ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಾವಣಗೆರೆ ಉಪಚುನಾವಣೆ; ಬಂಡಾಯ ಅಭ್ಯರ್ಥಿಗಳು ನಮ್ಮವರೇ ಎಂದ ಡಿ.ಕೆ. ಶಿವಕುಮಾರ್

DK Shivakumar: ನಿನ್ನೆ ನಾನು ಹಾಗೂ ಸಿದ್ದರಾಮಯ್ಯ ಅವರು ದಾವಣಗೆರೆ ಹಾಗೂ ಬಾಗಲಕೋಟೆ ಪ್ರವಾಸ ಮಾಡಿ ಬಂದಿದ್ದೇವೆ. ದಾವಣಗೆರೆಯಲ್ಲಿ ಬಹಳಷ್ಟು ಜನ ನಾಮಪತ್ರ ಸಲ್ಲಿಸಿದ್ದು, ಅವರು ನಮ್ಮವರೇ. ನಮ್ಮ ನಾಯಕರೆಲ್ಲರೂ ಅವರ ಜತೆ ಮಾತನಾಡುತ್ತಾರೆ. ಎಲ್ಲವೂ ಸರಿ ಹೋಗಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)

ದೆಹಲಿ, ಮಾ.24: ದಾವಣಗೆರೆ ಉಪಚುನಾವಣೆಯಲ್ಲಿ (Davanagere South byelection) ಬಂಡಾಯವಾಗಿ ನಾಮಪತ್ರ ಸಲ್ಲಿಸಿರುವವರು ನಮ್ಮವರೇ, ಅವರೊಂದಿಗೆ ಮಾತನಾಡಿ ಸರಿ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ದೆಹಲಿಯ ವಿಮಾನ ನಿಲ್ದಾಣ ಹಾಗೂ ಕರ್ನಾಟಕ ಭವನದಲ್ಲಿ ಮಾಧ್ಯಮಗಳಿಗೆ ಮಂಗಳವಾರ ಅವರು ಪ್ರತಿಕ್ರಿಯೆ ನೀಡಿದರು.

ಮಾಧ್ಯಮ ಸಂಸ್ಥೆಯೊಂದರ ಸಮ್ಮೇಳನಕ್ಕಾಗಿ ದೆಹಲಿಗೆ ಆಗಮಿಸಿದ್ದೇನೆ. ಭಾರತ ಯಾವ ದಿಕ್ಕಿನಲ್ಲಿ ಹೋಗಲಿದೆ ಎಂಬ ವಿಷಯದ ಮೇಲಿನ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಹೀಗಾಗಿ ದೆಹಲಿಗೆ ಬಂದಿರುವೆ. ನಿನ್ನೆ ನಾನು ಹಾಗೂ ಸಿದ್ದರಾಮಯ್ಯ ಅವರು ದಾವಣಗೆರೆ ಹಾಗೂ ಬಾಗಲಕೋಟೆ ಪ್ರವಾಸ ಮಾಡಿ ಬಂದಿದ್ದೇವೆ. ದಾವಣಗೆರೆಯಲ್ಲಿ ಬಹಳಷ್ಟು ಜನ ನಾಮಪತ್ರ ಸಲ್ಲಿಸಿದ್ದು, ಅವರು ನಮ್ಮವರೇ. ನಮ್ಮ ನಾಯಕರೆಲ್ಲರೂ ಅವರ ಜತೆ ಮಾತನಾಡುತ್ತಾರೆ. ಎಲ್ಲವೂ ಸರಿ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಸಮಾಧಾನಗಳು ಹೆಚ್ಚಾಗಿವೆಯಲ್ಲ ಎಂದಾಗ, ʼಎಲ್ಲರಿಗೂ ಆಸೆ ಇರುತ್ತದೆ. ಅದರಲ್ಲಿ ತಪ್ಪೇನು ಇಲ್ಲʼ ಎಂದು ತಿಳಿಸಿದರು.‌

Davanagere South by-election: ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ; ಒಮ್ಮತದಿಂದ ಸಮರ್ಥ್‌ಗೆ ಟಿಕೆಟ್‌ ನೀಡಿದ್ದೇವೆ ಎಂದ ಡಿ.ಕೆ. ಶಿವಕುಮಾರ್

ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂಬ ಚರ್ಚೆ ಬಗ್ಗೆ ಕೇಳಿದಾಗ, ʼಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ.. ಎಲ್ಲಾ ಪಕ್ಷದಲ್ಲೂ ಇದ್ದೇ ಇದೆ. ದಾವಣಗೆರೆಯಲ್ಲಿ ಮೊದಲಿನಿಂದಲೂ ಮೂರು ಜನ ರಾಜಕಾರಣದಲ್ಲಿದ್ದರು. ನಾವೇ ಬಲವಂತ ಮಾಡಿ ಪ್ರಭಾ ಮಲ್ಲಿಕಾರ್ಜುನ ಅವರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಿದೆವು. ಅವರು ಕೇಳದಿದ್ದರೂ ನಾವೇ ಅವರಿಗೆ ಒತ್ತಡ ಹಾಕಿ ಚುನಾವಣೆಗೆ ನಿಲ್ಲುವಂತೆ ಮಾಡಿದ್ದೇವೆ. ಕಳೆದ ಐದಾರು ಬಾರಿಯಿಂದ ನಾವು ಅಲ್ಲಿ ಸೋಲುತ್ತಲೇ ಬಂದಿದ್ದೆವು. ಹೀಗಾಗಿ ನಾವು ಗೆಲ್ಲಬೇಕು ಎಂದು ಅವರನ್ನು ನಿಲ್ಲಿಸಿದೆವು. ಈಗ ಅವರು ಗೆದ್ದು ಸಂಸತ್ತಿನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.