ನವದೆಹಲಿ, ಮೇ 29: ಕರ್ನಾಟಕದ ಶಕ್ತಿ ಕೇಂದ್ರ, ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಸಂಪರ್ಕ ಸೇತುವಾಗಿರುವ ವಿಜಯಪುರ ಮಧ್ಯೆ ಹೊಸ ದ್ವೈಸಾಪ್ತಾಹಿಕ ಎಕ್ಸ್ಪ್ರೆಸ್ ವಿಶೇಷ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ (Central Government) ಅಸ್ತು ಎಂದಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರ ಒತ್ತಾಸೆ, ಪ್ರಸ್ತಾವನೆ ಮೇರೆಗೆ ʼಯಶವಂತಪುರ-ವಿಜಯಪುರʼ ನಡುವೆ ಇದೇ ಜೂನ್ 1 ರಿಂದಲೇ ದ್ವೈಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಅನುಮೋದಿಸಿದೆ.
ವಿಜಯಪುರ ಭಾಗದ ಜನರ ಬಹು ದಿನದ ಬೇಡಿಕೆ ಮನಗಂಡು ಸಚಿವ ಪ್ರಲ್ಹಾದ್ ಜೋಶಿ ಅವರು ಕೆಲ ದಿನಗಳಿಂದ ರೈಲ್ವೆ ಇಲಾಖೆ, ಸಚಿವ ಅಶ್ವಿನಿ ವೈಷ್ಣವ ಅವರ ಗಮನ ಸೆಳೆದು ಅಂತೂ ಬೆಂಗಳೂರಿನ ಯಶವಂತಪುರದಿಂದ ವಿಜಯಪುರಕ್ಕೆ ಹೊಸ ದ್ವೈಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಸುಗಮಗೊಳಿಸಿದ್ದಾರೆ.
ಈ ವಿಶೇಷ ಹೈಸ್ಪೀಡ್ ರೈಲು ಯಶವಂತಪುರ-ವಿಜಯಪುರ ಮಧ್ಯೆ ನೇರ ಸಂಪರ್ಕ ಕಲ್ಪಿಸಲಿದೆ. ಪ್ರತಿ ಶನಿವಾರ ಮತ್ತು ಸೋಮವಾರ 06577 ಸಂಖ್ಯೆಯ ರೈಲು ಯಶವಂತಪುರದಿಂದ ವಿಜಯಪುರಕ್ಕೆ ಹಾಗೂ ಪ್ರತಿ ಭಾನುವಾರ ಮತ್ತು ಮಂಗಳವಾರ 06578 ಸಂಖ್ಯೆಯ ವಿಶೇಷ ರೈಲು ವಿಜಯಪುರದಿಂದ ಯಶವಂತಪುರಕ್ಕೆ ಸಂಚರಿಸಲಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.
ರಾಜ್ಯದ ರೈಲ್ವೆ ಸೌಲಭ್ಯಕ್ಕೆ ಕೇಂದ್ರ ಬದ್ಧ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರ ಸಹಕಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ರೈಲ್ವೆ ಸೌಲಭ್ಯ ಕಲ್ಪಿಸಲು ಯಾವತ್ತೂ ಬದ್ಧವಾಗಿದೆ ಎಂದಿದ್ದಾರೆ.
ದೇಶದ ಪಡಿತರ ವ್ಯವಸ್ಥೆಗೆ 'ಸಾರ್ಥಕ್ ಪಿಡಿಎಸ್' ಯೋಜನೆ: ಕೇಂದ್ರದಿಂದ 25,530 ಕೋಟಿ ರುಪಾಯಿ ಅನುದಾನ
ಪ್ರಧಾನಿಗೆ ಸಚಿವ ಜೋಶಿ ಧನ್ಯವಾದ
ಕರ್ನಾಟಕದ ರೈಲ್ವೆ ಮೂಲಸೌಕರ್ಯವನ್ನು ಬಲಪಡಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು, ರಾಜ್ಯದ ಪ್ರತಿಯೊಂದು ಯೋಜನೆಗೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.