Dr N Someshwara Column: ಸಾರ್ವಜನಿಕ ನೈರ್ಮಲ್ಯಕ್ಕೆ ಭಾಷ್ಯ ಬರೆದ ಬ್ರಾಡ್ ಸ್ಟ್ರೀಟ್ ಪಂಪ್
ಲಂಡನ್ ನಗರದ ಸೋಹೋ ಬಡಾವಣೆ. ಆ ಬಡಾವಣೆಯಲ್ಲಿ ಬ್ರಾಡ್ಸ್ಟ್ರೀಟ್ (ಈಗ ಬ್ರಾಡ್ವಿಕ್ ಸ್ಟ್ರೀಟ್) ಎಂಬ ರಸ್ತೆ. ಅಲ್ಲಿತ್ತು ಒಂದು ಕೈಪಂಪ್. ಆ ಪಂಪಿನ ಕೈಹಿಡಿ ಅಥವಾ ಹ್ಯಾಂಡಲ್, ಲಂಡನ್ ನಗರದ ಆರೋಗ್ಯವನ್ನು ಸುಧಾರಿಸುವುದರಲ್ಲಿ ಮಾತ್ರವಲ್ಲ, ಇಡೀ ಆಧುನಿಕ ಪಿಡುಗು ವಿಜ್ಞಾನದ (ಎಪಿಡೆಮಿಯಾಲಜಿ) ಗತಿಯನ್ನು ಬದಲಿಸುವಲ್ಲಿ ಒಂದು ಮಹಾಪಾತ್ರವನ್ನು ವಹಿಸಿತು.


ಹಿಂದಿರುಗಿ ನೋಡಿದಾಗ
1854. ಲಂಡನ್ ನಗರ. ಕೊಳಕಿನ ಮಹಾಸ್ವರ್ಗ. ಸಾವಿನ ತಾಯಿಬೇರು. ಲಂಡನ್ ನಗರವು ಜನಸಂದಣಿಯಿಂದ ಕಿಕ್ಕಿರಿದಿತ್ತು. ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯು ವ್ಯವಸ್ಥೆಯ ಆಗರವಾಗಿತ್ತು. ಸೋಂಕುರೋಗಗಳ ಮಹಾ ಅಲೆಗಳು ನಿಯತವಾಗಿ ಲಂಡನ್ ನಗರವನ್ನು ಅಪ್ಪಳಿಸುತ್ತಿದ್ದವು. ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಒಳಚರಂಡಿ ವ್ಯವಸ್ಥೆಯು ಲಂಡನ್ನಿನ ಹೊರವಲಯದಲ್ಲಿ ಸುಮಾರಾಗಿದ್ದರೂ, ಹೊರವಲಯಗಳಲ್ಲಿ ಅಧ್ವಾನದ ಸ್ಥಿತಿಯಲ್ಲಿ ದ್ದವು. ಇವುಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಚಾರ್ಲ್ಸ್ ಡಿಕನ್ಸ್ ತನ್ನ ‘ಅಲಿವರ್ ಟ್ವಿಸ್ಟ್’ ಕಾದಂಬರಿಯಲ್ಲಿ “ಕಿರಿದಾದ ಓಣಿಗಳು ಮತ್ತು ಕಾಲುದಾರಿಯ ಚಕ್ರವ್ಯೂಹಗಳ ನಡುವೆ ಸಾಗುತ್ತೇವೆ.
ಅತ್ಯಂತ ತೇವಾಂಶದಿಂದ ತುಂಬಿದ್ದ ಆ ಸ್ಥಳಗಳು ಕೊಳೆತು ನಾರುತ್ತಿದ್ದವು. ಪ್ರತಿ ಮನೆಯ ನೆಲಮಾಳಿಗೆಯಲ್ಲಿ ಸತ್ತ ಇಲಿಗಳು ಕೊಳೆತು ನಾರುತ್ತಿದ್ದವು. ಮನೆಯ ಹಿಂದುಗಡೆಯೂ ತ್ಯಾಜ್ಯ ನೀರು ಮಡುಗಟ್ಟಿತ್ತು. ರಸ್ತೆಯಲ್ಲಿ ಕಸದ ತೊಟ್ಟಿಗಳು ತುಂಬಿ ತುಳುಕುತ್ತಿದ್ದವು.
