ನವದೆಹಲಿ, ಮಾ.9: ಕಾಂಗ್ರೆಸ್ ಪಕ್ಷಕ್ಕೆ (Congress Party) ದೇಶದ ಹಿತಾಸಕ್ತಿ ಮತ್ತು ಚರ್ಚೆಯ ಮೇಲೆ ಆಸಕ್ತಿಯೇ ಇಲ್ಲ. ಅವ್ಯವಸ್ಥೆ ಸೃಷ್ಟಿಸುವುದಷ್ಟೇ ಅದರ ಏಕೈಕ ಗುರಿಯಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಟೀಕಿಸಿದರು. ಸಂಸತ್ ಆವರಣದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಲೋಕಸಭೆ, ರಾಜ್ಯಸಭೆ ಸದನಗಳಲ್ಲಿ ಕಾಂಗ್ರೆಸ್ ಪಕ್ಷದ ನಡವಳಿಕೆ ಬೇಜವಾಬ್ದಾರಿಯ ಪರಮಾವಧಿಯಿಂದ ಕೂಡಿದೆ ಎಂದು ಖಂಡಿಸಿದರು.
ವಿರೋಧ ಪಕ್ಷವು ದೇಶದ ಹಿತಾಸಕ್ತಿ ಮತ್ತು ಅಭಿವೃದ್ಧಿ ವಿಚಾರದ ಚರ್ಚೆಯಲ್ಲಿ ನಿರಾಸಕ್ತಿ ತೋರುತ್ತದೆ. ಯಾವುದೇ ವಿಷಯವಿರಲಿ ಅದರ ಬಗ್ಗೆ ಚರ್ಚೆ ನಡೆಸುವ ಬದಲು ಅವ್ಯವಸ್ಥೆ ಸೃಷ್ಟಿಸುವುದನ್ನೇ ಗುರಿಯಾಗಿಸಿಕೊಂಡಿದೆ ಎಂದು ಅವರು ಆರೋಪಿಸಿದರು.
ಸದನಗಳಲ್ಲಿ ಕಾಂಗ್ರೆಸ್ ಪಕ್ಷ ಸಾಂವಿಧಾನಿಕ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ. ಬದಲಾಗಿ "ಕುಟುಂಬ ಮೊದಲು" ಎಂಬ ನಿಯಮ ಅನುಸರಿಸುತ್ತಿರುವಂತೆ ಕಾಣುತ್ತಿದೆ. ಆ ಪಕ್ಷದಲ್ಲಿ ಎಲ್ಲದೂ ಒಂದು ಕುಟುಂಬವನ್ನು ಸಂತುಷ್ಟಪಡಿಸಲು ಮತ್ತು ಅವರ ರಾಜಕುಮಾರ ರಾಹುಲ್ ಗಾಂಧಿಯನ್ನು ಉತ್ತೇಜಿಸುವ ಸಲುವಾಗಿಯೇ ನಡೆಯುತ್ತದೆ ಎಂದು ದೂರಿದರು.
'ಮೊದಲು ಒತ್ತಾಯಿಸಿ, ನಂತರ ಅಡ್ಡಿಪಡಿಸಿ' ಎಂಬುದು ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಸಾಮಾನ್ಯ ವಿಧಾನವಾಗಿದೆ. ರಾಜ್ಯಸಭೆಯಲ್ಲಿ ಇಂದು ವಿದೇಶಾಂಗ ಸಚಿವರು ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ಬಗ್ಗೆ ಸದನಕ್ಕೆ ವಿವರಿಸಲು ಮುಂದಾದರೆ ವಿರೋಧ ಪಕ್ಷಕ್ಕೆ ಅದನ್ನು ಕೇಳುವ ವ್ಯವಧಾನವೇ ಇಲ್ಲದಂತೆ ವರ್ತಿಸಿತು ಎಂದು ಜೋಶಿ ಆರೋಪಿಸಿದರು.
Pralhad Joshi: ಬೇಕಂತಲೇ ರಾಷ್ಟ್ರಪತಿ ಕಡೆಗಣಿಸಿದ ಮಮತಾ ಬ್ಯಾನರ್ಜಿ ಸರ್ಕಾರ: ಜೋಶಿ ಕಿಡಿ
ಸದನದಲ್ಲಿ ಕಾಂಗ್ರೆಸ್ ಸದಸ್ಯರು, ಭಾರತದ ಅಧಿಕೃತ ನಿಲುವನ್ನು ಕೇಳುವ ಬದಲು ಘೋಷಣೆ ಕೂಗಿ ಹೊರನಡೆಯ ತೊಡಗಿದರು. ಲೋಕಸಭೆಯಲ್ಲಿ ಸಹ ಇದೇ ವರ್ತನೆ ತೋರಿದ್ದರು. ಅಲ್ಲಿ ವಿರೋಧ ಪಕ್ಷದ ಸಂಸದರು ಹೇಳಿಕೆ ನೀಡುವಾಗಲೂ ಫಲಕಗಳನ್ನು ಬೀಸಿ ಘೋಷಣೆ ಕೂಗಿದರು, ಬಳಿಕ ಸಂಸತ್ ಆವರಣದಲ್ಲಿ ಪ್ರತಿಭಟನೆ ಮುಂದುವರೆಸಿದರು. ಲೋಕಸಭಾ ಸ್ಪೀಕರ್ ವಿರುದ್ಧವೇ ಅವಿಶ್ವಾಸ ನಿರ್ಣಯ ಸಹ ಮಂಡಿಸಿದರು. ಇದೆಲ್ಲಾ ಅವ್ಯವಸ್ಥೆ ಸೃಷ್ಟಿಸುವ ಅವರ ಯೋಜಿತ ಕಾರ್ಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ಷೇಪಿಸಿದರು.