ಕಣ್ಣೂರು: ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುವ ಕೇಂದ್ರ ಸಚಿವ, ಮಲಯಾಳಂ ನಟ ಸುರೇಶ್ ಗೋಪಿ(Union Minister Suresh Gopi) ಇದೀಗ ಮತ್ತೆ ಅಚ್ಚರಿಯ ಹೇಳಿಕೆಯೊಂದನ್ನು ಬಹಿರಂಗವಾಗಿಯೇ ನೀಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸ್ಥಾನ ತಮಗೆ ಬೇಡ. ನಟನೆಗೆ ಮತ್ತೆ ಮರಳುವುದಾಗಿ ಘೋಷಿಸಿದ್ದಾರೆ. ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತ್ರಿಶೂರ್ ಸಂಸದ ಮತ್ತು ನಟ-ರಾಜಕಾರಣಿಯಾಗಿರುವ ಅವರು, ಸಚಿವ ಹುದ್ದೆಯನ್ನು ವಹಿಸಿಕೊಂಡ ನಂತರ ತಮ್ಮ ಆದಾಯ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಹೇಳಿದರು. ನಾನು ನಿಜವಾಗಿಯೂ ನಟನೆಯನ್ನು ಮುಂದುವರಿಸಲು ಬಯಸುತ್ತೇನೆ. ನಾನು ಹೆಚ್ಚು ಗಳಿಸಬೇಕಾಗಿದೆ; ನನ್ನ ಆದಾಯ ಈಗ ಸಂಪೂರ್ಣವಾಗಿ ನಿಂತುಹೋಗಿದೆ ಎಂದು ಅವರು ಹೇಳಿದರು.
ಸಂಸದ ಸಿ ಸದಾನಂದನ್ ಮಾಸ್ಟರ್ಗೆ ಸಚಿವ ಸ್ಥಾನ ನೀಡಿ
ಇನ್ನು ತಾವು ರಾಜೀನಾಮೆ ಸಲ್ಲಿಸಿದ ನಂತರ ತೆರವಾಗುವ ಸಚಿವ ಸ್ಥಾನವನ್ನು ರಾಜ್ಯಸಭಾ ಸಂಸದ ಸಿ ಸದಾನಂದನ್ ಮಾಸ್ಟರ್ ಅವರಿಗೆ ನೀಡಬೇಕೆಂದು ಮನವಿ ಮಾಡಿದ್ದಾರೆ. ನಾನು ಎಂದಿಗೂ ಸಚಿವನಾಗಬೇಕೆಂದು ಪ್ರಾರ್ಥಿಸಿಲ್ಲ. ಚುನಾವಣೆಗೆ ಒಂದು ದಿನ ಮೊದಲೂ, ನಾನು ಸಚಿವನಾಗಲು ಬಯಸುವುದಿಲ್ಲ, ನಾನು ಸಿನಿಮಾದಲ್ಲಿ ಮುಂದುವರಿಯಲು ಬಯಸುತ್ತೇನೆ ಎಂದು ವರದಿಗಾರರಿಗೆ ಹೇಳಿದ್ದೆ. ನಾನು ಅಕ್ಟೋಬರ್ 2008 ರಲ್ಲಿ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡೆ . ಪಕ್ಷವು ನನ್ನ ಮೇಲೆ ಭರವಸೆ ಇಟ್ಟು ದೊಡ್ಡ ಹುದ್ದೆಯನ್ನೇ ನೀಡಿತು ಎಂದರು. ಸದ್ಯ ಗೋಪಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವರು ಮತ್ತು ಪ್ರವಾಸೋದ್ಯಮ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನು ಈ ವರ್ಷದ ಆರಂಭದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಣ್ಣೂರಿನ ಬಿಜೆಪಿ ಹಿರಿಯ ನಾಯಕ ಸದಾನಂದನ್ ಮಾಸ್ಟರ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು.
ಈ ಸುದ್ದಿಯನ್ನೂ ಓದಿ: Suresh Gopi: ಶವಗಳಿಂದ ಆಯ್ಕೆಯಾದವರು ಕೇರಳವನ್ನು ಆಳುತ್ತಿದ್ದಾರೆ; ಭಾರೀ ವಿವಾದಕ್ಕೀಡಾಯ್ತು ಸುರೇಶ್ ಗೋಪಿ ಹೇಳಿಕೆ
ಟೀಕೆಗಳಿಗೆ ಸುರೇಶ್ ಗೋಪಿ ಖಡಕ್ ತಿರುಗೇಟು
ಏತನ್ಮಧ್ಯೆ, ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುರೇಶ್ ಗೋಪಿ ತಮ್ಮ ಭಾಷಣದಲ್ಲಿ ಅನೇಕ ಜನರು ತಮ್ಮ ಮಾತುಗಳನ್ನು ತಿರುಚುವ ಮತ್ತು ತಪ್ಪಾಗಿ ಅರ್ಥೈಸುವ ಅಭ್ಯಾಸವನ್ನು ಹೊಂದಿದ್ದಾರೆ ಎಂದು ಹೇಳಿದರು. ತಮ್ಮ ಕ್ಷೇತ್ರವಾದ ತ್ರಿಶೂರ್ನ ಜನರನ್ನು ಉಲ್ಲೇಖಿಸಲು "ಪ್ರಜಾ" ಎಂಬ ಪದವನ್ನು ಬಳಸಿದ್ದಕ್ಕಾಗಿ ಟೀಕೆಗಳು ಬಂದಿವೆ ಎಂದು ಅವರು ಗಮನಸೆಳೆದರು. ಹಿಂದೆ ಮ್ಯಾನುಯಲ್ ಸ್ಕ್ಯಾವೆಂಜರ್ ಎಂದು ಕರೆಯಲಾಗುತ್ತಿದ್ದ ನೈರ್ಮಲ್ಯ ಕಾರ್ಮಿಕರನ್ನು ಈಗ ನೈರ್ಮಲ್ಯ ಎಂಜಿನಿಯರ್ಗಳು ಎಂದು ಹೇಗೆ ಕರೆಯಲಾಗುತ್ತಿದೆ ಎಂಬುದಕ್ಕೆ ಉದಾಹರಣೆ ನೀಡಿದ ಸಚಿವರು, 'ಪ್ರಜಾ' ಮತ್ತು 'ಪ್ರಜಾತಂತ್ರ' ಎಂಬ ಪದಗಳ ಬಳಕೆಯನ್ನು ತಮ್ಮ ವಿರೋಧಿಗಳು ತಿರುಚಿದ್ದಾರೆ ಎಂದು ಹೇಳಿದರು. ಪ್ರಜಾ ಎಂಬ ಪದವನ್ನು ಬಳಸುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.