ಬೆಂಗಳೂರು, ಮಾ. 6: ಬೆಂಗಳೂರಿನಲ್ಲಿ ವೈಟ್ ಫೀಲ್ಡ್ ಕಾಡುಗೋಡಿಯಲ್ಲಿ ಏರ್ಬಸ್ ಟೆಕ್ನಾಲಜಿ ಸೆಂಟರ್ ಅನ್ನು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಶುಕ್ರವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಳೆದ ಫೆ. 17ರಂದು ವೇಮಗಲ್ನಲ್ಲಿ ಏರ್ಬಸ್ ಎಚ್ 125 ಹೆಲಿಕಾಪ್ಟರ್ ತಯಾರಿಕ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಇಂದು ಈ ಕೇಂದ್ರ ಉದ್ಘಾಟನೆ ಮೂಲಕ ಏರೋಸ್ಪೇಸ್ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯಕ್ಕೆ ಮತ್ತೊಂದು ಗರಿ ಸೇರ್ಪಡೆ ಎಂದು ಶ್ಲಾಘಿಸಿದರು.
ಇದು ಕೇವಲ ಉದ್ಘಾಟನೆ ಮಾತ್ರವಲ್ಲ, ಬೆಂಗಳೂರು ಹಾಗೂ ಏರ್ಬಸ್ ನಡುವಣ 17 ವರ್ಷಗಳ ನಡುವಣ ಸಂಬಂಧದ ಸಂಭ್ರಮ. ಏರೋಸ್ಪೆಸ್ ಕ್ಷೇತ್ರದಲ್ಲಿ ಪ್ರತಿಭೆಗಳ ಕೇಂದ್ರ ಎಂದರೆ ಅದು ಬೆಂಗಳೂರು. ಹೀಗಾಗಿ ಬೆಂಗಳೂರು ಆಯ್ಕೆ ಮಾಡಿಕೊಂಡಿರುವ ಏರ್ಬಸ್ ನಿರ್ಧಾರ ಸರಿಯಾಗಿದೆ ಎಂದು ಹೇಳಿದರು.
ವಿಶ್ವದಲ್ಲೇ ಮಹತ್ವದ ಏರೋಸ್ಪೆಸ್ ಪಾರ್ಕ್ ದೇವನಹಳ್ಳಿಯಲ್ಲಿದೆ
ದೇಶದಲ್ಲಿ ಏರೋಸ್ಪೆಸ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೊದಲು ನೀತಿ ರೂಪಿಸಿದ್ದು 2013ರಲ್ಲಿ ಕರ್ನಾಟಕ. 2026-27ನೇ ಸಾಲಿನ ಏರೋಸ್ಪೆಸ್ ಹಾಗೂ ರಕ್ಷಣಾ ನೀತಿ ಇದನ್ನು ಮುಂದಿನ ಹಂತಕ್ಕೆ ಕೊಂಡೋಯ್ಯಲಿದೆ ಎಂದರು.
ದೇವನಹಳ್ಳಿಯಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ ಏರೋಸ್ಪೆಸ್ ಪಾರ್ಕ್ ನಿರ್ಮಿಸಲಾಗಿದ್ದು, ಇದು ವಿಶ್ವದಲ್ಲೇ ಅತಿ ಮಹತ್ವದ ಏರೋಸ್ಪೆಸ್ ಕೈಗಾರಿಕಾ ಪಾರ್ಕ್ ಆಗಿದೆ. ನಮ್ಮ ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು ಹಾಗೂ ಚಾಮರಾಜನಗರದಲ್ಲಿ ಏರೋಸ್ಪೆಸ್ ವಿಶೇಷ ಆರ್ಥಿಕ ವಲಯ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ಉತ್ತಮ ಪ್ರತಿಭೆ, ಸಂಸ್ಕೃತಿ ಹೊಂದಿರುವ ನಗರ
ಬೆಂಗಳೂರು ಪ್ರತಿಭಾವಂತ ಮಾನವ ಸಂಪನ್ಮೂಲ ಮಾತ್ರವಲ್ಲ, ಉತ್ತಮ ಸಂಸ್ಕೃತಿ, ಹವಾಮಾನ ಇರುವ ನಗರ. ಇದು ಅನ್ವೇಷಣೆ, ತಂತ್ರಜ್ಞಾನ, ಸಂಶೋಧನೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ಈ ಭೂಮಿಯ ಶಕ್ತಿ ಎಂದು ತಿಳಿಸಿದರು. 17 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಏರ್ಬಸ್ ಸಂಸ್ಥೆ ಕೇಂದ್ರ ಆರಂಭವಾಗಿತ್ತು. ಇಂದು ಏರ್ಬಸ್ ಟೆಕ್ನಾಲಜಿ ಸೆಂಟರ್ ಅನ್ನು ಉದ್ಘಾಟನೆ ಮಾಡಲಾಗಿದ್ದು, ಇಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯ ಕಲ್ಪಿಸಿರುವುದಕ್ಕೆ ಧನ್ಯವಾದಗಳು. ಈ ಕೇಂದ್ರ ಹೆಚ್ಚು ಅವಕಾಶಗಳನ್ನು ಸೆಳೆಯುವ ವಿಶ್ವಾಸವಿದೆ ಎಂದು ಹೇಳಿದರು.
ನೀವು ಬೆಂಗಳೂರಿನಲ್ಲಿ ನಿಮ್ಮ ಕೇಂದ್ರ ವಿಸ್ತರಣೆ ಮಾಡುತ್ತಿರುವುದು ಬಹಳ ಸಂತೋಷದ ವಿಚಾರ. ನಮ್ಮ ಸರ್ಕಾರ ನಿಮಗೆ ಅಗತ್ಯ ಸಹಕಾರ ನೀಡಲಿದೆ. ನೀವು ಹೊರಗಿನವರು ಎಂಬ ಭಾವನೆ ಬರಲು ಬಿಡುವುದಿಲ್ಲ. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ನೀವು ನಾವು ಜತೆಯಾಗಿ ಕೆಲಸ ಮಾಡೋಣ. ಈ ದೇಶ ಹೆಮ್ಮೆಪಡುವಂತೆ ಮಾಡೋಣ ಎಂದು ಹೇಳಿದರು.
ಬಾಕಿ ಬಿಲ್ ಬಿಡುಗಡೆಗೆ ಗುತ್ತಿಗೆದಾರರ ಆಗ್ರಹ; ಸದ್ಯದಲ್ಲೇ ಸಿಎಂ ಜತೆ ಸಭೆ ಏರ್ಪಾಡು ಎಂದ ಡಿ.ಕೆ. ಶಿವಕುಮಾರ್
ಮಾಧ್ಯಮ ಪ್ರತಿಕ್ರಿಯೆ
ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಕೇಳಿದಾಗ, ಸಚಿವ ಎಂ.ಬಿ. ಪಾಟೀಲ್ ಇದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಇಂದು ಬಜೆಟ್ನಲ್ಲೂ ಈ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.