ಹರ್ಷ ಹೆಗಡೆ ಕೊಂಡದಕುಳಿ
ನಾವೆಲ್ಲರೂ ಯೋಚಿಸುವುದಕ್ಕೆ ಸರ್ವಥಾ ಅರ್ಹರು. ಪ್ರಕೃತಿ ನಮಗೆ ನೀಡಿರುವ ಅತ್ಯಂತ ಸುಂದರ ವಾದ ವರಗಳಲ್ಲಿ ಯೋಚನಾ ಶಕ್ತಿಯೂ ಒಂದು. ಕೇವಲ ಒಂದು ಸಂಗತಿಯ ಕುರಿಯಾದ ಯೋಚನೆಯಲ್ಲ, ಯೋಚನೆಗಳ ಜಾಲವನ್ನೇ ನಾವು ಸೃಷ್ಟಿಸಬವು. ಅಷ್ಟು ಅದ್ಭುತವಾದ ಶಕ್ತಿಯನ್ನು ನಿಸರ್ಗ ನಮ್ಮ ಪಾಲಿಗೆ ದಯ ಪಾಲಿಸಿದೆ.
ಅಷ್ಟರ ಮಟ್ಟಿಗೆ ಭಾಗ್ಯವಂತರು ನಾವು. ಹೀಗೆ ಯೋಚನೆಗಳನ್ನು ಅಸ್ಖಲಿತವಾಗಿ ಮಾಡಿದ ಕಾರಣಕ್ಕಾಗಿಯೇ ನಾವೆ ಬುದ್ಧಿವಂತರು ಎನಿಸಿಕೊಂಡಿದ್ದು. ಅಥವಾ ಬೌದ್ಧಿಕ ಜಾಣ್ಮೆಯನ್ನು ಮೈಗೂಡಿಸಿಕೊಂಡಿದ್ದು. ಪರಿಣಾಮವಾಗಿ ಸೂರ್ಯನ ಗಾತ್ರವನ್ನೂ ಊಹಿಸಿದ್ದೇವೆ, ನಕ್ಷತ್ರಗಳ ರಚನೆಯನ್ನೂ ಅರಿತಿ ದ್ದೇವೆ. ಅಷ್ಟೇ ಏಕೆ ಬಾಹ್ಯಾಕಾಶದಲ್ಲಿಯೇ ಹಾರಾ ಡುತ್ತಾ ಬದುಕುವುದು ಹೇಗೆ ಎನ್ನುವುದನ್ನೂ ಅಧ್ಯಯನ ಮಾಡಿಯಾಗಿದೆ. ಇದೆಲ್ಲವೂ ಯೋಚನೆಯೊಂದು ಮೊದಲಿಗೆ ಮೊಳಕೆಯೊಡೆದ ಪರಿಣಾಮವೇ. ಅಯ್ಯೋ ಅದೆಲ್ಲ ಬಿಡಿ, ಭೂಮಿಯ ಮೇಲಣ ಸಾಗರದ ಮೊರೆತಕ್ಕೂ, ಚಂದ್ರನ ತಿರುಗುವ ಆವೇಗಕ್ಕೂ ಸಂಬಂಧವನ್ನೇ ಹುಡುಕಿದ್ದೇವೆ. ಉಳಿದಿದ್ದೇನು ಮಹಾ!
ಇದನ್ನೂ ಓದಿ: Prof R G Hegde Column: ಮಧ್ಯರಾತ್ರಿಯ ಮಕ್ಕಳ ಮಕ್ಕಳ ಮೊಮ್ಮಕ್ಕಳು !
ಅಂದರೆ ಈ ಯೋಚನೆಯ ಬಲದಿಂದಲೇ ನಾವು ನಾಗರಿಕತೆಯ ಮೆಟ್ಟಿಲುಗಳನ್ನು ಹತ್ತಿರು ವುದು, ಹತ್ತುತ್ತಿರುವುದು. ಅಬ್ಬೇಪಾರಿಯಾಗಿ ಅಂಡಲೆಯುತ್ತಿದ್ದ ಮನುಷ್ಯನೆಂಬ ಪ್ರಾಣಿಯಿಂದ ಮಾನವ ರಾಗಿ ಉನ್ನತಿ ಹೊಂದುವವರೆಗೆ ಸವೆಸಿದ ಹಾದಿಯೆಲ್ಲವೂ ಯೋಚನೆಯ ರಿಸಲ್ಟುಗಳೇ. ಕೃಷಿ ಮಾಡುವುದನ್ನು ಕಲಿತೆವು, ಆಹಾರ ಬೇಯಿಸಿಕೊಳ್ಳುವುದನ್ನು ಕರಗತ ಮಾಡಿಕೊಂಡೆವು. ನಗ- ನಾಣ್ಯ, ಒನಪು- ವಯ್ಯಾರ, ಕಲೆ- ಕಾವ್ಯ ಪ್ರತಿಯೊಂದನ್ನೂ ಕೂಡ ರೂಢಿಸಿಕೊಂಡೆವು.
