ಮೂರ್ತಿಪೂಜೆ
ದಿಲ್ಲಿಯಿಂದ ತೇಲಿ ಬರುತ್ತಿರುವ ಸುದ್ದಿಯೊಂದು ರಾಜ್ಯದ ಬಿಜೆಪಿಗರನ್ನು ವಿಸ್ಮಯ ಗೊಳಿಸಿದೆ. ಕಾರಣ? ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಉತ್ಸಾಹ ತೋರಿಸಿ, ‘ಈ ಬಾರಿ ಬಿಜೆಪಿ-ಜೆಡಿಎಸ್ ಮಿತ್ರಕೂಟದ ವತಿಯಿಂದ ದೇವೇಗೌಡರೇ ರಾಜ್ಯಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಲಿ’ ಎಂಬ ಸಿಗ್ನಲ್ಲು ರವಾನಿಸಿದ್ದಾರೆ. ಹೀಗೆ ನರೇಂದ್ರ ಮೋದಿಯವರು ಬಯಸುತ್ತಿರುವುದಕ್ಕೆ ಒಂದಿಷ್ಟು ಕಾರಣಗಳಿವೆ.
ದಿಲ್ಲಿಯ ಬಿಜೆಪಿ ಪಾಳಯದಿಂದ ಕೇಳಿ ಬಂದ ಸುದ್ದಿಯೊಂದು ರಾಜ್ಯ ಬಿಜೆಪಿಯ ನಾಯಕ ರಲ್ಲಿ ವಿಸ್ಮಯ ಮೂಡಿಸಿದೆ. ಅವರಿಗೆ ತಲುಪಿರುವ ಸುದ್ದಿಯ ಪ್ರಕಾರ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠಎಚ್.ಡಿ.ದೇವೇಗೌಡರು ಪುನಃ ರಾಜ್ಯಸಭೆಗೆ ಹೋಗಲಿದ್ದಾರೆ. ಹೀಗೆ ದೇವೇಗೌಡರು ಮರಳಿ ರಾಜ್ಯಸಭೆಗೆ ಹೋದರೆ ರಾಜ್ಯ ಬಿಜೆಪಿ ನಾಯಕರಿಗೇಕೆ ವಿಸ್ಮಯ ಎಂದರೆ, ಅವರನ್ನು ಮರಳಿ ರಾಜ್ಯಸಭೆಗೆ ಕಳಿಸುವ ವಿಷಯದಲ್ಲಿ ಖುದ್ದು ನರೇಂದ್ರ ಮೋದಿಯವರೇ ಉತ್ಸುಕತೆ ತೋರಿಸಿರುವುದು. ಈ ವರ್ಷದ ಜೂನ್ ಹೊತ್ತಿಗೆ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ.
ಹೀಗೆ ಚುನಾವಣೆ ನಡೆಯುವ ನಾಲ್ಕು ಸ್ಥಾನಗಳ ಪೈಕಿ ಆಡಳಿತಾರೂಢ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆಲ್ಲಲಿದೆಯಾದರೆ, ಪ್ರತಿಪಕ್ಷ ಬಿಜೆಪಿ ಒಂದು ಸ್ಥಾನವನ್ನು ಗಳಿಸಲಿದೆ. ಲೆಕ್ಕಾಚಾರದ ದೃಷ್ಟಿಯಿಂದ ನೋಡಿದರೆ ಜೆಡಿಎಸ್ ಪಕ್ಷಕ್ಕೆ ಗೆಲ್ಲುವ ಶಕ್ತಿ ಇಲ್ಲ. ಹೀಗಾಗಿಯೇ ಯಡಿಯೂರಪ್ಪ ಅವರು ಬಿಜೆಪಿ ವತಿಯಿಂದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಸ್ಪರ್ಧಿಸಲಿ, ರಾಜ್ಯಸಭೆಗೆ ಹೋಗಲಿ ಎಂದು ಬಯಸಿದ್ದರು.
