ನವದೆಹಲಿ, ಫೆ.17: ದೇಶದಲ್ಲಿ ಹಸಿರು ಹೈಡ್ರೋಜನ್ (Green Hydrogen) ಬೆಲೆ ಐತಿಹಾಸಿಕ ಮಟ್ಟಕ್ಕೆ ಇಳಿಕೆ ಕಂಡಿದೆ. ₹279ರ ದರದೊಂದಿಗೆ ಭಾರತ ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ ಹೊಸ ಜಾಗತಿಕ ಮಾನದಂಡ ಸ್ಥಾಪಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಘೋಷಿಸಿದರು. ಮುಂಬೈಯಲ್ಲಿ ಮಂಗಳವಾರ ಆಯೋಜಿಸಿದ್ದ "ಹವಾಮಾನ ಸಪ್ತಾಹ 2026" ಉದ್ದೇಶಿಸಿ ಮಾತನಾಡಿ, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಹಸಿರು ಹೈಡ್ರೋಜನ್ ಬೆಲೆ ಪ್ರತಿ ಕೆಜಿಗೆ ₹279 ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದರು.
ಸೂರ್ಯಘರ್ ಯೋಜನೆಯಡಿ ಭಾರತ ಪ್ರಸ್ತುತ 30 ಲಕ್ಷ ಮನೆಗಳಿಗೆ ಸೌರ ವಿದ್ಯುತ್ ಕಲ್ಪಿಸುವ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ಮನೆಗಳಿಗೆ ಸೌರ ಮೇಲ್ಛಾವಣಿ ಮೂಲಕ ಉಚಿತ ವಿದ್ಯುತ್ ಕಲ್ಪಿಸಿದೆ ಎಂದರು.
ಜಾಗತಿಕ ಹವಾಮಾನ ಸುಸ್ಥಿರತೆಯಲ್ಲಿ ಭಾರತ ಪ್ರಬಲ ಇಂಜಿನ್ ಆಗಿ ಕಾರ್ಯ ಸಾಧಿಸುತ್ತಿದ್ದು, 'ಪಿಎಂ ಸೂರ್ಯಘರ್' ಮತ್ತು 'ಪಿಎಂ ಕುಸುಮ್' ನಮ್ಮ ಸೌರ ಶಕ್ತಿಯ ಡಬಲ್ ಇಂಜಿನ್ ಆಗಿವೆ ಎಂದು ಪ್ರತಿಪಾದಿಸಿದರು. PM ಕುಸುಮ್ ಮತ್ತು PM ಸೂರ್ಯಘರ್ ಅಳವಡಿಕೆ ಮೂಲಕ, ರೈತರು ಮತ್ತು ಸಾಮಾನ್ಯ ಕುಟುಂಬಗಳು ಸಹ ದೇಶದ ಶುದ್ಧ ಇಂಧನ ಪರಿವರ್ತನೆ ಪ್ರಯಾಣದಲ್ಲಿ ಸಕ್ರಿಯರಾಗುತ್ತಿದ್ದಾರೆ ಎಂದು ಜೋಶಿ ಹೆಮ್ಮೆ ವ್ಯಕ್ತಪಡಿಸಿದರು.
ಹವಾಮಾನ ಕುರಿತ ಮೊದಲ ಸಮಾವೇಶ
ಭಾರತ ಇಂದು ಹವಾಮಾನ ಕುರಿತಾದ ಜಾಗತಿಕ ಸಪ್ತಾಹ, ಸಮಾವೇಶ ಆಯೋಜಿಸುವ ಮಟ್ಟಕ್ಕೆ ಬೆಳೆದಿದೆ. ಮುಂಬೈಯಲ್ಲಿ ಆಯೋಜಿಸಿರುವ ಇದು ಮೊದಲ ಜಾಗತಿಕ ದಕ್ಷಿಣ ಸಮಾವೇಶವಾಗಿದೆ. ಇದಕ್ಕಾಗಿ ಮಹಾರಾಷ್ಟ್ರ ತಂಡವನ್ನು ಅಭಿನಂದಿಸುತ್ತೇನೆ ಎಂದರು.
