ದೆಹಲಿ, ಮಾ. 30: ಈ ಜಗತ್ತಿನಲ್ಲಿ ತಂದೆ-ಮಗನ ಬಾಂಧವ್ಯ ಅತ್ಯಂತ ಗಾಢವಾದುದು, ಅನನ್ಯವಾದುದು ಎನ್ನುವ ಮಾತಿದೆ. ತಾನು ಎಷ್ಟೇ ಕಷ್ಟ ಎದುರಿಸಿದರೂ ಪರವಾಗಿಲ್ಲ ಮಕ್ಕಳು ಸುಖವಾಗಿರಬೇಕೆಂದು ಬಯಸುವ ನಿಸ್ವಾರ್ಥ ಜೀವ ಎಂದರೆ ಅದು ತಂದೆ. ಅದಕ್ಕೆ ತಾಜಾ ಉದಾಹರಣೆ ಈ ಘಟನೆ. ಪುಟ್ಟ ಮಗನಿಗೆ ಭಯವಾಗುತ್ತದೆ ಎನ್ನುವ ಕಾರಣಕ್ಕೆ ತಂದೆ ಕೂಡ ಎಂಆರ್ಐ ಸ್ಕ್ಯಾನಿಂಗ್ ಮೆಷಿನ್ ಒಳ ಹೋದ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ವೈರಲ್ ಆಗಿದೆ (Viral Video). ತಂದೆ-ಮಗನ ಈ ಭಾವನಾತ್ಮಕ ಕ್ಷಣ ಕಂಡು ಹಲವರ ಕಣ್ಣಂಚು ಒದ್ದೆಯಾಗಿದ್ದರೆ, ಇನ್ನು ಕೆಲವರು ಇಂತಹ ಅಪ್ಪನನ್ನು ಪಡೆದ ಪುತ್ರನೇ ಭಾಗ್ಯವಂತ ಎಂದು ಹೇಳಿದ್ದಾರೆ.
ತಮ್ಮ ಮಕ್ಕಳ ಮೊಗದಲ್ಲಿ ನಗು ಅರಳಿಸಲು, ಅವರಿಗೆ ಧೈರ್ಯ ತುಂಬಲು ತಂದೆ ಯಾವ ಕೆಲಸ ಮಾಡಲು, ಸಾಹಸ ಕೈಗೊಳ್ಳಲು ಹಿಂಜರಿಯುವುದಿಲ್ಲ ಎನ್ನುವುದನ್ನು ಈ ಘಟನೆ ಮತ್ತೊಮ್ಮೆ ಸಾಬೀತು ಪಡಿಸಿದೆ. ಆ ಮೂಲಕ ಈ ಜಗತ್ತಿನಲ್ಲಿ ತಂದೆಯ ಪ್ರೀತಿಗೆ ಯಾವುದೂ ಸಾಟಿ ಇಲ್ಲ ಎನ್ನುವುದನ್ನು ಸಾರಿ ಹೇಳಿದೆ.
ವಿಡಿಯೊ ಇಲ್ಲಿದೆ:
ಘಟನೆ ವಿವರ
ಅವನೊಬ್ಬ ಪುಟ್ಟ ಬಾಲಕ. ಆತನಿಗೆ ಕಾಯಿಲೆ ಕಾಣಿಸಿಕೊಂಡಾಗ ವೈದ್ಯರು ಎಂಆರ್ಐ ಸ್ಕ್ಯಾನಿಂಗ್ ಮಾಡಬೇಕೆಂದು ಸೂಚಿಸಿದರು. ಅದರಂತೆ ಆತನನ್ನು ಆಸ್ಪತ್ರೆಗೆ ಕರೆತರಲಾಯಿತು. ವೈದ್ಯರು ಎಲ್ಲ ಸಿದ್ಧತೆ ನಡೆಸಿ ಪರೀಕ್ಷೆಗಾಗಿ ಎಂಆರ್ಐ ಯಂತ್ರದ ಬಳಿ ಬಾಲಕನನ್ನು ಕರೆ ತಂದರು.