ಬಿಜೆಪಿ ಮೂಲಗಳ ಪ್ರಕಾರ, ಸದಾನಂದಗೌಡರನ್ನು ರಾಜ್ಯಸಭೆಗೆ ಕಳಿಸಬೇಕು ಎಂಬ ವಿಷಯದಲ್ಲಿ ದಿಲ್ಲಿಯ ನಾಯಕರಿಗೂ ಸಹಮತವಿದೆ. ಎಷ್ಟೇ ಆದರೂ ಸದಾನಂದಗೌಡರು ಮಾಜಿ ಮುಖ್ಯಮಂತ್ರಿ. ಈ ಹಿಂದೆ ಪಕ್ಷದ ವತಿಯಿಂದ ಕರ್ನಾಟಕದಲ್ಲಿ ಮುಖ್ಯಮಂತ್ರಿ ಗಳಾದ ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಈಗ ಸಂಸದರಾಗಿದ್ದಾರೆ.
ನರೇಂದ್ರ ಮೋದಿಯವರ ಸಂಪುಟಕ್ಕೆ ಸೇರಲು ಈ ಇಬ್ಬರು ನಾಯಕರು ಟ್ರೈ ಕೊಟ್ಟಿದ್ದ ರಾದರೂ ಅದು ಸಾಧ್ಯವಾಗಲಿಲ್ಲ ಎಂಬುದು ಬೇರೆ ಮಾತು. ಆದರೆ ಮುಂದಿನ ದಿನಗಳಲ್ಲಿ ಕೇಂದ್ರ ಸಂಪುಟಕ್ಕೆ ಸೇರುವ ವಿಷಯದಲ್ಲಿ ಒಂದು ಪ್ರಯತ್ನ ಮುಂದುವರಿಸುವ ಸ್ಥಿತಿಯಲ್ಲಾದರೂ ಅವರು ಇದ್ದಾರೆ. ಆದರೆ ಡಿ.ವಿ.ಸದಾನಂದಗೌಡರು ಹಾಗಲ್ಲ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಯಿತು. ಹಿಂದೆ ಅವರೇ ಪ್ರತಿನಿಧಿಸುತ್ತಿದ್ದ ಲೋಕಸಭಾ ಕ್ಷೇತ್ರ ಬೇರೆಯವರ ಪಾಲಾಯಿತು.
ಇದನ್ನೂ ಓದಿ: R T Vittalmurthy Column: ಯಡಿಯೂರೋತ್ಸವಕ್ಕೆ 114ರ ಟಾರ್ಗೆಟ್
ವಾಸ್ತವವಾಗಿ ಈ ಬೆಳವಣಿಗೆಯಿಂದ ಸದಾನಂದಗೌಡರು ಕ್ರುದ್ಧರಾಗಿದ್ದೇನೋ ನಿಜ ಮತ್ತು ದಿಲ್ಲಿ ನಾಯಕರ ಮುಂದೆ ತಮ್ಮ ಬೇಗುದಿಯನ್ನು ತೋಡಿಕೊಂಡಿದ್ದೂ ನಿಜ. ಆದರೆ ಇಷ್ಟೆಲ್ಲ ಅದ ನಂತರವೂ ಸದಾನಂದಗೌಡರು, ಪಕ್ಷವು ಹಾಕಿದ ಲಕ್ಷ್ಮಣ ರೇಖೆಯನ್ನು ಮೀರಿ ಹೆಜ್ಜೆ ಇಡಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯ ಬಿಜೆಪಿಯ ಭಿನ್ನಮತ ತಾರಕ ಕ್ಕೇರಿದ ಸಂದರ್ಭದಲ್ಲೂ ಅವರು ಗುದ್ದಾಟಕ್ಕೆ ಇಳಿಯಲಿಲ್ಲ.
