ನವದೆಹಲಿ, ಮೇ 15: ಜಾಗತಿಕ ಸಂಘರ್ಷ- ಬಿಕ್ಕಟ್ಟಿದ್ದರೂ ಭಾರತ ತೈಲ ಬೆಲೆಯನ್ನು ಅತ್ಯಂತ ಕನಿಷ್ಠ ಮಟ್ಟದಲ್ಲಿ ಹೆಚ್ಚಳ ಮಾಡಿದೆ. ಬೇರೆ ಬೇರೆ ರಾಷ್ಟ್ರಗಳಲ್ಲಿ ಶೇ.20 ರಿಂದ 45ರಷ್ಟು ಏರಿಕೆ ಕಂಡಿದ್ದರೆ, ನಮ್ಮ ದೇಶದಲ್ಲಿ ಕೇವಲ ಶೇ.3.2ರಷ್ಟು ಮಾತ್ರವೇ ಹೆಚ್ಚಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸ್ಪಷ್ಟಪಡಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ದರ ಏರಿಕೆ ಬಗ್ಗೆ ಪ್ರತಿಕ್ರಿಯಿ ನೀಡಿರುವ ಕೇಂದ್ರ ಸಚಿವರು, ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಇಂಧನ ಪೂರೈಕೆ ಅಡ್ಡಿ ಆತಂಕದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ನಾಗರಿಕರ ಹಿತದೃಷ್ಟಿಯಿಂದ ಕೆಲವೇ ದಿನಗಳ ಹಿಂದೆ ಅಬಕಾರಿ ಸುಂಕವನ್ನು ರುಪಾಯಿ 10ರಷ್ಟು ಕಡಿಮೆ ಮಾಡಿತ್ತು. ಆದರೆ, ಇದೀಗ ಬ್ರೆಂಟ್ ಕಚ್ಚಾ ತೈಲ ಬೆಲೆ ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ಏರುತ್ತಿದ್ದರಿಂದ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ. ಆದರೂ ವಿಶ್ವದಲ್ಲೇ ಅತ್ಯಂತ ಕನಿಷ್ಠ ಮಟ್ಟದಲ್ಲಿ ಅಂದರೆ ರುಪಾಯಿ 3 ಏರಿಕೆ ಮಾಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಭಾರತದಲ್ಲೇ ಅತ್ಯಂತ ಕನಿಷ್ಠ ಏರಿಕೆ
ಜಾಗತಿಕವಾಗಿ ನೋಡಿದರೆ ತೈಲ ಬೆಲೆಯನ್ನು ಭಾರತವೇ ಆತ್ಯಂತ ಕಡಿಮೆ ಮಟ್ಟದಲ್ಲಿ ಏರಿಕೆ ಮಾಡಿದೆ. ಯುಎಸ್ಎ +44.5%, ಶ್ರೀಲಂಕಾ +38.2%, ಯುಕೆ +19.2%, ಜರ್ಮನಿ +13.7% ರಷ್ಟು ಹೆಚ್ಚಳ ಮಾಡಿದ್ದರೆ, ತಮ್ಮ ಸರ್ಕಾರ ಭಾರತದಲ್ಲಿ ಕೇವಲ +3.2% ಹೆಚ್ಚಳ ಮಾಡಿದೆ ಅಷ್ಟೇ ಎಂದು ಸಚಿವರು ಅಂಕಿ ಅಂಶ ಸಹಿತ ವಿವರಿಸಿ ಕಾಂಗ್ರೆಸ್ಗೆ ಚಾಟಿ ಬೀಸಿದ್ದಾರೆ.
