ಬೆಂಗಳೂರು, ಮೇ 31: "ನನಗೆ ಸುಗಂಧರಾಜ ಹೂವಿನ ಅಲರ್ಜಿ ಇರುವುದರಿಂದ ನನ್ನ ಭೇಟಿ ವೇಳೆ ಆ ಹೂವಿನ ಹಾರ ನಿಷೇಧಿಸಲಾಗಿದೆ. ಯಾರೂ ಸುಗಂಧರಾಜ ಹೂವಿನ ಹಾರ (sugandharaja-flower garlands) ತರಬಾರದು" ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್ (DK Shivakumar) ಅವರು ಮನವಿ ಮಾಡಿದ್ದಾರೆ. ಕುಮಾರಕೃಪ ಅತಿಥಿಗೃಹದ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು.
"ಕಾರ್ಯಕರ್ತರ ಉತ್ಸಾಹ ನನಗೆ ಅರ್ಥವಾಗುತ್ತದೆ. ಪ್ರಮಾಣ ವಚನ ಕಾರ್ಯಕ್ರಮವನ್ನು ಸರಳವಾಗಿ ಮಾಡುತ್ತಿರುವುದರಿಂದ ಹೆಚ್ಚಿನ ಜನರಿಗೆ ಅವಕಾಶ ಕಲ್ಪಿಸಲು ಆಗುವುದಿಲ್ಲ" ಎಂದು ಹೇಳಿದರು.
ಕಾರ್ಯಕರ್ತರೇ ಸಿಎಂ ಆಗುತ್ತಿದ್ದಾರೆ
ರಾಜ್ಯದೆಲ್ಲೆಡೆ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ ಎಂದು ಕೇಳಿದಾಗ, "ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸಿಎಂ ಆಗುತ್ತಿರುವುದು ನಾನಲ್ಲ, ಕಾರ್ಯಕರ್ತರೇ ಸಿಎಂ ಆಗುತ್ತಿದ್ದಾರೆ. 1979 ರಿಂದ ನಾನು ಪಕ್ಷದಲ್ಲಿ ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಹೀಗಾಗಿ ಸಂಭ್ರಮಿಸುತ್ತಿದ್ದಾರೆ" ಎಂದು ತಿಳಿಸಿದರು.
ದೆಹಲಿ ಪ್ರವಾಸದ ಬಗ್ಗೆ ಕೇಳಿದಾಗ, "ನಾನು ಹಾಗೂ ಸಿದ್ದರಾಮಯ್ಯ ಅವರು ಹೋಗುತ್ತಿದ್ದೇವೆ" ಎಂದು ತಿಳಿಸಿದರು. ಯತೀಂದ್ರ ಸಿದ್ದರಾಮಯ್ಯ ಅವರ ಭೇಟಿ ಬಗ್ಗೆ ಕೇಳಿದಾಗ, "ಅವರು ನನ್ನ ಸಹೋದ್ಯೋಗಿ. ಪಕ್ಷದಲ್ಲಿ ಈ ಹಿಂದೆಯೂ ಅವರೊಟ್ಟಿಗೆ ಕೆಲಸ ಮಾಡಿರುವೆ, ಮುಂದೆಯೂ ಕೆಲಸ ಮಾಡುವೆ" ಎಂದು ತಿಳಿಸಿದರು.
ಐಪಿಎಲ್ ಫೈನಲ್ ಪಂದ್ಯ; ನಮಗೆ ಅನ್ಯಾಯ
ಆರ್ಸಿಬಿ ಫೈನಲ್ ಪಂದ್ಯದ ಬಗ್ಗೆ ಕೇಳಿದಾಗ, "ಈ ಪಂದ್ಯ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ರಾಜಕೀಯ ಕಾರಣಕ್ಕೆ ಸ್ಥಳಾಂತರ ಮಾಡಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ. ಈ ಬಗ್ಗೆ ಈಗ ಹೆಚ್ಚು ಮಾತನಾಡುವುದಿಲ್ಲ. ಕಳೆದ ಬಾರಿ ಚಾಂಪಿಯನ್ ಆಗಿದ್ದ ಆರ್ಸಿಬಿ ಈ ವರ್ಷವೂ ಚೆನ್ನಾಗಿ ಆಡುತ್ತಿದೆ. ರಾಜ್ಯದ ಜನರ ಪರವಾಗಿ ಅವರಿಗೆ ಒಳ್ಳೆಯದಾಗಲಿ" ಎಂದು ಶುಭ ಕೋರಿದರು.