ಜನಪಥ
ಕೇಂದ್ರ ರೈಲ್ವೆ ಇಲಾಖೆಯು ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಕೇರಳದ ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಆಡಳಿತಕ್ಕೆ ಸೇರಿಸಿದ ಅಧಿಸೂಚನೆ ಹೊರಡಿಸಿ, ದಶಕಗಳ ಹಿಂದೆ ಮಾಡಿದ್ದ ಐತಿಹಾಸಿಕ ಪ್ರಮಾದವೊಂದನ್ನು ಸರಿಪಡಿಸಿದೆ. ಹೀಗಾಗಿ, ಇದು ಕರ್ನಾಟಕದ ಪಾಲಿಗೆ ಅತ್ಯಂತ ಮಹತ್ವದ ಹಾಗೂ ಮೈಸೂರು ವಿಭಾಗದ ಸಮಗ್ರ ಅಭಿವೃದ್ಧಿಗೆ ನಿರ್ಣಾಯಕ ಎನಿಸುವ ತೀರ್ಮಾನವಾಗಿದೆ.
ಈ ಹಿಂದೆ ಕೇಂದ್ರ ರೈಲ್ವೆ ಖಾತೆಗಳಲ್ಲಿ ವಿರಾಜಮಾನರಾಗಿದ್ದ ಕಾಂಗ್ರೆಸ್ನ ಕೆ.ಎಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಜೆಪಿಯ ಡಿ.ವಿ.ಸದಾನಂದ ಗೌಡರಿಗೆ ಆ ಹುದ್ದೆಯಲ್ಲಿದ್ದುಕೊಂಡು ಮಾಡಲಾಗದ ಕೆಲಸವನ್ನು ಹಾಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಡಿಸಿ ತೋರಿಸಿ ದ್ದಾರೆ.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ನಿರಂತರ ಪ್ರಯತ್ನ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣರ ಸಹಕಾರ-ಇಚ್ಛಾಶಕ್ತಿಯಿಂದ ಬಹುತೇಕ ಅಸಾಧ್ಯ ಎನ್ನುವುದೊಂದು ಸಾಧ್ಯವಾಗಿದೆ. ಇದಕ್ಕಾಗಿ, ಈ ಮೂವರಿಗೂ ಧನ್ಯವಾದ ಹೇಳಲೇಬೇಕು.
ದಿಲ್ಲಿ ಮಟ್ಟದಲ್ಲಿ ಪ್ರಬಲ ಲಾಬಿ ಮಾಡುತ್ತಾ ಮಂಗಳೂರನ್ನು ಪಾಲಕ್ಕಾಡ್ನಿಂದ ಪ್ರತ್ಯೇಕಗೊಳ್ಳ ದಂತೆ ನೋಡಿಕೊಳ್ಳುತ್ತಿದ್ದ ಕೇರಳದ ಜನಪ್ರತಿನಿಧಿಗಳಿಗೆ ಈ ಬೆಳವಣಿಗೆ ಸಹಜವಾಗಿಯೇ ಭಾರೀ ಆಘಾತ ಉಂಟು ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರೇ, ನಮಗೆ ನ್ಯಾಯ ಒದಗಿಸಿ ಎಂದು ಕೇರಳ ಸಿಎಂ ವಿ.ಡಿ. ಸತೀಶನ್ ಹಾಗೂ ಇತರೆ ಸಂಸದರು ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ: Raghava Sharma Nidle Column: ಉ.ಪ್ರ. ಕ್ಕೆ ಮೋದಿ-ಶಾ ಆಪ್ತರ ಅಧಿಕೃತ ಪ್ರವೇಶ
ಕರ್ನಾಟಕಕ್ಕೆ ಸೇರಿದ ಮಂಗಳೂರು ಪ್ರದೇಶದಿಂದ ಬರುತ್ತಿದ್ದ ಆದಾಯ ನಂಬಿ ನಮ್ಮ ಪಾಲಕ್ಕಾಡ್ ವಿಭಾಗದ ಆದಾಯ ಎಂದು ಕೇಂದ್ರಕ್ಕೆ ತೋರಿಸುತ್ತಿದ್ದ ಕೇರಳಕ್ಕೆ ಅಕ್ಟೋಬರ್ 1ರಿಂದ ಈ ಆದಾಯ ಮೈಸೂರು ವಿಭಾಗದ ಪಾಲಾಗಲಿದೆ ಎನ್ನುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಈಗಿನ ಅಂದಾಜಿನ ಪ್ರಕಾರ ವಾರ್ಷಿಕವಾಗಿ ಅಂದಾಜು ರೂ. 600 ಕೋಟಿ ಆದಾಯ ಪಾಲಕ್ಕಾಡ್ ಬದಲು ಮೈಸೂರು ವಿಭಾಗದಿಂದ ಕೇಂದ್ರ ರೈಲ್ವೆ ಇಲಾಖೆಗೆ ಬಂದಂತಾಗಲಿದೆ.
