ಯುದ್ಧಕಾಂಡ
ಡಾ.ನಿರಂಜನ ಪೂಜಾರ
ಹಲವಾರು ದಶಕಗಳಿಂದ, ಜಾಗತಿಕ ರಾಜಕೀಯ ವಿಶ್ಲೇಷಕರು, ಪಾಶ್ಚಿಮಾತ್ಯ ಮಾಧ್ಯಮ ಗಳು ಮತ್ತು ವಿಶ್ವಸಂಸ್ಥೆಯಂಥ ಸಂಸ್ಥೆಗಳು ಮಧ್ಯಪ್ರಾಚ್ಯದ ಸಂಘರ್ಷವನ್ನು ಕೇವಲ ತೈಲ, ವ್ಯಾಪಾರ, ಗಡಿ ವಿವಾದಗಳು ಮತ್ತು ಭೂ-ರಾಜಕೀಯದ ( Geopolitics) ಚೌಕಟ್ಟಿನ ಲ್ಲಿ ಮಾತ್ರ ವಿಶ್ಲೇಷಿಸುತ್ತಾ ಬಂದಿವೆ.
ಈ ಯುದ್ಧಗಳು ಕೇವಲ ವಾಣಿಜ್ಯಲಾಭ, ಸಾಮ್ರಾಜ್ಯಶಾಹಿಗಳ ಹಸ್ತಕ್ಷೇಪ ಮತ್ತು ಪ್ರಜಾ ಪ್ರಭುತ್ವದ ರಕ್ಷಣೆಗಾಗಿ ನಡೆಯುತ್ತಿವೆ ಎಂಬ ಜಾತ್ಯತೀತ ಕಥನವನ್ನು ಜಗತ್ತಿನ ಮುಂದಿಡ ಲಾಗಿದೆ. ಆದರೆ, ಈ ವಿಶ್ಲೇಷಣೆಯು ಒಂದು ಬಹುದೊಡ್ಡ ಸತ್ಯವನ್ನು ಮುಚ್ಚಿಹಾಕುತ್ತದೆ ಅಥವಾ ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.
ಅವರು ಹೇಳುವಂತೆ, ಈ ಸಂಘರ್ಷದ ಮೂಲಬೇರು ಇರುವುದು ಮರಳುಗಾಡಿನ ತೈಲ ಬಾವಿಗಳಲ್ಲಿ ಅಲ್ಲ, ಬದಲಾಗಿ ‘ಅಬ್ರಹಾಮಿಕ್ ಮತಗಳ’ (ಕ್ರೈಸ್ತ, ಯಹೂದಿ ಮತ್ತು ಇಸ್ಲಾಂ) ಪವಿತ್ರ ಗ್ರಂಥಗಳಲ್ಲಿ ಮತ್ತು ಅವರ ದೈವಿಕ ನಂಬಿಕೆಗಳಲ್ಲಿ.
ವಾಷಿಂಗ್ಟನ್ ಅಥವಾ ಲಂಡನ್ನಿಂದ ಬರುವ ರಾಜತಾಂತ್ರಿಕರು ಆರ್ಥಿಕ ಪ್ಯಾಕೇಜ್ಗಳು ಮತ್ತು ಗಡಿ ಒಪ್ಪಂದಗಳ ಕಡತಗಳನ್ನು ಹಿಡಿದು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಬರುತ್ತಾರೆ. ಆದರೆ, ಅಲ್ಲಿನ ನೆಲದ ಮೇಲಿರುವ ಜನರು ಆ ಭೂಮಿಯ ಅಸಲಿ ಮಾಲೀಕ ‘ದೇವರು’ ಎಂದು ನಂಬಿರುವಾಗ, ಈ ಲೌಕಿಕ ಒಪ್ಪಂದಗಳು ಕೇವಲ ಕಾಗದದ ಚೂರು ಗಳಾಗುತ್ತವೆ.
ಇದನ್ನೂ ಓದಿ: Leena Joshi Column: ಸೈಕ್ಸ್-ಪಿಕೋಟ್ ಒಪ್ಪಂದ: ಮಧ್ಯಪ್ರಾಚ್ಯದ ದುರಂತದ ಮೂಲ
ಮಧ್ಯಪ್ರಾಚ್ಯದ ರಕ್ತಪಾತವನ್ನು ಅರ್ಥಮಾಡಿಕೊಳ್ಳಬೇಕಾದರೆ, ನಾವು ರಾಜಕೀಯವನ್ನು ಬದಿಗಿಟ್ಟು ಈ ಮೂರು ಪ್ರಬಲ ಮತಗಳ ದೇವತಾಶಾಸ್ತ್ರದ (Theology) ಕರಾಳ ಮತ್ತು ರಾಜಿ-ರಹಿತ ಮುಖವನ್ನು ನೋಡಬೇಕಾಗುತ್ತದೆ. ಇದು ಕೇವಲ ತೈಲಕ್ಕಾಗಿ ನಡೆಯುತ್ತಿರುವ ಯುದ್ಧವಲ್ಲ; ಇದು ಮೂರು ಭಿನ್ನವಾದ ಮತ್ತು ಪರಸ್ಪರ ವಿರೋಧಾಭಾಸವಿರುವ ‘ದೈವಿಕ ಸತ್ಯಗಳ’ (Absolute Divine Truths) ನಡುವಿನ ಶೂನ್ಯ-ಸಮರ.
ಮೂಲಭೂತವಾದ ಮತ್ತು ‘ವಾಗ್ದಾನದ ಭೂಮಿ’
ಆಧುನಿಕ ಇಸ್ರೇಲ್ ರಾಷ್ಟ್ರದ ಉಗಮ ಮತ್ತು ಪ್ರಸ್ತುತ ನಡೆಯುತ್ತಿರುವ ಘರ್ಷಣೆಗಳನ್ನು ಅರ್ಥಮಾಡಿಕೊಳ್ಳಲು, ಇಸ್ರೇಲ್ʼನ ರಾಜಕೀಯವು ಜಾತ್ಯತೀತ ರಾಷ್ಟ್ರೀಯತೆಯಿಂದ ಉಗ್ರಗಾಮಿ ಮತೀಯ ಮೂಲಭೂತ ವಾದದತ್ತ ಹೇಗೆ ವಾಲಿತು ಎಂಬುದನ್ನು ಗಮನಿಸ ಬೇಕು.
19ನೇ ಶತಮಾನದ ಅಂತ್ಯದಲ್ಲಿ ಹುಟ್ಟಿಕೊಂಡ ‘ಜಿಯೋನಿಸಂ’ ಆರಂಭದಲ್ಲಿ ಯೂರೋಪ್ನ ಯಹೂದಿ-ವಿರೋಧಿ ದೌರ್ಜನ್ಯಗಳಿಂದ ಪಾರಾಗಲು ಒಂದು ಸುರಕ್ಷಿತ ತಾಣವನ್ನು ಹುಡುಕುವ ಜಾತ್ಯತೀತ ಚಳವಳಿಯಾಗಿತ್ತು. ಆದರೆ, 1967ರ ‘ಆರು ದಿನಗಳ ಯುದ್ಧ’ದಲ್ಲಿ ಜೆರುಸಲೆಮ್ನ ಹಳೆಯ ನಗರ ಮತ್ತು ವೆಸ್ಟ್ ಬ್ಯಾಂಕ್ (ಇದನ್ನು ಬೈಬಲ್ ನಲ್ಲಿ ಜುಡಿಯಾ ಮತ್ತು ಸಮಾರಿಯಾ ಎಂದು ಕರೆಯಲಾಗುತ್ತದೆ) ಪ್ರದೇಶಗಳನ್ನು ಇಸ್ರೇಲ್ ವಶಪಡಿಸಿಕೊಂಡ ನಂತರ, ಯಹೂದಿ ಜಗತ್ತಿನಲ್ಲಿ ಒಂದು ಪ್ರಬಲವಾದ ಮತೀಯ ಸಂಚಲನ ಸೃಷ್ಟಿಯಾಯಿತು.
