ಚನ್ನಪಟ್ಟಣ, ಅ. 26: ''ಖಾತಾ ಪರಿವರ್ತನೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲ, ಹಗಲು ದರೋಡೆ ದಂಧೆ ಮಾಡುತ್ತಿದೆʼʼ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತೀವ್ರ ವಾಗ್ದಾಳಿ ನಡೆಸಿದರು. ಚನ್ನಪಟ್ಟಣದಲ್ಲಿ ಮಾತನಾಡಿದ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ʼʼಖಾತಾ ಪರಿವರ್ತನೆ ಹೆಸರಿನಲ್ಲಿ ಸರ್ಕಾರ ಒಂದು ಲಕ್ಷ ಕೋಟಿ ರೂ. ಆದಾಯ ಸೃಷ್ಟಿಸಲು ಹೊರಟಿದೆ. ಬಡವರ ಹೊಟ್ಟೆ ಮೇಲೆ ಹೊಡೆದು ಆದಾಯ ತರಲು ಮುಂದಾಗಿದೆ. ಜನರಿಗೆ ಒಳ್ಳೆಯದು ಮಾಡಬೇಕೆಂದರೆ ಅವತ್ತಿನ ಎಸ್ಆರ್ ವ್ಯಾಲ್ಯೂ ಮೇಲೆ ದರ ಫಿಕ್ಸ್ ಮಾಡಬೇಕುʼʼ ಎಂದು ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಸೂಚಿಸಿದರು.
ʼʼಬೆಂಗಳೂರಲ್ಲಿ 7.5 ಲಕ್ಷ ಮನೆಗಳು ಇದಕ್ಕೆ ಒಳಪಡುತ್ತವೆ. ಅದಕ್ಕೆ 100 ದಿನ ಟೈಂ ಲೈನ್ ಫಿಕ್ಸ್ ಮಾಡಿದ್ದಾರೆ. ಖಾತೆ ವರ್ಗಾವಣೆಗೆ ಒಂದೊಂದು ಕಡೆ ಒಂದೊಂದು ಎಸ್.ಆರ್. ವ್ಯಾಲ್ಯೂ ಇದೆ. ಇದರಿಂದ ಮಾಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತದೆ. ಜನರಿಗೆ ಒತ್ತಡ ಹೇರಿ ಅವರ ಬಳಿ ಹಣ ಕಸಿದು ಗ್ಯಾರಂಟಿ ರೂಪದಲ್ಲಿ ವಾಪಸ್ ಕೊಡುತ್ತಿದ್ದಾರೆʼʼ ಎಂದು ವಾಗ್ದಾಳಿ ನಡೆಸಿದರು.
ಎಚ್ಡಿಕೆ ಕಾರ್ಯಕ್ರಮ ಜನರ ಮನಸ್ಸಿನಲ್ಲಿದೆ
ಕುಮಾರಸ್ವಾಮಿ ಖಾಲಿ ಟ್ರಂಕ್ ಎಂಬ ಡಿಸಿಎಂ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ʼʼಕುಮಾರಣ್ಣ ಅವರ ಕಾಲಘಟ್ಟದಲ್ಲಿ ಏನೇನು ಮಾಡಿದ್ದಾರೆ ಅಂತ ರಾಜ್ಯದ ಜನತೆಗೆ ಗೊತ್ತು. ಅಧಿಕಾರದಲ್ಲಿದ್ದಾಗ ಕೊಟ್ಟಂತ ಕಾರ್ಯಕ್ರಮ ಜನರ ಮನಸ್ಸಿನಲ್ಲಿದೆ. ಅದನ್ನ ಚುನಾವಣೆ ಸಂದರ್ಭದಲ್ಲಿ ಏನೆಲ್ಲ ಮಾಡಿದ್ದಾರೆ ಎಂದು ಮಾತಾಡ್ತೀವಿʼʼ ಎಂದು ಡಿಕೆಶಿಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.
ಭವಿಷ್ಯ ನುಡಿಯೋಕೆ ಡಿಕೆಶಿ ಜ್ಯೋತಿಷಿನಾ?
ಮುಂದೆ ಜೆಡಿಎಸ್ 8ರಿಂದ 9 ಸ್ಥಾನ ಬರುತ್ತೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ʼʼಭವಿಷ್ಯ ನುಡಿಯೋಕೆ ಅವರ್ಯಾರ?, ರಾಜ್ಯದ ಜನ ನಮ್ಮ ಭವಿಷ್ಯ ತೀರ್ಮಾನ ಮಾಡ್ತಾರೆ. ಭವಿಷ್ಯ ಹೇಳೋಕೆ ಅವರೇನು ಜ್ಯೋತಿಷಿನಾ? ಅವರು ಭವಿಷ್ಯ ನುಡಿಯಲಿ ಟೈಂ ಬಂದಾಗ ಮಾತಾಡ್ತೀವಿʼʼ ಎಂದು ನಿಖಿಲ್ ಟಾಂಗ್ ನೀಡಿದರು. ʼʼರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣ ಶೂನ್ಯ. ಶಾಸಕರಿಗೆ ಅನುದಾನ ಕೊಡ್ತೀವಿ ಅಂತ ಹೇಳಿ ಕೊಟ್ಟಿಲ್ಲ. ಒಬ್ಬ ಶಾಸಕನಿಗೆ 10 ಕೋಟಿ ರೂ. ಅನುದಾನವೂ ಸಿಕ್ಕಿಲ್ಲ. ಬಿಜೆಪಿ-ಜೆಡಿಎಸ್ ಬಿಡಿ ಕಾಂಗ್ರೆಸ್ ಶಾಸಕರೇ ಅನುದಾನ ಸಿಕ್ಕಿಲ್ಲ ಅಂತ ಹೇಳ್ತಾರೆ. ಕಾಂಟ್ರಾಕ್ಟರ್ಗಳ ಕಥೆ ಏನಾಗಿದೆ ಅಂತ ಗೊತ್ತಿಲ್ಲ. ಅವರಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರದ ಕಾಲಘಟ್ಟದಲ್ಲಿ ಅಭಿವೃದ್ಧಿ ಆಗ್ತಿಲ್ಲʼʼ ಎಂದು ಕಿಡಿಕಾರಿದರು.
ʼʼನವೆಂಬರ್ ಕ್ರಾಂತಿ ಅಂತ ಮಾತಾಡ್ತಾರೆ. ಅದೇನು ಕ್ರಾಂತಿ ಮಾಡ್ತಾರೋ ನೋಡೋಣ. ಇವರ ಕುರ್ಚಿ ಕಿತ್ತಾಟದ ನಡುವೆ ರಾಜ್ಯದ ಜನ ಬಲಿಪಶು ಆಗ್ತಿದ್ದಾರೆʼʼ ಎಂದು ಹೇಳಿದರು.