ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ಎಳನೀರೆಂಬ ಅಮೃತದಿಂದಲೂ ತೊಂದರೆ ತಪ್ಪಿದ್ದಲ್ಲ !

ಒಮ್ಮೆ ಕುಡಿದ ಎಳನೀರು ಜೀರ್ಣವಾಗುವ ಮುನ್ನ ಇನ್ನೊಮ್ಮೆ ಎಳನೀರನ್ನು ಕುಡಿಯಬಾರದು. ಇದೇ ರೀತಿ ಸಂಜೆ ಸೂರ್ಯಾಸ್ತದ ನಂತರ ಎಳನೀರಿನ ಸೇವನೆ ಪ್ರಶಸ್ತವಾದುದಲ್ಲ. ಜೀರ್ಣಶಕ್ತಿ ಯನ್ನು, ನಮ್ಮ ಆಹಾರ ಕಾಲವನ್ನು ಮತ್ತು ಹಸಿವೆಯನ್ನು ಗಮನಿಸದೆ ಮನಬಂದಂತೆ ಸೇವಿಸುವ ಎಳನೀರು ಸದಾ ನಮ್ಮ ಸ್ವಾಸ್ತ್ಯವನ್ನು ಹಾಳು ಮಾಡುತ್ತದೆ.

ಎಳನೀರೆಂಬ ಅಮೃತದಿಂದಲೂ ತೊಂದರೆ ತಪ್ಪಿದ್ದಲ್ಲ !

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

drsadhanashree@gmail.com

ಸ್ನೇಹಿತರೆ, ನನ್ನ ಕ್ಲಿನಿಕ್ ಪುರಾಣವನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಲು ಮತ್ತೊಮ್ಮೆ ಇಂದು ಹಾಜರಾಗಿದ್ದೇನೆ. ಕಳೆದ ವಾರ, ಸಂಜೆಯ ಸಮಯದಲ್ಲಿ ಕ್ಲಿನಿಕ್ಕಿಗೆ ತಂದೆ ಮತ್ತು ಮಗಳ ಭೇಟಿ. ತಂದೆಗೆ ಕಳೆದ ಕೆಲವು ದಿನಗಳಿಂದ ಮೈ ಕೈ ನೋವು, ಜ್ವರದ ರೀತಿಯ ಅನುಭವ, ಅಜೀರ್ಣ ಮತ್ತು ಭೇದಿ. ಮಗಳಿಗೆ ಅತಿಯಾದ ನೆಗಡಿ, ಸೀನು ಮತ್ತು ತಲೆನೋವು.

ಗೊತ್ತಿದ್ದ ಮನೆ ಮದ್ದುಗಳ ಪ್ರಯೋಗವು ಸಫಲವಾಗದಿದ್ದಾಗ ವೈದ್ಯರನ್ನು ಭೇಟಿ ಮಾಡುವ ಯೋಚನೆ ಬಂತು. ಇವರು ಸ್ವಲ್ಪ ಹಳೆಯ ರೋಗಿಯಾಗಿದ್ದರಿಂದ ಆಯುರ್ವೇದ ಚಿಕಿತ್ಸೆಯನ್ನು ಪಡೆದ ಅನುಭವವಿದ್ದ ಕಾರಣ ಆಯುರ್ವೇದ ವೈದ್ಯರಲ್ಲಿ ಯಾವ ವಿಷಯವನ್ನೂ ಮುಚ್ಚಿಡ ಬಾರದು ಎಂಬ ಭಾವನೆ ಮನಸ್ಸಿನಲ್ಲಿ ಬೇರೂರಿತ್ತು.

ಆದ್ದರಿಂದ ನಾನು ಹೆಚ್ಚು ಪ್ರಶ್ನೆಗಳನ್ನು ಕೇಳುವ ಮೊದಲೇ ಅವರು ತಾವು ಮಾಡಿರಬಹುದಾದ ತಪ್ಪುಗಳನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿದರು. ಈ ಪೇಷಂಟಿಗೆ ಹಲವು ತಿಂಗಳಿಂದ ಕಿಡ್ನಿ ಸ್ಟೋನಿನ ಸಮಸ್ಯೆ. ಅದಕ್ಕೆ ಚಿಕಿತ್ಸೆಯೂ ನಡೆಯುತ್ತಿದೆ. ಯಾವುದೋ ಸಂದರ್ಭದಲ್ಲಿ ತಮ್ಮ ಗೆಳೆಯರೊಂದಿಗೆ ಮಾತನಾಡುವಾಗ ಕಿಡ್ನಿ ಸ್ಟೋನಿಗೆ ‘ಎಳನೀರು’ ಅತ್ಯುತ್ತಮವಾದ ಔಷಧಿ ಎಂದು ಇವರಿಗೆ ತಿಳಿದು ಬಂತು.

ಇದನ್ನೂ ಓದಿ: Dr Sadhanashree Column: ಮೂತ್ರಕೋಶದ ಕಲ್ಲು: ತಿಳಿದುಕೊಳ್ಳಿ ಆಯುರ್ವೇದದ ಸೊಲ್ಲು

ಮಗಳಿಗೆ ಮ್ಯೂಸಿಕ್ ಕ್ಲಾಸಿಗೆ ಕರೆದುಕೊಂಡು ಹೋಗಿ ಬರುವ ಒಂದು ಜವಾಬ್ದಾರಿ ಇವರದ್ದು. ಜೊತೆಗೆ ಬೇಗನೆ ತಮ್ಮ ಮೂತ್ರಕೋಶದ ಕಲ್ಲನ್ನು ಕರಗಿಸಿಕೊಳ್ಳುವ ಉತ್ಸಾಹವೂ ಸೇರಿಕೊಂಡಿತು. ಹಾಗಾಗಿ ಇವರು ಮಾಡಿದ್ದೇನೆಂದರೆ, ಪ್ರತಿನಿತ್ಯವೂ ಮಧ್ಯಾಹ್ನ ಚೆನ್ನಾಗಿ ಹೊಟ್ಟೆ ತುಂಬುವಷ್ಟು ಊಟವನ್ನು ಮಾಡಿದ ನಂತರ ಮಗಳನ್ನು ಮ್ಯೂಸಿಕ್ ಕ್ಲಾಸಿಗೆ ಕರೆದುಕೊಂಡು ಹೋಗುವ ದಾರಿ ಯಲ್ಲಿ ಇಬ್ಬರೂ ಒಂದೊಂದು ಎಳನೀರನ್ನು ಕುಡಿಯುತ್ತಿದ್ದರು.

ಜೊತೆಗೆ ಅದರ ತಿರುಳನ್ನೂ ಸವಿಯುತ್ತಿದ್ದರು. ಅಷ್ಟೇ ಅಲ್ಲದೆ ಅವರು ದಿನನಿತ್ಯ ಬೆಳಿಗ್ಗೆ ವಾಕಿಂಗ್ ನಿಂದ ಹಿಂತಿರುಗುವ ಸಮಯದಲ್ಲಿ ಮತ್ತೊಂದು ಎಳನೀರನ್ನು ಸೇವಿಸಿ, ಅದು ಜೀರ್ಣವಾಗುವ ಮೊದಲೇ ಮತ್ತೆ ಉಪಾಹಾರವನ್ನು ತೆಗೆದುಕೊಳ್ಳುತ್ತಿದ್ದರು. ಹೀಗೆ ಸತತವಾಗಿ 10 ದಿನಗಳ ಕಾಲ ಮಾಡಿದ ನಂತರ ಅಜೀರ್ಣ, ಜ್ವರ, ನೆಗಡಿ, ತಲೆನೋವಿನ ವ್ಯತ್ಯಾಸಗಳನ್ನು ಅಪ್ಪ-ಮಗಳು ಅನುಭ ವಿಸಲು ಪ್ರಾರಂಭಿಸಿದರು.

ಎಳನೀರಿನಿಂದಲೇ ಈ ಸಮಸ್ಯೆಗಳು ಉದ್ಭವಿಸಿದೆಯೇ ಎಂಬ ಪ್ರಶ್ನೆಯನ್ನು ನನ್ನ ಮುಂದೆ ಇಟ್ಟರು. ಡಾಕ್ಟ್ರೇ, ಆಯುರ್ವೇದದ ಪ್ರಕಾರ ಎಳನೀರು ಬಹಳ ಒಳ್ಳೆಯದು ಅಲ್ಲವೇ, ಹಾಗಿದ್ದಾಗ ನಮಗೆ ಅದರಿಂದ ತೊಂದರೆ ಆಗಿದ್ದಾದರೂ ಏಕೆ? ಎಂದು ಪ್ರಶ್ನಿಸತೊಡಗಿದರು. ಸ್ನೇಹಿತರೆ, ಇಷ್ಟು ಹೊತ್ತಿಗೆ ನಿಮ್ಮ ಮನಸ್ಸಿನಲ್ಲೂ ಈ ಪ್ರಶ್ನೆಗಳು ಉದ್ಭವಿಸಿರಬಹುದು. ಹಾಗಾಗಿ, ಬನ್ನಿ ಆಯುರ್ವೇದ ಶಾಸ್ತ್ರ ಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕೋಣ.

7 R

ಆಯುರ್ವೇದದಲ್ಲಿ ನಾರಿಕೇಲ’ ಅಥವಾ ನಾಲಿಕೇರ’ ಅಂದರೆ ತೆಂಗು. ಪೂರ್ವಜರು ಹೇಳಿರುವಂತೆ, ಆಕಾಶದಿಂದ ಸುರಿಯುವ ಪರಿಶುದ್ಧ ಮಳೆ ನೀರು ಮತ್ತು ಗಂಗಾಜಲವನ್ನು ಬಿಟ್ಟರೆ ಭೂಮಿಯಲ್ಲಿ ಸಿಗುವ ಪರಿಶುದ್ಧ ಜಲಗಳಲ್ಲಿ ತೆಂಗಿನ ನೀರು /ಎಳನೀರೇ ಹೆಚ್ಚು ಉತ್ತಮವಾದದ್ದು. ಸಂಸ್ಕೃತದ ಶಬ್ದಕೋಶದಲ್ಲಿ ನಾರಿಕೇಲದ ಉತ್ಪತ್ತಿಯನ್ನ ನೋಡಿದರೆ ಅದು ಹೀಗೆ ಹೇಳುತ್ತೆ - ಆನಂದವನ್ನು ಉಂಟುಮಾಡುವ ಸ್ತ್ರೀಯರ ರಾಸಕೇಳಿಯಂತೆ ತೆಂಗು ಕೂಡ ಸೇವಿಸಿದಾಗ ತೃಪ್ತಿಯನ್ನು ಮತ್ತು ಹರ್ಷವನ್ನು ಉಂಟುಮಾಡುತ್ತದೆ ಎಂದರ್ಥ.

ಇದರ ಜೊತೆಗೆ, ಇದಕ್ಕೆ ಮತ್ತೊಂದು ವಿಶೇಷ ಅರ್ಥವಿದೆ - ನೀರು ಕೆಳಮುಖವಾಗಿ ಹರಿಯುವ ಸ್ವಭಾವ ಉಳ್ಳದ್ದಾದರೂ ತೆಂಗಿನಲ್ಲಿ ಮಾತ್ರ ನೀರು ವಾಯುವಿನ ಪ್ರೇರಣೆಯಿಂದ ಮೇಲ್ಮುಖವಾಗಿ ಪ್ರವಹಿಸುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಈ ಎಳನೀರಿನಲ್ಲಿ ದೋಷಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದರಿಂದ ಇದು ಅಮೃತಕ್ಕೆ ಸಮಾನ.

ತೆಂಗನ್ನು ಭೂಲೋಕದ ಕಲ್ಪವೃಕ್ಷವೆಂದು ಕರೆದಿದ್ದಾರೆ, ಕಾರಣ ಇದರ ಎಲ್ಲಾ ಭಾಗಗಳು ಬೇರೆ ಬೇರೆ ರೀತಿಯಲ್ಲಿ ಉಪಯುಕ್ತವಾಗುತ್ತದೆ. ಆದರೆ ನಮ್ಮ ಜೀವದ ಮತ್ತು ಜೀವನದ ಪುಷ್ಟಿಗೆ ನೇರವಾಗಿ ಸಹಕರಿಸುವ ಭಾಗವೆಂದರೆ ತೆಂಗಿನ ಫಲದೊಳಗಿರುವ ಮಧುರವಾದ ನೀರು ಮತ್ತು ಮೃದುವಾದ ತೆಳ್ಳಗಿನ ಬಿಳಿಭಾಗ.

ಇದರ ಜೊತೆಗೆ, ಒಣಕೊಬ್ಬರಿ, ಕೊಬ್ಬರಿಯಿಂದ ಹಿಂಡಿದ ಎಣ್ಣೆ ಹಾಗೂ ಹಿಂಡಿ, ತೆಂಗಿನ ಹೂವು, ಹೂವಿನಿಂದ ಹಿಂಡಿದ ರಸ - ಹೀಗೆ ಈ ಎಲ್ಲವೂ ಒಂದೇ ಮರದ ಭಾಗಗಳಾದರೂ ಸಹ ಅವುಗಳ ಗುಣ ಧರ್ಮಗಳಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಹಾಗಾಗಿ ಅವುಗಳನ್ನು ತಿಳಿದುಕೊಂಡು ಉಪಯೋಗಿಸಿದರೆ ಸದಾ ಕ್ಷೇಮ.

ಇಂದಿನ ಈ ಲೇಖನದಲ್ಲಿ ಎಳನೀರಿನ ಉಪಯೋಗದ ಬಗ್ಗೆ ವಿಶೇಷವಾಗಿ ತಿಳಿದುಕೊಳ್ಳೋಣ. ಇದರ ಬಗ್ಗೆ ಒಂದು ಸ್ವಾರಸ್ಯಕರವಾದ ವಿಷಯವೊಂದನ್ನು ಓದಿದ್ದೆ. ಇತಿಹಾಸದ ಪ್ರಕಾರ, ಎರಡನೇ ಮಹಾಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರಿಗೆ ತುರ್ತು ಐ.ವಿ ಫ್ಲುಯಿಡ್ ಲಭ್ಯವಿಲ್ಲದ ಕಾರಣ ನೇರವಾಗಿ ರಕ್ತನಾಳಗಳಿಗೆ ಎಳನೀರನ್ನು ಸೇರಿಸಿದ್ದರು ಎಂಬ ಅಚ್ಚರಿಯ ವಿಷಯ ಸಿಗುತ್ತದೆ.

ಇಂದು, ಇದರ ನೈಸರ್ಗಿಕ ಮತ್ತು ಪೌಷ್ಟಿಕಾಂಶಗಳ ಸಮೃದ್ಧಿಯಿಂದ ಇದು ಬಹಳ ಜನಪ್ರಿಯವಾದ ಪಾನೀಯವಾಗಿದ್ದು ಹಲವಾರು ರೂಪಗಳಲ್ಲಿ ಇದು ಲಭ್ಯವಿದೆ. ಇದರ ಗುಣ ಧರ್ಮಗಳನ್ನು ನಾವು ನೋಡುವುದಾದರೆ, ನೀರಿಗೆ ಹೋಲಿಸಿದರೆ ಎಳನೀರು ಸ್ನಿಗ್ಧವಾಗಿರುತ್ತದೆ. ಅಂದರೆ ದೇಹಕ್ಕೆ ಜಿಡ್ಡನ್ನು ಪೂರೈಸುವ ಗುಣವಿದೆ. ಇದು ರುಚಿಯಲ್ಲಿ ಸಿಹಿಯಾಗಿದ್ದು ಕುಡಿದಾಗ ತೃಪ್ತಿಯನ್ನು ನೀಡುತ್ತದೆ.

ಸ್ವಭಾವತಃ ಎಳನೀರು ಬಹಳ ಶೀತಲ ಮತ್ತು ಸ್ಪರ್ಶಕ್ಕೆ ಅತ್ಯಂತ ತಂಪೆನಿಸುವ ಇದು ದೇಹಕ್ಕೂ ಸಹ ಈ ತಂಪನ್ನು ನೀಡುತ್ತದೆ.ನೀರಿಗೆ ಹೋಲಿಸಿದರೆ ಎಳೆನೀರು ಬಹಳ ಬೇಗ ಜೀರ್ಣವಾಗುತ್ತದೆ. ಹಾಗಾಗಿಯೇ ಇದನ್ನು ಕುಡಿದ ಸ್ವಲ್ಪ ಸಮಯಕ್ಕೆ ಮೂತ್ರ ವಿಸರ್ಜನೆ ಆಗುತ್ತದೆ. ಇದು ಬಸ್ತಿ - ಮೂತ್ರಾಶಯಗಳ ಶುದ್ಧಿಯನ್ನು ಹಾಗೂ ಪಚನಶಕ್ತಿಯನ್ನು ಉತ್ತೇಜಿಸುತ್ತದೆ.