ಮತೀಯ ಜಿಯೋನಿಸ್ಟ್ಗಳಿಗೆ, ಈ ಮಿಲಿಟರಿ ವಿಜಯವು ಕೇವಲ ರಾಜಕೀಯ ಗೆಲುವಾಗಿರ ಲಿಲ್ಲ; ಅದು ದೇವರ ನೇರ ಹಸ್ತಕ್ಷೇಪ ಮತ್ತು ಅವರ ರಕ್ಷಕನ (Messiah) ಆಗಮನದ ಮುನ್ಸೂಚನೆಯಾಗಿತ್ತು. ಈ ನಂಬಿಕೆಯಿಂದಲೇ ವೆಸ್ಟ್ ಬ್ಯಾಂಕ್ನಲ್ಲಿ ಅಕ್ರಮ ವಸತಿ ನಿರ್ಮಾಣ ಚಳವಳಿಗಳು ಹುಟ್ಟಿಕೊಂಡವು. ಒಬ್ಬ ಮತೀಯ ಯಹೂದಿಗೆ, ವೆಸ್ಟ್ ಬ್ಯಾಂಕ್ ನಲ್ಲಿ ಮನೆ ಕಟ್ಟುವುದು ರಾಜಕೀಯ ಆಕ್ರಮಣವಲ್ಲ; ಬದಲಾಗಿ ಅದು ದೇವರು ಅಬ್ರಹಾ ಮ್, ಐಸಾಕ್ ಮತ್ತು ಜೇಕಬ್ ಗೆ ನೀಡಿದ ‘ವಾಗ್ದಾನದ ಭೂಮಿಯನ್ನು’ (Promised Land) ಮರಳಿ ಪಡೆಯುವ ಪವಿತ್ರ ಕರ್ತವ್ಯ.
ಭೂಮಿಯ ಗಡಿಗಳನ್ನು ವಿಶ್ವಸಂಸ್ಥೆ ನಿರ್ಧರಿಸುವುದಿಲ್ಲ, ಬದಲಾಗಿ ದೇವರೇ ನಿರ್ಧರಿಸಿ ದ್ದಾನೆ ಎಂದು ನಂಬಿರುವಾಗ, ಶಾಂತಿಗಾಗಿ ಒಂದು ಇಂಚು ಭೂಮಿಯನ್ನು ಅನ್ಯಮತೀ ಯರಿಗೆ (Gentiles) ಬಿಟ್ಟುಕೊಡುವುದು ದೇವರಿಗೆ ಬಗೆಯುವ ದ್ರೋಹ ಮತ್ತು ಮಹಾಪಾಪ ಎಂದು ಅವರು ಭಾವಿಸುತ್ತಾರೆ.
ಅಂತಿಮ ಪ್ರಳಯದ ಕೇಂದ್ರಬಿಂದು
ಈ ದೇವತಾಶಾಸದ ಘರ್ಷಣೆಯ ಅತ್ಯಂತ ಸ್ಫೋಟಕ ಕೇಂದ್ರಬಿಂದು ಜೆರುಸಲೆಮ್ʼ ನಲ್ಲಿರುವ ಕೇವಲ 35 ಎಕರೆ ವಿಸ್ತೀರ್ಣದ ಬೆಟ್ಟ. ಮುಸ್ಲಿಮರಿಗೆ ಇದು ‘ಹರಾಮ್ ಅಲ್-ಷರೀಫ್’.
ಇಸ್ಲಾಮಿನ ಮೂರನೇ ಅತ್ಯಂತ ಪವಿತ್ರ ಸ್ಥಳವಾದ ‘ಅಲ್-ಅಕ್ಸಾ’ ಮಸೀದಿ ಮತ್ತು ‘ಡೋಮ್ ಆಫ್ ದ ರಾಕ್’ ಇರುವ ಜಾಗ. ಇಲ್ಲಿಂದಲೇ ಪ್ರವಾದಿ ಮುಹಮ್ಮದರು ಸ್ವರ್ಗಕ್ಕೆ ಪ್ರಯಾಣ ಬೆಳೆಸಿದರು ಎಂಬುದು ಅವರ ನಂಬಿಕೆ. ಆದರೆ ಯಹೂದಿಗಳಿಗೆ, ಇದು ‘ಟೆಂಪಲ್ ಮೌಂಟ್’, ಯಹೂದಿ ಮತದ ಅತ್ಯಂತ ಪವಿತ್ರ ಸ್ಥಳ; ಅಲ್ಲಿ ಹಿಂದೆ ಅವರ ಮೊದಲ ಮತ್ತು ಎರಡನೇ ದೇವಾಲಯಗಳಿದ್ದವು.
