ವಿಚಾರ ಮಂಟಪ
ಕೆ.ವಿ.ಚಂದ್ರಮೌಳಿ
ನಲವತ್ತು ವರ್ಷಗಳ ಹಿಂದೆ, ಡಾಕ್ಟರ್ರನ್ನು ಭೇಟಿ ಮಾಡುವುದು ಎಂದರೆ ಟಾರ್ಚ್ ಹಿಡಿದ ಒಬ್ಬ ಮಮತೆಯ ಮಾವನನ್ನು ಭೇಟಿ ಮಾಡಿದಂತೆಯೇ ಇತ್ತು- ಅದರಂದು ಮನೆಯ ಸೌಕರ್ಯ, ಆತ್ಮೀಯತೆ ಮತ್ತು ಭರವಸೆ ಅಡಗಿಕೊಂಡಿರುತ್ತಿತ್ತು. ಕ್ಲಿನಿಕ್ಗೆ ಕಾಲಿಟ್ಟ ಕ್ಷಣದ, ಅಲ್ಲಿ ಇರುವ ಸರಳ ವಾತಾವರಣವೇ ಮನಸ್ಸಿಗೆ ನೆಮ್ಮದಿ ನೀಡುತ್ತಿತ್ತು.
ಬಿದಿರಿನ ಕುರ್ಚಿಗಳು ನಿಮ್ಮ ಕೆಮ್ಮಿನ ತಾಳಕ್ಕೆ ಕಿರುಕಿರುಗುಟ್ಟುತ್ತಾ, ನಿಮ್ಮ ಅಸ್ವಸ್ಥತೆಗೆ ಸಹಾನುಭೂತಿ ತೋರಿಸುವಂತಿದ್ದವು. ಡಾಕ್ಟರ್ ನಿಮ್ಮನ್ನು ನೋಡಿ ‘ಬಾಯಿ ತೆರೆ’ ಎಂದಾಗ, ಅದು ಕೇವಲ ಒಂದು ಕ್ರಮವಲ್ಲ- ನಿಜವಾದ ಪರಿಶೀಲನೆಯ ಆರಂಭವಾಗುತ್ತಿತ್ತು. ಅವರು ನೀವು ಬಾಯಿ ಚೆನ್ನಾಗಿ ತೆರೆಯುವಂತೆ ಮಾಡಿ, ಟಾನ್ಸಿಲ್ಗಳೊಳಗಿನ ಗುಪ್ತ ಇತಿಹಾಸವನ್ನೇ ಓದುತ್ತಿದ್ದರು.
ನಂತರ ಎದೆಗೆ ಸೌಮ್ಯವಾಗಿ ತಟ್ಟಿ, ಬೆನ್ನಿಗೆ ಬಡಿದು, ಶ್ವಾಸದ ಚಲನವಲನವನ್ನು ಕೇಳುತ್ತಿ ದ್ದರು. ಕಣ್ಣಿನ ರೆಪ್ಪೆಗಳನ್ನು ಎತ್ತಿ, ನಾಡಿ ಸ್ಪಂದನವನ್ನು ಹಿಡಿದು, ಡಿಕೋಡ್ ಮಾಡುವಂತೆ ಅರ್ಥಮಾಡಿಕೊಳ್ಳುತ್ತಿದ್ದರು. ಪ್ರತಿಯೊಂದು ಚಲನವಲನವೂ ಅನುಭವದ, ಸಹನೆಯ ಮತ್ತು ಕಾಳಜಿಯ ಪ್ರತಿಫಲವಾಗಿತ್ತು. ಈ ಪರಿಶೀಲನೆಗೆ ಸಮಯ ತೆಗೆದುಕೊಳ್ಳುತ್ತಿದ್ದುದು- ಅಂದಾಜು 15 ನಿಮಿಷಗಳು; ಆದರೆ ಆ ಸಮಯದಲ್ಲಿ ನೀವು ರೋಗಿಯಾಗಿಯೇ ಅಲ್ಲ, ಒಬ್ಬ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಿರಿ.
ಕೊನೆಗೆ, ನಗುವಿನೊಂದಿಗೆ ಅವರು ಹಿತವಾಗಿ ಹೇಳುತ್ತಿದ್ದರು: “ಎರಡು ಮಾತ್ರೆಗಳು, ಬಿಸಿ ನೀರು- ಆಯ್ತು!". ಆ ಮಾತುಗಳಲ್ಲಿ ಚಿಕಿತ್ಸೆ ಮಾತ್ರವಲ್ಲ, ಭರವಸೆಯೂ ಇರುತ್ತಿತ್ತು. ಹತ್ತು ರುಪಾಯಿ ಫೀ- ಆದರೆ ಜತೆಗೆ ಸಿಗುತ್ತಿದ್ದುದೇ ಅಮೂಲ್ಯವಾದದ್ದು.
ಸರಿಯಾದ ಸಮಯಕ್ಕೆ ಊಟ ಮಾಡುವುದು, ಒಳ್ಳೆಯ ನಿದ್ರೆ ಮಾಡುವುದು, ಅತಿಯಾಗಿ ತಿನ್ನಬಾರದು ಎಂಬ ಸರಳ ಆದರೆ ಜೀವನ ಪರ್ಯಂತ ಉಪಯೋಗವಾಗುವ ಉಪದೇಶ. ನೀವು ಹೊರ ಬಂದಾಗ, ದೇಹವಷ್ಟೇ ಅಲ್ಲದೆ ಮನಸ್ಸೂ ಹಗುರವಾಗಿರುತ್ತಿತ್ತು.
ಇದನ್ನೂ ಓದಿ: K V Chandramouli Column: ಮರುನಾಮಕರಣ: ಪರಿವರ್ತನೆಯೋ? ರಾಜಕೀಯವೋ ?
ಸ್ವಲ್ಪ ಜಾಣ್ಮೆ ಹೆಚ್ಚಿದಂತೆ, ನಿಮ್ಮ ಜೀವನಶೈಲಿಯ ಬಗ್ಗೆ ಹೊಸ ಅರಿವು ಮೂಡಿದಂತೆ ಮತ್ತು ಕಳೆದ ವಾರ ತಿಂದ ಆ ಹೆಚ್ಚುವರಿ ಲಡ್ಡೂ ಬಗ್ಗೆ ತುಸು ಪಶ್ಚಾತ್ತಾಪವೂ ಹೃದಯ ದಲ್ಲಿ ಮೃದುವಾಗಿ ಮೂಡುತ್ತಿತ್ತು. ಅವು ಕೇವಲ ಚಿಕಿತ್ಸೆಯ ದಿನಗಳಲ್ಲ, ಜತೆಗೆ ಮಾನ ವೀಯ ಸ್ಪರ್ಶದ, ಮಮತೆಯ ಮತ್ತು ಸಹನೆಯ ದಿನಗಳು.
ಡಾಕ್ಟರ್-ರೋಗಿಯ ಸಂಬಂಧ ಕೇವಲ ವ್ಯವಹಾರವಾಗಿರಲಿಲ್ಲ; ಅದು ನಂಬಿಕೆ, ಕಾಳಜಿ, ಆತ್ಮೀಯತೆಯ ಬಂಧವಾಗಿತ್ತು. ಇಂದಿಗೂ ಆ ನೆನಪುಗಳು ಮೃದುವಾಗಿ ಪ್ರತಿಧ್ವನಿಸುತ್ತವೆ. 1970ರ ದಶಕದಲ್ಲಿ ನಾವು ಬೆಂಗಳೂರಿನಲ್ಲಿದ್ದಾಗ, ನರ್ಸಿಂಗ್ ಹೋಮ್ ಎಂಬ ಕಲ್ಪನೆಯೇ ಇರಲಿಲ್ಲ.
ಯಾವುದೇ ಅನಾರೋಗ್ಯ ಒದಗಿದರೂ, ನಾವು ಧಾವಿಸುತ್ತಿದ್ದದ್ದು ವಿಕ್ಟೋರಿಯಾ, ಕೆ.ಸಿ. ಜನರಲ್, ಬೌರಿಂಗ್, ಮಿಂಟೋ ಮತ್ತು ಬೆಂಗಳೂರು ಸರಕಾರಿ ದಂತ ಆಸ್ಪತ್ರೆಗಳಿಗೆ. ಆ ಕಾಲದಲ್ಲಿ ವೈದ್ಯರನ್ನು ದೇವರ ರೂಪದ ಕಾಣುತ್ತಿದ್ದೆವು. ಅವರ ಮಾತು ನಮಗೆ ಆಶ್ವಾಸನೆ, ಅವರ ಚಿಕಿತ್ಸೆ- ಕಾಳಜಿ ನಮ್ಮ ಬದುಕಿನ ಆಧಾರವಾಗಿತ್ತು.
ಅಲ್ಲಿ ಹಣಕ್ಕಿಂತ ಮಾನವೀಯತೆ ಮೇಲುಗೈ ಸಾಧಿಸುತ್ತಿತ್ತು; ಸರಳತೆಯೊಳಗೆ ಸತ್ಯವಾದ ಸೇವೆ ಮತ್ತು ಹೃದಯಸ್ಪರ್ಶಿ ಆರೈಕೆ ನೆಲೆಸಿತ್ತು. ಆದರೆ ಇಂದು, ಕಾರ್ಪೊರೇಟ್ ಆಸ್ಪತ್ರೆಗೆ ಕಾಲಿಟ್ಟ ಕ್ಷಣದ, ನೀವು five-star airport ಗೆ ಬಂದಿರುವಂತೆ ಭಾಸವಾಗುತ್ತದೆ- ಶಾಪಿಂಗ್ ಮಾಲ್ನ ಮೆರುಗು, ಸರಕಾರಿ ಕಚೇರಿಯ ಕ್ರಮ, ಇವೆಲ್ಲವೂ ಒಂದೇ ಜಾಗದಲ್ಲಿ ಬೆರೆತ ವಿಚಿತ್ರ ಅನುಭವ.