ಈ ಮೇಲೆ ಹೇಳಿದ ಗುಣಗಳಿಂದ ಎಳನೀರು ದೇಹವನ್ನು ಮತ್ತು ಮನಸ್ಸನ್ನು ಆಹ್ಲಾದಗೊಳಿಸುತ್ತದೆ. ದೈಹಿಕ ಶ್ರಮ ಹೆಚ್ಚಾಗಿರುವವರಿಗೆ ಇದು ಅಮೃತ ಪ್ರಾಯವಾಗಿರುತ್ತದೆ. ಇದು ಒಂದು ಹಂತದಲ್ಲಿ ಹೃದಯಕ್ಕೆ ಉತ್ತೇಜಕವು ಹೌದು. ಬಾಯಿ, ನಾಲಿಗೆ, ಗಂಟಲುಗಳು ಬೇಸಿಗೆಯ ಬಿಸಿಯಿಂದ ಒಣಗಿರು ವವರಿಗೆ ಇದು ತಕ್ಷಣವೇ ಪರಿಹಾರವನ್ನು ನೀಡುತ್ತದೆ.

ಇದು ದೇಹದಲ್ಲಿ ವಾತ-ಪಿತ್ತ ಶಾಮಕವಾಗಿ ಕೆಲಸ ಮಾಡುತ್ತದೆ. ನಮ್ಮ ದೇಹಕ್ಕೆ ಅಗತ್ಯವಾಗಿರುವ ಹಲವಾರು ಖನಿಜಾಂಶಗಳನ್ನು ಹೊಂದಿರುವುದರಿಂದ ಇದು ಒಂದು ಉತ್ತಮ ಟಾನಿಕ್ ಆಗಿ ಪರಿಣಮಿಸುತ್ತದೆ. ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ನಮ್ಮ ಸ್ನೇಹಿತರು ಯಾರಾದರೂ ಸೇರಿದಾಗ ಅವರ ಆರೈಕೆಗೆ ಸಾಕಷ್ಟು ಎಳನೀರನ್ನು ನಾವು ತೆಗೆದುಕೊಂಡು ಹೋಗಿ ಕೊಡುವ ರೂಢಿ ಇದೆ.

ಎಳನೀರು ರೋಗಾವಸ್ಥೆಯಲ್ಲಿ ಉತ್ತಮ ಪರಿಹಾರ ಎಂಬುದು ಹಲವರ ಅಭಿಪ್ರಾಯ. ಆದರೆ ಅಮೃತವೂ ಸಹ ಕ್ರಮ ತಪ್ಪಿದಾಗ ವಿಷವಾಗುವಂತೆ ಎಳನೀರನ್ನು ವಿವೇಚನೆಯಲ್ಲದೆ ಉಪಯೋಗಿ ಸುವುದರಿಂದ ಅನುಕೂಲಕ್ಕಿಂತಲೂ ಪ್ರತಿಕೂಲವೇ ಹೆಚ್ಚಾಗುತ್ತದೆ. ಆದ್ದರಿಂದ ಇದರ ಗುಣಧರ್ಮ ಗಳನ್ನು ಅರಿತು ಉಪಯೋಗಿಸಿದಾಗ ಇದು ನಮಗೆ ಸ್ವಾಸ್ಥ್ಯವನ್ನು ಧಾರೆ ಎರೆಯುತ್ತದೆ.

ಬಿಸಿಲಿನ ಬೇಗೆಯಿಂದ ಬಳಲುತ್ತಿರುವಾಗ ಎಳನೀರನ್ನು ಕುಡಿಯುವುದು ರೂಢಿ. ಇದು ದೇಹದಲ್ಲಿ ತಕ್ಷಣದಲ್ಲಿ ಶೀತ-ಉಷ್ಣಗಳ ಏರುಪೇರನ್ನು ಉಂಟುಮಾಡುವುದರಿಂದ ಹಲವರಿಗೆ ಹೀಗೆ ಮಾಡಿ ದಾಗ ನೆಗಡಿ, ತಲೆನೋವು, ತಲೆಭಾರ ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಬಿಸಿಲಿನಲ್ಲಿ ಹೋಗಿ ಬಂದ ನಂತರ ಸ್ವಲ್ಪ ಸಮಯ ಸುಧಾರಿಸಿಕೊಂಡು ನಂತರ ನಿಧಾನವಾಗಿ ಎಳನೀರನ್ನು ಸೇವಿಸು ವುದು ಒಳ್ಳೆಯದು.