ನೈರ್ಮಲ್ಯವೆನ್ನುವುದು ಅಲ್ಲಿ ಲವಲೇಶವೂ ಇರಲಿಲ್ಲ" ಎನ್ನುತ್ತಾನೆ. ಈ ಕೊಳಚೆಯ ಬೀದಿ ಗಳಲ್ಲಿಯೇ ದನಗಳ ಹಾಗೂ ಕುದುರೆಗಳ ಲಾಯಗಳಿದ್ದವು. ಅವು ದಾರಿಯುದ್ದಕ್ಕೂ ಸಗಣಿಯನ್ನು ಹಾಕಿಕೊಂಡೇ ಹೋಗುತ್ತಿದ್ದವು. ಕಸಾಯಿಖಾನೆಗಳು ಸಾಕಷ್ಟು ಇದ್ದವು. ಅವೂ ತಮ್ಮ ತಾಜ್ಯವನ್ನು ಅಂಗಡಿಯ ಮುಂದೆ ಇದ್ದ ಕೊಳಚೆಯ ಗುಂಡಿಯಲ್ಲಿ ಸೇರಿಸುತ್ತಿದ್ದವು.
ಇದನ್ನೂ ಓದಿ: Dr N Someshwara Column: ಬದುಕಿರುವವರನ್ನು ಝೂಂಬಿಗಳನ್ನಾಗಿಸುವ ಡೆವಿಲ್ಸ್ ಬ್ರೆತ್ !
ಲಂಡನ್ ನಗರದ ಸೋಹೋ ಬಡಾವಣೆ. ಆ ಬಡಾವಣೆಯಲ್ಲಿ ಬ್ರಾಡ್ಸ್ಟ್ರೀಟ್ (ಈಗ ಬ್ರಾಡ್ವಿಕ್ ಸ್ಟ್ರೀಟ್) ಎಂಬ ರಸ್ತೆ. ಅಲ್ಲಿತ್ತು ಒಂದು ಕೈಪಂಪ್. ಆ ಪಂಪಿನ ಕೈಹಿಡಿ ಅಥವಾ ಹ್ಯಾಂಡಲ್, ಲಂಡನ್ ನಗರದ ಆರೋಗ್ಯವನ್ನು ಸುಧಾರಿಸುವುದರಲ್ಲಿ ಮಾತ್ರವಲ್ಲ, ಇಡೀ ಆಧುನಿಕ ಪಿಡುಗು ವಿಜ್ಞಾನದ (ಎಪಿಡೆಮಿಯಾಲಜಿ) ಗತಿಯನ್ನು ಬದಲಿಸುವಲ್ಲಿ ಒಂದು ಮಹಾಪಾತ್ರವನ್ನು ವಹಿಸಿತು.
ಇದರ ಹಿಂದೆ ಇದ್ದವನು ಪ್ರಾತಃಸ್ಮರಣೀಯ ಜಾನ್ ಸ್ನೋ (1813-1858) ಎಂಬ ವೈದ್ಯ. ಜಾನ್ ಸ್ನೋ, ಸಮಕಾಲೀನ ವೈದ್ಯಕೀಯ ಪರಿಕಲ್ಪನೆಗಳನ್ನು ಧೈರ್ಯವಾಗಿ ಪ್ರಶ್ನಿಸಿದ್ದಲ್ಲದೆ, ತನ್ನ ಸಿದ್ಧಾಂತಗಳ ಮೇಲೆ ನಂಬಿಕೆಯನ್ನಿಟ್ಟು, ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದ. ಒಂದು ಹೊಸ ಕ್ರಾಂತಿಯನ್ನೇ ಉಂಟುಮಾಡಿದ.
ಮಿಯಾಸ್ಮ: ಅನಾದಿ ಕಾಲದಿಂದಲೂ ರೋಗಗಳು ಏಕೆ ಬರುತ್ತವೆ ಹಾಗೂ ಹೇಗೆ ಬರುತ್ತವೆ ಎನ್ನುವುದರ ಬಗ್ಗೆ ನಮ್ಮ ಪೂರ್ವಜರಲ್ಲಿ ಅಪಾರ ಗೊಂದಲಗಳಿದ್ದವು. ದೈವವು ಕೋಪಗೊಂಡಾಗ ಇಲ್ಲವೇ ದೆವ್ವವು ತನ್ನ ದುಷ್ಟತನವನ್ನು ತೋರಿದಾಗ, ಕಾಯಿಲೆಗಳು ಬರುತ್ತವೆ ಎಂದು ನಂಬಿದ್ದರು. ಪೂರ್ವಜನ್ಮದ ಕರ್ಮಗಳಿಂದ ಕಾಯಿಲೆಗಳು ಬರುತ್ತವೆ ಎಂಬ ನಂಬಿಕೆಯೂ ಧಾರಾಳವಾಗಿತ್ತು.