ಇದನ್ನೆ, ಅತಿಯಾಗಿ ಚುರುಕಾದ ‘ಐಟಿ’ ತಂಡ ಅಚ್ಚುಕಟ್ಟಾಗಿ ರೂಪಿಸಿ ನಿರ್ವಹಿಸುತ್ತಿರು ವಂತೆ ಕಾಣುತ್ತದೆ. ರಿಸೆಪ್ಷನಿ ನಿಮ್ಮನ್ನು ನಗುತ್ತಾ ಸ್ವಾಗತಿಸುತ್ತಾಳೆ; ಆದರೆ ಆ ನಗುವಿನ ಒಳಾರ್ಥ ಸ್ಪಷ್ಟ- ‘ನಮ್ಮ ಬಿಲ್ಲಿಂಗ್ ವ್ಯವಸ್ಥೆಗೆ ಸ್ವಾಗತ!’ ಅಂತ. ಹಿಂದೆ ಡಾಕ್ಟರ್ ರೋಗ ವನ್ನು ಪತ್ತೆ ಹಚ್ಚುತ್ತಿದ್ದರು; ಇಂದು ರಿಸೆಪ್ಷನಿ ನಿಮ್ಮ ಪರ್ಸಿನ ಸ್ಥಿತಿಯನ್ನೇ ಮೊದಲು ಅಳೆಯುವಂತೆ ಭಾಸವಾಗುತ್ತದೆ.
ನಂತರ ಡಾಕ್ಟರ್ರ ದರ್ಶನ. ಅವರು ತಮ್ಮ ಅಮೂಲ್ಯ ಸಮಯದಿಂದ ನಿಮಗೆ 180 ಸೆಕೆಂಡುಗಳನ್ನು ಮಾತ್ರ ನೀಡುತ್ತಾರೆ. ‘ಬಾಯಿ ತೆರೆ’ ಇಲ್ಲ, ‘ಆಳವಾದ ಉಸಿರು ತೆಗೆದು ಕೊಳ್ಳಿ’ ಇಲ್ಲ- ನಿಮ್ಮನ್ನು ಮುಟ್ಟುವುದೇ ಇಲ್ಲ. ಬದಲಾಗಿ, ನಿಮ್ಮ ಫೈಲನ್ನು ಒಂದು ಥ್ರಿಲ್ಲರ್ ಕಾದಂಬರಿಯಂತೆ ನೋಡುತ್ತಾ, ಕೆಲವು ಮಾತುಗಳನ್ನು ಗುನುಗುತ್ತಾರೆ.
ತಕ್ಷಣವೇ, ಪರೀಕ್ಷೆಗಳ ಪಟ್ಟಿಯನ್ನು ಮುದ್ರಿಸುತ್ತಾರೆ. ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, ಇಸಿಜಿ, ಎಂಆರ್ಐ, ಸಿ.ಟಿ. ಸ್ಕ್ಯಾನ್, ಅಲ್ಟ್ರಾಸೌಂಡ್, ಲಿವರ್ ಪ್ರೊಫೈಲ್, ಕಿಡ್ನಿ ಪ್ರೊಫೈಲ್, ವಿಟಮಿನ್ ಬಿ-12, ವಿಟಮಿನ್ ಡಿ- ಪ್ರತಿ ಅಂಗವೂ, ಪ್ರತಿ ಯೊಂದು ಪೋಷಕಾಂಶವೂ ‘ನನ್ನನ್ನೂ ಸೇರಿಸಿ’ ಎಂದು ಕೇಳುತ್ತಿರುವಂತೆ!
ನೀವು ಧೈರ್ಯ ಮಾಡಿ, “ಸರ್ ಇವೆ ಪರೀಕ್ಷೆಗಳು ಅಗತ್ಯವೇ?" ಎಂದು ಕೇಳಿದರೆ, ಡಾಕ್ಟರ್ ಶಾಂತವಾಗಿ ಹೇಳುತ್ತಾರೆ: “ಸರ್ ಪ್ರೋಟೋಕಾಲ್". ನೀವು ಇನ್ನೂ ಆಶ್ಚರ್ಯದಿಂದ ಉಸಿರೆಳೆಯುವಷ್ಟರಲ್ಲಿ, ನರ್ಸ್ ಒಳಗೆ ಬಂದು ನಿಮ್ಮ ಕೈಗೆ IV cannula ಸೂಜಿಯನ್ನು ಇಡುತ್ತಾಳೆ.
ನೀವು ಗೊಂದಲದಿಂದ, “ನನಗೆ ಕೇವಲ ಜ್ವರ, ಇದೇಕೆ?" ಎಂದು ಕೇಳಿದರೆ, ಅವಳು ವೃತ್ತಿಪರ ನಗೆಯೊಂದಿಗೆ ಉತ್ತರಿಸುತ್ತಾಳೆ: “ಸರ್, ಪ್ರೋಟೋ ಕಾಲ". ಆ ಸೂಜಿ ನಂತರ ನಿಮ್ಮ ನಿಷ್ಠಾವಂತ ಸಂಗಾತಿಯೇ ಆಗಿ ಬಿಡುತ್ತದೆ- ನೀವು ನಡೆಯುವಾಗ ಡೋಲಾಯ ಮಾನವಾಗಿ ಓಲಾಡುತ್ತಾ, ಅತಿಯಾದ ಪ್ರೇರಣಾದಾಯಕ ತರಬೇತುದಾರ ನಂತೆ ನಿಮಗೆ ಮರುಮರು ಚುಚ್ಚಿ, ನೀವು ಈಗ ಹಣಕಾಸಿನ ಬಂಧನದಲ್ಲಿದ್ದೀರಿ ಎಂದು ನೆನಪಿಸುವಂತೆ. ನಿಧಾನವಾಗಿ ನಿಮಗೆ ಅನಿಸುತ್ತದೆ- ಆ ಸೂಜಿಗೆ ರಕ್ತನಾಳಗಳಿಗಿಂತ ನಿಮ್ಮ ಬ್ಯಾಂಕ್ ಖಾತೆ ಯೊಂದಿಗೇ ಹೆಚ್ಚು ಸಂಬಂಧವಿದೆಯೇನೋ ಅಂತ!