ಈಗಂತೂ ಅವರು ಪಕ್ಷದಲ್ಲಿನ ಭಿನ್ನಮತದ ನಿವಾರಣೆಗೆ ಶ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲ, ಭಿನ್ನಮತದ ಉರಿ ಕಡಿಮೆಯಾಗಲು ಏನು ಮಾಡಬೇಕು? ಅಂತ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಕಾಲಕಾಲಕ್ಕೆ ಸಲಹೆ ನೀಡುತ್ತಿದ್ದಾರೆ. ಅವರ ಈ ಗುಣ ಯಡಿಯೂರಪ್ಪನವರಿಗೆ ಎಷ್ಟು ಇಷ್ಟವಾಗಿದೆ ಎಂದರೆ, “ನಮ್ಮ ಗೌಡ್ರು ಈ ಸಲ ರಾಜ್ಯ ಸಭೆಗೆ ಹೋಗಲಿ" ಎಂಬ ನಿಲುವಿಗೆ ಬಂದಿದ್ದಾರೆ.
ಆದರೆ ಅವರು ಇಂಥ ನಿಲುವಿನಲ್ಲಿರುವ ಕಾಲದ ದಿಲ್ಲಿಯಿಂದ ತೇಲಿಬರುತ್ತಿರುವ ಸುದ್ದಿ ಅವರನ್ನು ವಿಸ್ಮಯಗೊಳಿಸಿದೆ. ಕಾರಣ? ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಉತ್ಸಾಹ ತೋರಿಸಿ, ‘ಈ ಬಾರಿ ಬಿಜೆಪಿ-ಜೆಡಿಎಸ್ ಮಿತ್ರಕೂಟದ ವತಿಯಿಂದ ದೇವೇಗೌಡರೇ ರಾಜ್ಯಸಭೆ ಚುನಾವಣೆಯಲ್ಲಿ ಕ್ಯಾಂಡಿಡೇಟ್ ಆಗಲಿ’ ಎಂಬ ಸಿಗ್ನಲ್ಲು ರವಾನಿಸಿದ್ದಾರೆ.
ಹೀಗೆ ದೇವೇಗೌಡರೇ ಮಿತ್ರಕೂಟದ ಕ್ಯಾಂಡಿಡೇಟ್ ಅಗಲಿ ಅಂತ ಪ್ರಧಾನಿ ನರೇಂದ್ರ ಮೋದಿಯವರು ಬಯಸುತ್ತಿರುವುದಕ್ಕೆ ಕಾರಣಗಳಿವೆ. ಎಲ್ಲಕ್ಕಿಂತ ಮುಖ್ಯವಾದುದು ಎಂದರೆ ದೇವೇಗೌಡರ ವಿಷಯದಲ್ಲಿ ತಾವು ತೋರಿಸುವ ಗೌರವ, ಭವಿಷ್ಯದಲ್ಲಿ ಒಕ್ಕಲಿಗ ಮತಬ್ಯಾಂಕಿನ ಮೇಲೆ ಪ್ರಭಾವ ಬೀರುತ್ತದೆ.
ಇದೇ ರೀತಿ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ನಡುವಣ ಮೈತ್ರಿಗೆ ಫೆವಿಕಾಲ್ ಆಗುತ್ತದೆ ಎಂಬುದು ಮೋದಿಯವರ ಲೆಕ್ಕಾಚಾರ. ಎಷ್ಟೇ ಆದರೂ ಈ ದೇಶದಲ್ಲೀಗ ಮಾಜಿ ಪ್ರಧಾನಿ ಅಂತ ಇರುವುದು ದೇವೇಗೌಡರು ಮಾತ್ರ. ಅಂಥ ನಾಯಕರು ರಾಜ್ಯಸಭೆಯಲ್ಲಿದ್ದು, ಆಗಾಗ ತಮ್ಮ ಪರವಾಗಿ ಧ್ವನಿ ಎತ್ತಿದರೆ ಅದು ದೇಶಕ್ಕೇ ಒಂದು ಮೆಸೇಜು. ಈ ನೆಲವನ್ನಾಳಿದ ನಾಯಕರೇ ತಮಗೆ ಸರ್ಟಿಫಿಕೇಟು ಕೊಡುವಾಗ ವಿರೋಧಿಗಳದು ಯಾವ ಲೆಕ್ಕ? ಎಂಬ ಮೆಸೇಜು ರವಾನಿಸಬಹುದು ಎಂಬುದು ಮೋದಿಯವರ ಲೆಕ್ಕಾಚಾರ.