ಪ್ರಸಕ್ತ ದಿನಗಳಲ್ಲಿ, ಈ ಬೆಟ್ಟದ ಮೇಲೆ ಇಸ್ಲಾಮಿಕ್ ಮಸೀದಿ ಇರುವ ಜಾಗದ ಯಹೂದಿಗಳ ‘ಮೂರನೇ ದೇವಾಲಯವನ್ನು’ ನಿರ್ಮಿಸಬೇಕು ಎಂದು ಪ್ರತಿಪಾದಿಸುವ ತೀವ್ರ-ಬಲಪಂಥೀ ಯ ಮತೀಯ ಗುಂಪುಗಳು ಇಸ್ರೇಲ್ ರಾಜಕಾರಣದಲ್ಲಿ ಪ್ರಭಾವಶಾಲಿಯಾಗಿವೆ. ಬೈಬಲ್ ಪ್ರವಾದನೆಗಳ ಪ್ರಕಾರ, ಈ ಮೂರನೇ ದೇವಾಲಯ ನಿರ್ಮಾಣವಾದರೆ ಮತ್ತು ಪ್ರಾಣಿಬಲಿ ಯನ್ನು ಮರಳಿ ಪ್ರಾರಂಭಿಸಿದರೆ ಮಾತ್ರ ಯಹೂದಿಗಳ ರಕ್ಷಕ ಭೂಮಿಗೆ ಬರುತ್ತಾನೆ.
ಇದು ಕೇವಲ ಬಾಯಿಮಾತಿನ ನಂಬಿಕೆಯಲ್ಲ; ಜೆರುಸಲೆಮ್ನಲ್ಲಿನ ಕೆಲವು ಸಂಸ್ಥೆಗಳು ಈ ದೇವಾಲಯದ ಪೂಜೆಗಾಗಿ ಬೇಕಾದ ಉಡುಪುಗಳನ್ನು ಮತ್ತು ಬೈಬಲ್ನಲ್ಲಿ ಉಲ್ಲೇಖಿಸಿ ರುವ ‘ಕೆಂಪು ಹಸುಗಳನ್ನು’ (Red heifers) ಪ್ರತ್ಯೇಕವಾಗಿ ಬೆಳೆಸುತ್ತಿವೆ.
ಈ ಜಾಗದಲ್ಲಿ ಯಥಾಸ್ಥಿತಿಯನ್ನು ಸ್ವಲ್ಪವೇ ಬದಲಾಯಿಸಿದರೂ, ಅದು ಇಡೀ ಇಸ್ಲಾಮಿಕ್ ಜಗತ್ತಿನಾದ್ಯಂತ ಪವಿತ್ರ ಯುದ್ಧವನ್ನು (Holy War) ಪ್ರಚೋದಿಸುತ್ತದೆ. ಏಕೆಂದರೆ ಎರಡೂ ಕಡೆಯವರು ಈ ಜಾಗವನ್ನು ಸ್ವರ್ಗ ಮತ್ತು ಭೂಮಿಯನ್ನು ಬೆಸೆಯುವ ದೈವಿಕ ಕೇಂದ್ರ ಎಂದು ನಂಬಿದ್ದಾರೆ.
ಯುದ್ಧದ ಬೆಂಕಿಗೆ ತುಪ್ಪ ಸುರಿವ ಅಜೆಂಡಾ
ಮಧ್ಯಪ್ರಾಚ್ಯದ ಸಂಘರ್ಷದ ಹಿಂದೆ ಅತ್ಯಂತ ಪ್ರಭಾವಶಾಲಿ, ಆದರೆ ಕಡೆಗಣಿಸಲ್ಪಟ್ಟ ಮತ್ತೊಂದು ಧಾರ್ಮಿಕ ಶಕ್ತಿಯಿದೆ; ಅದುವೇ ಅಮೆರಿಕದ ‘ಕ್ರಿಶ್ಚಿಯನ್ ಜಿಯೋನಿಸಂ’. ಅಮೆರಿಕವು ಮಧ್ಯಪ್ರಾಚ್ಯದಲ್ಲಿ ತೈಲ ಮತ್ತು ಶಸ್ತ್ರಾಸ್ತ್ರ ಕಾರ್ಖಾನೆಗಳ ಲಾಭಕ್ಕಾಗಿ ಮಾತ್ರ ಹಸ್ತಕ್ಷೇಪ ಮಾಡುತ್ತಿಲ್ಲ. ಅಮೆರಿಕದ ವಿದೇಶಾಂಗ ನೀತಿಯು ಅಲ್ಲಿನ ಕೋಟ್ಯಂತರ ಇವಾಂಜೆಲಿಕಲ್ ಕ್ರಿಶ್ಚಿಯನ್ನರ ನಂಬಿಕೆಗಳಿಂದ ಬಲವಾಗಿ ನಿಯಂತ್ರಿಸಲ್ಪಡುತ್ತದೆ.