ಅಂತೆಯೇ, ಅತಿ ತಂಪಾಗಿರುವ ಎಳನೀರನ್ನು ಪ್ಲಾಸ್ಟಿಕ್ ಕೊಳವೆಯಿಂದ/ ಸ್ಟ್ರಾ ಇಂದ ಹೀರುವುದು ಅಭ್ಯಾಸ. ಆದರೆ, ಈ ಅಭ್ಯಾಸವು ಗಂಟಲ ಭಾಗವನ್ನೇ ವಿಶೇಷವಾಗಿ ಅತ್ಯಂತ ಶೀಘ್ರವಾಗಿ ತಣ್ಣ ಗಾಗಿಸುವುದರಿಂದ ಆ ಭಾಗದ ಅವಯವಗಳು ವಿಕೃತಿ ಹೊಂದಿ ತೊಂದರೆ ಉಂಟಾಗುತ್ತದೆ. ಕಿರುನಾಲಿಗೆಯ ಬಾವು, ನೆಗಡಿ, ಕೆಮ್ಮು, ಉಬ್ಬಸಗಳು ಉಂಟಾಗುತ್ತದೆ.

ಆಯುರ್ವೇದವು ಎಳನೀರನ್ನು ದ್ರವಹಾರವಾಗಿಯೇ ಪರಿಗಣಿಸಿದೆ. ಆದ್ದರಿಂದ ಹಸಿವೆಯನ್ನು ಗಮನಿಸದೆ ಅಥವಾ ಆಹಾರವನ್ನು ಸೇವಿಸಿದ ನಂತರ ಮನಬಂದಂತೆ ಎಳನೀರನ್ನು ಸೇವಿಸಿದರೆ ಇದರಿಂದ ಖಂಡಿತ ತೊಂದರೆ ತಪ್ಪುದು. ಇದರ ಪರಿಣಾಮವಾಗಿ ಅಜೀರ್ಣ, ಅತಿಸಾರ, ಜ್ವರ- ಮುಂತಾದ ತೊಂದರೆಗಳು ಕಾಣಿಸಿಕೊಳ್ಳಬಹುದು.

ಆದ್ದರಿಂದ ಎಳನೀರನ್ನು ಆಹಾರದ ಸಮಯದ ಪಾನೀಯವಾಗಿ ಬಳಸುವುದು ಸೂಕ್ತ. ಅಂದರೆ ಬೇಸಿಗೆಯಲ್ಲಿ ಊಟದೊಂದಿಗೆ ನೀರಿನ ಬದಲು ಎಳನೀರನ್ನು ಸವಿಯಬಹುದು. ಅಥವಾ ಬಾಯಾ ರಿಕೆ ಎನಿಸಿದಾಗ ನೀರಿನ ಬದಲು ಬಾಯಾರಿಕೆ ನೀಕುವಷ್ಟು ಪ್ರಮಾಣದಲ್ಲಿ ಮಾತ್ರ ಎಳನೀರನ್ನು ಕುಡಿಯಬಹುದು. ಅಥವಾ, ಘನ ಆಹಾರದ ಬದಲು ಎಳನೀರನ್ನೇ ಆಹಾರವಾಗಿ ಸೇವಿಸಬಹುದು.

ಅಂತೆಯೇ, ಬಿಸಿಲುಗಾಲದ ಆಹಾರದ ತಯಾರಿಕೆಯಲ್ಲಿ ನೀರಿನ ಬದಲು ಎಳನೀರನ್ನು ಬಳಸಬಹುದು. ಉದಾಹರಣೆಗೆ- ಎಳನೀರಿನಿಂದ ತಯಾರಿಸಿದ ಗಂಜಿ, ಪಾಯಸ, ಅಪ್ಪಂ ಇತ್ಯಾದಿ. ಎಳನೀರಿನ ತಿರುಳಿನ ಭಾಗವನ್ನು ಸಹ ಊಟದ ಜೊತೆಯಲ್ಲಿ ಸೇವಿಸಿ, ಆಹಾರದ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡುವುದರಿಂದ ತೊಂದರೆಯಾಗುವುದಿಲ್ಲ.

ಆದರೆ ನೆನಪಿಡಿ- ಒಮ್ಮೆ ಕುಡಿದ ಎಳನೀರು ಜೀರ್ಣವಾಗುವ ಮುನ್ನ ಇನ್ನೊಮ್ಮೆ ಎಳನೀರನ್ನು ಕುಡಿಯಬಾರದು. ಇದೇ ರೀತಿ ಸಂಜೆ ಸೂರ್ಯಾಸ್ತದ ನಂತರ ಎಳನೀರಿನ ಸೇವನೆ ಪ್ರಶಸ್ತ ವಾದುದಲ್ಲ. ಜೀರ್ಣಶಕ್ತಿಯನ್ನು, ನಮ್ಮ ಆಹಾರ ಕಾಲವನ್ನು ಮತ್ತು ಹಸಿವೆಯನ್ನು ಗಮನಿಸದೆ ಮನಬಂದಂತೆ ಸೇವಿಸುವ ಎಳನೀರು ಸದಾ ನಮ್ಮ ಸ್ವಾಸ್ತ್ಯವನ್ನು ಹಾಳು ಮಾಡುತ್ತದೆ.

ಕೆಲವು ಮುನ್ನಚ್ಚರಿಕೆಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡರೆ ಒಳ್ಳೆಯದು. ಎಳನೀರು ಅತಿ ತಂಪನ್ನೆರೆಯುವ ಕಾರಣ ಇದನ್ನು ಚಳಿಗಾಲ ಅಥವಾ ಮಳೆಗಾಲದಲ್ಲಿ ಕುಡಿಯುವುದು ಸೂಕ್ತ ವಲ್ಲ. ಆಹಾರ ಸೇವಿಸುವ ಕಾಲದ ಹೊರತಾಗಿ ಪದೇಪದೇ ಎಳನೀರನ್ನು ಸೇವಿಸುವುದರಿಂದ ಹಲವಾರು ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಎಳನೀರಿನ ಅತಿಯಾದ ಸೇವನೆಯಿಂದ ಜೀರ್ಣಶಕ್ತಿ ಕುಂದಬಹುದು. ಅಜೀರ್ಣದಿಂದಾದ ಜ್ವರ, ಭೇದಿ, ವಾಂತಿ ಮುಂತಾದ ತೊಂದರೆಗಳಲ್ಲಿ ಎಳನೀರನ್ನು ಸೇವಿಸಿದಾಗ ಮತ್ತಷ್ಟು ತೊಂದರೆ ಆಗಬಹುದು ಎಳೆನೀರು ಸುಸ್ತು,ಕಾರ್ಶ್ಯ, ತಲೆ ತಿರುಗುವಿಕೆಯನ್ನು ನಿವಾರಿಸುತ್ತದೆ. ಇಂತಹವರು ಇದನ್ನು ಬೆಳಗ್ಗಿನ ಆಹಾರದೊಡನೆ ಹಸಿವೆಯನ್ನು ಗಮನಿಸಿ ಸೇವಿಸಬಹುದು.

ಇದು ಸದ್ಯ ಶುಕ್ರಕರವಾದ್ದರಿಂದ ಕ್ಷೀಣ ವೀರ್ಯದವರು/ ಕಡಿಮೆ ಮೈಥುನ ಶಕ್ತಿ ಹೊಂದಿದವರು ಕ್ರಮವರಿತು ಸೇವಿಸತಕ್ಕದ್ದು. ದಿನನಿತ್ಯ ಮಲಪ್ರವೃತ್ತಿ ಸರಿಯಾಗದವರಿಗೆ, ಹೊಟ್ಟೆಯುಬ್ಬರ, ಅಜೀರ್ಣ ಮತ್ತು ಅಗ್ನಿ ಮಾಂದ್ಯಗಳಿದ್ದವರು ಎಳನೀರನ್ನು (ಬಿಸಿನೀರಿನಲ್ಲಿಟ್ಟು) ಬೆಚ್ಚಗೆ ಮಾಡಿ, ಒಂದೆರಡು ಚಿಟಿಕೆ ಉಪ್ಪನ್ನು ಸೇರಿಸಿ ಕುಡಿಯುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ.

