ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೌಲ್ಯಗಳು ಮಾನವ ಬದುಕಿನ ಅಡಿಗಲ್ಲು

ಮೊಬೈಲ್ ಪರದೆಗಳ ಹಿಂದೆ ಮುಳುಗಿರುವ ನಾವು, ಪಕ್ಕದಲ್ಲಿರುವ ಮನುಷ್ಯನ ಭಾವನೆಗಳನ್ನು ಗಮನಿಸದೇ ಹೋಗುತ್ತಿರುವುದು ದುರಂತ. ಶಾಲೆಗಳು ಮತ್ತು ಕಾಲೇಜುಗಳು ಜ್ಞಾನ ನೀಡುವ ಕೇಂದ್ರ ಗಳಾಗಿವೆ. ಆದರೆ ಮೌಲ್ಯ ಶಿಕ್ಷಣಕ್ಕೆ ನೀಡುವ ಆದ್ಯತೆ ಕಡಿಮೆಯಾಗುತ್ತಿದೆ. ಅಂಕಗಳು, ರ‍್ಯಾಂಕ್, ಸ್ಪರ್ಧೆ- ಇವುಗಳ ನಡುವೆ ಮೌಲ್ಯಗಳು ಹಿಂಬದಿಗೆ ಸರಿಯುತ್ತಿವೆ. ಪರಿಣಾಮ ವಾಗಿ ವಿದ್ಯಾವಂತರು ಹೆಚ್ಚಾಗು ತ್ತಿದ್ದರೂ, ವಿವೇಕವಂತರು ಕಡಿಮೆಯಾಗುತ್ತಿದ್ದಾರೆ.

ಶಿವಯೋಗಿ ಎಂ.ವಿ., ರಾಂಪುರ

ಮಾನವ ಬದುಕನ್ನು ಅರ್ಥ ಪೂರ್ಣಗೊಳಿಸುವ ಶಕ್ತಿಯು ಮೌಲ್ಯಗಳಲ್ಲಿ ಅಡಗಿದೆ. ಆಸ್ತಿ-ಪಾಸ್ತಿ, ಪದವಿ-ಪ್ರಮಾಣಪತ್ರ, ಅಧಿಕಾರ- ಪ್ರಭಾವ ಇವೆಲ್ಲವೂ ಜೀವನಕ್ಕೆ ಅನುಕೂಲ ಒದಗಿಸಬಹುದು; ಆದರೆ ಮೌಲ್ಯಗಳಿಲ್ಲದ ಬದುಕು ಒಳಗಿನಿಂದ ಖಾಲಿಯಾಗಿರುತ್ತದೆ. ಸತ್ಯ, ನಿಷ್ಠೆ, ಸಹಾನುಭೂತಿ, ಶಿಸ್ತು, ಗೌರವ, ಕೃತಜ್ಞತೆ ಇಂಥ ಮೌಲ್ಯಗಳೇ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತವೆ.

ಒಂದು ಕಾಲದಲ್ಲಿ ಕುಟುಂಬವೇ ಮೌಲ್ಯಗಳ ಮೊದಲ ಪಾಠಶಾಲೆಯಾಗಿತ್ತು. ಹಿರಿಯರ ಮಾತು ಕೇಳುವುದು, ಅತಿಥಿಯನ್ನು ದೇವರಂತೆ ಕಾಣುವುದು, ನೆರೆಯವರ ನೋವಿಗೆ ಸ್ಪಂದಿಸುವುದು ಸಹಜ ವಾಗಿತ್ತು. ಇಂದು ಜೀವನಶೈಲಿ ಬದಲಾಗಿದೆ; ತಂತ್ರಜ್ಞಾನ ನಮ್ಮ ಬದುಕನ್ನು ಸುಲಭ ಗೊಳಿಸಿದರೂ, ಸಂಬಂಧಗಳಲ್ಲಿ ಅಂತರವನ್ನು ಹೆಚ್ಚಿಸಿದೆ.

ಮೊಬೈಲ್ ಪರದೆಗಳ ಹಿಂದೆ ಮುಳುಗಿರುವ ನಾವು, ಪಕ್ಕದಲ್ಲಿರುವ ಮನುಷ್ಯನ ಭಾವನೆಗಳನ್ನು ಗಮನಿಸದೇ ಹೋಗುತ್ತಿರುವುದು ದುರಂತ. ಶಾಲೆಗಳು ಮತ್ತು ಕಾಲೇಜುಗಳು ಜ್ಞಾನ ನೀಡುವ ಕೇಂದ್ರಗಳಾಗಿವೆ. ಆದರೆ ಮೌಲ್ಯ ಶಿಕ್ಷಣಕ್ಕೆ ನೀಡುವ ಆದ್ಯತೆ ಕಡಿಮೆಯಾಗುತ್ತಿದೆ. ಅಂಕಗಳು, ರ‍್ಯಾಂಕ್, ಸ್ಪರ್ಧೆ- ಇವುಗಳ ನಡುವೆ ಮೌಲ್ಯಗಳು ಹಿಂಬದಿಗೆ ಸರಿಯುತ್ತಿವೆ.

ಪರಿಣಾಮವಾಗಿ ವಿದ್ಯಾವಂತರು ಹೆಚ್ಚಾಗುತ್ತಿದ್ದರೂ, ವಿವೇಕವಂತರು ಕಡಿಮೆಯಾಗುತ್ತಿದ್ದಾರೆ. ಶಿಕ್ಷಣದ ಉದ್ದೇಶ ಕೇವಲ ಉದ್ಯೋಗವಲ್ಲ, ಅದು ಒಳ್ಳೆಯ ನಾಗರಿಕನನ್ನು ರೂಪಿಸುವುದಾಗಿರ ಬೇಕು. ಸಮಾಜದಲ್ಲಿ ನಡೆಯುತ್ತಿರುವ ಅನೇಕ ಅಸಮಂಜಸ ಘಟನೆಗಳನ್ನು ನೋಡಿದಾಗ ಮೌಲ್ಯಗಳ ಕೊರತೆ ಸ್ಪಷ್ಟ ವಾಗಿ ಗೋಚರಿಸುತ್ತದೆ.

ಇದನ್ನೂ ಓದಿ: Lakshmikanth L V Column: ಟೀಕೆಗಳಿಗಿಲ್ಲ ಆಯುಷ್ಯ, ಕೆಲಸಕ್ಕಿದೆ ಭವಿಷ್ಯ

ಸಾರ್ವಜನಿಕ ಆಸ್ತಿಗೆ ಹಾನಿ, ಮಹಿಳೆಯರ ಮೇಲಿನ ಅವಮಾನ, ಭ್ರಷ್ಟಾಚಾರ, ಅಸಹಿಷ್ಣುತೆ- ಇವೆಲ್ಲವೂ ನೈತಿಕ ಮೌಲ್ಯಗಳು ಕ್ಷೀಣಿಸುತ್ತಿರುವುದರ ಫಲ. ಕಾನೂನಿನ ಶಿಕ್ಷೆಯ ಭಯಕ್ಕಿಂತ ಮೌಲ್ಯಗಳ ಬೋಧನೆ ಹೆಚ್ಚು ಪರಿಣಾಮಕಾರಿ ಎಂಬುದನ್ನು ನಾವು ಮರೆಯಬಾರದು.

ಮೌಲ್ಯಗಳನ್ನು ಬೆಳೆಸುವುದು ದೊಡ್ಡ ಭಾಷಣಗಳಿಂದ ಸಾಧ್ಯವಿಲ್ಲ. ಅದು ನಮ್ಮ ದಿನನಿತ್ಯದ ನಡೆಗಳಲ್ಲಿ ಕಾಣಿಸಬೇಕು. ಸತ್ಯ ಹೇಳುವ ಧೈರ್ಯ, ತಪ್ಪು ಮಾಡಿದಾಗ ಒಪ್ಪಿಕೊಳ್ಳುವ ಪ್ರಾಮಾಣಿ ಕತೆ, ಬಲಹೀನರ ಬಗ್ಗೆ ಕಾಳಜಿ, ವಿಭಿನ್ನ ಅಭಿಪ್ರಾಯಗಳಿಗೆ ಗೌರವ- ಇವೇ ನಿಜವಾದ ಮೌಲ್ಯಗಳ ಪ್ರತಿಬಿಂಬ.

ಪೋಷಕರು ತಮ್ಮ ಮಕ್ಕಳಿಗೆ ಹೇಳುವುದಕ್ಕಿಂತ ತೋರಿಸುವ ಮೂಲಕ ಮೌಲ್ಯಗಳನ್ನು ಕಲಿಸಬೇಕು. ಮೌಲ್ಯಗಳಿಲ್ಲದ ಅಭಿವೃದ್ಧಿ ಅರ್ಥಹೀನ. ಆರ್ಥಿಕ ಪ್ರಗತಿಯ ಜತೆಗೆ ಮಾನವೀಯ ಮೌಲ್ಯಗಳು ಬೆಳೆಯದಿದ್ದರೆ ಸಮಾಜ ಅಸ್ಥಿರವಾಗುತ್ತದೆ. ಆದ್ದರಿಂದ, ಮೌಲ್ಯಗಳನ್ನು ಪಠ್ಯಪುಸ್ತಕಕ್ಕೆ ಸೀಮಿತ ಗೊಳಿಸದೆ ಬದುಕಿನ ಭಾಗವಾಗಿಸಬೇಕಿದೆ.

ವ್ಯಕ್ತಿಯಿಂದ ಆರಂಭವಾದ ಮೌಲ್ಯ ಯಾನವೇ ಕುಟುಂಬ, ಸಮಾಜ ಮತ್ತು ರಾಷ್ಟ್ರವನ್ನು ಬಲಿಷ್ಠ ಗೊಳಿಸುತ್ತದೆ. ಮೌಲ್ಯಗಳನ್ನು ಕಾಪಾಡಿಕೊಂಡು ನಡೆಯುವ ವ್ಯಕ್ತಿಯೇ ನಿಜವಾದ ಶ್ರೀಮಂತ. ಅಂಥ ವ್ಯಕ್ತಿಗಳಿಂದ ನಿರ್ಮಿತವಾದ ಸಮಾಜವೇ ನಿಜವಾದ ಪ್ರಗತಿಯ ದಾರಿ ಎಂಬುದನ್ನು ಮರೆಯದಿರೋಣ...