ಮಂಗಳೂರು ಪ್ರದೇಶ ಪಾಲಕ್ಕಾಡ್ನಿಂದ ಪ್ರತ್ಯೇಕಗೊಂಡಿರುವುದರ ಲಾಭ ಕೇವಲ ಮಂಗಳೂರಿ ಗಷ್ಟೇ ಸೀಮಿತವಲ್ಲ. ಹೆಚ್ಚುಕಡಿಮೆ ಅರ್ಧಕ್ಕರ್ಧ ಕರ್ನಾಟಕಕ್ಕೆ ಅನುಕೂಲವಾಗಲಿದೆ. ಕೇಂದ್ರ ಸರಕಾರದ ಈ ನಿರ್ಧಾರದ ತೀವ್ರತೆ ಹಾಗೂ ಅನುಕೂಲ ಏನೆಂಬುದು ಕರಾವಳಿ ಹೊರತುಪಡಿಸಿ ಉಳಿದ ಭಾಗದ ಜನಪ್ರತಿನಿಧಿಗಳಿಗೆ ಅರ್ಥವಾಗಿಲ್ಲವೇ ಅಥವಾ ನಮಗೆ ಸಂಬಂಧಿಸಿದ ವಿಚಾರ ಅಲ್ಲ ಎಂದು ಅವರು ಸುಮ್ಮನಿದ್ದಾರೋ ಗೊತ್ತಿಲ್ಲ.
ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷದ ರಾಜಕಾರಣಿಗಳು ಒಕ್ಕೊರಲಿನಿಂದ ಈ ಅಧಿಸೂಚನೆಯನ್ನು ಸ್ವಾಗತಿಸಬೇಕಿತ್ತು. ಆದರೆ, ಕೇರಳ ಸಿಎಂ, ಸಂಸದರು ಬೊಬ್ಬಿಟ್ಟ ಮೇಲೆ ಕರ್ನಾಟಕದ ಕೆಲ ಜನಪ್ರತಿನಿಧಿ ಗಳು ಎಚ್ಚೆತ್ತುಕೊಂಡು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೆಂಬಲ ವ್ಯಕ್ತಪಡಿಸಲು ಮುಂದಾದರು. ನಂತರ, ಒಬ್ಬೊಬ್ಬರೇ ಸಾಮಾಜಿಕ ಜಾಲತಾಣದಲ್ಲಿ ನಿದ್ದೆಯಿಂದ ಎದ್ದವರಂತೆ ಟ್ವೀಟ್ ಮಾಡಲು ಶುರುಮಾಡಿದರು.
