ಚಿತ್ರದುರ್ಗ: ಇಡೀ ಕರ್ನಾಟಕದಲ್ಲ ಬಡವರು, ದೀನ ದಲಿತರ ಮನೆ, ಮನದಲ್ಲಿ ಯಡಿಯೂರಪ್ಪ ಹೆಸರು ಮಿಡಿಯುತ್ತಿದೆ. ಈ ಕೋಟೆ ನಾಡಿನಲ್ಲಿ ಬಿಸಿಲು, ಬರಗಾಲ ಶಾಶ್ವತವಾಗಿದ್ದಾಗ ಶಾಶ್ವತ ನೀರು ಪೂರೈಸಲು ಕೈಗೊಂಡ ಯೋಜನೆಯೇ ಅಪ್ಪರ್ ಭದ್ರಾ ಪ್ರಾಜೆಕ್ಟ್. ನಿಜಲಿಂಗಪ್ಪ ಅವರ ಕಾಲದಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು. 2008ರಲ್ಲಿ ಯಡಿಯೂರಪ್ಪ (BSY Abhimanotsava) ಅವರು ಸಿಎಂ ಆದ ತಕ್ಷಣವೇ ಮಧ್ಯ ಕರ್ನಾಟಕಕ್ಕೆ ಕುಡಿಯುವ ನೀರು ಕಲ್ಪಿಸಬೇಕು ಎಂದು ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿದ್ದರು. ಅದೇ ರೀತಿ ವಾಣಿವಿಲಾಸ ಸಾಗರಕ್ಕೆ 5 ಟಿಎಂಸಿ ನೀರು ನೀಡಿದ್ದರಿಂದ ಇವತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ನೀರಾವರಿ, ಕುಡಿಯುವ ನೀರು ದೊರೆಯುತ್ತಿದೆ. ಜಿಲ್ಲೆಗೆ ನೀರು ನೀಡಿದ ಭಗೀರಥ ಯಾರಾದರೂ ಇದ್ದರೆ ಅದು ಬಿಎಸ್ವೈಯವರು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಬಿಎಸ್ವೈ ಅಭಿಮಾನೋತ್ಸವದಲ್ಲಿ ಅವರು ಮಾತನಾಡಿದರು. ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡುವ ಈ ದಿನಗಳಲ್ಲಿ ಒಬ್ಬ ಜನಪರ ನಾಯಕರಾದ, ರೈತನ ಮಗ ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇದ್ದಾಗ ಏನು ಮಾಡಬೇಕೋ ಅದನ್ನು ಮಾಡಿ ತೋರಿಸಿದ್ದಾರೆ. ಸದ್ಯ ಮುಖ್ಯಮಂತ್ರಿಗಳನ್ನು ಮಾಸ್ ಲೀಡರ್ ಎಂದು ಹೇಳುತ್ತಾರೆ. ಆದರೆ, ರಾಜ್ಯದ ಇತಿಹಾಸದಲ್ಲಿ ಏಕಮೇವ ಮಾಸ್ ಲೀಡರ್ ಯಾರದ್ರೂ ಇದ್ದರೆ ಅದು ಯಡಿಯೂರಪ್ಪ ಎಂದು ಹೇಳಲು ಬಯಸುತ್ತೇನೆ ಎಂದು ತಿಳಿಸಿದರು.