ಕರ್ನಾಟಕ ಮತ್ತು ಮಹಾರಾಷ್ಟ್ರ ವಿಶೇಷವಾಗಿ ಆರ್ಥಿಕತೆಯ ಚಾಲಕವಾಗಿವೆ. ಆರ್ಥಿಕತೆ ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ದೇಶವೇ ಅನುಸರಿಸುತ್ತದೆ. ಮುಂಬೈ ನಮ್ಮ ಆರ್ಥಿಕ ಚಟುವಟಿಕೆಯ ಪ್ರಮುಖ ಕೇಂದ್ರವಾಗಿದೆ ಎಂದು ಹೇಳಿದರು.
ದೊಡ್ಡ ದೇಶವಾಗಿದ್ದರೂ ಭಾರತ ಈ ಹಿಂದೆ ಹವಾಮಾನ ಸಪ್ತಾಹ, ಹವಾಮಾನ ಸಮಾವೇಶ ಅಥವಾ ಸುಸ್ಥಿರ ಸಮಾವೇಶದಂತಹ ಕಾರ್ಯಕ್ರಮ ಆಯೋಜಿಸಿರಲಿಲ್ಲ. ಆದರೀಗ ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಹವಾಮಾನ ಸುಸ್ಥಿರತೆಯಲ್ಲಿ ದೇಶದಲ್ಲೀಗ ಮಹತ್ತರ ಬದಲಾವಣೆ ಆಗುತ್ತಿದೆ ಎಂದು ಜೋಶಿ ಪ್ರತಿಪಾದಿಸಿದರು.
ಕರ್ನಾಟಕಕ್ಕೆ ಬಂಪರ್ ಕೊಡುಗೆ; ಬಳ್ಳಾರಿ-ಹೊಸಪೇಟೆ 3 ಮತ್ತು 4ನೇ ರೈಲು ಮಾರ್ಗ ಯೋಜನೆಗೆ ಕೇಂದ್ರ ಅಸ್ತು
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ, ನಾಯಕತ್ವದಲ್ಲಿ ಭಾರತ ಜಾಗತಿಕ ಹವಾಮಾನ ಸುಸ್ಥಿರತೆಯಲ್ಲಿ ನಿರ್ಣಾಯಕ ಹೆಜ್ಜೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಮಹಾರಾಷ್ಟ್ರದಲ್ಲಿ ಸೌರಶಕ್ತಿ ಒಂದು ಜನಾಂದೋಲನ ರೀತಿ ರೂಪಾಂತರಗೊಳ್ಳುತ್ತಿದೆ. ಪರಿಣಾಮ ಫಲಿತಾಂಶಗಳು ಗಮನಾರ್ಹವಾಗಿವೆ. ಮಹಾರಾಷ್ಟ್ರ ಇಂದು ಕೈಗಾರಿಕಾ ಮತ್ತು ಗೃಹಬಳಕೆ ವಿದ್ಯುತ್ ದರ ಅತ್ಯಂತ ಕಡಿಮೆ ಇರುವ ಭಾರತದ ಮೊದಲ ರಾಜ್ಯವಾಗಿ ನಿಂತಿದೆ. ಇದು ಭಾರತದ ಶುದ್ಧ ಇಂಧನ ಕ್ರಾಂತಿಗೆ ಸಾಕ್ಷಿಯಾಗಿದೆ ಎಂದು ಪ್ರಲ್ಹಾದ್ ಜೋಶಿ ಸಂತಸ ವ್ಯಕ್ತಪಡಿಸಿದರು. ಹವಾಮಾನ ಸುಸ್ಥಿರತೆ ಸಮಾವೇಶದಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಸಚಿವರು, ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.