ಜಾನ್ ಸ್ನೋ ವಾಸವಾಗಿದ್ದ ದಿನಗಳಲ್ಲಿ ಕಾಯಿಲೆಗಳು ಬರಲು ‘ಮಿಯಾಸ್ಮ’ ಕಾರಣ ಎಂದು ಭಾವಿಸಿದ್ದರು. ಮಿಯಾಸ್ಮ ಎಂದರೆ ಕೆಟ್ಟಗಾಳಿ. ಲಂಡನ್ ನಗರದ ಕೊಳಚೆಯ ಮೇಲಿಂದ ಹಾದುಬರುವ ದುರ್ವಾಸನೆಯ ಗಾಳಿಯು ರೋಗಗಳನ್ನು ಹರಡುತ್ತವೆ ಎಂಬ ನಂಬಿಕೆ ಅಂದಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿತ್ತು. ಈ ಕೊಳಚೆಯಿಂದ ಕೆಟ್ಟಗಾಳಿ ‘ಮಿಯಾಸ್ಮ’ ಹುಟ್ಟುತ್ತದೆ, ಆ ಮಿಯಾಸ್ಮದಲ್ಲಿ ‘ಮಿಯಾಸ್ಮಾಟ’ ಎಂಬ ಕಣ್ಣಿಗೆ ಕಾಣದ ಕಣಗಳಿರುತ್ತವೆ.
ಅವು ನಮ್ಮ ಉಸಿರಿನ ಮೂಲಕ ದೇಹವನ್ನು ಪ್ರವೇಶಿಸಿ, ಕಾಯಿಲೆಗಳನ್ನು ಉಂಟುಮಾಡುತ್ತವೆ ಎನ್ನುವುದು ಅವರ ಅನಿಸಿಕೆಯ ಸಾರಾಂಶ. ಈಗಾಗಲೇ 1832ರಲ್ಲಿ ಮತ್ತು 1849ರಲ್ಲಿ ಕಾಲರಾ ಪಿಡುಗು ಕಾಣಿಸಿಕೊಂಡು 14,137 ಜನರು ಮರಣಿಸಿದ್ದರು.
ಬ್ರಾಡ್ ಸ್ಟ್ರೀಟ್: ಜಾನ್ ಸ್ನೋ, ಲಂಡನ್ ವೈದ್ಯಕೀಯ ವಿದ್ಯಾಲಯದಲ್ಲಿ ಪದವಿಯನ್ನು ಪಡೆದಿದ್ದ. ಆಧುನಿಕ ಸಂಶೋಧನೆಗಳನ್ನು ಅಧ್ಯಯನ ಮಾಡಿದ್ದ. ಅವನ್ನು ತನ್ನ ವೈದ್ಯಕೀಯ ವೃತ್ತಿಯಲ್ಲಿ ಬಳಸಿಕೊಳ್ಳಲು ಸದಾ ಸಿದ್ಧವಾಗಿದ್ದ. ಅವನ ಕಾಲಕ್ಕೆ ಹೊಸದಾಗಿ ಬಂದಿದ್ದ ಈಥರ್ ಅರಿವಳಿಕೆ ಯನ್ನು ಅಧ್ಯಯನ ಮಾಡಿದ್ದ. ರಾಣಿ ವಿಕ್ಟೋರಿಯ ಪ್ರಸವದಲ್ಲಿ ಅರಿವಳಿಕೆಯನ್ನು ನೀಡಿ, ನೋವಿಲ್ಲದೆ ಪ್ರಸವವನ್ನು ಮಾಡಿಸುವುದಕ್ಕೆ ಲಂಡನ್ನಿನಲ್ಲಿ ಪ್ರಸಿದ್ಧನಾಗಿದ್ದ. ಹಾಗಾಗಿ ಆಧುನಿಕ ಮನೋಭಾವದ ಜಾನ್ ಸ್ನೋ ಮಿಯಾಸ್ಮ ಸಿದ್ಧಾಂತವನ್ನು ಒಪ್ಪಲಿಲ್ಲ.
ಅವನು ಈ ಹಿಂದಿನ ಕಾಲರಾ ಪಿಡುಗುಗಳನ್ನು ಅಧ್ಯಯನ ಮಾಡಿದ್ದ. ನಮ್ಮ ಬರಿಗಣ್ಣಿಗೆ ಕಾಣದ ಯಾವುದೋ ಒಂದು ವಸ್ತು ಕಾಲರಾಕ್ಕೆ ಕಾರಣವಾಗಿರಬಹುದು ಎಂದು ನಂಬಿದ್ದ. ಹಾಗಾಗಿ ಈ ಬಗ್ಗೆ ಆಳವಾದ ಚಿಂತನೆಯನ್ನು ನಡೆಸಿದ್ದ. ಆಗಸ್ಟ್ 31, 1854. ಲಂಡನ್ ನಗರದ ಹಲವು ಕಡೆಗಳಲ್ಲಿ ಕಾಲರಾ ಕಾಣಿಸಿಕೊಂಡಿತ್ತು. ಸೋಹೋ ಪ್ರಾಂತದ ಬ್ರಾಡ್ ಸ್ಟ್ರೀಟ್ನಲ್ಲಿ ಒಮ್ಮೆಲೇ ಕಾಲರಾ ಉಗ್ರ ಸ್ವರೂಪದಲ್ಲಿ ಹರಡಿತು.