ಇಲ್ಲಿವರೆಗೆ ಮಂಗಳೂರಿಗೆ ಹೋಗಬೇಕಿದ್ದ ರೈಲುಗಳನ್ನು ತಮ್ಮ ರಾಜ್ಯಕ್ಕೆ ವಿಸ್ತರಿಸಿಕೊಳ್ಳುವಲ್ಲಿ ಯಶಸ್ವಿ ಯಾಗುತ್ತಿದ್ದ ಕೇರಳದ ಜನಪ್ರತಿನಿಧಿಗಳಿಂದಾಗಿ, ಕರ್ನಾಟಕದ ಮಂದಿಗೆ ಸಿಗುವ ಟಿಕೆಟ್ ಪ್ರಮಾಣ ತೀರಾ ಕಡಿಮೆ ಇರುತ್ತಿತ್ತು. ಅಲ್ಲದೆ, ಮಂಗಳೂರಿನಿಂದ ಪ್ರಾಪ್ತಿಯಾಗುತ್ತಿದ್ದ ಆದಾಯದ ಲಾಭ ಹೆಚ್ಚು ಆಗುತ್ತಿದ್ದದ್ದು ಕೇರಳಕ್ಕೆ. ಹೀಗಾಗಿಯೇ, ಕೇರಳದ ರಾಜಕಾರಣಿಗಳು ಅಯ್ಯಯ್ಯೋ ಅನ್ಯಾಯ ಎಂದು ಬಾಯ್ಬಡಿದುಕೊಳ್ಳುತ್ತಿದ್ದಾರೆ. ಮಂಗಳೂರು ಬಂದರಿನಿಂದ ಸಾಗಾಟವಾಗುತ್ತಿದ್ದ ಸರಕು ಸಾಗಣೆಯ ಆದಾಯವೇ ಪಾಲಕ್ಕಾಡ್ ರೈಲ್ವೆ ವಲಯಕ್ಕೆ ಅತ್ಯಂತ ಮಹತ್ವದ್ದಾಗಿದ್ದರಿಂದ ಅದರಿಂದ ಆ ಭಾಗದ ಸಮಗ್ರ ರೈಲ್ವೆ ಅಭಿವೃದ್ಧಿಗೆ ಅನುಕೂಲವಾಗುತ್ತಿತ್ತು.
ಒಂದು ರೈಲ್ವೆ ವಿಭಾಗದಲ್ಲಿ ಉತ್ಪಾದನೆಯಾಗುವ ಆದಾಯವೇ ಆ ವಿಭಾಗದಲ್ಲಿ ಹೆಚ್ಚು ಸೌಲಭ್ಯ ವನ್ನು ಒದಗಿಸುವುದಕ್ಕೆ ಕಾರಣವಾಗುತ್ತದೆ. ಆದಾಯ ಕಡಿಮೆ ಲಭ್ಯವಾಗುವ ವಲಯಕ್ಕೆ ಸಹಜ ವಾಗಿ ಮೂಲ ಸೌಕರ್ಯಕ್ಕೆ ಕಡಿಮೆ ಹೂಡಿಕೆಯಾಗುತ್ತದೆ. ಹೀಗಾಗಿ, ಕರ್ನಾಟಕದ ಕರಾವಳಿ ಭಾಗ ದಶಕಗಳ ಕಾಲ ಅನ್ಯಾಯ ಎದುರಿಸುತ್ತಲೇ ಬಂತು.
