ನವದೆಹಲಿ, ಜೂ.13: ರೈತರ ಹಿತಕ್ಕೆ ಬದ್ಧವಾಗಿ ಕೇಂದ್ರವು ಕರ್ನಾಟಕಕ್ಕೆ ಅಗತ್ಯಕ್ಕಿಂತ ಹೆಚ್ಚೇ ರಸಗೊಬ್ಬರ ಪೂರೈಸಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ʼರಸಗೊಬ್ಬರ ಅಭಾವʼ ಬಿಂಬಿಸಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ನೋಡುತ್ತಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕಿಡಿಕಾರಿದ್ದಾರೆ. ಕರ್ನಾಟಕದಲ್ಲಿ ಮುಂಗಾರು ಕೃಷಿ ಚಟುವಟಿಕೆ ಆರಂಭವಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ ʼರಸಗೊಬ್ಬರ ಕೊರತೆʼಯೆಂದು ಬಿಂಬಿಸಿ, ಅನಾವಶ್ಯಕವಾಗಿ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದೆ ಎಂದು ರಸಗೊಬ್ಬರ ಪೂರೈಕೆ ಬಗ್ಗೆ ಪ್ರಸ್ತುತ ಅಂಕಿ ಅಂಶ ತೆರೆದಿಟ್ಟು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಜೋಶಿ.
ವಾಸ್ತವವಾಗಿ ರಾಜ್ಯದಲ್ಲಿ ಸಮರ್ಪಕ ರಸಗೊಬ್ಬರ ಲಭ್ಯತೆಯಿದೆ. ಇದೊಂದು ಸಮಸ್ಯೆಯೇ ಅಲ್ಲ. ಆದರೆ ರಾಜ್ಯ ಸರ್ಕಾರ ಅಗತ್ಯವಿರುವಲ್ಲಿ ರೈತರಿಗೆ ರಸಗೊಬ್ಬರ ತಲುಪಿಸದೆ ತೀರಾ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ. ಇದು ಆಡಳಿತ ವೈಫಲ್ಯಕ್ಕೆ ಕೈಗನ್ನಡಿ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಜಾಗತಿಕ ಬಿಕ್ಕಟ್ಟಿದ್ದರೂ ಸಮರ್ಪಕ ಪೂರೈಕೆ
ಜಾಗತಿಕ ಬಿಕ್ಕಟ್ಟಿದ್ದರೂ ಕೇಂದ್ರ ಸರ್ಕಾರ, ಕರ್ನಾಟಕದ ರೈತರಿಗಾಗಿ 2026ರ ಮುಂಗಾರು (ಖಾರಿಫ್) ಹಂಗಾಮಿಗೆ ಸಾಕಷ್ಟು ಪ್ರಮಾಣದ ರಸಗೊಬ್ಬರ ಲಭ್ಯತೆಯನ್ನು ಖಚಿತಪಡಿಸಿದೆ. ಇರಾನ್-ಇಸ್ರೇಲ್ ಸಂಘರ್ಷ ಮತ್ತು ರಫ್ತು ಸವಾಲುಗಳ ಮಧ್ಯೆಯೂ ಕೇಂದ್ರ ಸರ್ಕಾರ ಮುಂಜಾಗ್ರತೆ ವಹಿಸಿದ್ದು, ದೇಶೀಯವಾಗಿ ಯೂರಿಯಾ ಉತ್ಪಾದನೆ ಹೆಚ್ಚಿಸಿದ್ದಲ್ಲದೆ, ಆಮದನ್ನು ಸಹ ಸರಿಯಾಗಿ ನಿಭಾಯಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಮುಂಗಾರು ಮುನ್ನವೇ ಹೆಚ್ಚು ಪೂರೈಕೆ