ಮೂರು ದಿನಗಳಲ್ಲಿ 127 ಜನರು ಸತ್ತರು. 1ನೆಯ ಸೆಪ್ಟೆಂಬರ್ ಹೊತ್ತಿಗೆ 5 ಜನರು ಬಲಿಯಾಗಿದ್ದರು. ಕಾಲರಾ ಪೀಡಿತರನ್ನೆಲ್ಲ ನೇರವಾಗಿ ಮಿಡ್ಲ್ ಸೆಕ್ಸ್ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಸ್ವಯಂ ಫ್ರಾರೆನ್ಸ್ ನೈಂಟಿಂಗೇಲ್ (1820-1910) ಅವರ ಉಸ್ತುವಾರಿಯನ್ನು ವಹಿಸಿದಳು. ಬಡರೋಗಿಗಳ ಉಡುಪನ್ನು ಕಳಚಿ, ಅವರ ಮೈಯನ್ನು ಟರ್ಪೆಂಟೈನ್ನಿಂದ ಒರೆಸಿ, ಆಸ್ಪತ್ರೆಯ ಉಡುಪನ್ನು ನೀಡಿ ಅವರ ಯೋಗಕ್ಷೇಮವನ್ನು ವಹಿಸಿದಳು. ಹಗಲು-ರಾತ್ರಿಯನ್ನದೆ ಅವರ ಯೋಗಕ್ಷೇಮವನ್ನು ಹೊತ್ತು ಕೊಂಡಳು. ಆದರೆ ಆಕೆಯ ಶುಶ್ರೂಷೆಯು ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲಿಲ್ಲ.
ತರ್ಕ: ದಿನೇ ದಿನೆ ಸಾವಿನ ಸಂಖ್ಯೆಯು ಅಧಿಕವಾಗುತ್ತಿರುವಂತೆಯೇ ಎಲ್ಲರೂ ಕಂಗಾಲಾದರು. ಅಂದರೆ ಪ್ರತಿ 1000 ಜನರಲ್ಲಿ 12.8 ಜನರು ಸತ್ತಿದ್ದರು. ಬ್ರಾಡ್ಸ್ಟ್ರೀಟಿನಲ್ಲಿ ಯಾಕೆ ಇಷ್ಟೊಂದು ಸಾವಿನ ಪ್ರಮಾಣವು ಸಂಭವಿಸುತ್ತದೆ ಎನ್ನುವುದು ಯಾರಿಗೂ ಅರ್ಥವಾಗಲಿಲ್ಲ. ಜಾನ್ ಸ್ನೋ, ತನ್ನದೇ ಆದ ಚಿಂತನ ಮಂಥನದಲ್ಲಿ ತೊಡಗಿದ್ದ. ಅವೆಂದರೆ:
? ಕಾಲರಾ ಕಾಯಿಲೆಯ ಮುಖ್ಯ ಲಕ್ಷಣ ವಾಂತಿ ಮತ್ತು ಬೇಧಿ.
? ಅಂದರೆ ಇದು ಕರುಳಿಗೆ ಸಂಬಂಧಿಸಿದ ರೋಗ.
? ಕಾಲರಾಕ್ಕೆ ಕಾರಣವಾಗಿರುವ ವಸ್ತುವು ಕರುಳನ್ನು ಪ್ರವೇಶಿಸಬೇಕಾದರೆ, ಅದಕ್ಕೆ ಲಭ್ಯವಿರುವ ಏಕೈಕ ಮಾರ್ಗ ಬಾಯಿ.
? ಬಾಯಿಯ ಮೂಲಕ ನಾವು ಸೇವಿಸುವ ಆಹಾರ ಮತ್ತು ನೀರು, ಕಾಲರಾಕ್ಕೆ ಕಾರಣವಾಗಿರಬೇಕು. ಆಹಾರ ಅಥವಾ ನೀರಿನ ಮೂಲಕ ಕಾಲರಾಕಾರಕವು ಕರುಳನ್ನು ಸೇರಿರಬೇಕು.