ಇವರ ನಂಬಿಕೆಯು ಬೈಬಲ್ನ ‘ಬುಕ್ ಆಫ್ ರೆವೆಲೇಶನ್’ ಮತ್ತು ಪ್ರಳಯದ (Apocalypse) ಪ್ರವಾದನೆಗಳನ್ನು ಅಕ್ಷರಶಃ ಆಧರಿಸಿದೆ. ಯೇಸು ಕ್ರಿಸ್ತನು ಎರಡನೇ ಬಾರಿ ಭೂಮಿಗೆ ಬರಬೇಕಾದರೆ ಯಹೂದಿಗಳು ಜಗತ್ತಿನ ಮೂಲೆ ಮೂಲೆಗಳಿಂದ ಬಂದು ಇಸ್ರೇಲ್ ನಲ್ಲಿ ನೆಲೆಸಬೇಕು, ಜೆರುಸಲೆಮ್ ಸಂಪೂರ್ಣವಾಗಿ ಯಹೂದಿಗಳ ವಶವಾಗಬೇಕು ಮತ್ತು ಮೂರನೇ ದೇವಾಲಯ ನಿರ್ಮಾಣವಾಗಬೇಕು ಎಂಬುದು ಇವರ ಗಾಢವಾದ ನಂಬಿಕೆ. ಈ ಕಾರಣಕ್ಕಾಗಿಯೇ, ಅಮೆರಿಕದ ಈ ಕ್ರಿಶ್ಚಿಯನ್ ಗುಂಪುಗಳು ಇಸ್ರೇಲ್ʼನ ಅತ್ಯಂತ ಆಕ್ರಮಣ ಕಾರಿ ನೀತಿಗಳಿಗೂ ಕಣ್ಣುಮುಚ್ಚಿ ಬೆಂಬಲ ನೀಡುತ್ತವೆ. ಇವರು ಶಾಂತಿಯನ್ನು ಬಯಸುವು ದಿಲ್ಲ; ಏಕೆಂದರೆ ಇವರ ದೇವತಾಶಾಸದ ಪ್ರಕಾರ, ಯೇಸು ಬರುವ ಮುನ್ನ ಮಧ್ಯಪ್ರಾಚ್ಯ ದಲ್ಲಿ ಭೀಕರವಾದ ಅಂತಿಮ ಮಹಾಯುದ್ಧ ‘ಅರ್ಮಗೆಡ್ಡೋನ್’ ನಡೆಯಲೇಬೇಕು. ಅಂದರೆ, ಇಸ್ರೇಲ್ಗೆ ಇವರು ನೀಡುವ ಬೆಂಬಲವು ಪ್ರಜಾಪ್ರಭುತ್ವವನ್ನು ಉಳಿಸುವ ಉದ್ದೇಶದಿಂದಲ್ಲ,
ಬದಲಾಗಿ ತಮ್ಮ ಪ್ರಳಯದ ಪ್ರವಾದನೆಗಳನ್ನು ಜೀವಂತವಾಗಿಸುವ ಹುನ್ನಾರವಾಗಿದೆ. ಈ ‘ಪವಿತ್ರ ಯುದ್ಧ’ದ ನೆಪದ ಹಿಂದೆ, ಸಿಐಎ ಮತ್ತು ಮೊಸಾದ್ʼನಂಥ ಗುಪ್ತಚರ ಸಂಸ್ಥೆಗಳು ಪ್ರಾದೇಶಿಕ ಅರಾಜಕತೆಯನ್ನು ಕಾಯ್ದುಕೊಳ್ಳಲು ‘ಪ್ರಾಕ್ಸಿ ಯುದ್ಧ’ಗಳ ಕರಾಳ ತಂತ್ರವನ್ನು ಅತ್ಯಂತ ವ್ಯವಸ್ಥಿತವಾಗಿ ಬಳಸುತ್ತಿವೆ. ಈ ಸಂಸ್ಥೆಗಳು ಕತ್ತಲ ಕೋಣೆಯಲ್ಲಿ ಕುಳಿತು ಭಯೋತ್ಪಾದಕ ಸಂಘಟನೆಗಳನ್ನು ಸೃಷ್ಟಿಸಿವೆ; ತಮ್ಮ ಭೂ-ರಾಜಕೀಯ ಲಾಭಗಳಿಗಾಗಿ ಮತ್ತು ಶತ್ರುಗಳನ್ನು ಹಣಿಯಲು ಇವು ಉಗ್ರಗಾಮಿ ಗುಂಪುಗಳಿಗೆ ಹಣ, ತರಬೇತಿ ಹಾಗೂ ಶಸಾಸಗಳನ್ನು ಪೂರೈಸಿ ಅವರ ಬೆಳವಣಿಗೆಗೆ ರಸಗೊಬ್ಬರ ಹಾಕಿದ ಇತಿಹಾಸ ಜಗತ್ತಿನ ಮುಂದಿದೆ.
