ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕದಲ್ಲಿ ಮಿನಿ ಬಾಂಗ್ಲಾದೇಶವನ್ನು ನಿರ್ಮಿಸುತ್ತಿದ್ದಾರೆ: ಸರ್ಕಾರದ ವಿರುದ್ಧ ಆರ್. ಅಶೋಕ್ ಕಿಡಿ

R Ashok: ಯಲಹಂಕದ ಕೋಗಿಲು ಬಡಾವಣೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಈ ಸರ್ಕಾರ ಬಂದ ಬಳಿಕ ಕರ್ನಾಟಕವು ಮಿನಿ ಬಾಂಗ್ಲಾದೇಶೀಯರ ತಾಣ ಆಗುತ್ತಿದೆ. ಇವರು ಯಾರು? ಎಲ್ಲಿಂದ ಬಂದರು? ಗೂಗಲ್ ಮ್ಯಾಪ್‍ನಡಿ ಇಲ್ಲಿ ಒಂದು ವರ್ಷದ ಹಿಂದೆ ಮನೆಗಳಿರಲಿಲ್ಲ. ಈಗ ಮನೆಗಳಿವೆ. ಇವರೆಲ್ಲ ಬಂದು ಆರು ತಿಂಗಳಾಗಿಲ್ಲ. ಇವರಿಗೆಲ್ಲ ವಿದ್ಯುತ್ ಸಂಪರ್ಕ ಕೊಟ್ಟದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಯಲಹಂಕದ ಕೋಗಿಲು ಬಡಾವಣೆಗೆ ವಿಪಕ್ಷ ನಾಯಕ ಆರ್. ಅಶೋಕ್ ಭೇಟಿ.

ಬೆಂಗಳೂರು, ಡಿ.31: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಟೋಪಿ ಸರ್ಕಾರ, ಇವರು ಇಷ್ಟು ದಿನ ಕರ್ನಾಟಕದ ಕನ್ನಡಿಗರಿಗೆ ಟೋಪಿ ಹಾಕಿ, ಇವತ್ತು ಕರ್ನಾಟಕದಲ್ಲಿ ಮಿನಿ ಬಾಂಗ್ಲಾದೇಶವನ್ನು ನಿರ್ಮಿಸುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಆರೋಪಿಸಿದ್ದಾರೆ. ಒತ್ತುವರಿ ಹಿನ್ನೆಲೆಯಲ್ಲಿ ಅಕ್ರಮವಾಗಿ ವಾಸವಿದ್ದವರನ್ನು ತೆರವುಗೊಳಿಸಿದ ಯಲಹಂಕದ ಕೋಗಿಲು ಬಡಾವಣೆಗೆ (Kogilu House Demolitions) ಬುಧವಾರ ಭೇಟಿ ನೀಡಿದ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

ಈ ಸರ್ಕಾರ ಬಂದ ಬಳಿಕ ಕರ್ನಾಟಕವು ಮಿನಿ ಬಾಂಗ್ಲಾದೇಶೀಯರ ತಾಣ ಆಗುತ್ತಿದೆ. ಇವರು ಯಾರು? ಎಲ್ಲಿಂದ ಬಂದರು ಎಂದು ಕೇಳಿದರು. ಗೂಗಲ್ ಮ್ಯಾಪ್‍ನಡಿ ಇಲ್ಲಿ ಒಂದು ವರ್ಷದ ಹಿಂದೆ ಮನೆಗಳಿರಲಿಲ್ಲ. ಈಗ ಮನೆಗಳಿವೆ. ಇವರೆಲ್ಲ ಬಂದು ಆರು ತಿಂಗಳಾಗಿಲ್ಲ. ಇವರಿಗೆಲ್ಲ ವಿದ್ಯುತ್ ಸಂಪರ್ಕ ಕೊಟ್ಟದ್ದು ಹೇಗೆ ಎಂದು ಅವರು ಪ್ರಶ್ನಿಸಿದರು.

ರಾಜ್ಯದಲ್ಲಿ ಸುಮಾರು 4 ಲಕ್ಷ ಜನರು ಅನಧಿಕೃತ ಮನೆ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕವಿಲ್ಲದೇ ಬದುಕುತ್ತಿದ್ದಾರೆ. ನಮ್ಮ ರಾಜ್ಯದ ತೆರಿಗೆದಾರರು ವಿದ್ಯುತ್ ಸಂಪರ್ಕವಿಲ್ಲದೇ ಜೀವನ ಸಾಗಿಸುತ್ತಿದ್ದರೆ, ಇಲ್ಲಿ ದುಬಾರಿ ಮೊತ್ತದ ಕೇಬಲ್ ಸಂಪರ್ಕ ಮಾಡಿ ವಿದ್ಯುತ್ ಬಳಸುತ್ತಿದ್ದಾರೆ. ಇವರೇನು ಸಿದ್ದರಾಮಯ್ಯ ಅವರ ನೆಂಟರೇ? ಎಂದು ಕೇಳಿದರು. ಇವರೆಲ್ಲ ಆಂಧ್ರದ ಪೆನುಗೊಂಡದಿಂದ ಬಂದವರೆಂದು ಹೇಳುತ್ತಾರೆ. 28 ವರ್ಷದವರು ಎನ್ನುತ್ತಾರೆ. 25-26 ವರ್ಷದಿಂದ ವಾಸವಿದ್ದರೆ 2 ವರ್ಷಕ್ಕೆ ಹೇಗೆ ನಡೆದು ಬಂದರು ಎಂದು ಕೇಳಿದರು.

Kogilu House Demolitions

ಇದು ಸುಮಾರು 600 ಕೋಟಿ ಬೆಲೆಯ ಜಮೀನು. ಇದನ್ನು ಸರ್ಕಾರ ಯಾವ ಕಾನೂನಿನಡಿ ಕೊಡಲಿದೆ?. ನೆರೆಯಿಂದ ರಾಜ್ಯದಲ್ಲಿ 13 ಸಾವಿರ ಮನೆಗಳು ಬಿದ್ದಿವೆ. ಆದರೆ, ಕರ್ನಾಟಕದ ರೈತರಾದ ಅವರಿಗೆ ಇನ್ನೂ ಸೂರು ಕೊಟ್ಟಿಲ್ಲ. 2400 ಶಾಲೆಗಳ ಶೀಟ್‍ಗಳು ಹಾರಿ ಹೋಗಿವೆ. ಅವರಿಗೆ ವ್ಯವಸ್ಥೆ ಮಾಡದೇ ಮರದ ಕೆಳಗೆ ಪಾಠ ಮಾಡುವ ಸ್ಥಿತಿ ಇದೆ. ಇವರಿಗೆ ಪಟಾಪಟ್ ಎಂದು ಎರಡೇ ದಿನಗಳಲ್ಲಿ ಬಹುಮಹಡಿ ಮನೆಗಳಲ್ಲಿ ಜಾಗ ಕೊಡುತ್ತಿದ್ದಾರೆ ಎಂದು ಟೀಕಿಸಿದರು.

ಅಕ್ರಮ ವಲಸಿಗರಿಗೆ ಮನೆ; ರಾಜ್ಯ ಸರ್ಕಾರದ ವಿರುದ್ಧ ಬೃಹತ್‌ ಹೋರಾಟಕ್ಕೆ ಮುಂದಾದ ಬಿಜೆಪಿ

ಪ್ರಕರಣವನ್ನು ಎನ್‍ಐಎಗೆ ಒಪ್ಪಿಸಿ- ಛಲವಾದಿ ನಾರಾಯಣಸ್ವಾಮಿ

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ವೇಣುಗೋಪಾಲ್ ಟ್ವೀಟ್, ಪಿಣರಾಯಿ ವಿಜಯನ್ ಅವರು ತಮ್ಮ ಸಂಸದರನ್ನು ಕಳಿಸಿದ ಬಳಿಕ ನಮ್ಮ ಸರ್ಕಾರ ಏಕಾಏಕಿ ಯೂ ಟರ್ನ್ ತೆಗೆದುಕೊಂಡಿದೆ. ಇಲ್ಲಿದ್ದ ಬಾಂಗ್ಲಾದೇಶೀಯರನ್ನು ಸಚಿವರೇ ಬಂದು ಸ್ಥಳಾಂತರ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಪ್ರಕರಣವನ್ನು ಎನ್‍ಐಎಗೆ ಒಪ್ಪಿಸಿ ಮೂಲದಾಖಲೆ ಪರಿಶೀಲನೆಗೆ ಒಳಪಡಿಸಬೇಕಿದೆ ಎಂದು ಅವರು ಆಗ್ರಹಿಸಿದರು.

ರಾಜ್ಯದ 38 ಲಕ್ಷ ಜನರು ಅರ್ಜಿ ಸಲ್ಲಿಸಿ ಮನೆಗೆ ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ 40 ಕಡೆ ಅಕ್ರಮ ಮನೆಗಳ ತೆರವು ಮಾಡಿದ್ದು, ಒಬ್ಬರಿಗೂ ಮನೆ ಕೊಟ್ಟಿಲ್ಲ. ಬಡವರಾದ ಅವರಿಗೆಲ್ಲ ಮನೆ ಕೊಡದೇ ಇವರಿಗೇನು ವಿಶೇಷ? ಕಾರಣ ಹೇಳಿ ಎಂದು ಒತ್ತಾಯಿಸಿದರು. ಅವರಿಗೂ ಮನೆ ಕೊಡಿ ಎಂದರು. ಮೊದಲು ಇದನ್ನು ಎನ್‍ಐಎಗೆ ಕೊಡಿ. ಅದಾಗಿ ವರದಿ ಬಂದ ಬಳಿಕ ಮುಂದುವರೆಯಿರಿ ಎಂದು ತಿಳಿಸಿದರು.

ಹೊರರಾಜ್ಯದ ಸಂಸದರು ಬಂದು ಪರಿಶೀಲನೆ ಮಾಡಲು ಅವರು ಯಾರು? ಅವರನ್ನು ಬಂಧಿಸಬೇಕಿತ್ತು. ನಮ್ಮ ರಾಜ್ಯದ ಆಡಳಿತದಲ್ಲಿ ಮೂಗು ತೂರಿಸಲು ಕೇರಳದ ಸಚಿವರು, ಸಂಸದರು, ಶಾಸಕರಿಗೆ ಅವಕಾಶ ನೀಡಬಾರದು ಎಂದು ತಿಳಿಸಿದರು.

ಬಾಂಗ್ಲಾದೇಶೀಯರಲ್ಲ ಎಂದು ಮುಚ್ಚಿ ಹಾಕುವ ಪ್ರಯತ್ನ- ಡಾ.ಅಶ್ವತ್ಥ ನಾರಾಯಣ್

ಮಾಜಿ ಡಿಸಿಎಂ ಮತ್ತು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮಾತನಾಡಿ, ದೇಶ, ಕರ್ನಾಟಕ, ಬೆಂಗಳೂರಿನ ಸುರಕ್ಷತೆಗೆ ಧಕ್ಕೆ ಆಗುತ್ತಿದೆ. ಆತಂಕವೂ ಇದೆ. ಇವರು ಬಾಂಗ್ಲಾದೇಶೀಯರಲ್ಲ ಎಂದು ಮುಚ್ಚಿ ಹಾಕುವ ಪ್ರಯತ್ನ ಸರ್ಕಾರದ್ದು ಎಂದು ಆರೋಪಿಸಿದರು.

ಓಲೈಕೆ, ಮತಬ್ಯಾಂಕಿಗಾಗಿ ಸ್ಲಂ ನಿರ್ಮಾಣಕ್ಕೆ ಕಾಂಗ್ರೆಸ್ ಕಾರಣ: ಛಲವಾದಿ ನಾರಾಯಣಸ್ವಾಮಿ

ಬಾಂಗ್ಲಾದೇಶೀಯರನ್ನು ಪತ್ತೆ ಹಚ್ಚಿ ಈ ದೇಶದಿಂದ ಹೊರಕ್ಕೆ ಹಾಕುವ ಕೆಲಸ ಮೊದಲು ಆಗಬೇಕೆಂದು ಆಗ್ರಹಿಸಿದ ಅವರು, ಇಲ್ಲಿ ಮಲೆಯಾಳಿಗಳು ಇಲ್ಲ; ಆದರೂ ಕೇರಳದ ತಿರುವು ತೆಗೆದುಕೊಂಡಿದೆ. ಬಾಂಗ್ಲಾದಿಂದ ಪಶ್ಚಿಮ ಬಂಗಾಳಕ್ಕೆ ಬಂದು ಕೇರಳಕ್ಕೆ ತೆರಳಿ ಇಲ್ಲಿ ಬಂದಿದ್ದಾರೆ. ವಸೀಂ ನಗರ, ಫಕೀರ್ ನಗರ ಇದೆ. ವಸೀಂ ಸ್ವಾತಂತ್ರ್ಯ ಹೋರಾಟಗಾರರೇ? ಎಂದು ಕೇಳಿದರು. ಇವರು ಅಧಿಕಾರಕ್ಕಾಗಿ ಏನನ್ನಾದರೂ ಮಾಡುತ್ತಾರೆ ಎಂದು ದೂರಿದರು. ಈ ವೇಳೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ. ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಪಕ್ಷದ ಪ್ರಮುಖರು ಇದ್ದರು.