ಅದರೊಂದಿಗೆ, ಸೇವೆಗಳ ಪರೇಡ್ ಆರಂಭವಾಗುತ್ತದೆ. ಮೊದಲು ಡಯಟಿಷಿಯನ್ ಬರುತ್ತಾರೆ- ಅವರು ನಿಮಗೆ ಸಕ್ಕರೆ, ಎಣ್ಣೆ, ಉಪ್ಪು, ಫ್ರೈಡ್ ಫುಡ್, ಬೇಯಿಸಿದ ಆಹಾರ- ಬಹುಶಃ ಸಂತೋಷವನ್ನೇ- ತಪ್ಪಿಸಿಕೊಳ್ಳಲು ಉಪದೇಶ ಕೊಡುತ್ತಾರೆ. ನೀವು ಶಿಸ್ತಿನಿಂದ ತಲೆಯಾಡಿಸುತ್ತೀರ; ನಿಮ್ಮ ಜ್ವರವೇ ಸ್ವಲ್ಪ ಸಂಕೋಚಪಡುತ್ತಿರುವಂತೆ ಕಾಣುತ್ತದೆ. ಅವರ ಸಲಹೆ ನಿಜವಾಗಿಯೂ ಕೆಲಸ ಮಾಡುತ್ತದೆಯೇ ಅಥವಾ ಇದು ನಿಮ್ಮ ಸಹನಶೀಲತೆ ಪರೀಕ್ಷಿಸಲು ನಡೆಸುತ್ತಿರುವ ಕ್ಲಿನಿಕಲ್ ಪ್ರಯೋಗವೋ ಎಂದು ನೀವು ಯೋಚಿಸುತ್ತೀರಿ.
ಅದರ ಜತೆಗೆ, ಆ ಸಲಹೆಯನ್ನು ಅವರು ತಮ್ಮ ಮೇಲೂ ಎಂದಾದರೂ ಅನುಸರಿಸಿ ದ್ದಾರೆಯೇ? ಎಂದು ಕುತೂಹಲವೂ ಮೂಡುತ್ತದೆ. ಮುಂದೆ ಸೈಕಾಲಜಿ ಒಳಗೆ ಬರುತ್ತಾರೆ. ಅವರ ನೋಟ್ ಬುಕ್ ಆಸ್ಪತ್ರೆಯ ನಿಯಮ ಪುಸ್ತಕಕ್ಕಿಂತಲೂ ದಪ್ಪವಾಗಿರುತ್ತದೆ.
“ಈಗ ನೀವು ಎಲ್ಲಿದ್ದೀರಿ ಗೊತ್ತಾ?", “ಇವತ್ತು ಯಾವ ದಿನ, ಸಮಯ ಏನು ಗೊತ್ತಾ?", “ನಾನು ಹೇಳುವುದನ್ನು ಗಮನದಿಂದ ಕೇಳಲು ತೊಂದರೆ ಆಗ್ತಿದೆಯಾ?", “ಮೊದಲು ನಿಮಗೆ ಡಿಪ್ರೆಶನ್ ಅಥವಾ ಆತಂಕದಂಥ ಸಮಸ್ಯೆಗಳು ಇದ್ದವಾ?", “ಮಾನಸಿಕವಾಗಿ ನೀವು ಹೇಗಿದ್ದೀರಿ?" ಎಂದು ಪ್ರಶ್ನೆಗಳ ಮಳೆ ಸುರಿಸುತ್ತಾರೆ.
ನಿಜವಾಗಿ ನೋಡಿದರೆ, ನೀವು ಬಿಸಿ ಚಹಾದಲ್ಲಿ ಹೆಚ್ಚು ಹೊತ್ತು ನೆನೆಸಿದ ಬಿಸ್ಕಿಟ್ನಂತೆ ಒಳಗೊಳಗೇ ಕುಸಿದು ಹೋಗುತ್ತಿದ್ದೀರಿ. ಆದರೂ ಮುಖದಲ್ಲಿ ನಗು ಇಟ್ಟುಕೊಂಡು, “ನಾನು ಓಕೆ" ಎಂದು ಹೇಳುತ್ತೀರಿ. ಅವರು ಗಂಭೀರವಾಗಿ ತಲೆಯಾಡಿಸಿ, ಏನೋ ಗೀಚಿ “ರೋಗಿ ತನಗೆ ಏನೂ ಆಗಿಲ್ಲ ಅನ್ನೋ ಭ್ರಮೆಯಲ್ಲಿದ್ದಾನೆ" ಎಂದು ದಾಖಲಿಸುತ್ತಾರೆ.