ಮುಂಗಾರು ಹಂಗಾಮಿಗೂ ಮುನ್ನವೇ ಕರ್ನಾಟಕಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ರಸಗೊಬ್ಬರವನ್ನು ಪೂರೈಸಲಾಗಿದೆ. ಮುಂಗಡ ದಾಸ್ತಾನಿಗೆ ಅನುವಾಗುವಂತೆ ಜನವರಿ-ಮಾರ್ಚ್ ಅವಧಿಯಲ್ಲೇ ಅಗತ್ಯಕ್ಕಿಂತ ಹೆಚ್ಚುವರಿ 0.33 ಲಕ್ಷ ಮೆಟ್ರಿಕ್ ಟನ್ ಯೂರಿಯಾ, 1.29 ಲಕ್ಷ ಮೆಟ್ರಿಕ್ ಟನ್ ಡಿಎಪಿ ಮತ್ತು 1.58 ಲಕ್ಷ ಮೆಟ್ರಿಕ್ ಟನ್ ಎನ್ಪಿಕೆಎಸ್ ಅನ್ನು ನೀಡಲಾಗಿದೆ ಎಂದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ವಿವಿಧ ಜಿಲ್ಲೆಗಳ ನಡುವೆ ರಸಗೊಬ್ಬರವನ್ನು ಸಮರ್ಪಕವಾಗಿ ವಿತರಣೆ ಮಾಡದೆ, ದಾಸ್ತಾನು ದಂಧೆ, ಕಾಳಸಂತೆ ಮತ್ತು ಸಬ್ಸಿಡಿ ದುರುಪಯೋಗ ತಡೆಗಟ್ಟದೇ ರೈತರಿಗೆ ವಂಚಿಸುತ್ತಿದೆ. ಅಗತ್ಯವಿರುವೆಡೆ ಹೆಚ್ಚಿನ ದಾಸ್ತಾನು ಲಭ್ಯವಾಗುವಂತೆ ಮಾಡದೇ ಇರುವುದು ಈ ಸರ್ಕಾರದ ಬೇಜವಾಬ್ದಾರಿಯೇ ಸರಿ ಎಂದು ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.
ರಾಜ್ಯಕ್ಕಿಷ್ಟು ಗೊಬ್ಬರ: ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅದಾಗಲೇ ಜೂನ್ 10ರವರೆಗೆ ಯೂರಿಯಾ: 3.13 ಲಕ್ಷ ಮೆಟ್ರಿಕ್ ಟನ್ (LMT) ಅಗತ್ಯತೆಯಲ್ಲಿ 5.59 LMT ಲಭ್ಯತೆಯನ್ನು ಖಾತರಿಪಡಿಸಿದೆ. 2.47 LMT ಮಾರಾಟದ ನಂತರವೂ 3.12 LMT ದಾಸ್ತಾನು (closing stock) ಬಾಕಿಯಿದೆ. ಅಲ್ಲದೇ, ಇನ್ನೂ 17,190 LMT ಸಾಗಣೆಯಲ್ಲಿದೆ.
ಡಿಎಪಿ 1.89 LMT ಅಗತ್ಯತೆಯಲ್ಲಿ 2.57 LMT ಲಭ್ಯತೆ ಖಚಿತಪಡಿಸಿದ್ದು, ಪ್ರಸ್ತುತ ದಾಸ್ತಾನು 1.09 LMT ಇದೆ. ಹೆಚ್ಚುವರಿ ರಸಗೊಬ್ಬರ ಪೂರೈಕೆಯಲ್ಲಿದೆ. ಎನ್ಪಿಕೆಎಸ್: 4.36 LMT ಅಗತ್ಯತೆಯಿದ್ದರೆ 9.28 LMT ಲಭ್ಯತೆ ಖಾತರಿಪಡಿಸಲಾಗಿತ್ತು. ಗಣನೀಯ ಪ್ರಮಾಣದ ಮಾರಾಟದ ನಂತರವೂ 5.6 ಲಕ್ಷ LMTಗೂ ಹೆಚ್ಚು ರಸಗೊಬ್ಬರ ಲಭ್ಯವಿದೆ ಎಂದು ಸಚಿವರು ಅಂಕಿ ಅಂಶ ಸಹಿತ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ನೆಹರು ಮೊದಲ ಪ್ರಧಾನಿ ನಿಜ, ಆದ್ರೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರಲಿಲ್ಲ: ಛಲವಾದಿ ನಾರಾಯಣಸ್ವಾಮಿ
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಯಾವತ್ತೂ ರೈತರ ಹಿತ ಕಾಯಲು ಬದ್ಧವಾಗಿದೆ. ಸದಾ ರೈತ ಸಮೂಹವನ್ನು ಬೆಂಬಲಿಸುತ್ತ ಬಂದಿದೆ. ಅಂತೆಯೇ ಕರ್ನಾಟಕದಾದ್ಯಂತ ಸಹ ಸಾಕಷ್ಟು ರಸಗೊಬ್ಬರ ಲಭ್ಯತೆಗೆ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.