ಇದೆಲ್ಲಕ್ಕೂ ಪ್ಲಸ್ ಎಂಬಂತೆ ಮಾಜಿ ಪ್ರಧಾನಿ ದೇವೇಗೌಡರೂ ರಾಜ್ಯಸಭೆಯಲ್ಲಿ ಅಬ್ಬರಿಸು ತ್ತಿದ್ದಾರೆ. ಟೈಮು ಸಿಕ್ಕಾಗಲೆಲ್ಲ ಕರ್ನಾಟಕದ ಹಿತಕ್ಕೆ ಪೂರಕವಾಗಿ ಮಾತನಾಡುವ ದೇವೇಗೌಡರು, ಹೊತ್ತಿಗೆ ಸರಿಯಾಗಿ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಬಗ್ಗೆಯೂ ಶಹಭಾಷ್ ಗಿರಿ ಕೊಡುತ್ತಾರೆ.
ಹೀಗಾಗಿ ತಮಗೆ ಮತ್ತು ಕರ್ನಾಟಕದಲ್ಲಿ ತಮ್ಮ ಪಕ್ಷಕ್ಕೆ ಪಾಸಿಟಿವ್ ಆಗಿರುವ ದೇವೇಗೌಡರು ಮರಳಿ ರಾಜ್ಯಸಭೆಗೆ ಬರಲಿ ಎಂಬುದು ಮೋದಿಯವರ ಲೆಕ್ಕಾಚಾರ. ಅವರ ಈ ಲೆಕ್ಕಾಚಾರ ರಾಜ್ಯದ ಬಿಜೆಪಿ ನಾಯಕರಿಗೆ ವಿಸ್ಮಯ ತಂದಿರುವುದೇನೋ ನಿಜ. ಆದರೆ ಈ ವಿಷಯದಲ್ಲಿ ಅವರು ದೂಸ್ರಾ ಮಾತನಾಡುವ ಸ್ಥಿತಿಯಲ್ಲೂ ಇಲ್ಲ.
ಕೈಗೆ ಯಡಿಯೂರಪ್ಪ ಟಾನಿಕ್?
ಇನ್ನು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವ ಚಿಂತೆಯಲ್ಲಿರುವ ಕಾಂಗ್ರೆಸ್ ಪಾಳಯಕ್ಕೆ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಟಾನಿಕ್ ಕೊಟ್ಟಿದ್ದಾರೆ. ಅಂದ ಹಾಗೆ, ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿ ರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸದ್ಯದ ಉಪಚುನಾವಣೆ ನಡೆಯಲಿದ್ದು, ಕ್ಷೇತ್ರದಿಂದ ಯಾರು ಕಣಕ್ಕಿಳಿಯಬೇಕು? ಎಂಬ ವಿಷಯದಲ್ಲಿ ಕೈ ಪಾಳಯ ಚಿಂತೆಗೆ ಬಿದ್ದಿದೆ.
ಒಂದು ಕಡೆ, ತಮ್ಮ ಕುಟುಂಬದವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದ ತಮ್ಮ ಪುತ್ರ ಸಮರ್ಥ್ ಅವರನ್ನು ಕಣಕ್ಕಿಳಿಸಲು ಗಣಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಬಯಸಿದ್ದರೆ, ಕ್ಷೇತ್ರದಲ್ಲಿ ತಮ್ಮ ಸಮುದಾಯದ ಮತಗಳೇ ನಿರ್ಣಾಯಕ; ಹೀಗಾಗಿ ತಮ್ಮ ಸಮುದಾಯಕ್ಕೇ ಟಿಕೆಟ್ ದಕ್ಕಬೇಕು ಅಂತ ಮುಸ್ಲಿಂ ನಾಯಕರು ಪಟ್ಟು ಹಿಡಿದಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ಏನೇ ಮಾಡಲು ಹೋದರೂ ಕಾಂಗ್ರೆಸ್ ಪಾಳಯ ಒಡೆದು ಹೋಗಿ ಬಿಜೆಪಿ-ಜೆಡಿಎಸ್ ಮಿತ್ರಕೂಟಕ್ಕೆ ಲಾಭವಾಗಬಹುದು ಎಂಬುದು ಕಾಂಗ್ರೆಸ್ ಪಾಳಯದ ಚಿಂತೆಗೆ ಕಾರಣವಾಗಿತ್ತು. ಆದರೆ ಕಾಂಗ್ರೆಸ್ ಪಾಳಯದ ಈ ಚಿಂತೆಯನ್ನು ಮಾಜಿ ಮುಖ್ಯ ಮಂತ್ರಿ, ಬಿಜೆಪಿ ನಾಯಕ ಯಡಿಯೂರಪ್ಪ ನಿವಾರಿಸಿದ್ದಾರೆ.