ಮತ್ತೆ ಬಿಲ್ಲಿಗೆ 700 ರು. ಸೇರಿಸಲಾಗುತ್ತದೆ. ಮುಂದೆ ಫಿಸಿಯೋಥೆರಪಿ ಬರುತ್ತಾರೆ. ನಿಮಗೆ ಜ್ವರ ಇದೆ ಅನ್ನೋದನ್ನ ನೆನಪಿಟ್ಟುಕೊಳ್ಳಿ- ಆದರೆ ಅವರಿಗೆ ಅದರಿಂದ ವಿಶೇಷ ವ್ಯತ್ಯಾಸ ವೇ ಇಲ್ಲ ಅನ್ನಿಸುತ್ತದೆ. ‘ಕೈ ಎತ್ತಿ’, ‘ಭುಜ ತಿರುಗಿಸಿ’, ‘ಮೊಣಕಾಲು ಮಡಿಸಿ’, ‘ಇನ್ನೂ ಸ್ವಲ್ಪ ಬಾಗಿರಿ’ ಎಂದು ಆದೇಶಗಳ ಸರಮಾಲೆ ಆರಂಭವಾಗುತ್ತದೆ.
ನೀವು ಒಳಗೊಳಗೆ ‘ನನಗೆ ಜ್ವರ ಇದೆ ಅಲ್ವಾ?’ ಎಂದು ಯೋಚಿಸುತ್ತಾ ಇದ್ದರೂ, ಹೊರಗೆ ಮಾತ್ರ ವಿಧೇಯ ವಿದ್ಯಾರ್ಥಿಯಂತೆ ಎಲ್ಲವನ್ನೂ ಮಾಡುತ್ತೀರಿ. ಏಕೆಂದರೆ ಇಲ್ಲಿ ‘ಮಾಡಲ್ಲ’ ಅಂತ ಹೇಳೋದು ಕೂಡ ಒಂದು ರಿಸ್ಕ್.
ಎಲ್ಲಿ ನಂತರ ಬಿಲ್ಲಿನಲ್ಲಿ ‘ಸಹಕರಿಸಿಲ್ಲ ಶುಲ್ಕ- 650 ರು.’ ಎಂದು ಹೊಸ ಸಾಲು ಸೇರಿಸಿ ಬಿಟ್ಟರೆ? ಅಂತ. ಆದ್ದರಿಂದ, ಜ್ವರದ ಜತೆಗೂಡಿ, ನೀವು ಸಣ್ಣ ಮಟ್ಟಿಗೆ ಜಿಮ್ ವರ್ಕೌಟ್ ಅನ್ನೂ ಮುಗಿಸುತ್ತೀರಿ!
ಹೌಸ್ಕೀಪಿಂಗ್ ಸಿಬ್ಬಂದಿ ಒಳಗೆ ಬಂದು, ನಿಮ್ಮ ತಲೆಯ ದಿಂಬನ್ನು ಸ್ವಲ್ಪ ಸರಿಪಡಿಸಿ, ಶಾಂತವಾಗಿ ಹೊರಗೆ ಹೋಗುತ್ತಾರೆ. ನಂತರ ಬಿಲ್ಲಿನಲ್ಲಿ ನೋಡಿದಾಗ: ‘ದಿಂಬು ಸರಿಪಡಿಸಿದ ಶುಲ್ಕ - 180 ರು.’. ಅದಾದ ಮೇಲೆ ನರ್ಸ್ ಬಂದು ಕಂಬಳಿಯನ್ನು ಸ್ವಲ್ಪ ಹೆಚ್ಚು ಬಿಗಿಯಾಗಿ ಹೊದಿಸುತ್ತಾರೆ- ಸ್ವಲ್ಪ ಕಾಳಜಿಯ ಸ್ಪರ್ಶದೊಂದಿಗೆ. ದೊಡ್ಡದೇನೂ ಅಲ್ಲ, ಆದರೆ ನಿಮಗೆ ಆರೈಕೆ ಆಗುತ್ತಿದೆ ಅನ್ನಿಸುವಷ್ಟು ಮಾತ್ರ. ಆದರೆ ಅದಕ್ಕೂ ಬಿಲ್ ಇದೆ: ‘ಕಂಬಳಿ ಸರಿಪಡಿಸಿ ದ ಶುಲ್ಕ - 220 ರು.’. ಆಮೇಲೆ ಟೆಕ್ನಿಷಿಯನ್ ಬರುತ್ತಾರೆ: ಒಬ್ಬ ಬಿಪಿ ಯಂತ್ರವನ್ನು ಚೆಕ್ ಮಾಡುತ್ತಾನೆ, ಮತ್ತೊಬ್ಬ ನಿಮ್ಮ ಬಿಪಿಯನ್ನು ಪರೀಕ್ಷಿಸುತ್ತಾನೆ, ಮೂರನೆಯವ ಮೊದಲಿ ಬ್ಬರು ಸರಿಯಾಗಿ ಕೆಲಸ ಮಾಡಿದ್ದಾರೆಯೇ ಎಂದು ನೋಡುತ್ತಾನೆ.
