎಂಬುದು ಆಧಾರ ರಹಿತ ಆರೋಪವಾಗಿದೆ. ಪಕ್ಷ ನೋಡಿಕೊಂಡು ಬರ ಸಂಭವಿಸಿಲ್ಲ. ಈಗಾಗಲೇ ಘೋಷಿತ ಪಟ್ಟಿಯಲ್ಲಿ ವಿರೋಧ ಪಕ್ಷದ ಶಾಸಕರಿರುವ ತಾಲ್ಲೂಕುಗಳೂ ಇವೆಯಲ್ಲವೇ? ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರವೇ ತನ್ನ ಪಾಡಿಗೆ ತಾನು ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿದರೆ ಕೇಂದ್ರದಿಂದ ನೆರವು ಪಡೆಯಲು ಸಾಧ್ಯವಾಗುವುದಿಲ್ಲ. ಕೇಂದ್ರದ ಬರಪರಿಹಾರ ಪಡೆಯಲು ನಾವು ಸಹನೆಯಿಂದ ವರ್ತಿಸಿದಷ್ಟೂ ಉತ್ತಮ. ಕೇಂದ್ರ ಸರ್ಕಾರದ ನಿಯಮಗಳಡಿ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಲಾಗುತ್ತದೆಯೇ ವಿನಃ ರಾಜ್ಯ ಸರ್ಕಾರವೇ ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡು ಘೋಷಣೆ ಮಾಡಲು ಸಾಧ್ಯವಿಲ್ಲ. ಉಪಗ್ರಹ ಆಧಾರಿತ ಚಿತ್ರಗಳನ್ನು ಪರಿಶೀಲಿಸಿ, ಗ್ರೌಂಡ್ ಟ್ರುಥಿಂಗ್ ಮಾಡಿ, ವೈಜ್ಞಾನಿಕ ಅಧ್ಯಯನದ ಬಳಿಕ ಘೋಷಣೆ ಮಾಡುತ್ತಾರೆ. ಇದನ್ನು ನಾನು ಅಧಿವೇಶನದ ವೇಳೆಯೇ ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಅವರು ಒತ್ತಿ ಹೇಳಿದರು.
ನೈಸ್ ನಿವೇಶನ ಹಂಚಿಕೆ: ಮಾನವೀಯತೆ ದೃಷ್ಟಿಯಿಂದ ತೀರ್ಮಾನ
ನೈಸ್ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ರಕ್ಕೆ ಸಂಬಂಧಿಸಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಡಾ.ಜಿ.ಪರಮೇಶ್ವರ್ ಅವರು, ಭೂಮಿ ಕಳೆದುಕೊಳ್ಳುವವರಿಗಿಂತ ಸಚಿವ ಸಂಪುಟದಲ್ಲಿರುವಂತಹ ಅನೇಕ ಸಚಿವರು ಅದರ ಲಾಭ ಪಡೆಯುತ್ತಿದ್ದಾರೆ ಎಂದು ಆರೋಪ ಆಧಾರ ರಹಿತವಾಗಿದೆ ಎಂದರು. ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ನ ಆದೇಶಕ್ಕೆ ಅನುಗುಣವಾಗಿ ಮಾನವೀಯತೆ ದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಂಡಿದೆ. ನೂರಾರು ಕೋಟಿ ಬೆಲೆಬಾಳುವ ಭೂಮಿಯನ್ನು ಕೆಲವು ಲಕ್ಷಗಳಿಗೆ ಬಿಟ್ಟುಕೊಟ್ಟ ರೈತರಿಗೆ ಅನ್ಯಾಯವಾಗದಿರಲು 1453 ನಿವೇಶಗಳನ್ನು ಹಂಚಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವಿಚಾರದಲ್ಲಿ ಯಾರಿಗೂ ವೈಯಕ್ತಿಕ ಲಾಭ ಮಾಡಿಕೊಡುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಇಂದು ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ರಾಜ್ಯ ಸರ್ಕಾರವು ತಮಿಳುನಾಡು ಕಾವೇರಿ ನೀರನ್ನು 4.8 ಹೆಕ್ಟೆರ್ ಪ್ರದೇಶದ ಕೃಷಿಗೆ ಬಳಕೆ ಮಾಡುತ್ತಿರುವ ವಿಚಾರವನ್ನು ಪ್ರಸ್ತಾಪಿಸಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.