ಉದಾಹರಣೆಗೆ, ಶೀತಲ ಸಮರದ ಸಮಯದಲ್ಲಿ ರಷ್ಯಾವನ್ನು ಸೋಲಿಸಲು ಅಮೆರಿಕದ ಸಿಐಎ ಸಂಸ್ಥೆಯು ಅಫ್ಘಾನಿಸ್ತಾನದಲ್ಲಿ ‘ಮುಜಾಹಿದೀನ್’ಗಳಿಗೆ ಕೋಟ್ಯಂತರ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ನೀಡಿತು; ಇದೇ ಗುಂಪು ಮುಂದೆ ‘ಅಲ್-ಖೈದಾ’ ಆಗಿ ಜಗತ್ತನ್ನೇ ಕಾಡಿತು.
ಅದೇ ರೀತಿ, 1980ರ ದಶಕದಲ್ಲಿ ಜಾತ್ಯತೀತ ‘ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಷನ್’ (ಪಿಎಲ್ಒ) ಅನ್ನು ವಿಭಜಿಸಿ ದುರ್ಬಲಗೊಳಿಸಲು, ಇಸ್ರೇಲ್ ಆರಂಭದಲ್ಲಿ ಇಸ್ಲಾಮಿಕ್ ಸಂಘಟನೆಗಳನ್ನು ಬೆಳೆಸಿತು ಮತ್ತು ಪ್ರೋತ್ಸಾಹಿಸಿತು; ಅದೇ ಗುಂಪು ಇಂದು ‘ಹಮಾಸ್’ ಆಗಿ ಬೆಳೆದು ನಿಂತಿದೆ. ಇರಾನ್ʼನಿಂದ ಹಿಡಿದು ಲಿಬಿಯಾ ಮತ್ತು ಸಿರಿಯಾದವರೆಗೆ, ತಮಗೆ ಇಷ್ಟವಿಲ್ಲದ ಸರಕಾರಗಳನ್ನು ಉರುಳಿಸಲು ಮತ್ತು ತಮ್ಮ ಪ್ರಾಬಲ್ಯವನ್ನು ಕಾಪಾಡಿ ಕೊಳ್ಳಲು ಪಾಶ್ಚಿಮಾತ್ಯ ಶಕ್ತಿಗಳು ಸೃಷ್ಟಿಸಿದ ‘ಅಧಿಕಾರದ ಶೂನ್ಯತೆಯೇ’ ಇಂದು ಇಡೀ ಮಧ್ಯಪ್ರಾಚ್ಯವನ್ನು ಭಯೋತ್ಪಾದನೆಯ ಮತ್ತು ನಿರಂತರ ಸಂಘರ್ಷದ ರಕ್ತಸಿಕ್ತ ಕಾರ್ಖಾನೆಯನ್ನಾಗಿ ಪರಿವರ್ತಿಸಿದೆ.