ಪ್ರತಿ ಕೆಲಸವೂ ಅಚ್ಚುಕಟ್ಟಾಗಿ ದಾಖಲಾಗಿ, ಸಹಜವಾಗಿಯೇ ಬಿಲ್ಲಿನಲ್ಲಿ ಸೇರಿಸಲಾಗುತ್ತದೆ!ಈ ಮಧ್ಯೆ, ಆಸ್ಪತ್ರೆಯ ‘ಆಪ್’ ಪ್ರತಿ ಗಂಟೆಗೆ ನಿಮಗೆ ನೆನಪಿಸುತ್ತದೆ: ‘ನಿಮ್ಮ ಅನುಭವವನ್ನು ಮೌಲ್ಯಮಾಪನ ಮಾಡಿ’. ನೀವು ಆತುರದಿಂದ ‘ಇನ್ನೂ ಕಷ್ಟದಲ್ಲಿದ್ದೇನೆ’, ‘ಸಹಾಯ ಕಳುಹಿಸಿ’ ಅಥವಾ ‘ನನ್ನ ವಕೀಲರನ್ನು ಕರೆಸಿ’ ಎಂಬ ಆಯ್ಕೆಗಳನ್ನು ಹುಡುಕುತ್ತೀರಿ.
ಆದರೆ ಅಲ್ಲಿ ದೊರೆಯುವುದು ಮಾತ್ರ- ‘ಗುಡ್’, ‘ವೆರಿ ಗುಡ್’, ಮತ್ತು ‘ಔಟ್ಸ್ಟಾಂಡಿಂಗ್!’. ಕೊನೆಯಲ್ಲಿ, ನೀವು ನಿಟ್ಟುಸಿರು ಬಿಡುತ್ತಾ, ಬಲವಂತದ ನಗು ಮೂಡಿಸಿದ ಎಮೋಜಿ ಯನ್ನು ಆಯ್ಕೆ ಮಾಡುತ್ತೀರಿ.
ಇನ್ನೂ ಇದೆ- ಕ್ಯಾಂಟೀನ್ ಕಥೆ! ಒಂದು ಇಡ್ಲಿಯ ಬೆಲೆ ನಿಮ್ಮ ಬಾಲ್ಯದ ಹುಟ್ಟುಹಬ್ಬದ ಪಾರ್ಟಿಗಿಂತಲೂ ಹೆಚ್ಚು ಅನ್ನಿಸುತ್ತದೆ. ತಟ್ಟೆಗೆ ಬರುವಷ್ಟರಲ್ಲಿ ಸಾಂಬಾರ್ ಯಾವುದೋ ಭಾವನಾತ್ಮಕ ಸಂಕಷ್ಟವನ್ನು ಎದುರಿಸಿದಂತೆ ಕಾಣುತ್ತದೆ!
ಬಿಲ್ಲಿನಲ್ಲಿ Hygiene Charge ಎಂಬ ಒಂದು ವಿಶೇಷ ಸೇರ್ಪಡೆ- ಬಹುಶಃ ನಿಮ್ಮ ಚಮಚದ ಜತೆಗೆ ನಿಮ್ಮ ಕರ್ಮವನ್ನೂ ಶುದ್ಧಗೊಳಿಸಲು ಇರಬಹುದು! ಈ ಎಲ್ಲದಕ್ಕೂ ತಕ್ಕಂತೆ, ನೀವು ನಿಧಾನವಾಗಿ ತಿನ್ನುತ್ತಾ, ಪ್ರತಿಯೊಂದು ತುಂಡನ್ನೂ ಚೆನ್ನಾಗಿ ಜಗಿಯುತ್ತೀರಿ- ನಿಮ್ಮ ರುಚಿಕೋಶಗಳ ‘ಹೂಡಿಕೆಯ ಮೇಲಿನ ಲಾಭ’ ಏನಾದರೂ ಹೆಚ್ಚುತ್ತದೆಯೇ? ಎಂದು ಯೋಚಿಸುತ್ತಾ!
ಪ್ರತಿ ಗಂಟೆಗೂ ನರ್ಸ್ಗಳು ನಿಮ್ಮ ಬಳಿಗೆ ಬರುತ್ತಾರೆ- ನಿಮ್ಮ ಜ್ವರ ಎಷ್ಟು ಇದೆ, ಒತ್ತಡ ಎಷ್ಟು ಇದೆ ಎಂದು ನೋಡಲು ಅಲ್ಲ; ನಿಮ್ಮ ಡೆಪಾಸಿಟ್ನಲ್ಲಿ ಇನ್ನೂ ಎಷ್ಟು ಹಣ ಉಳಿದಿದೆ ಎಂದು ಪರಿಶೀಲಿಸಲು ಬಂದಂತಿರುತ್ತಾರೆ! ನಿಮ್ಮ ಜ್ವರ ತೀರಾ ಸಣ್ಣದಷ್ಟೇ ಇದೆ, ಆದರೆ ನಿಮ್ಮ ಪರ್ಸ್ ಮಾತ್ರ ತುಂಬಾ ಗಂಭೀರ ಸ್ಥಿತಿಯಲ್ಲಿ ಇದೆ ಅನ್ನಿಸುವಂತೆ ಆಗುತ್ತದೆ- ಅದು ಐಸಿಯುನ ಇದ್ದಂತೆ!