ಈ ರೀತಿಯ ಪ್ರಯೋಗ ಅತಿಸಾರದಲ್ಲಿಯೂ ಒಳ್ಳೆಯದು. ವಾಂತಿ ಇದ್ದಾಗ ಉಪ್ಪಿನ ಬದಲು ಒಂದೆರಡು ಚಮಚ ಹಳೆಯ ಜೇನನ್ನು ಸೇರಿಸಿ ಬಿಸಿ ಮಾಡದೆ, ಪ್ರತಿ 10 ನಿಮಿಷಕ್ಕೆ ಒಂದೆರಡು ಚಮಚದಂತೆ ಕುಡಿಯುವುದರಿಂದ ವಾಂತಿ ನಿಂತು ದಣಿವು ಪರಿಹಾರವಾಗುತ್ತದೆ. ಚೆನ್ನಾಗಿ ಪೋಷಣೆ ಇಲ್ಲದ ಗರ್ಭಿಣಿಯರು ಸಹ ಪ್ರತಿದಿನವೂ ಸಹ ಒಂದು ಬಲಿತ ಸಿಹಿ ಎಳನೀರನ್ನು ಕುಡಿಯುವುದರಿಂದ ಮಲಪ್ರವೃತ್ತಿ ಸರಿಯಾಗಿ ಗರ್ಭವು ಉತ್ತಮವಾಗಿ ಬೆಳೆಯುತ್ತದೆ.

ಮೂತ್ರಕೋಶದ ಕಲ್ಲಿನ ಸಮಸ್ಯೆ ಇದ್ದಾಗ ಅರ್ಧ ಚಮಚ ನೆಗ್ಗಿಲ ಪುಡಿ ಅಥವಾ ಸೌತೆ ಬೀಜದ ಪುಡಿಯನ್ನು ಎಳನೀರಿಗೆ ಸೇರಿಸಿ, 20 ನಿಮಿಷಗಳ ಕಾಲ ಬಿಟ್ಟು ನಂತರ ಉಪಯೋಗಿಸುವುದರಿಂದ ಕೆಲವೇ ದಿನಗಳಲ್ಲಿ ಸಮಸ್ಯೆಯ ತೀವ್ರತೆ ಕಡಿಮೆಯಾಗಿ ನೋವು ಕಡಿಮೆಯಾಗುತ್ತದೆ. ಇದನ್ನು ಕನಿಷ್ಠ ಒಂದು ತಿಂಗಳವರೆಗಾದರೂ ಮಾಡತಕ್ಕದ್ದು.

ವಿವಿಧ ರೀತಿಯ ಎಳನೀರಿನ ಪ್ರಯೋಗವು ಅರೆ ತಲೆನೋವಿನಲ್ಲಿ, ಕಾಮಾಲೆಯಲ್ಲಿ, ಜ್ವರದಲ್ಲಿ - ಹೀಗೆ ಹಲವಾರು ರೋಗಗಳಲ್ಲಿ ಬಹಳ ಒಳ್ಳೆಯ ಫಲಿತಾಂಶವನ್ನು ನೀಡಿದೆ. ಒಟ್ಟಾರೆ, ಎಳನೀರು ಭೂಮಿಯಲ್ಲಿ ಸಿಗುವ ಅಮೃತವೇ ಸರಿ. ಇದರ ಅಮೃತತ್ವವನ್ನು ಸಂಪೂರ್ಣವಾಗಿ ನಾವು ಅನು ಭವಿಸಬೇಕಾದರೆ ಅದಕ್ಕೆ ಬೇಕಾಗಿರುವ ಬಹುಮುಖ್ಯ ಅಂಶ - ವಿವೇಚನೆ. ಎಳನೀರಿನ ಬಳಕೆಯ ಮುನ್ನ ಯಾರಿಗೆ, ಎಷ್ಟು, ಯಾವಾಗ, ಹೇಗೆ ಎಂಬ ವಿವೇಚನೆಯು ಸದಾ ನಮ್ಮನ್ನು ಕಾಪಾಡುವ ರಕ್ಷಾ ಕವಚವಾಗಲಿ!