‘ವಕ್ಫ್’ ಭೂಮಿ ಮತ್ತು ಹುತಾತ್ಮತೆಯ ಸಿದ್ಧಾಂತ ಈ ಮತೀಯ ಬಿರುಕಿನ ಇನ್ನೊಂದು ಬದಿಯಲ್ಲಿ ಇಸ್ಲಾಮಿಕ್ ದೇವತಾಶಾಸ್ತ್ರವಿದೆ. ಸಾಂಪ್ರದಾಯಿಕ ಇಸ್ಲಾಮಿಕ್ ಕಾನೂನಿನ ಪ್ರಕಾರ, ಒಮ್ಮೆ ಒಂದು ಭೂಮಿ ಇಸ್ಲಾಮಿಕ್ ಆಡಳಿತಕ್ಕೆ ಒಳಪಟ್ಟರೆ (ದಾರ್ ಅಲ್-ಇಸ್ಲಾಂ), ಆ ಭೂಮಿಯು ‘ವಕ್ಫ್’ ಆಗುತ್ತದೆ. ವಕ್ ಎಂದರೆ ಪ್ರಳಯದ ದಿನದವರೆಗೂ ( Judgment Day) ಇಸ್ಲಾಮಿಗೆ ಮತ್ತು ಮುಸ್ಲಿಮರಿಗೆ ಮೀಸಲಾದ ದೇವರ ಆಸ್ತಿ. ಅದನ್ನು ಯಾವುದೇ ಕಾರಣಕ್ಕೂ, ಯಾವುದೇ ಒಪ್ಪಂದದ ಮೂಲಕವೂ ಅನ್ಯಮತದವರಿಗೆ (ಕಾಫಿರ ರಿಗೆ) ಬಿಟ್ಟುಕೊಡುವಂತಿಲ್ಲ.
ಹಮಾಸ್, ಪ್ಯಾಲೇಸ್ತೀನಿಯನ್ ಇಸ್ಲಾಮಿಕ್ ಜಿಹಾದ್ ಮತ್ತು ಹಿಜ್ಬುದಂಥ ಸಂಘಟನೆಗಳು ಇದೇ ಕಟ್ಟುನಿಟ್ಟಾದ ಧಾರ್ಮಿಕ ನಂಬಿಕೆಯ ಆಧಾರದ ಮೇಲೆ ಕಾರ್ಯಾಚರಿಸುತ್ತವೆ. ಜೆರುಸಲೆಮ್ ಮತ್ತು ಐತಿಹಾಸಿಕ ಪ್ಯಾಲೆಸ್ತೀನ್ ಭೂಮಿಯ ಮೇಲೆ ಯಹೂದಿಗಳ ಸಾರ್ವ ಭೌಮತ್ವವನ್ನು ಒಪ್ಪಿಕೊಳ್ಳುವುದು ಇಸ್ಲಾಮಿಕ್ ದೇವತಾಶಾಸ್ತ್ರದ ಪ್ರಕಾರ ಅಸಾಧ್ಯವಾದ ಮಾತು.
ಇದರ ಜತೆಗೆ, ಹುತಾತ್ಮತೆಯ ಪರಿಕಲ್ಪನೆಯು ಇವರ ಹೋರಾಟಕ್ಕೆ ಇಂಧನ ಒದಗಿಸುತ್ತದೆ. ತಮ್ಮ ಈ ಹೋರಾಟವನ್ನು ಪವಿತ್ರ ‘ಜಿಹಾದ್’ ಎಂದು ನಂಬಿರುವ ಯೋಧರು, ಯುದ್ಧ ಭೂಮಿಯಲ್ಲಿ ಸಾಯುವುದು ನೇರವಾಗಿ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂದು ದೃಢ ವಾಗಿ ನಂಬಿರುತ್ತಾರೆ.
ಶತ್ರುಗಳು ಬದುಕನ್ನು ಎಷ್ಟು ಪ್ರೀತಿಸುತ್ತಾರೋ, ನಾವು ಸಾವನ್ನು ಅಷ್ಟೇ ಪ್ರೀತಿಸುತ್ತೇವೆ ಎಂದು ನಂಬಿರುವ ಪಡೆಯನ್ನು ಯಾವುದೇ ಲೌಕಿಕ ಮಿಲಿಟರಿ ಶಕ್ತಿಯಿಂದ ಅಥವಾ ಭಯೋತ್ಪಾದನೆಯ ತಡೆಗಟ್ಟುವಿಕೆ ತಂತ್ರಗಳಿಂದ ಹೆದರಿಸಲು ಸಾಧ್ಯವಿಲ್ಲ.
