SriRanjani Adiga Column: ಪ್ರೀತಿಯ ಹಲವು ಮುಖಗಳು
ದಿನವೆಲ್ಲಾ ಹತ್ತಾರು ಕಿ.ಮೀ. ನಗರವನ್ನೆಲ್ಲಾ ಸುತ್ತಾಡಿಯೂ ಸುಸ್ತಾಗದ ಅವರ ಜೀವನೋತ್ಸಾಹ ಅಚ್ಚರಿ ಹುಟ್ಟಿಸುವಂಥದ್ದು. ಅವರೊಂದಿಗಿನ ಮಾತುಕತೆ ವೈನೋದಿಕವಾಗಿದ್ದು ಬದುಕಿಗೆ ಆಹ್ಲಾದ ಕತೆ ಕೊಡು ವಂಥದ್ದು. ಕೇವಲ ಅವರ ಸ್ವರದಿಂದಲೇ ಮುಖಚಹರೆ ತಿಳಿಯುವಂಥ ಶಕ್ತಿ ಕೆಲ ಸಮಯದಲ್ಲಿ ಒಲಿ ಯುವುದು. ಒಬ್ಬಾತ ಸೊಪ್ಪೋ ಅನ್ನುವಾಗ ‘ಪ್ಪೋ’ವನ್ನು ದೀರ್ಘವಾಗಿ ಎಳೆಯುತ್ತಾನೆ ಹಾಗೂ ಯಾವತ್ತೂ ಸೈಲೆಂಟ್
ಶ್ರೀರಂಜನಿ ಅಡಿಗ
ತರಕಾರಿ ಮಾರುವವರೊಂದಿಗೆ ನಡೆಯುವ ಮಾತುಕತೆಯಲ್ಲಿ ಪ್ರೀತಿ ವಿಶ್ವಾಸದ ಸೆಲೆ ಹುದುಗಿರುತ್ತದೆ! ನೀವೂ ಒಮ್ಮೆ ಮಾತನಾಡಿಸಿ ನೋಡಿ.
ನಸುಕಿನ ಹೊತ್ತಿನಲ್ಲಿ ತರತರದ ದನಿಯಲ್ಲಿ ಕೂಗುತ್ತಾ ಮಲಗಿದ್ದವರನ್ನೆಲ್ಲಾ ಎಬ್ಬಿಸುವ ತರಕಾರಿ ಮಾರುವವರು ಬೆಂಗಳೂರಿನ ಜನರಿಗೆ ಒಂಥರಾ ಜಂಗಮ ಅಲಾರ್ಮ್. ಎಲ್ಲೋ ಬೆಳೆದ ತರಕಾರಿ, ಸೊಪ್ಪು ಇವರ ಮೂಲಕ ಮನೆಮನೆಯನ್ನು ತಲುಪಿ ಹೊಟ್ಟೆ ತಣಿಸುವ ಇವರ ಹೊಟ್ಟೆ ಯಾವತ್ತೂ ತಣ್ಣಗಿರಲಿ.
ದಿನವೆಲ್ಲಾ ಹತ್ತಾರು ಕಿ.ಮೀ. ನಗರವನ್ನೆಲ್ಲಾ ಸುತ್ತಾಡಿಯೂ ಸುಸ್ತಾಗದ ಅವರ ಜೀವನೋತ್ಸಾಹ ಅಚ್ಚರಿಹುಟ್ಟಿಸುವಂಥದ್ದು. ಅವರೊಂದಿಗಿನ ಮಾತುಕತೆ ವೈನೋದಿಕವಾಗಿದ್ದು ಬದುಕಿಗೆ ಆಹ್ಲಾದ ಕತೆ ಕೊಡುವಂಥದ್ದು. ಕೇವಲ ಅವರ ಸ್ವರದಿಂದಲೇ ಮುಖಚಹರೆ ತಿಳಿಯುವಂಥ ಶಕ್ತಿ ಕೆಲ ಸಮಯದಲ್ಲಿ ಒಲಿಯುವುದು. ಒಬ್ಬಾತ ಸೊಪ್ಪೋ ಅನ್ನುವಾಗ ‘ಪ್ಪೋ’ವನ್ನು ದೀರ್ಘವಾಗಿ ಎಳೆಯು ತ್ತಾನೆ ಹಾಗೂ ಯಾವತ್ತೂ ಸೈಲೆಂಟ್.