ಮುಂದುವರಿದು ಇವತ್ತಿಗೆ ಯೋಚನೆ ಮಾಡುವುದಕ್ಕೆ ಅಂತಲೇ ಮತ್ತೊಂದು ಯಂತ್ರವನ್ನು ತಯಾರಿಸುವಷ್ಟರ ಮಟ್ಟಿಗೆ ಬಂದು ಮುಟ್ಟಿದ್ದೇವೆ. ಭೂಗೋಳದಿಂದ ಖಗೋಳದವರೆಗೆ ಆವಿಷ್ಕರಿಸಿದ ಎಲ್ಲದರ ಮೂಲಧಾತು- ಹೇತು ಒಂದು ಸಣ್ಣ ಯೋಚನೆಯ ಎಳೆಯೇ. ಒಮ್ಮೆ ಹೊರನಿಂತು ನೋಡಿದರೆ ಎಂತಹ ಅದ್ಭುತ! ಆದರೆ ಇಂಥದ್ದೊಂದು ವರ ಕೆಲವೊಮ್ಮೆ ಶಾಪ ವಾಗಿಯೂ ಪ್ರತಿಕೂಲತೆ ತೋರುತ್ತದಾ ಎಂಬ ಭಾವನೆ ಬರಿಸುವುದು ಸುಳ್ಳಲ್ಲ. ಅದರಲ್ಲೂ ಮಾನಸಿಕ ಪ್ರಪಂಚದ ಪರಿಧಿಯೊಳಗೆ ಇದು ಏಕ್ ದಂ ಶಾಪವಾಗಿಯೇ ಉಲ್ಟಾ ಹೊಡೆಯು ತ್ತಿದೆಯಾ ಎನಿಸುತ್ತದೆ.
ಮುಗಿಯದಷ್ಟು ವಿಷಯಗಳು, ತಳಕಾಣದ ರೀಲ್ಸ್ ಸ್ಕ್ರಾಲ್ಗಳು, ಒಪಿನಿಯನ್ನುಗಳು, ನೋಟಿ ಫಿಕೇಷನ್ನು ಗಳು, ಮತ್ತೆಂತದೋ ತರಹೇವಾರಿ ಸದ್ದಿನ ನಡುವೆ ನಮ್ಮ ತಲೆ ವಿರಾಮ ತೆಗೆದು ಕೊಳ್ಳುವುದನ್ನೇ ಮರೆತು ಬಿಟ್ಟಿದೆ. ಸದಾ ಒಂದಿಂದು ವಿಷಯ ಯೋಚಿಸುತ್ತಲೇ ಇರುವುದು ಮಾತ್ರ ಜೀವನ ಎನ್ನುವುದು ನಾರ್ಮಲ್ ಆಗಿಬಿಟ್ಟಿದೆ. ಈಗೊಂದು ನಾಲ್ಕಾರು ದಿನಗಳ ಕೆಳಗೆ, ಒಂದ್ಸಲ ಧ್ಯಾನ ಮಾಡಿ ನೋಡುವ ಮನಸ್ಸಾಯಿತು. ಒಂದು ಕೈ ನೋಡಿಯೇ ಬಿಡೋಣ ಎಂದು ಧ್ಯಾನಕ್ಕೆ ಕೂತೆ. ಮೂರೇ ಉಸಿರು. ಮುಂದೆ ನನ್ನ ಬಳಿ ಏಕಾಗ್ರತೆ ಸಾಧಿಸಲು ಸಾಧ್ಯವೇ ಆಗಲಿಲ್ಲ. ಆದರೆ ಹಿಡಿದ ಪಟ್ಟು ಬಿಡಲಿಲ್ಲ, ಮತ್ತೆ ಮರುದಿನಕ್ಕೆ ಒಂದೈದು ನಿಮಿಷದ ಹೊಯ್ದಾಟದ ಬಳಿಕ ಉಸಿರನ್ನು ಗಮನಿಸುವ ಹಂತಕ್ಕೆ ಬಂದೆ.