ಹೀಗೆ ನೋಡುತ್ತಾ ಹೋದಂತೆ, ನಿಮಗೆ ಒಂದು ಅನುಮಾನ ಬರುತ್ತದೆ- ಈ ಥರ್ಮಾ ಮೀಟರ್ ಅನ್ನು ನಿಜವಾಗಿಯೂ ಜ್ವರವನ್ನು ಅಳೆಯಲು ಬಳಸುತ್ತಾರಾ ಅಥವಾ ನಿಮ್ಮ ಗಮನವನ್ನು ಬೇರೆಡೆ ತಿರುಗಿಸಲು ಮಾತ್ರವೇ? ಏಕೆಂದರೆ, ನೀವು ಅದನ್ನು ನೋಡುತ್ತಿರು ವಷ್ಟರಲ್ಲಿ, ಆಸ್ಪತ್ರೆಯ ಅಕೌಂಟೆಂಟ್ ಶಾಂತವಾಗಿ ಕುಳಿತು ನಿಮ್ಮ ಬಿಲ್ಲಿಗೆ ಚಕ್ರಬಡ್ಡಿ ಯನ್ನು ಹಾಕುತ್ತಾ ಇದ್ದಾನೋ ಅನ್ನಿಸುತ್ತದೆ!
ಕೊನೆಗೆ- ಮಹಾ ಅಂತಿಮ ಕ್ಷಣ: ಬಿಲ್!
ಮ್ಯಾರಥಾನ್ ಓಟಗಾರನಂತೆ ಪ್ರಿಂಟರ್ ಗುನುಗುಟ್ಟುತ್ತಾ, ಪುಟದ ಮೇಲೆ ಪುಟವನ್ನು ಹೊರಹಾಕುತ್ತಲೇ ಇರುತ್ತದೆ. ಅದರೊಳಗೆ ಕಾಣುವ ಕೆಲವು ‘ಮಣಿಗಳು’ ಹೀಗಿವೆ: ಆಕ್ಸಿಜನ್ ಲಭ್ಯತೆ: 500 ರು. (ನೀವು ಬಳಸಿಲ್ಲ; ಕೇವಲ ಉಸಿರಾಡಿದ್ದೀರಿ- ಅದೇ ತಪ್ಪು!); ಬೆಡ್ಶೀಟ್ ಸರಿಪಡಿಸುವಿಕೆ: 250 ರು. (ಯಾರೋ ಅದನ್ನು ಮುಟ್ಟಿದ್ದಾರೆ- ಭಾವನಾತ್ಮಕ ಸ್ಪರ್ಶ!); ನರ್ಸಿಂಗ್ ವಿಸಿಟ್: 400 ರು. (‘ಹೇಗಿದ್ದೀರಿ?’ ಎಂದು ಕೇಳಿದ್ದಷ್ಟೇ!); ಡಾಕ್ಟರ್ ಕಾರಿಡಾರ್ ನಡೆ: 300 ರು. (ಅವರು ನಿಮ್ಮ ಕೊಠಡಿಯನ್ನು ಹಾದುಹೋಗಿದ್ದಾರೆ- ಅದಕ್ಕೂ ಬೆಲೆ ಇದೆ!); ಕುರ್ಚಿ ಬಳಕೆ: 150 ರು. (ನೀವು ಕುಳಿತಿರಿ- ಅದು ಸಹ ಖರ್ಚೇ!); ಮಿಸೆಲೆನಿಯಸ್: 3750 ರು. (ಆಸ್ಪತ್ರೆಯ ಹಣಕಾಸಿನ ಬರ್ಮುಡಾ ಟ್ರಯಾಂಗಲ್!).
ಕೊನೆಗೆ, ನೀವು ಧೈರ್ಯವನ್ನು ಒಗ್ಗೂಡಿಸಿ ನರ್ಸ್ಗೆ IV cannula ಸೂಜಿಯನ್ನು ತೆಗೆದು ಹಾಕಲು ಕೇಳುತ್ತೀರಿ. ಅವಳು ಅನುಭವಸಂಪನ್ನ ಮಾತುಗಾರ್ತಿಯಂತೆ ಮೃದುವಾಗಿ ನಗುತ್ತಾ “ಸರ್ ಮೊದಲು ಪಾವತಿ ಮಾಡಿ" ಎನ್ನುತ್ತಾಳೆ: ಆಗ ನಿಮಗೆ ಅರ್ಥವಾಗುತ್ತದೆ -ಅದು ಒಂದು ಭದ್ರತೆ, ಹಣ ಪಾವತಿಸುವವರೆಗೆ ಇಟ್ಟಿರುವ ಭಾವನಾತ್ಮಕ ಮತ್ತು ಆರ್ಥಿಕ ಭದ್ರತೆ. ಒಂದು ಚಿಕ್ಕ ಮದುವೆಯನ್ನು ಪ್ರಾಯೋಜಿಸುವಷ್ಟು ಹಣ ಪಾವತಿಸಿದ ನಂತರ, ಆ ಸೂಜಿಯನ್ನು ವಿಧಿವತ್ತಾಗಿ ತೆಗೆಯುತ್ತಾರೆ.
