ಬೆಂಗಳೂರು: ರಾಜ್ಯದ ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ್ (DK Shivakumar) ಅವರ ಪ್ರಮಾಣವಚನಕ್ಕೆ ಮುಹೂರ್ತ ನಿಗದಿಯಾಗಿದೆ. ಈ ನಡುವೆ ಡಿ.ಕೆ. ಶಿವಕುಮಾರ್ ಅವರು ಒಂದು ದಿನ ರಾಜ್ಯದ ಸಿಎಂ ಆಗುತ್ತಾರೆ, ಆಗ್ತಾರೆ ಎಂದು ಅವರ ಪುತ್ರಿ ಐಶ್ವರ್ಯಾ (Aishwarya DKS Hegde) ಅವರು ಈ ಹಿಂದೆ ಮಾತನಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ತಮ್ಮ ತಂದೆ ಯಾಕೆ ಸಿಎಂ ಆಗಬೇಕು ಎಂದು ಪುತ್ರಿ ವಿವರಿಸಿದ್ದಾರೆ.
ಇನ್ನು ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಪುತ್ರಿ ಐಶ್ವರ್ಯ ಅವರು ಭಾನುವಾರ ಒಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ "ಕಂಗ್ರಾಜುಲೇಷನ್ಸ್ ಅಪ್ಪಾ ಎಂದು ವಿಶ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಈ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಐಶ್ವರ್ಯಾ ಮಾತನಾಡಿರುವ ವಿಡಿಯೊ ಸದ್ಯ ವೈರಲ್ ಆಗುತ್ತಿದೆ.
"ನನ್ನ ತಂದೆ ಸುಮ್ಮನೆ ಸಿಎಂ ಆಗಬೇಕು ಎಂದು ನಾನು ಹೇಳುತ್ತಿಲ್ಲ. ಅವರು ಪಟ್ಟಿರುವ ಕಷ್ಟಕ್ಕೆ, ಅವರ ಫ್ಯಾಮಿಲಿ ಮಾಡಿರುವ ತ್ಯಾಗಕ್ಕೆ ಆ ಸ್ಥಾನ ಸಿಗಬೇಕು. ನಮ್ಮ ಅಪ್ಪ ಯಾವತ್ತೂ ಒಂದು ಟೂರ್ ಹೋಗಿಲ್ಲ. ಜನರನ್ನೇ ಅವರು ಕುಟುಂಬ ಎಂದು ಭಾವಿಸಿದ್ದಾರೆ. ಅಪ್ಪ ಜೈಲಿನಿಂದ ಬಂದಾಗ ನಾನು 2 ದಿನ ಅವರ ಜತೆ ಮಾತನಾಡಿರಲಿಲ್ಲ ಅದಕ್ಕೆ ಕಾರಣ, ಹೊರಬಂದಾಗ ಮೊದಲು ನಮ್ಮ ಕುಟುಂಬವನ್ನು ನೋಡಲು ಬರಲಿಲ್ಲ. ಜನರನ್ನು ನೋಡಬೇಕು ಎಂದು ಹೋದರು. ಇದಕ್ಕೋಸ್ಕರವಾದರೂ ಒಂದು ದಿನ ನನ್ನ ತಂದೆ ರಾಜ್ಯದ ಮುಖ್ಯಮಂತ್ರಿ ಆಗಬೇಕು, ಆಗುತ್ತಾರೆ ಎಂಬ ಭಾವನೆ ಇಟ್ಟುಕೊಂಡು ಜೀವನ ಮಾಡುತ್ತಿದ್ದೇವೆ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
Deputy CM: ಯಾರಾಗ್ತಾರೆ ಡಿಸಿಎಂ; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?
ನಮ್ಮ ತಂದೆ ಜೈಲಿನಿಂದ ಬಂದಾಗ, ನನಗೋಸ್ಕರ ಎಷ್ಟೋ ಜನ ಚಪ್ಪಲಿಯನ್ನೂ ಹಾಕಿಕೊಳ್ಳದೇ ಟ್ರೈನ್ ಹತ್ತಿಕೊಂಡು ದೆಹಲಿಯ ಜೈಲಿನ ಬಳಿ ಬಂದಿದ್ದಾರೆ. ಎಷ್ಟೋ ದಿನ ಊಟ ಇಲ್ಲದೇ ಜೈಲಿನಿಂದ ಆಚೆ ನಿಂತು ಕಾದಿದ್ದಾರೆ. ಅವರಿಗೋಸ್ಕರ ನಾನು ಹೋಗದೇ, ನನ್ನ ಕುಟುಂಬ ನೋಡಬೇಕು ಎಂದು ಹೇಗೆ ಓಡಿಬರಲಿ ಹೇಳು? ಎಂದು ನನಗೆ ಕೇಳಿದರು. ಆಗ ನನಗೆ ಅವರಿಗೆ ಜನರ ಮೇಲಿನ ಪ್ರೀತಿ ಅರ್ಥ ಆಯಿತು ಎಂದು ಭಾವುಕರಾಗಿ ಐಶ್ವರ್ಯಾ ಮಾತನಾಡಿದ್ದಾರೆ. ಸದ್ಯ ಈ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.