ಮಂಗಳೂರು ಬಂದರಿನ ಸರಕು ಸಾಗಣೆ ವೆಚ್ಚದಿಂದಲೇ ಪಾಲಕ್ಕಾಡ್ ರೈಲ್ವೆ ವಿಭಾಗಕ್ಕೆ ವಾರ್ಷಿಕ ವಾಗಿ ರೂ. 600 ಕೋಟಿ ರೂ. ಆದಾಯ ಬರುತ್ತಿತ್ತು ಮತ್ತು ಪ್ರಯಾಣಿಕರ ಟಿಕೆಟ್ ಸೇರಿ ವಿವಿಧ ಆದಾಯ ಮೂಲ ಗಳಿಂದ ಸುಮಾರು ರೂ. 1200 ಕೋಟಿ ಸಂಗ್ರಹವಾಗುತ್ತಿತ್ತು. ಅಂದರೆ, ಪಾಲ ಕ್ಕಾಡ್ ವಿಭಾಗದ ಆದಾಯದಲ್ಲಿ ಅರ್ಧಕ್ಕರ್ಧ ಆದಾಯ ಮಂಗಳೂರು ಬಂದರಿನಿಂದ ಬರುತ್ತಿತ್ತು. ಈಗ ಮಂಗಳೂರು ಪ್ರದೇಶ ಮೈಸೂರು ವಿಭಾಗಕ್ಕೆ ಸೇರುವುದರಿಂದ ಮೈಸೂರು ರೈಲ್ವೆ ವಿಭಾಗದ ಸರಕು ಸಾಗಣೆ ಆದಾಯವೇ ರೂ. 1500 ಕೋಟಿ ರೂ. ದಾಟಬಹುದು.
ಇದು ಇಡೀ ನೈಋತ್ಯ ರೈಲ್ವೆ ವಲಯ ಸುಧಾರಣೆಗೆ ಸಹಕಾರಿಯಾಗಲಿದೆ. ನೈಋತ್ಯ ರೈಲ್ವೆಯಿಂದ ಹೆಚ್ಚು ಹಣ ಬರುತ್ತಿದ್ದಂತೆಯೇ ಈ ಭಾಗದ ರೈಲ್ವೆ ಅಭಿವೃದ್ಧಿ ಮತ್ತು ವಿಸ್ತರಣೆಗೆ ಕೇಂದ್ರ ಆದ್ಯತೆ ನೀಡಲಿದೆ. ಅಂದರೆ, ಕರ್ನಾಟಕದ ರೈಲ್ವೆ ವಲಯದ ಬಹುತೇಕ ಅರ್ಧ ಭಾಗಕ್ಕೆ ಕೇಂದ್ರ ಸರಕಾರದ ತೀರ್ಮಾನದಿಂದ ಅನುಕೂಲವಾಗಲಿದೆ.
ಇದು ನಿಜವಾಗಿಯೂ ಸಂಭ್ರಮಿಸಬೇಕಾದ, ಸಚಿವರು, ಸಂಸದರನ್ನು ಅಭಿನಂದಿಸಬೇಕಾದ ಸುದ್ದಿ. ಆದರೆ, ರಾಜ್ಯ ಕಾಂಗ್ರೆಸ್ ಸರಕಾರ, ನಾಯಕರು ಮಾಡಿರುವುದೇನು? ಮೈಸೂರಿಗೆ ಮಂಗಳೂರು ಪ್ರದೇಶದ ರೈಲ್ವೆಯನ್ನು ಸೇರ್ಪಡೆಗೊಳಿಸಿದ್ದನ್ನು ಸ್ವಾಗತಿಸಿ, ಬೆಂಬಲಿಸಬೇಕೆಂಬ ಕನಿಷ್ಠ ತಿಳುವಳಿಕೆ, ಕಾಳಜಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ರಾಜ್ಯ ಸರಕಾರದ ಸಚಿವ ಮಹಾಶಯ ರಲ್ಲಿ ಕಾಣುತ್ತಿಲ್ಲ.
ಕಾಂಗ್ರೆಸ್ ಬಿಡಿ, ಬಿಜೆಪಿಯ ಕೆಲ ನಾಯಕರನ್ನು ಬಿಟ್ಟರೆ ಉಳಿದವರು ಇದು ನಮಗೆ ಸಂಬಂಧಿಸಿ ದ್ದಲ್ಲ ಎಂಬಂತೆ ವರ್ತಿಸುತ್ತಿರುವುದೂ ನಾಚಿಕೆಗೇಡಿನ ಸಂಗತಿ. ