ಬೆಂಗಳೂರು, ಆ.11: ರಾಜ್ಯದಲ್ಲಿ ಗೂಂಡಾಗಿರಿ ಸರ್ಕಾರ ಅಧಿಕಾರದಲ್ಲಿದೆ. ನಾಗೇಂದ್ರ ವಿರುದ್ಧ ಕೇಸ್ ಖುಲಾಸೆ ಆಗದಿದ್ದರೂ ಮತ್ತೆ ಸಚಿವ ಸಂಪುಟಕ್ಕೆ ಹೇಗೆ ತೆಗೆದುಕೊಂಡಿದ್ದೀರಿ?, ವಿಧಾನಸಭೆ ಒಳಗಡೆಯೂ ನಾಗೇಂದ್ರ ಅವರ ವಿಚಾರ ಪ್ರಸ್ತಾಪಿಸಿ ರಾಜೀನಾಮೆಗೆ ಆಗ್ರಹಿಸಲಿದ್ದೇವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ (R Ashok) ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಗೂಂಡಾಗಿರಿ ಬಹಳ ದಿನ ನಡೆಯುವುದಿಲ್ಲ. ನಾಳೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪತ್ರಿಕಾ ಸಂದರ್ಶನ ನಡೆಯಲಿದೆ. ಅಲ್ಲಿ ನಮ್ಮ ಸಂಸದರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾರ್ಯಕರ್ತರು, ಜನಪ್ರತಿನಿಧಿಗಳು ಧರಣಿ ಮಾಡಲಿದ್ದಾರೆ ಎಂದರು.
ಆ.13ರಂದು ಸದನ ಪ್ರಾರಂಭವಾಗಲಿದೆ, ಬಳಿಕ ಸ್ಪೀಕರ್ ಚುನಾವಣೆ ನಡೆಯಲಿದೆ. ನಾಗೇಂದ್ರ ವಿರುದ್ಧ ಕೇಸ್ ಖುಲಾಸೆ ಆಗಿದೆಯೇ? ಆಗಿದ್ದರೆ ಮತ್ತೆ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬಹುದಿತ್ತು. ಈಶ್ವರಪ್ಪ ಅವರ ವಿಚಾರದಲ್ಲಿ ಕೈಕೈ ಮಿಲಾಯಿಸಿದ್ದರು. ಲಕ್ಷ್ಮಣ ಸವದಿ ಅವರ ವಿಚಾರದಲ್ಲೂ ವಿಡಿಯೋ ನೋಡಿ ಸಮಸ್ಯೆ ಆಗಿತ್ತು. ಅವರನ್ನು ಸಂಪುಟಕ್ಕೆ ತೆಗೆದುಕೊಂಡಿದ್ದೇವಾ? ನೀವು ಹೇಗೆ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿದ್ದೀರಿ ಎಂದು ಕೇಳಿದರು. ನನಗೆ ಗೊತ್ತಿರುವ ಪ್ರಕಾರ ಮಿಸ್ಟರ್ ನಾಗೇಂದ್ರ ಪ್ರತಿದಿನವೂ ಕೋರ್ಟಲ್ಲೇ ಇರಬೇಕು. ಅವರ ವಿರುದ್ಧ ಹಲವಾರು ಕೇಸುಗಳು ಇವೆ ಎಂದು ಆರೋಪಿಸಿದರು.
ಅಸೆಂಬ್ಲಿಗೆ ಬರುವುದು ಯಾವಾಗ?
ಸಿಬಿಐ, ಇ.ಡಿ, ಸಿಐಡಿ, ಲೋಕಾಯುಕ್ತದ 31 ಕೇಸುಗಳಿವೆ ಎಂದು ವಿವರಿಸಿದ ಅವರು, ಚೆನ್ನೈನಲ್ಲೂ ಮೊಕದ್ದಮೆಗಳಿವೆ ಎಂದು ತಿಳಿಸಿದರು. ತಿಂಗಳಿಗೆ 31 ದಿನ ಇವೆ. 31 ದಿನ 31 ಕೇಸುಗಳಿವೆ. ಆ ಮನುಷ್ಯ ಅಸೆಂಬ್ಲಿಗೆ ಬರುವುದು ಯಾವಾಗ? ಖಾತೆ ನೋಡುವುದು ಯಾವಾಗ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ಸಿನವರಿಗೆ ಮಾನ ಮರ್ಯಾದೆ ಇದೆಯೇ? ಅವರನ್ನು ಜವಾಬ್ದಾರಿಯಿಂದ ಬಿಡುಗಡೆ ಮಾಡಿ. ಅವರು ಕೇಸುಗಳಿಗೆ ಓಡಾಡಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.