ದೆಹಲಿ, ಮಾ. 18: ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ವಿದಾಯ ಹೇಳಿದರು. ನಿವೃತ್ತರಾಗುತ್ತಿರುವ ಸದಸ್ಯರ ಸೇವೆಯನ್ನು ಶ್ಲಾಘಿಸಿ, ಸದನಕ್ಕೆ ಅವರು ನೀಡಿದ ಕೊಡುಗೆಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಿ ಎಂದು ತಿಳಿಸಿದರು. ಹಿರಿಯ ನಾಯಕರಾದ ಎಚ್.ಡಿ. ದೇವೇ ಗೌಡ, ಮಲ್ಲಿಕಾರ್ಜುನ ಖರ್ಗೆ ಮತ್ತು ಶರದ್ ಪವಾರ್ ಅವರ ಸೇವೆಯನ್ನು ಮೋದಿ ಸ್ಮರಿಸಿಕೊಂಡರು. ʼʼಎಲ್ಲ ನೂತನ ಸಂಸದರು ಹಿರಿಯರಿಂದ ನೋಡಿ ಕಲಿಯಬೇಕುʼʼ ಎಂದರು. "ಹರಿವಂಶ್ ಅವರಿಗೆ ಸದನದಲ್ಲಿ ದೀರ್ಘಕಾಲ ಜವಾಬ್ದಾರಿಗಳನ್ನು ನಿರ್ವಹಿಸುವ ಅವಕಾಶ ಸಿಕ್ಕಿತು. ಅವರು ಲೇಖನಿಯಲ್ಲಿ ನೈಪುಣ್ಯ ಹೊಂದಿರುವವರು ಮಾತ್ರವಲ್ಲದೆ, ಶ್ರಮಶೀಲರೂ ಆಗಿದ್ದಾರೆ. ಅವರು ದೇಶಾದ್ಯಂತ ಪ್ರಯಾಣಿಸಿ ತಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸಿದ್ದಾರೆ" ಎಂದು ಹೇಳಿದರು. ಸಂಸತ್ತಿನ ಘನತೆಯನ್ನು ಎತ್ತಿ ಹಿಡಿಯಲು ಮತ್ತು ಅನುಭವಿ ನಾಯಕರಿಂದ ಸ್ಫೂರ್ತಿ ಪಡೆಯಲು ಸದಸ್ಯರನ್ನು ಪ್ರೋತ್ಸಾಹಿಸುವ ಮೂಲಕ ಪ್ರಧಾನಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.