ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೈತರ ವಿಮೆ ಹಣ ಕಟ್ಟದ ಸೊಸೈಟಿ ಕಾರ್ಯದರ್ಶಿ ವಜಾಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ

CM DK Shivakumar: ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಮಂಗಳವಾರ ಬೆಳ್ಳಂಬೆಳಗ್ಗೆ ದಿಢೀರ್ ಭೇಟಿ ನೀಡಿದ ಸಿಎಂ ಡಿ.ಕೆ. ಶಿವಕುಮಾರ್‌, ಅಲ್ಲಿಗೆ ಬಂದಿದ್ದ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ತೆಂಗು ಬೆಳೆಗಾರರು, ವರ್ತಕರು ಹಾಗೂ ಮಂಡಿ ಮಾಲೀಕರ ಜತೆ ಮಾತುಕತೆ ನಡೆಸಿ, ಅವರ ಸಮಸ್ಯೆ ಆಲಿಸಿದರು.

ಬೆಂಗಳೂರು, ಸೆ.8: ದೇವರ ಹಿಪ್ಪರಗಿ ತಾಲೂಕಿನ ರೈತರು ಬೆಳೆ ವಿಮೆಗೆ ಪಾವತಿಸಿದ್ದ ಹಣವನ್ನು ಡಿಸಿಸಿ ಬ್ಯಾಂಕಿಗೆ ಪಾವತಿ ಮಾಡದ ಕಾರಣ 93 ರೈತರ ವಿಮೆ ತಿರಸ್ಕಾರಗೊಂಡಿದ್ದು, ಈ ವಿಚಾರದಲ್ಲಿ ನಿರ್ಲಕ್ಷ ತೋರಿರುವ ಸ್ವಸಹಾಯ ಸೊಸೈಟಿ ಕಾರ್ಯದರ್ಶಿ ವಜಾಗೊಳಿಸಲು ಸಿಎಂ ಡಿ.ಕೆ. ಶಿವಕುಮಾರ್‌ (CM DK Shivakumar) ಸೂಚನೆ ನೀಡಿದರು. ಮಂಗಳವಾರ ಬೆಳ್ಳಂಬೆಳಗ್ಗೆ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ಅವರು, ಅಲ್ಲಿ ಬಂದಿದ್ದ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ತೆಂಗು ಬೆಳೆಗಾರರು, ವರ್ತಕರು ಹಾಗೂ ಮಂಡಿ ಮಾಲೀಕರ ಜತೆ ಮಾತುಕತೆ ನಡೆಸಿ, ಅವರ ಸಮಸ್ಯೆ ಆಲಿಸಿದರು.

ದೇವರ ಹಿಪ್ಪರಗಿಯ ರೈತರೊಬ್ಬರು ಸಿಎಂ ಅವರನ್ನು ಭೇಟಿ ಮಾಡಿ ನಾವು ಬೆಳೆ ವಿಮೆಗೆ ಸ್ವಸಹಾಯ ಸೊಸೈಟಿಗೆ ಹಣ ಕಟ್ಟಿದ್ದು, ಅವರು ಡಿಸಿಸಿ ಬ್ಯಾಂಕಿಗೆ ಹಣ ಪಾವತಿ ಮಾಡದ ಕಾರಣ ನಮ್ಮ ವಿಮೆ ತಿರಸ್ಕೃತಗೊಂಡಿದೆ ಎಂದು ನಮಗೆ ಮೆಸೇಜ್ ಬಂದಿದೆ ಎಂದು ತಮ್ಮ ಅಳಲು ತೋಡಿಕೊಂಡರು. ರೈತರು ಹಣ ಪಾವತಿ ಮಾಡಿರುವ ಪಟ್ಟಿ ಪರಿಶೀಲಿಸಿದ ಸಿಎಂ, ಕೂಡಲೇ ನಿರ್ಲಕ್ಷ ತೋರಿರುವ ಅಧಿಕಾರಿಯನ್ನು ವಜಾಗೊಳಿಸುವಂತೆ ಸೂಚನೆ ನೀಡಿದರು.‌

DKS

ಖುದ್ದಾಗಿ ತೂಕ ಪರಿಶೀಲನೆ

ನೀವು ಈರುಳ್ಳಿ ತರಬೇಕಾದರೆ ಪೊಲೀಸರು ತಡೆದು ಹಣ ಪಡೆಯುತ್ತಾರಾ? ರೈತರಿಗೆ ಸರಿಯಾದ ಸಮಯಕ್ಕೆ ಹಣ ನೀಡುತ್ತಾರೆಯೇ? ರೈತರಿಂದ ಮಾರುಕಟ್ಟೆಯವರು ಕಮಿಷನ್ ಏನಾದರೂ ಪಡೆಯುತ್ತಾರಾ? ಪ್ರತಿ ಎಕರೆಗೆ ಎಷ್ಟು ಖರ್ಚು ಆಗುತ್ತದೆ? ನಿಮ್ಮ ಬೆಳೆಯ ತೂಕ ಸರಿಯಾಗಿ ಮಾಡುತ್ತಿದ್ದಾರಾ? ಎಂದು ರೈತರನ್ನು ವಿಚಾರಿಸಿ, ಮಾಹಿತಿ ಪಡೆದರು. ತಾವೇ ಖುದ್ದಾಗಿ ಈರುಳ್ಳಿ ತೂಕವನ್ನು ಪರಿಶೀಲನೆ ನಡೆಸಿದರು.

ಕಲಬುರ್ಗಿ, ಬೀದರ್, ವಿಜಯಪುರ ಮಾರುಕಟ್ಟೆಯಲ್ಲಿ 8 ರಿಂದ 10 ರೂ. ಕಮಿಷನ್ ಪಡೆಯುತ್ತಾರೆ. ಯಶವಂತಪುರ ಮಾರುಕಟ್ಟೆಯಲ್ಲಿ ರೈತರಿಂದ ಕಮಿಷನ್ ಪಡೆಯುವುದಿಲ್ಲ. ಹೀಗಾಗಿ ನಾವು ಇಲ್ಲಿಗೆ ತಂದು ಹಾಕುತ್ತೇವೆ ಎಂದು ರೈತರು ಮಾಹಿತಿ ನೀಡಿದರು.

ಈ ಬಾರಿ ಮಳೆ ಕೊರತೆಯಿಂದಾಗಿ ಇಳುವರಿ ಕಡಿಮೆಯಾಗಿದೆ. ಎಕರೆಗೆ 150-200 ಪ್ಯಾಕೆಟ್ ಈರುಳ್ಳಿ ಬರುತ್ತದೆ. ಆದರೆ ಈ ಬಾರಿ ಕೇವಲ 50 ಪ್ಯಾಕೆಟ್ ಮಾತ್ರ ಸಿಕ್ಕಿದೆ ಎಂದು ವಿವರಿಸಿದರು. ಮಳೆ ಹೆಚ್ಚಾದರೆ ಈರುಳ್ಳಿ ಜಮೀನಿನಲ್ಲೇ ಕೊಳೆಯುತ್ತದೆ, ಆಗ ಸರಿಯಾದ ಬೆಲೆ ಸಿಗುವುದಿಲ್ಲ. ಅದನ್ನು ಮಾರುಕಟ್ಟೆಗೆ ತಂದು ಹಾಕಲು ಆಗುವ ಖರ್ಚಿನಷ್ಟು ಹಣ ಸಿಗುವುದಿಲ್ಲ ಎಂದು ರೈತರು ವಿವರಿಸಿದರು.

DK Shivakumar

ಬೆಳೆ ವಿಮೆ ಸಿಕ್ಕಿಲ್ಲ ಎಂದು ಅಳಲು

ಬೆಳೆಗೆ ವಿಮೆ ಮಾಡಿಸುವುದಿಲ್ಲವೇ ಎಂದು ಸಿಎಂ ಕೇಳಿದಾಗ, ನಾವು ಹೆಕ್ಟೆರ್‌ಗೆ 6,500 ರೂ. ವಿಮೆ ಕಟ್ಟಿದ್ದರೂ ನಮಗೆ ಏನೂ ಸಿಕ್ಕಿಲ್ಲ ಎಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರೈತ ತಮ್ಮ ನೋವು ತೋಡಿಕೊಂಡರು. ರೈತರ ಮಾಹಿತಿ ಪಡೆಯುವಂತೆ ಸಿಎಂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

DK Shivakumar

ಸಿಎಂ ಕಾರ್ಯವೈಖರಿ ಶ್ಲಾಘಿಸಿದ ರೈತರು

ಕಳೆದ 30 ವರ್ಷಗಳಲ್ಲಿ ಯಾವುದೇ ಸಚಿವರು ಮುಖ್ಯಮಂತ್ರಿಗಳು ಮಾರುಕಟ್ಟೆಗೆ ಬಂದು ರೈತರ ಸಮಸ್ಯೆಗಳನ್ನು ವಿಚಾರಿಸಿರಲಿಲ್ಲ. ನೀವು ಬಂದು ಪರಿಸ್ಥಿತಿ ಪರಿಶೀಲನೆ ಮಾಡುತ್ತಿರುವುದು ಬಹಳ ಸಂತೋಷ ತಂದಿದೆ ಎಂದು ರೈತರು ಸಿಎಂ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಮಾರುಕಟ್ಟೆಯಲ್ಲಿನ ಮಂಡಿ ವರ್ತಕರೊಂದಿಗೆ ಮಾತುಕತೆ ನಡೆಸಿದ ಸಿಎಂ, "ನೀವು ಎಪಿಎಂಸಿಗೆ ಎಷ್ಟು ಪಾವತಿ ಮಾಡುತ್ತೀರಿ ಎಂದು ಕೇಳಿದರು. ಅದಕ್ಕೆ ವರ್ತಕರು ನೂರು ರೂ.ಗೆ 60 ಪೈಸೆ ಪಾವತಿ ಮಾಡುತ್ತೇವೆ ಎಂದರು. ಬೇರೆ ವರ್ತಕ 1 ರೂ. ಪಾವತಿ ಮಾಡುತ್ತಿರುವುದಾಗಿ ತಿಳಿಸಿದರು. ಆ ರೀತಿ ಏನಾದರೂ ಹೆಚ್ಚು ಹಣ ಪಡೆದರೆ ನನಗೆ ಹೇಳಿ ಅವರನ್ನು ನಾನು ಮಟ್ಟ ಹಾಕುತ್ತೇನೆ" ಎಂದು ಹೇಳಿದರು.

ರೈತರಿಂದ ನೇರ ಖರೀದಿ ವೇಳೆ ತೂಕ ಮೋಸ ಆಗದಂತೆ ಕ್ರಮ

ಕೆಲವರು ಎಪಿಎಂಸಿ ಮಾರುಕಟ್ಟೆಗೆ ಬರುವುದಿಲ್ಲ ನೇರವಾಗಿ ರೈತರಿಂದ ಖರೀದಿ ಮಾಡುತ್ತಾರೆ. ಅಲ್ಲಿ ಒಂದು ಬೆಲೆ ನಿಗದಿ ಮಾಡಿ ತೂಕ ಹೆಚ್ಚು ಕಮ್ಮಿ ಮಾಡಿ ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿದರು. ಆಗ ಸಿಎಂ, ಈ ರೀತಿ ರೈತರಿಂದ ನೇರವಾಗಿ ಖರೀದಿ ಮಾಡುವವರು ತೂಕದಲ್ಲಿ ಹೆಚ್ಚು ಕಮ್ಮಿ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೂಡ್ಲಿಗಿಯ ರೈತನ ಮನೆಗೆ ವಿದ್ಯುತ್ ಸಂಪರ್ಕದ ಭರವಸೆ

ಕೂಡ್ಲಿಗಿಯ ಹೊಸಹಟ್ಟಿ ಗ್ರಾಮದ ಆಂಜನಪ್ಪ ಎಂಬ ಈರುಳ್ಳಿ ಬೆಳೆದ ರೈತನ ಜೊತೆ ಮಾತನಾಡುತ್ತಿರುವಾಗ, ಬೆಳೆಗೆ ನೀರಿನ ವ್ಯವಸ್ಥೆ ಹೇಗೆ ಎಂದು ಕೇಳಿದರು. ಅದಕ್ಕೆ ರೈತ, ನಾನು ತೋಟದಲ್ಲಿ ಮನೆ ಕಟ್ಟಿಕೊಂಡಿದ್ದು ಅದಕ್ಕೆ ವಿದ್ಯುತ್ ಸಂಪರ್ಕಕ್ಕಾಗಿ ಮೂರು ಬಾರಿ ಅರ್ಜಿ ಹಾಕಿದರೂ ಸಂಪರ್ಕ ಸಿಕ್ಕಿಲ್ಲ. ಕೇವಲ ನನಗೆ ಮಾತ್ರವಲ್ಲ ಇದೇ ರೀತಿ ಹತ್ತಾರು ಮನೆಗಳಿವೆ ಎಂದು ಸಮಸ್ಯೆ ಹೇಳಿಕೊಂಡರು. ರೈತನ ಮಾಹಿತಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ, "ನಾನು ಪ್ರಜಾಸೇವೆ ಕಾರ್ಯಕ್ರಮ ಮಾಡಿದಾಗ, ಬಂದು ನನಗೆ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ ಎಂದು ಅರ್ಜಿ ನೀಡಬಾರದೇ ಎಂದರು. ಯೋಚನೆ ಮಾಡುವುದು ಬೇಡ. ಎಲ್ಲರಿಗೂ ವಿದ್ಯುತ್ ಸಂಪರ್ಕ ಸಿಗುವಂತೆ ಮಾಡಲಾಗುವುದು" ಎಂದು ಭರವಸೆ ನೀಡಿದರು. "ನಿಮ್ಮ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ, 10 ಕೆಜಿ ಅಕ್ಕಿ ಸಿಗುತ್ತಿದೆಯೇ? ಎಂದು ಸಿಎಂ ಡಿ.ಕೆ. ಶಿವಕುಮಾರ್‌ ವಿಚಾರಿಸಿದರು. ಆಗ ಗ್ಯಾರಂಟಿ ಯೋಜನೆಗಳು ನಮಗೆ ಸಿಗುತ್ತಿದ್ದು, ಅದರಿಂದ ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕದ ಬೇಳೆಕಾಳುಗಳಿಂದ ಪೌಷ್ಟಿಕಾಂಶ ತಿಂಡಿಗಳ ಅಭಿವೃದ್ಧಿ ಮಾಡಿದ ರಾಜ್ಯ ಸರ್ಕಾರ; 6 ವಿಧದ ಎನರ್ಜಿ ಬಾರ್‌ ತಯಾರಿಕೆ

ಮಕ್ಕಳನ್ನು ಕೆಲಸಕ್ಕೆ ಬಳಸಿದವರನ್ನು ಬಂಧಿಸಿ

ಎಪಿಎಂಸಿ ಮಾರುಕಟ್ಟೆಯಲ್ಲಿ ಮಕ್ಕಳು ಕೂಡ ಕೆಲಸ ಮಾಡುತ್ತಿರುವುದನ್ನ ಗಮನಿಸಿದ ಸಿಎಂ ಡಿ.ಕೆ. ಶಿವಕುಮಾರ್‌ ಸ್ಥಳದಲ್ಲೇ ಕಿಡಿಯಾದರು. "ಮಕ್ಕಳ ಕೈಯಲ್ಲಿ ಕೆಲಸ ಮಾಡಿಸುವವರು ಹಾಗೂ ಕೆಲಸಕ್ಕೆ ಕಳಿಸಿದವರನ್ನು ಸಾಯಂಕಾಲದೊಳಗೆ ಬಂಧಿಸುವಂತೆ" ಸೂಚನೆ ನೀಡಿದರು. "ತಕ್ಷಣವೇ ಕ್ರಮ ತೆಗೆದುಕೊಳ್ಳದಿದ್ದರೆ ಸಂಬಂಧಪಟ್ಟ ಸರ್ಕಲ್ ಇನ್ಸ್‌ಪೆಕ್ಟ‌ರ್, ಡಿಎಸ್ಪಿ, ಎಸಿಪಿ ಹಾಗೂ ಡಿಸಿಪಿ ಸೇರಿದಂತೆ ಪೊಲೀಸರನ್ನು ಅಮಾನತುಗೊಳಿಸುವುದಾಗಿ" ಎಚ್ಚರಿಕೆ ನೀಡಿದರು.