ರಾಜಿಗೆ ಅವಕಾಶವಿಲ್ಲದ ದೈವಿಕ ಯುದ್ಧ
ಈ ದೇವತಾಶಾಸದ ದೃಷ್ಟಿಕೋನದಿಂದ ವಿಶ್ಲೇಷಿಸಿದಾಗ ಮಾತ್ರ, ಮಧ್ಯಪ್ರಾಚ್ಯದ ಅಂತ್ಯ ವಿಲ್ಲದ ರಕ್ತಪಾತದ ಅಸಲಿ ಕರಾಳಸತ್ಯ ಅರ್ಥವಾಗುತ್ತದೆ. ಕೇವಲ ಸಂಪನ್ಮೂಲಗಳಿಗಾಗಿ, ಗಡಿಗಳಿಗಾಗಿ ಅಥವಾ ತೈಲಕ್ಕಾಗಿ ನಡೆಯುವ ಯುದ್ಧಗಳನ್ನು ಮಾತುಕತೆ, ವ್ಯಾಪಾರ ಒಪ್ಪಂದಗಳು ಮತ್ತು ಲಾಭ-ಹಂಚಿಕೆಯ ಮೂಲಕ ಬಗೆಹರಿಸಬಹುದು. ಆದರೆ, ದೇವರ ಅಪ್ಪಣೆಗಾಗಿ ನಡೆಯುವ ಯುದ್ಧಗಳನ್ನು ಲೌಕಿಕ ಒಪ್ಪಂದಗಳಿಂದ ನಿಲ್ಲಿಸಲು ಸಾಧ್ಯವಿಲ್ಲ.
ಮೂರು ಪ್ರಬಲ ಅಬ್ರಹಾಮಿಕ್ ಮತಗಳು ಒಂದೇ ಇತಿಹಾಸವನ್ನು ಹಂಚಿಕೊಂಡಿವೆ, ಒಂದೇ ಮರಳುಗಾಡಿನ ತುಣುಕಿನ ಮೇಲೆ ತಮ್ಮ ಏಕಸ್ವಾಮ್ಯವನ್ನು ಸಾಧಿಸಲು ಹೋರಾ ಡುತ್ತಿವೆ, ಒಂದೇ ಪ್ರಾಚೀನ ಕಲ್ಲುಗಳನ್ನು ಪವಿತ್ರವೆಂದು ಪೂಜಿಸುತ್ತಿವೆ ಮತ್ತು ಒಂದೇ ರೀತಿಯ ಪ್ರಳಯದ ಪ್ರವಾದನೆಗಳನ್ನು ನಂಬಿವೆ. ಭೂಮಿಯ ಮಾಲೀಕ ‘ದೇವರು’ ಮತ್ತು ತಮ್ಮ ಪವಿತ್ರ ಗ್ರಂಥಗಳೇ ‘ಆಸ್ತಿಯ ಪತ್ರಗಳು’ ಎಂದು ನಂಬಿರುವಾಗ, ರಾಜಿ ಮಾಡಿಕೊಳ್ಳು ವುದು ದೇವನಿಂದನೆ (Blasphemy) ಆಗುತ್ತದೆ.
ಮಧ್ಯಪ್ರಾಚ್ಯವು ಕೇವಲ ತೈಲ ಮತ್ತು ಸಾಮ್ರಾಜ್ಯಶಾಹಿಗಳ ದುರಾಸೆಯಿಂದ ಹೊತ್ತಿ ಉರಿಯುತ್ತಿಲ್ಲ; ಬದಲಾಗಿ, ಜಗತ್ತಿನ ಅಂತ್ಯವನ್ನು ಯಾರು ಬರೆಯುತ್ತಾರೆ ಎಂಬ ಸ್ಪರ್ಧೆ ಯಲ್ಲಿರುವ ಮೂರು ಬೃಹತ್ ಮತ್ತು ರಾಜಿ-ರಹಿತ ಮತಗಳ ಘರ್ಷಣೆಯ ಕೇಂದ್ರ ವಾಗಿರುವುದರಿಂದ ಅದು ನಿರಂತರವಾಗಿ ಸುಡುತ್ತಿದೆ.
(ಲೇಖಕರು ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು)