ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

CM DK Shivakumar: ಮಾದಕ ವಸ್ತುಗಳ ಜಾಲ; ಮಾಹಿತಿ ನೀಡಿದರೆ ಬಹುಮಾನ: ಸಿಎಂ ಡಿ.ಕೆ. ಶಿವಕುಮಾರ್

CM DK Shivakumar: ಮಾದಕ ವಸ್ತುಗಳ ಸೇವನೆ ಬಗ್ಗೆ ಸಾರ್ವಜನಿಕರು, ಪೋಷಕರು ಗುಪ್ತ ಮಾಹಿತಿ ನೀಡಿದರೆ ಅವರಿಗೆ ಪೊಲೀಸ್ ಇಲಾಖೆಯಿಂದ ಬಹುಮಾನ ನೀಡುವ ತೀರ್ಮಾನ ಮಾಡಲಾಗಿದೆ. ಇದರಿಂದ ಸರಬರಾಜು ಜಾಲವನ್ನು ಹತ್ತಿಕ್ಕಬಹುದು. ಮಾದಕ ವಸ್ತುಗಳ ವಿರುದ್ಧದ ಹೋರಾಟದಿಂದ ನಿಮ್ಮ ಕುಟುಂಬ, ಊರು, ಪರಿಸರ ಹಾಗೂ ರಾಜ್ಯ ಎಲ್ಲವೂ ಚೆನ್ನಾಗಿರಲಿದೆ. ದೇಶದ ಪ್ರಗತಿಗೂ ಸಹಕಾರಿಯಾಗಲಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನ - 2026 ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್‌.

ಬೆಂಗಳೂರು, ಜೂ.30: 2028ರ ವೇಳೆಗೆ ಮಾದಕ ವಸ್ತು ಮುಕ್ತ- ನಶೆ ಮುಕ್ತ ಕರ್ನಾಟಕ ರೂಪಿಸುವುದು ನಮ್ಮ ಗುರಿ. ಇದರ ಸಲುವಾಗಿ ಪ್ರತಿಜ್ಞೆ ಮಾಡಿದ್ದೇವೆ. ಸಾರ್ವಜನಿಕರು, ಯವಜನತೆ ಮತ್ತು ವಿದ್ಯಾರ್ಥಿಗಳು ಸರ್ಕಾರದ ಜತೆ ಕೈ ಜೋಡಿಸಿದರೆ ಈ ದಂಧೆಯನ್ನು ಇಲ್ಲವಾಗಿಸಬಹುದು ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ಕರೆ ನೀಡಿದರು. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನ - 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಶೆ ಬಿಡಿ ಖುಷಿ ಪಡಿ ಇದು ನಮ್ಮ ಚಿಂತನೆ. ನಮ್ಮ ಆದರ್ಶಗಳನ್ನು ನಾವೇ ರೂಪಿಸಿಕೊಳ್ಳಬೇಕು. ನಾವು ಇಂದು ಮಾಡಿರುವ ಸಂಕಲ್ಪ, ಪ್ರತಿಜ್ಞೆಯು ನಮ್ಮ ಜೀವನದ ಉದ್ದಕ್ಕೂ ರೂಡಿಸಿಕೊಳ್ಳಬೇಕು. ನಮ್ಮ ಸುತ್ತಲಿನ ಪರಿಸರದಲ್ಲೂ ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಅನೇಕರು ನಮ್ಮ ಮೇಲೆ ಒತ್ತಡ ಹೇರಬಹುದು. ಅದಕ್ಕೆ ವಿದ್ಯಾರ್ಥಿ, ಯುವಜನತೆ ಮಣಿಯಬಾರದು. ನಿಮ್ಮ, ದೇಹ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳಬಾರದು ಎಂದು ಕರೆ ನೀಡಿದರು.

89 ಕೋಟಿ ರೂ. ಮೊತ್ತದ ಮಾದಕ ವಸ್ತುಗಳ ನಾಶ

ಕಳೆದ ಮೂರು ವರ್ಷಗಳಲ್ಲಿ ಹಿಂದಿನ ಗೃಹಸಚಿವರಾಗಿದ್ದ ಪರಮೇಶ್ವರ್ ಅವರ ನೇತೃತ್ವದಲ್ಲಿ 89 ಕೋಟಿ ರೂ. ಮೊತ್ತದ ಮಾದಕವಸ್ತುಗಳನ್ನು ನಾಶಪಡಿಸಲಾಗಿದೆ. ಈ ಜಾಲವನ್ನು ಬೇಧಿಸಿದ ಎಲ್ಲಾ ಉನ್ನತ ಪೊಲೀಸ್ ಅಧಿಕಾರಿಗಳು, ಕಾನ್ಸ್ಸ್ಟೇಬಲ್ ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ನಾನು ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸಮಾಜದಲ್ಲಿ ಗೌರವ ಹಾಳಾಗಲಿದೆ ಎಂದು ಮಕ್ಕಳ ಪೋಷಕರು ಯಾವುದೇ ವಿಚಾರವನ್ನು ಮುಚ್ಚಿಟ್ಟುಕೊಳ್ಳಬೇಡಿ. ನೀವು ಮಕ್ಕಳ ದುರಭ್ಯಾಸವನ್ನು ಮುಚ್ಚಿಟ್ಟಷ್ಟು ಅವರ ಭವಿಷ್ಯವೇ ಹಾಳಾಗಲಿದೆ. ನೀವು ತಿಳುವಳಿಕೆ ನೀಡಿ. ಪೊಲೀಸರನ್ನು ವಿಶ್ವಾಸಕ್ಕೆ ಪಡೆದು ಇದರ ಮೂಲವನ್ನು ಕಂಡುಹಿಡಿಯಲು ಸಹಾಯ ಮಾಡಬೇಕು. ಈ ಜಾಲದಿಂದ ನಿಮ್ಮ ಮಕ್ಕಳನ್ನು ಕಾಪಾಡಬಹುದು. ನಿಮ್ಮ ಮಕ್ಕಳ ಹೆಸರು ಬಹಿರಂಗಗೊಳ್ಳದಂತೆ ಪೊಲೀಸ್ ಇಲಾಖೆಗೆ ನಾನು ನಿರ್ದೇಶನ ನೀಡುತ್ತೇನೆ ಎಂದರು.

ಮಾದಕ ವಸ್ತುಗಳ ಸೇವನೆ ಮಾಹಿತಿ ನೀಡಿದರೆ ಬಹುಮಾನ

ಮಾದಕ ವಸ್ತುಗಳ ಸೇವನೆ ಬಗ್ಗೆ ಸಾರ್ವಜನಿಕರು, ಪೋಷಕರು ಗುಪ್ತ ಮಾಹಿತಿ ನೀಡಿದರೆ ಅವರಿಗೆ ಪೊಲೀಸ್ ಇಲಾಖೆಯಿಂದ ಬಹುಮಾನ ನೀಡುವ ತೀರ್ಮಾನ ಮಾಡಲಾಗಿದೆ. ಇದರಿಂದ ಸರಬರಾಜು ಜಾಲವನ್ನು ಹತ್ತಿಕ್ಕಬಹುದು. ಮಾದಕ ವಸ್ತುಗಳ ವಿರುದ್ಧದ ಹೋರಾಟದಿಂದ ನಿಮ್ಮ ಕುಟುಂಬ, ಊರು, ಪರಿಸರ ಹಾಗೂ ರಾಜ್ಯ ಎಲ್ಲವೂ ಚೆನ್ನಾಗಿರಲಿದೆ. ದೇಶದ ಪ್ರಗತಿಗೂ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಪಾನ್ ಮಸಲಾ, ಗುಟ್ಕಾದಲ್ಲಿ ವಿವಿಧ ರೀತಿಯ ಅಮಲು ಪದಾರ್ಥಗಳನ್ನು ಬೆರೆಸುವುದು ಗಮನಕ್ಕೆ ಬಂದಿದೆ. ಫೋನ್ ಮುಖಾಂತರ ಸಂಪರ್ಕಿಸಿ ಮನೆಗಳಿಗೆ ಅಮಲು ಪದಾರ್ಥಗಳನ್ನು ತಲುಪಿಸಲಾಗುತ್ತಿದೆ ಎನ್ನುವ ಮಾಹಿತಿಯನ್ನು ಪೊಲೀಸ್ ಇಲಾಖೆ ನೀಡಿದೆ. ಪಾನ್ ಮಸಲಾ, ಗುಟ್ಕಾದಲ್ಲಿ ಅಮಲು ಪದಾರ್ಥ ಬೆರೆಸುವುದು ಗೊತ್ತಾದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಂದೇಶ ನೀಡಿದ್ದೇನೆ. ನೂತನ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಈ ಇಲಾಖೆಯನ್ನು ಅಚ್ಚುಕಟ್ಟಾಗಿ ಮುನ್ನಡೆಸುತ್ತಿದ್ದಾರೆ ಎಂದರು.

ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ದೇಶದಲ್ಲಿ ತಂಬಾಕು ಸೇವನೆ ಮಾಡಿ ಪ್ರತಿ ವರ್ಷ 13- 14 ಲಕ್ಷ ಜನ ಸಾವನಪ್ಪುತ್ತಿದ್ದಾರೆ ಎಂದು ವರದಿ ನೀಡಿತ್ತು. ನಮ್ಮ ದೇಶದ ಸಂಸ್ಕೃತಿ, ಭಾಷೆ, ವೈವಿದ್ಯತೆಯನ್ನು ಇಡೀ ಪ್ರಪಂಚ ಗಮನಿಸುತ್ತಿದೆ. ಇದು ಮಾದರಿಯಾಗಬಾರದು ಎಂದು ಹೇಳಿದರು.

ಶಾಲಾ ಕಾಲೇಜುಗಳಲ್ಲಿ ಸ್ಟುಡೆಂಟ್ ಪೊಲೀಸಿಂಗ್ ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ. ಈ ಹಿಂದೆ ಗೃಹಸಚಿವರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿತ್ತು. ಡ್ರಗ್ಸ್ ಸೇವನೆ ಸೇರಿದಂತೆ ಇತರೇ ಕಾನೂನುಬಾಹಿರ ಕೃತ್ಯಗಳನ್ನು ನಿಯಂತ್ರಿಸಲು ಸಾರ್ವಜನಿಕರು ಪೊಲೀಸ್ ಇಲಾಖೆಯ ಜತೆ ಕೈ ಜೋಡಿಸಬೇಕು. ಇದೇ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು.‌

Karnataka SIR: ಎನ್ಯುಮರೇಶನ್ ಫಾರಂ ಭರ್ತಿ ಮೂಲಕ ಎಸ್ಐಆರ್ ಪ್ರಕ್ರಿಯೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

ಪೊಲೀಸ್ ವ್ಯವಸ್ಥೆ ಮೇಲೆ ನಂಬಿಕೆ ಇರಬೇಕು. ಇವರು ಸಹ ನಿಮ್ಮ ಕುಟುಂಬವಿದ್ದಂತೆ. ಯಾವುದೇ ಪೊಲೀಸ್ ಆಗಲಿ ಕುಟುಂಬ ವ್ಯವಸ್ಥೆಗೆ ಧಕ್ಕೆ ತರುವುದಿಲ್ಲ. ಇವರು ರಾಜ್ಯದ ಹಿತಕ್ಕಾಗಿ ದುಡಿಯುತ್ತಿದ್ದಾರೆ. ಎಲ್ಲಾ ಜನಪ್ರತಿನಿಧಿಗಳು ನಶೆ ಮುಕ್ತ ಕರ್ನಾಟಕಕ್ಕೆ ಕೈ ಜೋಡಿಸಲಿದ್ದಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.