ಹುಬ್ಬಳ್ಳಿ, ಮೇ23: ಕಾಕ್ರೋಚ್ ಜನತಾ ಪಾರ್ಟಿ ದಿಢೀರ್ ಸೃಷ್ಟಿಯಿಂದ ವಿಚಲಿತ ಆಗಿರುವುದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿಯಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi), ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ಕಾಕ್ರೋಚ್ ಜನತಾ ಪಾರ್ಟಿ ಸೃಷ್ಟಿಯಿಂದ ನಿಜವಾಗಿ ವಿಚಲಿತ ಆಗಿರುವುದು ಕಾಂಗ್ರೆಸ್. ಕಾರಣ ದೇಶದಲ್ಲಿ ಅದಾಗಲೇ ಸಂಪೂರ್ಣ ಕಳೆದು ಹೋಗಿದೆ. ಇನ್ನು ಕಾಕ್ರೋಚ್ ತನ್ನನ್ನೆಲ್ಲಿ ಹುದುಗಿಸುತ್ತದೋ? ಎಂಬ ಭಯ ಅವರದ್ದೇ ಎಂದು ಚಾಟಿ ಬೀಸಿದರು.
ಯಾವುದೇ ಮೂಲಗಳಿಂದ ದೇಶದ ಭದ್ರತೆಗೆ ಮತ್ತು ಕಾನೂನು ಸುವ್ಯವಸ್ಥೆಗೆ, ನಾಗರಿಕರಿಗೆ ಧಕ್ಕೆಯಾದರೆ ಗಮನಿಸಬೇಕಾದದ್ದು ಸರ್ಕಾರದ ಕರ್ತವ್ಯ. ಅದರಂತೆ ಸರ್ಕಾರದ ಸಂಬಂಧಿತ ಇಲಾಖೆ ಕ್ರಮ ಕೈಗೊಂಡಿದೆ. ಇದರಲ್ಲಿ ಬಿಜೆಪಿ ವಿಚಲಿತ ಆಗುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಕೇರಳದಲ್ಲಿ ಅಚಾನಕ್ ಆಗಿ ಬಂದಿದ್ದು ಬಿಟ್ಟರೆ ಉಳಿದೆಡೆ ಏನೂ ಇಲ್ಲ. 40-45 ವರ್ಷ ಆಡಳಿತ ನಡೆಸಿದ ರಾಜ್ಯದಲ್ಲೇ ಕೇವಲ ಎರೆಡು ಮಂತ್ರಿ ಸ್ಥಾನಕ್ಕಾಗಿ ಬೇರೆ ಪಕ್ಷದ ಜತೆ ಕೈ ಜೋಡಿಸಿದರು. ಇದು ಇಂದಿನ ಕಾಂಗ್ರೆಸ್ಸಿನ ನೈಜ ಸ್ಥಿತಿ. ಹಾಗಾಗಿ ಕಾಂಗ್ರೆಸ್ ಪಾರ್ಟಿಯವರು ಸ್ವಲ್ಪ ಜವಾಬ್ದಾರಿ ಅರಿತು ಮಾತನಾಡಲಿ ಎಂದು ಜೋಶಿ ತಿವಿದರು.
ಕನ್ನಡಪರ ಹೋರಾಟಗಾರರ ನೆಪದಲ್ಲಿ ಕೋಮು ಗಲಭೆಕೋರರ ಹಿತಾಸಕ್ತಿಗೆ ಒತ್ತು: ರಾಜ್ಯ ಸರ್ಕಾರದ ವಿರುದ್ಧ ಜೋಶಿ ಕಿಡಿ
ಪ್ರತ್ಯೇಕ ಪಾಲಿಕೆ ಸರ್ಕಾರ ಆದೇಶಿಸಲಿ
ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಬಗ್ಗೆ ಬಿಜೆಪಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಆದರೆ, ಅಂತಿಮ ಆದೇಶ ಹೊರಡಿಸೋದು ರಾಜ್ಯ ಸರ್ಕಾರ. ಕಾಂಗ್ರೆಡ್ ಸರ್ಕಾರ ಕೂಡಲೇ ಧಾರವಾಡಿಗರ ಭಾವನೆಗೆ ಸ್ಪಂದಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು.