ಬೆಂಗಳೂರು: ರಾಜ್ಯದ ಹಲವೆಡೆ ವರಣುನ ಅಬ್ಬರ ತಗ್ಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಇಂದು ಸಾಧಾರಣ ಮಳೆಯಾಗುವ (Karnataka Weather) ಮುನ್ಸೂಚನೆ ಇದೆ. ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿಯೂ ಜುಲೈ 13 ರಿಂದ 15ರ ಅವಧಿಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜುಲೈ 16 ಮತ್ತು 17ರ ಸುಮಾರಿಗೆ ಮತ್ತೆ ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ನಿರಂತರ ಮಳೆಯಾಗುವ ಪ್ರದೇಶಗಳಲ್ಲಿ ನದಿ ಹರಿವಿನ ಮಟ್ಟ ಗಮನಿಸಿಕೊಳ್ಳುವುದು ಹಾಗೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಈಗ ಭಾರಿ ಪ್ರಮಾಣದ ಒಳಹರಿವು ಆರಂಭವಾಗಿದೆ. ಜೂನ್ ತಿಂಗಳಲ್ಲಿ ಕೊಂಚ ಕೈಕೊಟ್ಟಿದ್ದ ಮಳೆಯು ಜುಲೈ ಆರಂಭದಲ್ಲಿ ಚುರುಕುಗೊಂಡಿದೆ. ನದಿ-ಜಲಾಶಯಗಳು ಮೈದುಂಬಿಕೊಳ್ಳುತ್ತಿವೆ. ಇದರ ಪರಿಣಾಮವಾಗಿ ಶಿವಮೊಗ್ಗ ತಾಲೂಕಿನ ಗಾಜನೂರು ಬಳಿಯ ತುಂಗಾ ಜಲಾಶಯವು ಪ್ರಸಕ್ತ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಭರ್ತಿಯಾಗಿದೆ.
ನವಿಲು ತೀರ್ಥ ಜಲಾಶಯದಲ್ಲಿ 12.100 ಟಿಎಂಸಿ ನೀರು ಸಂಗ್ರಹವಿದೆ. ಪ್ರಸ್ತುತ ಜಲಾಶಯಕ್ಕೆ 2,393 ಕ್ಯೂಸೆಕ್ ನೀರು ಬಂದು ಸೇರುತ್ತಿದ್ದರೆ, ಹೊರಹರಿವು ಕೇವಲ 194 ಕ್ಯೂಸೆಕ್ ಇದೆ. ಒಳಹರಿವು ಹೆಚ್ಚುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಕೆ.ಆರ್.ಸಾಗರ
ನೀರಿನ ಮಟ್ಟ : 91.20 ಅಡಿ.
ಒಳಹರಿವು : 12,503 ಕ್ಯೂಸೆಕ್
ಹೊರಹರಿವು : 807 ಕ್ಯೂಸೆಕ್
ಸಂಗ್ರಹ. : 16.665 ಟಿಎಂಸಿ
ತುಂಗಭದ್ರಾ ಜಲಾಶಯದ ನೀರಿನ ಮಟ್ಟ
ಡ್ಯಾಂನ ಸಾಮಾರ್ಥ್ಯ-105.788 ಟಿಎಂಸಿ
ಸದ್ಯದ ಸಾಮರ್ಥ್ಯ- 22.948 ಟಿಎಂಸಿ
ನೀರಿನ ಮಟ್ಟ-1633 ಅಡಿ
ಸದ್ಯದ ನೀರಿನ ಮಟ್ಟ- 1601.08 ಅಡಿ
ಕಬಿನಿ
ಇಲ್ಲಿ ಒಳಹರಿವು 14,574 ಕ್ಯೂಸೆಕ್ ಇದ್ದು, 9153 ಕ್ಯೂಸೆಕ್ ನೀರು ಸಂಗ್ರಹವಾಗಿದೆ.