ಜಾನ್ ಸ್ನೋ, ತನ್ನ ಸಿದ್ಧಾಂತದ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಸಕಾಲ ಬಂದಿದೆ ಎಂದು ಭಾವಿಸಿದ. ಒಂದು ನೋಟ್ ಪುಸ್ತಕವನ್ನು ಹಿಡಿದುಕೊಂಡ. ಕಾಲರಾ ಸಾವು ಸಂಭವಿಸಿದ ಪ್ರತಿಯೊಂದು ಮನೆಯನ್ನೂ ಸಂದರ್ಶಿಸಿದ. ಅವರ ಮನೆಯಲ್ಲಿ ಸಂಭವಿಸಿದ್ದ ಸಾವಿನ ವಿವರ ಗಳನ್ನು ಸಂಗ್ರಹಿಸಿದ. ಕೊನೆಗೆ ಲಂಡನ್ ನಗರದ ನಕ್ಷೆಯನ್ನು ತೆಗೆದುಕೊಂಡ. ಸಾವು ಸಂಭವಿಸಿದ ಮನೆಗಳನ್ನೆಲ್ಲ ಗುರುತು ಹಾಕಿದ. ಆಗ ಅವನಿಗೆ ಅತ್ಯಂತ ಹೆಚ್ಚಿನ ಪ್ರಮಾಣದ ಸಾವು-ನೋವು ಬ್ರಾಡ್ ಸ್ಟ್ರೀಟಿನಲ್ಲಿ ಸಂಭವಿಸಿರುವುದು ತಿಳಿಯಿತು.
ಹಾಗಾಗಿ, ತನ್ನ ಅಧ್ಯಯನವನ್ನು ಬ್ರಾಡ್ ಸ್ಟ್ರೀಟ್ನಿಂದಲೇ ಆರಂಭಿಸುವುದು ಸೂಕ್ತ ಎಂದು ಭಾವಿಸಿದ. ಜಾನ್ ಸ್ನೋ ರಚಿಸಿದ ಆ ಸಾವಿನ ನಕ್ಷೆಯು ಕಾಲರಾ ಪಿಡುಗನ್ನು ಮೆಟ್ಟುವಲ್ಲಿ ನೆರವು ನೀಡಿತು ಎಂದರೆ ನಂಬುವುದು ಕಷ್ಟ. ಕಾಲರಾ ಸಾವಿನಿಂದ ಸತ್ತವರ ಮನೆಯವರು ಕುಡಿಯಲು ನೀರನ್ನು ಎಲ್ಲಿಂದ ತಂದರು ಎಂದು ಮಾಹಿತಿ ಸಂಗ್ರಹಿಸಿದ. ಅವರೆಲ್ಲರೂ ಬ್ರಾಡ್ ಸ್ಟ್ರೀಟಿನಲ್ಲಿರುವ ಕೈಪಂಪಿನಿಂದಲೇ ನೀರನ್ನು ತಂದು ಕುಡಿಯಲು ಬಳಸಿದ್ದರು.
ಹಾಗಾಗಿ ಕಾಲರಾ ಪಿಡುಗಿಗೆ ಕಾರಣ, ಬಹುಶಃ ಆ ನೀರಿನ ಪಂಪಿನಲ್ಲಿಯೇ ಇದೆ ಎಂದು ತರ್ಕಿಸಿದ. ಅಕ್ಕಪಕ್ಕದ ರಸ್ತೆಯಲ್ಲಿದ್ದ ಜನರು, ಬೇರೆ ಕೈಪಂಪಿನಿಂದ ನೀರನ್ನು ಪಡೆದು ಕುಡಿದಿದ್ದರು. ಅವರಿಗ್ಯಾ ರಿಗೂ ಕಾಲರಾ ಬಂದಿರಲಿಲ್ಲ. ಒಂದು ಪ್ರಕರಣವು ಜಾನ್ ಸ್ನೋವಿನ ಗಮನವನ್ನು ವಿಶೇಷವಾಗಿ ಸೆಳೆಯಿತು. ಬ್ರಾಡ್ ಸ್ಟ್ರೀಟ್ನಿಂದ ಹಲವು ಮೈಲಿಗಳ ದೂರದಲ್ಲಿ ಓರ್ವ ಶ್ರೀಮಂತೆಯಿದ್ದಳು.
ಆಕೆಗೆ ಬ್ರಾಡ್ ಸ್ಟ್ರೀಟ್ ಪಂಪಿನ ನೀರು ಅಂದರೆ ತುಂಬಾ ಇಷ್ಟ. ಅದು ಹೆಚ್ಚು ರುಚಿಕರವಾಗಿದೆ ಎನ್ನುವುದು ಆಕೆಯ ನಿಲುವು. ಹಾಗಾಗಿ ತನ್ನ ಮನೆಯಾಳನ್ನು ಪ್ರತಿದಿನ ಕಳುಹಿಸಿ ಬ್ರಾಡ್ ಸ್ಟ್ರೀಟ್ ಪಂಪಿನ ನೀರನ್ನು ತರಿಸಿಕೊಳ್ಳುತ್ತಿದ್ದಳು. ಹಾಗೆಯೇ ಕಾಲರಾ ಪಿಡುಗಿನ ಸಮಯದಲ್ಲಿಯೂ ತರಿಸಿಕೊಂಡಿದ್ದಳು. ಆ ನೀರನ್ನು ಕುಡಿದ ಶ್ರೀಮಂತೆ, ಆಕೆಯ ಮನೆಯಾಳು ಹಾಗೂ ಮನೆಗೆ ಬಂದಿದ್ದ ಇಬ್ಬರು ನೆಂಟರು- ಎಲ್ಲರೂ ಕಾಲರಾದಿಂದ ಸತ್ತರು.