ಅಷ್ಟೇ, ಯೋಚನಾ ಪ್ರವಾಹಕ್ಕೆ ಬ್ರೇಕ್ ಎರಡೇ ದಿನಕ್ಕೆ ಮುಗಿಯಿತು. ಆದರೆ ಆ ಕೆಲವೇ ನಿಮಿಷಗಳ ಉಸಿರಿನ ಗಮನಿಸುವಿಕೆ ನನ್ನಂದು ವಿಚಿತ್ರ ನಿರ್ಲಿಪ್ತತೆಯನ್ನು ತಂದು ಹಾಕಿತ್ತು. ಆ ದಿನದ ಬೆಳಗು ಎಂದಿನಂತೆ ಸರಸರನೆ ಓಡಲೇ ಇಲ್ಲ. ಕೆಲಸದಲ್ಲಿ ಎಂದಿಗಿಂತ ತುಸು ಹೆಚ್ಚಿನ ತಾಳ್ಮೆಯನ್ನು ಸುರು ವಿತ್ತು. ಅಂದರೆ ನಮ್ಮ ಮೆದುಳಿಗೆ ಸಾವಕಾಶವಾಗಿ ನಿಂತು, ಒಂದರೆಹೊತ್ತು ವಿರಮಿಸುವುದು ಗೊತ್ತು. ಆದರೆ ನಾವೇ ಅದಕ್ಕೆ ಆಸ್ಪದ ಕೊಡುತ್ತಿಲ್ಲ.
ನಮ್ಮಲ್ಲಿ ಬಹಳಷ್ಟು ಆಲೋಚನೆಗಳಿವೆ. ಆದರೆ ಆ ಆಲೋಚನೆಗಳ ಮೇಲೆ ನನ್ನ ನಿಯಂತ್ರಣ ಎಷ್ಟು ಸಡಿಲವಾಗಿದೆ ಎನ್ನುವುದು ಮಾತ್ರ ಈಗ ಗೊತ್ತಾಗಿದ್ದಷ್ಟೇ. ನನ್ನ ಯೋಚನೆಗಳ ಉಗಿಬಂಡಿ ವಾಯುವೇಗದಲ್ಲಿ ಚಲಿಸುತ್ತಿರುತ್ತದೆ, ಆದರೆ ಯಾವುದೇ ನಿರ್ದಿಷ್ಟ ಗಮ್ಯ ವಿಲ್ಲದೇ- ಈ ಸತ್ಯ ತಿಳಿದದ್ದು ಮೊನ್ನೆ ಮೊನ್ನೆ ಮಾತ್ರ. ಆದರೆ ಅದನ್ನು ನಿಲ್ಲಿಸುವ ನಿಲ್ದಾಣ ಕಟ್ಟುವ ವಿಧಾನ ಮಾತ್ರ ಇನ್ನೂ ಸರಿಯಾಗಿ ಸ್ಪಷ್ಟವಾಗಿಲ್ಲ.
ಆಧುನಿಕ ಮನುಷ್ಯರಾಗಿ ನಾವು ವಿಚಲಿತರಾಗುವುದಕ್ಕೆ ಬಹಳಷ್ಟು ದಾರಿಗಳನ್ನು ಹೊಂದಿದ್ದೇವೆ. ಅದರಲ್ಲಿ ಡಾಕ್ಟರೇಟ್ ಪದವಿಯನ್ನೇ ಪಡೆದಿದ್ದೇವೆ. ಆದರೆ ಹಾಗೆ ವಿಚಲಿತರಾದಾಗ ಪುನಃ ಹಿಂದಕ್ಕೆ ಬರುವುದು ಹೇಗೆ ಎನ್ನುವುದರಲ್ಲಿ ಮಾತ್ರ ಇನ್ನೂ ಎಲ್.ಕೆ.ಜಿ. ಯನ್ನೂ ದಾಟಲಾಗಿಲ್ಲ. ಇಂಥ ಯೋಚನಾ ಲಹರಿಯನ್ನು ನಿಯಂತ್ರಿಸುವ ಕಲೆ ಸಿದ್ಧಿಸುವುದಕ್ಕೂ ಪುಣ್ಯ ಮಾಡಿರಬೇಕು. ಅದೇ ಯೋಚನೆ ಮಾಡಬವು ಎನ್ನುವುದಕ್ಕಿಂತ ಬಹುದೊಡ್ಡ ವರ. ಏನಂತೀರಿ?