ಇದನ್ನೂ ಓದಿ: Keshava Prasad B Column: 4 ಲಕ್ಷದಿಂದಲೇ ಟ್ಯಾಕ್ಸ್ ಸ್ಲ್ಯಾಬ್ ಇರುವುದೇತಕ್ಕೆ ?!
ಅವನು ಕುಳ್ಳಗೆ ಹಾಗೂ ಮೈಮೇಲೆ ಟವೆಲನ್ನು ಧರಿಸಿರುತ್ತಾನೆ, ಇನ್ನೊಬ್ಬ ಇವನ ವಿರೋಧಪಕ್ಷ ದವನು. ಅವನಿಗೆ ಯಾವತ್ತೂ ಅವಸರ, ‘ಸೊಪ್ಪೊ ಸೊಪ್ಪೊ’ ಎನ್ನುತ್ತಾ ಸೈಕಲ್ಲೇರಿ ಹೋಗುತ್ತಿದ್ದರೆ ಶತಾಬ್ದಿ ಎಕ್ಸ್ಪ್ರೆಸ್ ಅನ್ನುವಂತಿರುತ್ತದೆ. ಅವನ ಸ್ವರ ಕೇಳಿ ದಡಬಡನೆ ಬಾಗಿಲ ಚಿಲಕ ತೆಗೆದು ಚಪ್ಪಲಿ ಮೆಟ್ಟಿ ಹೊರಗೆ ಹೋಗುವದರೊಳಗೆ ರಸ್ತೆಯ ಕೊನೆ ತಲುಪಿರುತ್ತಾನೆ.
ತಲೆಗೆ ರುಮಾಲು ಇಲ್ಲದೆ ಅವನನ್ನು ಕಂಡದ್ದೇ ಇಲ್ಲ. ಇನ್ನೊಬ್ಬಾಕೆ ಸೋ..ಪ್ಪೋ ಎನ್ನುವವಳು ಮಂದ್ರದನಿಯಲ್ಲಿ ಆಲಾಪ ಹಾಕುವಂತಿರುತ್ತದೆ.
ಹಬ್ಬದ ದಿನ ಸೊಪ್ಪು!
ಈ ವ್ಯಾಪಾರದ ರೀತಿ ಹೇಗಿದೆ ನೋಡಿ. ‘ಹತ್ತು ರೂಪಾಯಿಯ ಸೊಪ್ಪು ಕೊಡು’ ಅಂದರೆ ‘ನಾಳೆ ಹಬ್ಬ ಅವ್ವಾ, ಇಪ್ಪತ್ತು ರೂಪಾಯಿದ್ದು ತಕೋ. ಈಗ್ ತಾನೇ ಕನಕಪುರದಿಂದ ಕೊಯ್ಕೊಂಡ್ ಬಂದೀವ್ನಿ. ಫ್ರೆಶ್ ಐತೇ’ ಅನ್ನುತ್ತಾನೆ. ‘ನಾಳೆ ಯಾವ ಹಬ್ಬ?’ ಅಂದರೆ ‘ರಾಮನವಮಿ’ ಎನ್ನುತ್ತಾನೆ, ನಾಳೆ ಮಾತ್ರವಲ್ಲ ಅವನಿಗೆ ಮುನ್ನೂರೈವತ್ತು ದಿನಗಳೂ ‘ನಾಳೆ ಹಬ್ಬ’ ಎಂದೇ ಹೇಳುವನು.
ಕೆಲವೊಮ್ಮೆ ಸೊಪ್ಪು ಇದೆಯಾ ಅಂದರೆ ‘ನಾಳೆ ಹಬ್ಬ ಅಲ್ವರಾ? ಸೊಪ್ಪು ತಂದಿಲ್ಲ, ತರ್ಕಾರೀ ಹಾಕೀವ್ನಿ’ ಅಂತಾನೆ. ಹೀಗಿದೆ ಅವನ ಮಾತಿನ ವರಸೆ. ಇನ್ನೊಬ್ಬಾತನ ಬಳಿ ಒಮ್ಮೆ ಬಸಳೆಸೊಪ್ಪು ಕೊಂಡಿದ್ದೆ. ಅದನ್ನು ಮರೆಯದ ಅವನು ಬಸಳೆ ಸೊಪ್ಪು ತಂದಾಗೆಲ್ಲ ‘ಅಕ್ಕಾ ಬಸಳೆ ತಂದೀವ್ನಿ’ ಎಂದು ಮನೆಯೆದುರು ನಿಂತು ಕೂಗುತ್ತಾನೆ.
‘ಎರಡೇ ಕಟ್ಟು ತಂದಿದ್ದು ಅಕ್ಕೋರೇ, ಒಂದು ನಿಮ್ ಕಡೆ ಊರವ್ರು ತಗೊಂಡ್ರು. ಇನ್ನೊಂದು ನಿಮಗೆ’ ಎಂದಾಗ ನನಗೆ ಬೇಕಾಗದಿದ್ದರೂ ಕೊಳ್ಳಲೇಬೇಕು ಅನ್ನಿಸುತ್ತದೆ, ಕೊಂಡೇ ಕೊಳ್ಳುತ್ತಾರೆ ಎಂಬ ನಂಬಿಕೆಯಲ್ಲಿ ತಂದವನನ್ನು ಬರಿಗೈಯಲ್ಲಿ ಕಳಿಸಲು ಮನಸ್ಸಾಗುವುದಿಲ್ಲ. ಹೀಗೆ ತರಕಾರಿ ಗಾಡಿಯವ ಕೂಡಾ ಜೀಗುಜ್ಜೆ, ಸುವರ್ಣ ಗಡ್ಡೆ ತಂದಾಗೆಲ್ಲ ‘ನಿಮ್ ಕಡೆಯವರೆಲ್ಲ ತಗೊಂಡ್ರು. ಇಷ್ಟೇ ಉಳಿದಿರೋದು’ ಅನ್ನುವವನು ವ್ಯಾಪಾರ ಸೂತ್ರವನ್ನು ಬಲ್ಲ ಚತುರಗಾರನಂತೆ ಕಾಣು ತ್ತಾನೆ.
ತರಕಾರಿ ಅಂಗಡಿಗಳಲ್ಲಿ, ಸೂಪರ್ ಮಾರುಕಟ್ಟೆಗಳಲ್ಲಿ ಸಸ್ತಾ ದರ ಎಂದಿದ್ದರೂ ಅಲ್ಲಿ ಎಲ್ಲವೂ ವ್ಯಾವಹಾರಿಕ ವಾಗಿರುತ್ತದೆ. ನಮಗೆ ಯಾವ ತರಕಾರಿ ಬೇಕೋ ಆರಿಸಿ,ಬಿಲ್ ಕೌಂಟರಿನಲ್ಲಿ ಆನ್ ಲೈನ್ ದುಡ್ಡು ಕೊಟ್ಟ ಮುಗಿಯಿತು, ಮಾತಿಲ್ಲ, ಕತೆಯಿಲ್ಲ, ಅಷ್ಟೇ ಆ ಸಂಬಂಧ. ಆದರೆ ಈ ಬೀದಿ ವ್ಯಾಪಾರದ ಮಾತುಕತೆ ಚಿಕ್ಕದಾದರೂ ಅವು ಕೊಡುವ ಸಂತಸ, ಆಹ್ಲಾದ ಕತೆ ದಿನವಿಡೀ ಲವಲ ವಿಕೆಯಿಂದಿರುವಂತೆ ಮಾಡುತ್ತವೆ, ಚೌಕಾಸಿಗಾಗಿ ಜಗಳವೂ ನಡೆಯುವುದಿದೆ.
ಆದರೆ ಅದು ಆ ದಿನಕ್ಕೆ ಸೀಮಿತ. ವಯಸ್ಸಿನ ಭೇದಕಾಣದೆ ಎಲ್ಲರಿಗೂ ‘ಅಕ್ಕಾ, ಅವ್ವಾ, ತಾಯೇ’ ಎಂದರೆ ಅಪ್ಯಾಯಮಾನವೆನಿಸುವುದು.
ಬೆಳಗಿನ ಉತ್ಸಾಹದ ಬುಗ್ಗೆಗಳು
ಇದೇ ತರಹದ ಜೀವನೋತ್ಸಾಹ ರಸ್ತೆ ಗುಡಿಸುವ ಕಾರ್ಮಿಕರಲ್ಲೂ ಕಂಡಿದ್ದೇನೆ. ಸೂರ್ಯ ಇನ್ನೂ ತನ್ನ ಹೊದಿಕೆಯಲ್ಲಿರುವಂತೆಯೇ ಎದ್ದು ಕೆಲಸಕ್ಕಾಗಿ ಜಮಾವಣೆಗೊಳ್ಳುವಾಗಲೇ ಸ್ನಾನ ಮಾಡಿ, ತಲೆತುಂಬಾ ಕನಕಾಂಬರವನ್ನೋ, ಮಲ್ಲಿಗೆಯನ್ನೋ ಮುಡಿದು, ಕೈತುಂಬಾ ಬಳೆ ಧರಿಸಿ ಬರುವ ಅವರ ಉತ್ಸಾಹ ಅನುಕರಣೀಯ. ಬೆಳಗಿನ ವಾಕಿಂಗ್ ಮುಗಿಸಿ ಬರುವಾಗ ಎದುರಿಗೆ ಸಿಗುವ ಇವರಿಗೆ ‘ಗುಡ್ ಮಾನಿಂಗ್, ಆಯ್ತಾ ಕಾಫಿ?’ ಎಂದರೆ ಅದೇ ಒಂದೆರೆಡು ಮಾತುಕತೆಗೇ ಖುಷಿಯಿಂದ ಪ್ರತಿ ಕ್ರಿಯೆ ನೀಡುತ್ತಾರೆ. ಇವರ್ಯಾರೂ ನೆಂಟರಲ್ಲ, ಪರಿಚಯಸ್ಥರಲ್ಲ, ಸಂಬಂಧಿಕರಲ್ಲ. ಆದರೂ ಪ್ರತಿದಿನದ ಮುಖ ಚಹರೆಯ ಮೇಲೆ ಏನೋ ಒಂದು ಸ್ನೇಹದ ಬೇಸುಗೆ ಉದಯಿಸಿರುತ್ತದೆ. ಯಾವು ದೇ ಪದವಿ, ಹಣ ಕೊಡಲಾಗದ ಅನಿರ್ವಚನೀಯ ಸಂತಸವು ಇಂತಹ ಎರಡು ಪ್ರೀತಿಯ ಮಾತು ಗಳಿಂದ ಸಿಗುವುದು. ಅದು ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆಯಲ್ಲ ಅದೇ ಅಮೂಲ್ಯವಾದದ್ದು.
ನಾಟಿ ವೈದ್ಯೆ!
ತರಕಾರಿ ಮಾರುತ್ತಾ ಬರುವ ಒಬ್ಬಳಂತೂ ಪಕ್ಕಾ ನಾಟಿ ವೈದ್ಯಳೇ. ಪಕ್ಕದ ಮನೆಯಲ್ಲಿ ಮಗು ಮತ್ತು ಬಾಣಂತಿಯಿರುವದನ್ನು ಕಂಡು ‘ಬಾಣಂತಿಗೆ ಸಬ್ಬಸಿಗೆ ಸೊಪ್ಪು ತಿನ್ಸಕ್ಕಾ, ಎದೆಹಾಲು ಜಾಸ್ತಿ ಆಗೈತಿ. ಮೆಂತೆ ಸೊಪ್ಪು ತಿನ್ನಿಸಿ, ಬೆನ್ನುನೋವು ಇರಾಕಿಲ್ಲ’ ಎನ್ನುವವಳು. ಆವಾಗಾವಾಗ ಹೊನ ಗೊನೆ ಸೊಪ್ಪು,ಆಡುಸೋಗೆ ಸೊಪ್ಪು ತಂದು ಅವುಗಳ ಉಪಯೋಗ ತಿಳಿಸಿ ಮಾರಾಟ ಮಾಡುವ ಜಾಣತನ ಅವಳಲ್ಲಿದೆ.