ಇದನ್ನು ಕೇಳಿದ ಮೇಲೆ, ಜಾನ್ ಸ್ನೋ, ಕಾಲರಾ ಸಮಸ್ಯೆಗೆ ಕಾರಣವು ಈ ಕೈಪಂಪಿನಲ್ಲಿಯೇ ಇದೆ ಎಂದು ತೀರ್ಮಾನಿಸಿದ. ಬ್ರಾಡ್ ಸ್ಟ್ರೀಟ್ ಕಾಲರಾ ಪಿಡುಗಿಗೆ ಕೈಪಂಪಿನ ನೀರೇ ಕಾರಣವಾಗಿರ ಬಹುದು ಎನ್ನುವುದಕ್ಕೆ ಮತ್ತೊಂದು ಪುರಾವೆಯು ಜಾನ್ ಸ್ನೋಗೆ ದೊರೆಯಿತು.
ಬ್ರಾಡ್ ಸ್ಟ್ರೀಟ್ ಅಂಚಿನಲ್ಲಿ ಒಂದು ಮದ್ಯ ತಯಾರಿಕಾ ಘಟಕವಿತ್ತು. ಅಲ್ಲಿ ಬ್ರಾಡ್ ಸ್ಟ್ರೀಟಿನಲ್ಲಿ ವಾಸಿಸುತ್ತಿದ್ದ ಹಲವರು ಕೆಲಸವನ್ನು ಮಾಡುತ್ತಿದ್ದರು. ಇವರಿಗೆ ಅರ್ಧ ಸಂಬಳವು ಬಿಯರಿನ ರೂಪದಲ್ಲಿ ದೊರೆಯುತ್ತಿತ್ತು. ಹಾಗಾಗಿ ಅವರು ನೀರಿನ ಬದಲು ಬಿಯರನ್ನೇ ಕುಡಿಯುತ್ತಿದ್ದರು. ಹಾಗಾಗಿ ಇವರಲ್ಲಿ ಯಾರಿಗೂ ಕಾಲರಾ ಬರಲಿಲ್ಲ. ಬಿಯರ್ ತಯಾರಿಕೆಯಲ್ಲಿ ನೀರನ್ನು ಮೊದಲು ಕುದಿಸುತ್ತಿದ್ದ ಕಾರಣ, ಬಹುಶಃ ಕಾಲರಾಕ್ಕೆ ಕಾರಣವಾಗಿರಬಹುದಾದ, ಕಾಲರಾಕಾರಕವು ನಾಶವಾಗಿರಬಹುದು ಎನ್ನುವುದೂ ಅವನ ತರ್ಕವಾಗಿತ್ತು.
ಹ್ಯಾಂಡಲ್: ಜಾನ್ ಸ್ನೋ, ತನ್ನ ಸಿದ್ಧಾಂತದ ಜತೆಯಲ್ಲಿ ಪುರಪಿತೃಗಳ ಬಳಿಗೆ ಹೋದ. ಆ ಪಂಪಿನಿಂದ ಬರುವ ನೀರೇ ಕಾಲರಾಕ್ಕೆ ಕಾರಣವೆಂದು ತನ್ನ ಸಿದ್ಧಾಂತವನ್ನು ಮಂಡಿಸಿದ. ಆದರೆ ಅವರಲ್ಲಿ ಯಾರಿಗೂ ಆತನ ಮಾತಿನ ಮೇಲೆ ನಂಬಿಕೆಯು ಬರಲಿಲ್ಲ. ಆದರೆ ಪುರಪಿತೃಗಳಿಗೆ ಬೇರೆ ದಾರಿಯಿರಲಿಲ್ಲ. ಈಗಾಗಲೇ 616 ಜನರು ಸತ್ತಿದ್ದರು.
ಹಾಗಾಗಿ ಜಾನ್ ಸ್ನೋ ಹೇಳುವ ಮಾತನ್ನು ಪರಿಪಾಲಿಸದೇ ಅವರಿಗೆ ಬೇರೆ ದಾರಿಯಿರಲಿಲ್ಲ. ಜಾನ್ ಸ್ನೋ ಒಂದು ಸರಳ ಪರಿಹಾರವನ್ನು ಸೂಚಿಸಿದ. ಕೈಪಂಪಿಗೆ ಹಿಡಿ ಇದ್ದರೆ ತಾನೇ ಅವರು ನೀರನ್ನು ಪಂಪ್ ಮಾಡಲು ಸಾಧ್ಯ, ಆ ಹಿಡಿಯನ್ನೇ ತೆಗೆದುಬಿಟ್ಟರೆ?! ಕೂಡಲೇ ಆ ಪಂಪಿನ ಹಿಡಿಯನ್ನು ಸೆಪ್ಟೆಂಬರ್ 8, 1854ರಂದು ತೆಗೆಸಿಬಿಟ್ಟ. ಆಗ ಯಾರೂ ಆ ಪಂಪಿನ ನೀರನ್ನು ಬಳಸುವುದು ಅಸಾಧ್ಯವಾಯಿತು.
ಅವರೆಲ್ಲರೂ ಬೇರೆ ಬೇರೆ ಕಡೆಯಿಂದ ನೀರನ್ನು ತಂದು ಕುಡಿಯಲಾರಂಭಿಸಿದರು. ಆಗ ಒಂದು ಪವಾಡವೇ ಸಂಭವಿಸಿತು. ಬ್ರಾಡ್ ಸ್ಟ್ರೀಟ್ ನಿವಾಸಿಗಳು ಕಾಲರಾದಿಂದ ಸಾಯುವುದಿರಲಿ, ಒಬ್ಬರಿಗೂ ಕಾಲರಾ ಕಾಯಿಲೆಯೇ ಬರಲೇ ಇಲ್ಲ.
ಮಾನವನ ವೈದ್ಯಕೀಯ ಇತಿಹಾಸದಲ್ಲಿ ಪಂಪಿನ ಹ್ಯಾಂಡಲ್ ತೆಗೆದುಹಾಕುವಂಥ ಒಂದು ಸಣ್ಣ ಕ್ರಮದ ಮೂಲಕ ಒಂದು ಪಿಡುಗನ್ನು ತಡೆಗಟ್ಟಿದ ಉದಾಹರಣೆಯು ಮೊದಲ ಬಾರಿಗೆ ದಾಖಲಾಯಿತು. ಬ್ರಾಡ್ ಸ್ಟ್ರೀಟ್ ಕೈಪಂಪ್ ಇದ್ದ ಸ್ಥಳವನ್ನು ಅಗೆದರು. ಆ ಸ್ಥಳದಲ್ಲಿ ಮೊದಲು ಕೊಚ್ಚೆಗುಂಡಿ ಇತ್ತು. ಅಲ್ಲಿಯೇ ಅವರು ನೀರಿನ ಬಾವಿಯನ್ನು ತೋಡಿ ಪಂಪನ್ನು ಅಳವಡಿಸಿದರು. ಆ ಬಾವಿಯನ್ನು ಮುಚ್ಚಿದರು. ಕೊನೆಗೆ ಈ ಐತಿಹಾಸಿಕ ಘಟನೆಯ ನೆನಪಿಗಾಗಿ ಒಂದು ಕೈಪಂಪ್ ಇವತ್ತಿಗೂ ಬ್ರಾಡ್ ಸ್ಟ್ರೀಟಿನಲ್ಲಿದೆ.
ಕಾಲರಾ ಪಿಡುಗು ತಹಬಂದಿಗೆ ಬಂದಕೂಡಲೇ ಜಾನ್ ಸ್ನೋ, ಲಂಡನ್ ನಗರದ ಸ್ವಚ್ಛತೆಗೆ ಆದ್ಯತೆಯನ್ನು ನೀಡಲು ಒಂದು ವರದಿಯನ್ನು ಸಿದ್ಧಪಡಿಸಿದ.
? ಸಾರ್ವಜನಿಕ ನೀರಿನ ತಾಣಗಳ ಉಸ್ತುವಾರಿಯನ್ನು ಸರಕಾರವು ವಹಿಸಬೇಕು. ಅವುಗಳ ರಕ್ಷಣೆಯನ್ನು ಮಾಡಬೇಕು. ಅವುಗಳ ನೀರನ್ನು ಶೋಧಿಸಿ ಪೂರೈಸಬೇಕು.
? ನೀರಿನ ಸ್ವಚ್ಛತೆಯನ್ನು ಹಾಳು ಮಾಡುವ ಜಲಮೂಲಗಳನ್ನೆಲ್ಲ ಮುಚ್ಚಬೇಕು. ಅವು ರೋಗದ
ತಾಣಗಳು.
? ಪಿಡುಗಿನ ಅಧ್ಯಯನದಲ್ಲಿ ಊಹೆಗೆ, ಕಲ್ಪನೆಗೆ ಅವಕಾಶವಿಲ್ಲ. ಲಭ್ಯ ವಾಸ್ತವಾಂಶಗಳನ್ನು ಆಧರಿಸಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕು.
? ಯಾವತ್ತಿಗೂ ಸಮಸ್ಯೆಗಳನ್ನು ಮುಂಚಿತವಾಗಿಯೇ ಊಹಿಸಿ, ಅವುಗಳು ಸಂಭವಿಸದಂತೆ ಕ್ರಮಗಳನ್ನು ಕೈಗೊಳ್ಳಬೇಕು.
ಪ್ರತಿಭಟನೆ: ಜಾನ್ ಸ್ನೋ ನೀಡಿದ ಶಿಫಾರಸುಗಳನ್ನು ಅನೇಕರು ಒಪ್ಪಲಿಲ್ಲ, ತೀವ್ರವಾಗಿ ಪ್ರತಿಭಟಿಸಿದರು. ಜಾನ್ ಸೈಮನ್ ಎಂಬ ಲಂಡನ್ನಿನ ರೋಗಶಾಸ್ತ್ರಜ್ಞನು ಆಧುನಿಕ ವೈದ್ಯಕೀಯದ ಸಂಶೋಧನೆಗಳನ್ನೆಲ್ಲ ಬಲ್ಲವನಾಗಿದ್ದರೂ, ಜಾನ್ ಸ್ನೋ ನೀಡಿದ ವಿಚಾರಗಳನ್ನು ಒಪ್ಪಲಿಲ್ಲ. ಸರ್ ಎಡ್ವಿನ್ ಚಾಡ್ವಿಕ್ (1800-1890) ಲಂಡನ್ನಿನ ಬಹುದೊಡ್ಡ ಸಮಾಜ ಸುಧಾರಕ. ಸಾರ್ವಜನಿಕ ನೈರ್ಮಲ್ಯ ಹಾಗೂ ಆರೋಗ್ಯವನ್ನು ಸುಧಾರಿಸಿದಂಥ ಈ ಪ್ರತಿಭಾವಂತನೂ ಜಾನ್ ಸ್ನೋ ನೀಡಿದ ಸಲಹೆಗಳನ್ನು ಒಪ್ಪಲಿಲ್ಲ.
ಕೊನೆಗೆ ರೆವರೆಂಡ್ ಹೆನ್ರಿ ವೈಟ್ ಫೀಲ್ಡ್ (1825-1896) ಸೋಹೋ ಪ್ರದೇಶದಲ್ಲಿದ್ದ ಸೈಂಟ್ ಲ್ಯೂಕ್ ಚರ್ಚಿನಲ್ಲಿ ಸಹಾಯಕ ಕುರೇಟ್ ಆಗಿದ್ದವರು, ಮಿಯಾಸ್ಮ ಸಿದ್ಧಾಂತದಲ್ಲಿ ನಂಬಿಕೆಯನ್ನಿಟ್ಟಿ ದ್ದರೂ, ಜಾನ್ ಸ್ನೋ ವಾದದಲ್ಲಿ ತರ್ಕವನ್ನು ನಗಂಡು ಅವನಿಗೆ ಪ್ರೋತ್ಸಾಹವನ್ನು ನೀಡಿದರು. ಹಾಗಾಗಿ ಇಡೀ ಲಂಡನ್ ಒಂದು ಸ್ವಚ್ಛ ನಗರವಾಯಿತು.
ರಾಬರ್ಟ್ ಕಾಚ್ (1843-1910), 1883ರಲ್ಲಿ ಕಾಲರಾಕ್ಕೆ ಕಾರಣವಾದ ಬ್ಯಾಕ್ಟೀರಿಯ ವಿಬ್ರಿಯೋ ಕಾಲರೆಯನ್ನು ಕಂಡುಹಿಡಿದ ಹಾಗೂ ಇದು ನೀರಿನ ಮೂಲಕವೇ ಹರಡುತ್ತದೆ ಎಂದು ಸಾರಿದ. ಆದರೆ ಜಾನ್ ಸ್ನೋ, ಈ ಬಗ್ಗೆ ಯಾವುದೇ ಮಾಹಿತಿಯಿಲ್ಲದೇ ಕೇವಲ ತನ್ನ ತರ್ಕಬದ್ಧ ಅಧ್ಯಯನ, ಅಂಕಿಸಂಖ್ಯೆಗಳ ವಿಶ್ಲೇಷಣೆಗಳಿಂದ ಕಾಲರಾಕ್ಕೆ ಕಲುಷಿತ ನೀರೇ ಕಾರಣ ಎಂಬ ತೀರ್ಮಾನಕ್ಕೆ ಬಂದ. ಸ್ವಚ್ಛತೆ, ಸಾರ್ವಜನಿಕ ನೈರ್ಮಲ್ಯಗಳನ್ನು ಪ್ರತಿಪಾದಿಸುವ ಪಿಡುಗುಶಾಸಕ್ಕೆ ಭದ್ರವಾದ ಬುನಾದಿಯನ್ನು ಹಾಕಿದ.