ನೀವು ಹೊರಬರುವಾಗ, ದೀರ್ಘ ಮತ್ತು ದುಬಾರಿ ಯುದ್ಧದಿಂದ ಹಿಂದಿರುಗುವ ಸೈನಿಕ ನಂತೆ ಭಾಸವಾಗುತ್ತದೆ. ಗೇಟ್ ಬಳಿ ನಿಂತಿರುವ ಭದ್ರತಾ ಸಿಬ್ಬಂದಿಯು ಸಂತೋಷದಿಂದ ಹೇಳುತ್ತಾನೆ: “ಬೇಗ ಗುಣವಾಗಲಿ ಸರ್!". ನೀವು ನಿಧಾನವಾಗಿ ನಿಮ್ಮೊಳಗೆ ಗುನುಗುತ್ತೀರಿ: ‘ಮೊದಲು ನನ್ನ ಬ್ಯಾಂಕ್ ಖಾತೆ ಗುಣವಾಗಲಿ’.
ಒಂದು ಕಾಲದಲ್ಲಿ ಆಸ್ಪತ್ರೆಗಳು ರೋಗಗಳಿಗೆ ಚಿಕಿತ್ಸೆ ನೀಡುತ್ತಿದವು. ಇಂದು ಅವು ಅನುಭವ, ಸಹನೆ, ತಾಳ್ಮೆ ಮತ್ತು ಹಣಕಾಸಿನ ನಿಯಂತ್ರಣವನ್ನು ಪರೀಕ್ಷಿಸುವ ಸ್ಥಳಗಳಾಗಿ ಬದಲಾಗಿವೆ. ನಿಜವಾದ ಗುಣಮುಖತೆಯು ಅಂತಿಮ ಬಿಲ್ ನೋಡಿದ ನಂತರವೇ ಆರಂಭವಾಗುತ್ತದೆ- ಒಮ್ಮೆ ಮನಸ್ಸು ಸಮಾಧಾನಗೊಂಡ ಮೇಲೆ, ಮತ್ತು ಬಹುಶಃ ಸ್ವಲ್ಪ ಮೂಲಭೂತ ಅರ್ಥಶಾಸವನ್ನೂ ಕಲಿತ ನಂತರ!
ಇಂದು ಜನರು ಹಾಸ್ಯವಾಗಿ ಹೇಳುತ್ತಾರೆ: “ನಾವು ಆಸ್ಪತ್ರೆಗಳಿಗೆ ರೋಗ ಗುಣಪಡಿಸಿಕೊಳ್ಳಲು ಹೋಗುವುದಿಲ್ಲ; ಬದಲಿಗೆ ವಿನಯ, ಸಹನೆ ಮತ್ತು ಕಾರ್ಪೊರೇಟ್ ಆಡಿಡ್ನಿಂದ ಹೇಗೆ ಬದುಕುಳಿಯುವುದು ಎಂಬುದನ್ನು ಕಲಿಯಲು!". ಮತ್ತೆ ಎಲ್ಲೋ, ಒಂದು ಸಮಾಂತರ ಜಗತ್ತಿನಲ್ಲಿ, ಆ ‘ಮಮತೆಯ ಮಾವ’ ಡಾಕ್ಟರ್ ಇನ್ನೂ ಇದ್ದಾನೆ- ತನ್ನ ಟಾರ್ಚ್, ಸ್ಟೆಥಸ್ಕೋಪ್ ಮತ್ತು ಸರಳ ಹತ್ತು ರುಪಾಯಿ ಚಿಕಿತ್ಸೆಯೊಂದಿಗೆ, ಯಾರನ್ನಾದರೂ ಕಾದಿರುವಂತೆ.
ಒಂದು ದಿನ ಆ ಜಗತ್ತು ಮತ್ತು ಈ ಕಾರ್ಪೊರೇಟ್ ಆಸ್ಪತ್ರೆಗಳ ಜಗತ್ತು ಮುಖಾಮುಖಿ ಯಾಗಲಿ ಎಂದು ನಾವು ಪ್ರಾರ್ಥಿಸಬಹುದು; ಆದರೆ ಅದು ನಮ್ಮ ಬ್ಯಾಂಕ್ ಖಾತೆಗಳು ಚೇತರಿಸಿಕೊಂಡ ನಂತರವಾಗಿದ್ದರೆ ಇನ್ನೂ ಉತ್ತಮ!
ಪಂಚ್ಲೈನ್: ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ನೀವು ಒಳಹೋಗುವ ಮೊದಲು ನಿಮ್ಮ ಪರ್ಸ್ ಅಡ್ಮಿಟ್ ಆಗುತ್ತದೆ, ಹೊರಬರುವಾಗ ಅದು ನಿಮಗಿಂತಲೂ ಹೆಚ್ಚು ಸೊರಗಿರುತ್ತದೆ!
(ಲೇಖಕರು ಬಾಯ್ಲರ್ ಕಾರ್ಯಾಚರಣೆಗಳ ನಿವೃತ್ತ ಉಪ ನಿರ್ದೇಶಕರು)