ನವದೆಹಲಿ: ವಿದ್ಯಾರ್ಥಿ-ಯುವಜನರ ಬಗ್ಗೆ ಮೋದಿ ಸರ್ಕಾರಕ್ಕೆ ನೈಜ ಕಳಕಳಿ, ಕಾಳಜಿ, ಸಂವೇದನೆಯಿದೆ. ಯಾವತ್ತೂ ಯುವ ಸಮುದಾಯದ ಭದ್ರ ಭವಿಷ್ಯಕ್ಕೆ, ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಕಟಿಬದ್ಧವಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ನವದೆಹಲಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ನೀಟ್ ವಿವಾದ ಗಮನಕ್ಕೆ ಬರುತ್ತಲೇ ಕೇಂದ್ರ ಸರ್ಕಾರ ತ್ವರಿತವಾಗಿ 1200 ಸಿಸಿ ಟಿವಿಗಳ ಕಣ್ಗಾವಲಿನಲ್ಲಿ ಅತ್ಯಂತ ಪಾರದರ್ಶಕವಾಗಿ ಮರು ಪರೀಕ್ಷೆ ನಡೆಸಿದೆ. ತ್ವರಿತವಾಗಿ ಫಲಿತಾಂಶವನ್ನೂ ಪ್ರಕಟಿಸಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಪ್ರಧಾನಿ ಮೋದಿ ಅವರು ಮತ್ತು ಕೇಂದ್ರ ಸರ್ಕಾರ ಯಾವತ್ತೂ ದೇಶದ ವಿದ್ಯಾರ್ಥಿಗಳು, ಯುವಶಕ್ತಿ ಪರವಿದೆ. ಅವರ ಭವಿಷ್ಯದ ಹಿತದೃಷ್ಟಿಯಿಂದ ಅನೇಕಾನೇಕ ಯೋಜನೆಗಳನ್ನು ಕೈಗೊಂಡಿದೆ. ಯಾವುದೇ ಅಕ್ರಮ-ಅನ್ಯಾಯ ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಬದ್ಧವಾಗಿದೆ ಎಂದು ಸಂದೇಶ ರವಾನಿಸಿದರು.
ಸಮಾಜ ವಿದ್ರೋಹಿಗಳ ಬಗ್ಗೆ ಜಾಗೃತೆ
ನೀಟ್ ವಿವಾದ ಕುರಿತು ವಿದ್ಯಾರ್ಥಿಗಳು ಶಾಂತ ರೀತಿಯಲ್ಲಿ ಹೋರಾಟ ನಡೆಸಲಿ. ಆದರೆ, ವಿದ್ಯಾರ್ಥಿಗಳ ಹೋರಾಟವನ್ನು ಸಮಾಜ ವಿದ್ರೋಹಿ ಶಕ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿಯಿದೆ. ಈ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಿರಬೇಕು ಎಂದು ಮನವಿ ಮಾಡಿದರು.
ಜಂತರ್ ಮಂತರ್ನಲ್ಲಿ ವಿದ್ಯಾರ್ಥಿ ಹೋರಾಟಕ್ಕೆ ಕ್ರಿಮಿನಲ್ಗಳು ಪ್ರವೇಶಿಸಿದ್ದಾರೆ. ಆಮ್ ಆದ್ಮಿ ಪಾರ್ಟಿಯ, ಕ್ರಿಮಿನಲ್ ಹಿನ್ನೆಲೆಯುಳ್ಳ ಹಾಜಿ ಅಫ್ಜಲ್ ಎಂಟ್ರಿಯಾಗಿದೆ. ಇವನೇನು ವಿದ್ಯಾರ್ಥಿಯೂ ಅಲ್ಲ; ಅಥವಾ ವಿದ್ಯಾರ್ಥಿ ನಾಯಕನೂ ಅಲ್ಲ. ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕೆಂದು ಕರೆ ನೀಡಿದರು.
ಪ್ರತಿಭಟನಾಕಾರರ ಹಿಂದೆ ಕಾಣದ ಕೈ, ಹುನ್ನಾರ:
ಜಂತರ್ ಮಂತರ್ನಲ್ಲಿ ನೀಟ್ ಪರೀಕ್ಷಾರ್ಥಿಗಳ ಹೋರಾಟದ ಹಿಂದೆ ಕಾಣದ ಕೈಗಳಿವೆ. ಭಾರತ ಸರ್ಕಾರದ ವಿರುದ್ಧ ವ್ಯವಸ್ಥಿತ ಹುನ್ನಾರ, ಷಡ್ಯಂತ್ರ ನಡೆಯುತ್ತಿದೆ. ನಿಜವಾದ ವಿದ್ಯಾರ್ಥಿ-ಯುವಶಕ್ತಿ ಇದನ್ನು ಅರಿಯಬೇಕು ಎಂದು ಮನವಿ ಮಾಡಿದರು.
