ಚನ್ನರಾಯಪಟ್ಟಣ, ಮೇ 20: ಮಿಸ್ಟರ್ ಡಿ.ಕೆ. ಶಿವಕುಮಾರ್ ಅಧಿಕಾರ ಯಾರಿಗೂ ಶಾಶ್ವತವಲ್ಲ, ಮಾತಾಡೋ ಮುನ್ನ ಎಚ್ಚರಿಕೆಯಿಂದ ಮಾತನಾಡಿ, ದುರಹಂಕಾರ ಬೇಡ ಎಂದು ಡಿ.ಕೆ. ಶಿವಕುಮಾರ್ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿರುಗೇಟು ನೀಡಿದರು. ಚನ್ನರಾಯಪಟ್ಟಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ʼಬಿಡದಿ ರೈತರೆಂದು ಸಭೆ ಮಾಡಿದ್ದೀರಾ. ನಿಜವಾದ ರೈತರ ಗೋಳನ್ನು ಒಮ್ಮೆಯಾದರೂ ಕೇಳಿದ್ದೀರಾ? ರಿಯಲ್ ಎಸ್ಟೇಟ್ ಬ್ರೋಕರ್ಗಳು, ದಲ್ಲಾಳಿಗಳು, ಕಮಿಷನ್ ಏಜೆಂಟ್ಗಳು ಸೇರಿದಂತೆ ಕಾಂಗ್ರೆಸ್ ಮುಖಂಡರನ್ನು ಕರೆದು ಸಭೆ ಮಾಡಿದ್ದು ಯಾವ ಪುರುಷಾರ್ಥಕ್ಕೆ?ʼ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಡಿ.ಕೆ. ಸಾಹೇಬ್ರೆ ನನ್ನ ಸ್ಟೇಟಸ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವರಿಗೆ ಜನ ಕೊಟ್ಟಿರೋ ಡಿಸಿಎಂ ಸ್ಟೇಟಸ್ ನಾಡಿನ ಜನರ ಭಿಕ್ಷೆ. ಅದನ್ನು ಕಣ್ಣಿಗೆ ಒತ್ತಿಕೊಂಡು ದುರಹಂಕಾರ ಪಡದೆ, ದುಡ್ಡಿನ ಮದ ತಲೆಗೆ ಏರದೆ ತಲೆ ತಗ್ಗಿಸಿ ಜನರಿಗೆ ಗೌರವದಿಂದ ದುಡಿಯಲಿ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.
ಮಿಸ್ಟರ್ ಶಿವಕುಮಾರ್ ನಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳೋದು ಬೇಡ. ನಿಖಿಲ್ ಏನು ಅಂತ ಜನ ತೋರಿಸಿಕೊಡ್ತಾರೆ. 2028ಕ್ಕೆ ಇದೇ ಡಿ.ಕೆ. ಶಿವಕುಮಾರ್ ಮಾಜಿ ಆಗ್ತಾರೆ, ಹಾಲಿ ಆಗಿ ಇರಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಮಾತಾಡೋ ಮುನ್ನ ಎಚ್ಚರಿಕೆ ಇರಲಿ ಎಂದು ನಿಖಿಲ್ ಕುಮಾರಸ್ವಾಮಿ ಗುಡುಗಿದರು.
ದೇಶಾದ್ಯಂತ ಇ-ಬಸ್, ಇ-ಟ್ರಕ್ ಬಳಕೆಗೆ ವೇಗ; ಉನ್ನತ ಮಟ್ಟದ ಸಭೆ ನಡೆಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
136 ಸ್ಥಾನ ಹೊಂದಿರೋ ಕಾಂಗ್ರೆಸ್ ಡಿಸಿಎಂ ಅವರು 'ಡಿ.ಕೆ. ಶಿವಕುಮಾರ್ ಎಂಬ ನಾನು' ಅಂತ ಡಿಸೈನ್ ಬಾಕ್ಸ್ ಟೀಂನಲ್ಲಿ ಹಾಕೊಂಡಿದ್ದಾರೆ. ಮುಂದೆ ಏನು ಅಂತ ಜನರಿಗೆ ಗೊತ್ತಾಗ್ತಿಲ್ಲ. ನಮ್ಮ ಬಗ್ಗೆ ಚಿಂತೆ ಮಾಡೋದು ಬಿಡಲಿ. ಮಾತೆತ್ತಿದರೆ ಅವರ ಸಹೋದರ 'ಕೂಲಿ ಸಿಕ್ಕಿಲ್ಲ' ಅಂತ ಬೀದಿಯಲ್ಲಿ ಬಾಯಿ ಬಡಿದುಕೊಂಡು ಓಡಾಡ್ತಾರೆ. ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟ, ರಂಪಾಟದಿಂದ ಜನ ನಗ್ತಿದ್ದಾರೆ. ಪಕ್ಷಕ್ಕಾಗಿ 'ದುಡಿದಿದ್ದೀನಿ' ಅಂತಾರಲ್ಲ, ದೆಹಲಿಗೆ ಹೋಗಿ ಕೂಲಿ ತಗೊಂಡು ಬರಲಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಲೇವಡಿ ಮಾಡಿದರು.