ಅಪ್ಪ-ಮಗಳು ಪ್ರವಾಹ ಗೆದ್ದು ಬಂದಿದ್ದೇ ರೋಚಕ; ತಮ್ಮ ಪ್ರಾಣದ ಜತೆ 4 ಜನರ ಜೀವ ಉಳಿಸಿದರು
ಅದುವರೆಗೆ ಸಾಮಾನ್ಯವಾಗಿದ್ದ ಬಾಲಕ ಎಂಆರ್ಐ ಯಂತ್ರ ನೋಡುತ್ತಲೇ ಭೀತಿಗೊಳಗಾದ. ಹೀಗಾಗಿ ಯಂತ್ರದ ಒಳಗೆ ಹೋಗಲು ನಿರಾಕರಿಸಿದ. ಬಾಲಕ ಭಯಗೊಂಡಿದ್ದಾನೆ ಎಂದು ಹಾಗೆ ಬಿಟ್ಟು ಬಿಡುವಂತಿರಲಿಲ್ಲ. ಆತನನ್ನು ಪರೀಕ್ಷೆಗೆ ಒಳಪಡಿಸಲೇಬೇಕಿತ್ತು. ಎಷ್ಟು ಮನವೊಲಿಸಿದರೂ ಬಾಲಕ ಎಂಆರ್ಐ ಸ್ಕ್ಯಾನಿಂಗ್ ಯಂತ್ರದ ಒಳಗೆ ಹೋಗಲು ಒಪ್ಪಲಿಲ್ಲ. ಕೊನೆಗೆ ಬಾಲಕನ ತಂದೆ ಉಪಾಯವೊಂದು ಮಾಡಿದರು. ಮಗನೊಂದಿಗೂ ತಾವೂ ಯಂತ್ರದೊಳಗೆ ಹೋಗಲು ನಿರ್ಧರಿಸಿದರು. ಇದರಿಂದ ಬಾಲಕನಿಗೆ ತುಸು ಸಮಾಧಾನವಾಯಿತು.
ಬಾಲಕನ ಕೈಕಾಲು ಬಿಗಿದು ಎಂಆರ್ಐ ಯಂತ್ರದಲ್ಲಿ ಮಲಗಿಸಲಾಯಿತು. ಕೂಡಲೇ ಬಾಲಕನ ಅಪ್ಪನೂ ಯಂತ್ರದೊಳಗೆ ಪ್ರವೇಶಿಸಿ, ಬಾಲಕನ್ನು ಬೆಚ್ಚಗೆ ತಬ್ಬಿ, ಕೈ ಹಿಡಿದುಕೊಂಡರು. ಹೀಗೆ ಇಬ್ಬರೂ ಯಂತ್ರದ ಒಳಗೆ ಹೋಗಿ ಯಶಸ್ವಿಯಾಗಿ ಪರೀಕ್ಷೆ ಮುಗಿಸಿ ಹೊರ ಬಂದರು. ಆಗ ತಂದೆಯ ಕಣ್ಣಲ್ಲಿ ಸಮಾಧಾನ ಕಾಣಿಸಿಕೊಂಡರೆ ಬಾಲಕನೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ. ಸದ್ಯ ಈ ಕ್ಷಣವನ್ನು ಸೆರೆ ಹಿಡಿದಿರುವ ವಿಡಿಯೊ ಗಮನ ಸೆಳೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೀಪ್ಯಾಡ್ ಫೋನ್ನಲ್ಲಿ ಮಗಳ ಡ್ಯಾನ್ಸ್ ಸೆರೆಹಿಡಿದ ತಂದೆಯ ಮುಗ್ಧತೆಗೆ ಮನಸೋತ ನೆಟ್ಟಿಗರು
ನೆಟ್ಟಿಗರು ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡು ಭಾವುಕರಾಗಿದ್ದಾರೆ. ʼʼತಂದೆಯ ಪ್ರೀತಿ ಎಂದರೆ ಇದುʼʼ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಕೆಲವರು ತಮ್ಮ ಜೀವನದಲ್ಲಾದ ಅನುಭವವನ್ನು ಈ ಘಟನೆಯೊಂದಿಗೆ ಹೋಲಿಸಿ ನೋಡಿದ್ದಾರೆ. ಅದಾಗ್ಯೂ ಹಲವರು ಇಂತಹ ಘಟನೆ ಅಪಾಯಕಾರಿಯಾಗಿದ್ದು, ಇದನ್ನು ಪ್ರೋತ್ಸಾಹಿಸಬಾರದು ಎಂದಿದ್ದಾರೆ. ಒಬ್ಬರಂತೂ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಧೈರ್ಯ ತುಂಬಿ. ಹೀಗೆ ಎಲ್ಲ ಕಡೆಗಳಲ್ಲಿ ಅವರ ಜತೆಗಿರಬೇಡಿ. ನಿಮ್ಮ ಪ್ರೀತಿ ಅರ್ಥವಾಗುತ್ತದೆ. ಆದರೆ ಪ್ರಾಕ್ಟಿಕಲ್ ಆಗಿ ಯೋಚಿಸಿ ಎಂದು ಕಾಳಜಿ ತೋರಿದ್ದಾರೆ.