ಸಮಸ್ಯೆಗೆ ರಾಜೀನಾಮೆಯೇ ಪರಿಹಾರವಲ್ಲ:
ಎಲ್ಲಾ ಕಾಲಕ್ಕೂ ಪ್ರಶ್ನೆ ಪತ್ರಿಕೆ ಸೋರಿಕೆ ಒಂದು ರೋಗವಾಗಿ ಪರಿಣಮಿಸಿದೆ. ಇದಕ್ಕೆ ರಾಜೀನಾಮೆಯೇ ಪರಿಹಾರವಲ್ಲ; ವ್ಯವಸ್ಥೆ ಲೋಪದೋಷ ಸರಿಪಡಿಸಲು ಕಟ್ಟು ನಿಟ್ಟಿನ ಕ್ರಮ ಅಗತ್ಯವಾಗಿದ್ದು, ಮೋದಿ ಸರ್ಕಾರ ಅದನ್ನು ಮಾಡುತ್ತಿದೆ. ಈಗಾಗಲೇ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸುವುದಾಗಿ ಪ್ರಧಾನಿ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಯುಪಿಎ ಕಾಲದಲ್ಲಿ ಎಷ್ಟು ರಾಜೀನಾಮೆ ನೀಡಿದ್ರು?:
ರಾಹುಲ್ ಗಾಂಧಿ ವಿರೋಧಕ್ಕೆ ಅರ್ಥವೇ ಇಲ್ಲ. ಯುಪಿಎ ಆಡಳಿತದ 65 ವರ್ಷಗಳಲ್ಲಿ ಇಂಥ ಪ್ರಕರಣಗಳು ಅದೆಷ್ಟು ಘಟಿಸಿಲ್ಲ? ದೇಶದಲ್ಲಿ, ಆಯಾ ರಾಜ್ಯಗಳಲ್ಲಿ ಯುಪಿಎಸ್ಸಿ, ಪಿಯುಸಿ, ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಘಟಿಸಿವೆ. ಆದರೆ, ಯಾವಾಗೆಷ್ಟು ಜನ ಶಿಕ್ಷಣ ಮಂತ್ರಿ, ಮುಖ್ಯಮಂತ್ರಿ ರಾಜೀನಾಮೆ ನೀಡಿದ್ದಾರೆ? ಎಂದು ಸಚಿವ ಪ್ರಲ್ಹಾದ ಜೋಶಿ ವಿಪಕ್ಷಗಳ ಪಟ್ಟಿಗೆ ಚಾಟಿ ಬೀಸಿದರು.
ಕರ್ನಾಟಕದಲ್ಲಿ ರಾಜೀನಾಮೆ ಪಡೆದಿದ್ದಾರೆಯೇ?
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ರಾಜೀನಾಮೆ ಕೊಡಬೇಕು ಎನ್ನವುದೇ ಆದರೆ, ಈವರೆಗೆ ಬಹಳ ಜನ ಶಿಕ್ಷಣ ಸಚಿವರು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕಿತ್ತು ಎಂದ ಸಚಿವರು, ಕರ್ನಾಟಕದಲ್ಲಿ ಪ್ರಸ್ತುತ ಕೆಪಿಎಸ್ಸಿ ಕರ್ಮಕಾಂಡವಿದೆ. ರಾಜೀನಾಮೆ ಪಡೆದಿದ್ದಾರೆಯೇ? ಹೋಗಲಿ ಕಟ್ಟುನಿಟ್ಟಿನ ಕ್ರಮವದರೂ ಆಗಿದೆಯೇ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಪಿಯುಸಿ, ಸಿಇಟಿ, ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಲೀಕ್ ಆಗಿವೆ. ಮುಖ್ಯಮಂತ್ರಿ ರಾಜೀನಾಮೆ ನೀಡುತ್ತಾರೆಯೇ? ಅಥವಾ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟಿದ್ದರಾ? ಎಂದು ಪ್ರಶ್ನಿಸಿದ ಪ್ರಲ್ಹಾದ ಜೋಶಿ, ಒಂದು ರಾಜ್ಯದಲ್ಲೇ ಇವರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿಲ್ಲ ಎಂದು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ತಿವಿದರು.
NEET Paper leak: ನೀಟ್ ಅಕ್ರಮ ಹಿನ್ನೆಲೆ NTAಗೆ ಮೇಜರ್ ಸರ್ಜರಿ; 47 ಅಧಿಕಾರಿಗಳ ವಜಾ
ಚರ್ಚೆಗೆ ನಾವ್ ರೆಡಿ
ಲೋಕಸಭೆ, ರಾಜ್ಯಸಭೆ ಇರುವುದೇ ಚರ್ಚೆಗೆ. ನೀಟ್ ವಿವಾದ ಕುರಿತು ಸದನದಲ್ಲಿ ಚರ್ಚೆಗೆ ನಾವ್ ರೆಡಿ ಇದ್ದೇವೆ. ಆದರೆ, ಅವರು ಯಾಕೆ ಸಿದ್ಧರಿಲ್ಲ? ಅವರ ಹಳೇ ಪ್ರಕರಣಗಳು ಚರ್ಚೆಗೆ ಬರುತ್ತವೆ ಎಂಬ ಭೀತಿಯಲ್ಲಿದ್ದಾರೆ. ಆದರೆ, ನಾವು ಹಳೆಯದ್ದನ್ನು ಕೆದಕುತ್ತಿಲ್ಲ. ಬದಲಿಗೆ ಯುವಪೀಳಿಗೆ ಹಿತದೃಷ್ಟಿಯಿಂದ ಸಾತ್ವಿಕವಾಗಿ ಚರ್ಚೆ ನಡೆಸಲು ಸಿದ್ಧರಿದ್ದೇವೆ. ವಿಪಕ್ಷಗಳು ಅಗತ್ಯ ಸಲಹೆ-ಸಹಕಾರ ನೀಡಲಿ. ಮುಕ್ತವಾಗಿ ಸ್ವೀಕರಿಸುತ್ತೇವೆ ಎಂದು ಪ್ರಲ್ಹಾದ ಜೋಶಿ ತಿಳಿಸಿದರು.