ಕೆಲ ದಿನಗಳ ಹಿಂದೆ ಜಿಯ ಕ್ಷೇತ್ರವೊಂದಕ್ಕೆ ಹೋದ ಯಡಿಯೂರಪ್ಪ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇಂತಿಂಥವರು ಪಕ್ಷದ ಅಭ್ಯರ್ಥಿಗಳಾಗಲಿದ್ದಾರೆ ಎಂದು ಹೆಸರುಗಳನ್ನೇ ಹೇಳಿಬಿಟ್ಟಿದ್ದಾರೆ. ಅವರು ಹೀಗೆ ಹೆಸರುಗಳನ್ನು ಪ್ರಕಟಿಸಿದ್ದೇ ತಡ, ಬಿಜೆಪಿಯ ಭಿನ್ನರ ಪಾಳಯ ಹೇಗೆ ಮುಗಿ ಬಿದ್ದಿದೆ ಎಂದರೆ ಪರಿಸ್ಥಿತಿ ‘ಸೇಮ್ ಟು ಸೇಮ್’ ರಷ್ಯಾ-ಉಕ್ರೇನ್ ಕಾಳಗದ ತರಹ ಆಗಿ ಹೋಗಿದೆ.
ಯಾವ ಮಟ್ಟಿಗೆಂದರೆ ದಿಲ್ಲಿಯ ಬಿಜೆಪಿ ನಾಯಕರೇ ತಲೆ ಕೆಡಿಸಿಕೊಳ್ಳುವಷ್ಟು. ಹೋಗಲಿ ಎಂದರೆ ಯಾವ ಸಂಧಾನಕ್ಕೂ ಜಿಲ್ಲೆಯಲ್ಲಿರುವ ಯಡಿಯೂರಪ್ಪ ಟೀಮೂ ಬಗ್ಗುತ್ತಿಲ್ಲ. ಮತ್ತೊಂದು ಕಡೆ ಭಿನ್ನಮತೀಯರ ಪಡೆಯೂ ಸುಮ್ಮನಾಗುತ್ತಿಲ್ಲ. ಇವತ್ತು ಬಿಜೆಪಿ ಪಾಳಯದ ಈ ಸ್ಥಿತಿ ನೋಡಿ ತುಂಬ ಖುಷಿಯಾಗಿರುವುದು ಕಾಂಗ್ರೆಸ್ ಪಾಳಯ.
ಅದರಲ್ಲೂ ಮುಖ್ಯವಾಗಿ ತಮ್ಮ ಪುತ್ರ ಸಮರ್ಥ್ ಅವರಿಗೆ ಟಿಕೆಟ್ಟು ಕೊಡಿಸಲು ಬಯಸಿರು ವುದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್. ಯಾಕೆಂದರೆ ಬಿಜೆಪಿಯಲ್ಲಿನ ಗೊಂದಲ ಹಿಂದೂ ಮತದಾರರ ಕ್ರೋಡೀಕರಣಕ್ಕೆ ಅಡ್ಡಗಾಲಾಗುವುದರಿಂದ ತಮ್ಮ ಪಕ್ಷದೊಳಗಿನ ವಿರೋಧಗಳ ಬಗ್ಗೆ ಚಿಂತೆ ಮಾಡದೆ ತಮ್ಮ ಪುತ್ರ ಸಮರ್ಥ್ ಅವರಿಗೆ ಟಿಕೆಟ್ ಕೊಡಿಸ ಬಹುದು. ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಎಂಬುದು ಅವರ ಲೆಕ್ಕಾಚಾರ. ಆ ದೃಷ್ಟಿ ಯಿಂದ ಯಡಿಯೂರಪ್ಪ ಅವರು ಕೈ ಪಾಳಯಕ್ಕೆ ಯುಗಾದಿಯ ಗಿಫ್ಟ್ ಕೊಟ್ಟಿದ್ದಾರೆ.
ರಾಜೀನಾಮೆಗೆ ರೆಡಿ ಅನ್ನಲಿದ್ದಾರೆ
ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಳಯದಿಂದ ‘ಟಫ್’ ಸಂದೇಶಗಳು ಹೊರಡುತ್ತಿವೆ. ಅದರಲ್ಲೂ ಈ ಬಾರಿಯ ಬಜೆಟ್ ಮಂಡನೆಯ ನಂತರ ಮೈಸೂರಿಗೆ ಹೋದ ಸಿದ್ದರಾಮಯ್ಯ ಅವರು, “ಹೈಕಮಾಂಡ್ ಹೇಳಿದರೆ ಸಿಎಂ ಹುದ್ದೆಗೆ ರಾಜೀನಾಮೆ ಕೊಡಲು ಸಿದ್ದ" ಎಂದರು.ಅಂದ ಹಾಗೆ, ‘ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ.
ಹೈಕಮಾಂಡ್ ನಿರ್ಣಯಕ್ಕೆ ಬದ್ಧವಾಗಿರುತ್ತೇನೆ’ ಅಂತ ಸಿದ್ದರಾಮಯ್ಯ ಅವರು ಹೇಳುತ್ತಿದ್ದ ರಾದರೂ ಈ ಬಾರಿ ಅಂಥ ಮಾತಿಗೆ ಒತ್ತುಕೊಟ್ಟು ಮತ್ತಷ್ಟು ಪವರ್ ಫುಲ್ ಆದ ಧ್ವನಿ ಯನ್ನು ಹೊರಡಿಸಿದ್ದಾರೆ. ಸಿದ್ದರಾಮಯ್ಯ ಆಪ್ತರ ಪ್ರಕಾರ, ಬಜೆಟ್ ಅಧಿವೇಶನದ ನಂತರ ಮೂರು ನಿರ್ಧಾರಗಳೊಂದಿಗೆ ಸಿದ್ದರಾಮಯ್ಯ ದಿಲ್ಲಿ ದಂಡಯಾತ್ರೆ ಮಾಡಲಿದ್ದಾರೆ.
ಹೀಗೆ ದಿಲ್ಲಿಗೆ ಹೋದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಸಂಪುಟ ಪುನಾರಚನೆಗೆ ಅನುಮತಿ ನೀಡಿ ಎಂದು ಕೇಳಲಿದ್ದಾರೆ. ಅದಕ್ಕವರು ಒಪ್ಪಿದರೆ ಓಕೆ. ಒಂದು ವೇಳೆ ಒಪ್ಪದೆ ಹೋದರೆ ‘ನನ್ನ ರಾಜೀನಾಮೆ ತೆಗೆದುಕೊಳ್ಳಿ’ ಅಂತ ಪಟ್ಟು ಹಿಡಿಯಲಿದ್ದಾರೆ. ಅದಕ್ಕೆ ರಾಹುಲ್ ಗಾಂಧಿ ಒಪ್ಪಿದರೆ ಮೂರನೇ ದಾಳ ಉರುಳಿಸುತ್ತಾರೆ.
ಅದೆಂದರೆ ತಾವು ತೆರವು ಮಾಡುವ ಜಾಗಕ್ಕೆ ದಲಿತ ನಾಯಕರೇ ಬರಬೇಕು ಎಂಬುದು. ಆದರೆ ಸಿದ್ದರಾಮಯ್ಯ ಅವರ ಮೂರು ನಿರ್ಧಾರಗಳ ಬಗ್ಗೆ ಮಾತನಾಡುವ ಅವರ ಆಪ್ತರು ಇದರ ಜತೆಗೆ ಮತ್ತೊಂದು ಮಾತನ್ನೂ ಸೇರಿಸುತ್ತಾರೆ. ಅದೆಂದರೆ ಕೇರಳ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಮುಗಿಯುವವರೆಗೂ ರಾಹುಲ್ ಗಾಂಧಿ ಒಂದು ನಿರ್ಧಾರಕ್ಕೆ ಬರುವುದಿಲ್ಲ.
ಯಾಕೆಂದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಇಳಿದರೆ ಅಹಿಂದ ವರ್ಗಗಳ ಮತಬ್ಯಾಂಕ್ ಛಿದ್ರವಾಗುತ್ತದೆ ಎಂಬ ಆತಂಕ. ಹೀಗಾಗಿ ಈ ಬಾರಿ ಸಿದ್ದರಾಮಯ್ಯ ಅವರ ಮೂರು ಬೇಡಿಕೆಗಳಲ್ಲಿ ಒಂದಕ್ಕೆ ಅವರು ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆಯಿದೆ. ಹಾಗೇನಾದರೂ ಆದರೆ ಮುಂದಿನ ತಿಂಗಳ ಶುರುವಿನಲ್ಲಿ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ ಎಂಬುದು.
ಲಾಸ್ಟ್ ಸಿಪ್: ಕೇಂದ್ರ ಉಕ್ಕು ಮತ್ತು ಕೈಗಾರಿಕಾ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಯವರಿಗೆ ಒಂದು ವಿಷಯದಲ್ಲಿ ತುಂಬಾ ವಿಸ್ಮಯವಾಗಿದೆಯಂತೆ. ಯಾಕೆಂದರೆ ತಾವು ಕೇಂದ್ರ ಸಚಿವರಾದ ನಂತರ ಅಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ದ ಮುಖ್ಯಮಂತ್ರಿ ರೇವಂತರೆಡ್ಡಿ, ಒಡಿಶಾದ ಮುಖ್ಯಮಂತ್ರಿ ರಾಮಚರಣ ಮಾಜ್ಹಿ ಸೇರಿ ದಂತೆ ಹಲವರು ಮೇಲಿಂದ ಮೇಲೆ ತಮ್ಮ ಬಳಿ ಬರುತ್ತಾರೆ. ಹೊಸ ಹೊಸ ಪ್ರಪೋಸಲ್ಲು ಗಳನ್ನು ಮುಂದಿಟ್ಟು ಕ್ಲಿಯರ್ ಮಾಡಿಸಿಕೊಂಡು ಹೋಗುತ್ತಾರೆ. ಆದರೆ ಕರ್ನಾಟಕದಿಂದ ಯಾರೂ ಇತ್ತ ಕಡೆ ಸುಳಿಯುವುದಿಲ್ಲ. ಪ್ರಪೋಸಲ್ಲುಗಳ ಮಾತು ದೂರವೇ ಉಳಿಯಿತು. ಹೀಗೆ ದೇಶದಲ್ಲಿ ತಮ್ಮ ರಾಜ್ಯಗಳಿಗಾಗಿ ಬಡಿದಾಡುವವರು ಒಂದೆಡೆಯಾದರೆ, ಬಡಿದಾಟದ ಗೋಜೇ ಇಲ್ಲದಂತೆ ಸುಮ್ಮನಿರುವವರು ಒಂದು ಕಡೆ. ಹೀಗಾಗಿ ಈ ಎರಡೂ ತರಹದ ಜನರನ್ನು ನೋಡಿ ಕುಮಾರಸ್ವಾಮಿ ವಿಸ್ಮಿತರಾಗಿದ್ದಾರೆ.