ಜಗತ್ತಿನೆಲ್ಲೆಡೆ ಎಲ್ಲಾ ರಾಷ್ಟ್ರಗಳು ಇಂಧನ ಬಿಕ್ಕಟ್ಟು ಎದುರಿಸುತ್ತಿವೆ. ಇಂಧನ ಪೂರೈಕೆ ಮತ್ತು ತೈಲ ಆಮದು ಮಾಡಿಕೊಳ್ಳುವ ದೇಶಗಳಂತೂ ತೀವ್ರ ಒತ್ತಡದಲ್ಲಿವೆ. ವಾಸ್ತವ ಗೊತ್ತಿದ್ದರೂ ಈ ವಿಷಯದಲ್ಲಿ ಕಾಂಗ್ರೆಸ್ ಬೂಟಾಟಿಕೆ ಮಾಡುತ್ತಿದೆ ಎಂದು ಸಚಿವರು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ ಹೆಚ್ಚಿಸಿದ್ದೇಕೆ?
ಜಾಗತಿಕ ತೈಲ ಪೂರೈಕೆಯಲ್ಲಿ ಯಾವುದೇ ಅಡಚಣೆ ಇಲ್ಲದಿದ್ದರೂ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರ ಎರೆಡೆರಡು ಬಾರಿ ಇಂಧನ ತೆರಿಗೆ ಹೆಚ್ಚಿಸಿದ್ದೇಕೆ? ಎಂದು ಸಚಿವರು ಪ್ರಶ್ನಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ 2024ರ ಜೂನ್ 15ಕ್ಕೆ ಪೆಟ್ರೋಲ್ ವ್ಯಾಟ್ ಅನ್ನು ಶೇ.25.92ರಿಂದ ಶೇ.29.84 ಮತ್ತು ಡೀಸೆಲ್ ಮೇಲೆ ಶೇ.14.34 ರಿಂದ ಶೇ.18.44ರಷ್ಟು ಹಾಗೂ ರುಪಾಯಿ 3 ಪ್ರತಿ ಲೀಟರ್ ಗೆ ಹೆಚ್ಚಿಸಿತ್ತು. 2025ರ ಏಪ್ರಿಲ್ 1ಕ್ಕೆ ಡೀಸೆಲ್ ವ್ಯಾಟ್ ಮತ್ತೆ ಶೇ.21.17ಕ್ಕೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ ಸುಮಾರು ರುಪಾಯಿ 91 ಲೀಟರ್ಗೆ ಏರಿಸಿದ್ದು, ಕೇವಲ 10 ತಿಂಗಳಲ್ಲಿ ರುಪಾಯಿ 5 ಹೆಚ್ಚಿಸಿದೆ. ಇದೇಕೆ? ಎಂದು ಸಚಿವ ಪ್ರಲ್ಹಾದ್ ಜೋಶಿ ಎದಿರೇಟು ನೀಡಿದ್ದಾರೆ.
ರಾಜ್ಯ ಸರ್ಕಾರ ಹಿಜಾಬ್ ನಿಷೇಧ ಹಿಂಪಡೆದಿರುವುದು ಅತ್ಯಂತ ದುರದೃಷ್ಟಕರ: ಜೋಶಿ ಕಿಡಿ
ಕಾಂಗ್ರೆಸ್ ಬೂಟಾಟಿಕೆ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನಜೀವನ ದುಸ್ಥರಗೊಳಿಸಿದೆ. ಆದರೆ, ಈಗ ಕೇಂದ್ರದತ್ತ ಬೆರಳು ತೋರಿ ಪಾಠ ಮಾಡಲು ಬರುತ್ತಿದೆ. ಇದು ಬೂಟಾಟಿಕೆ ರಾಜಕಾರಣವಲ್ಲದೆ ಮತ್ತೇನೂ ಅಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ತೈಲ ಬೆಲೆ ಏರಿಕೆಯನ್ನು ದೇಶದ ಜನ ಅರ್ಥ ಮಾಡಿಕೊಳ್ಳಬಲ್ಲರು. ಅದರಂತೆ ರಾಜ್ಯ ಸರ್ಕಾರ ಸಹ ಕೇಂದ್ರದ ಅನಿವಾರ್ಯ ನಿಲುವುಗಳನ್ನು ಗೌರವಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.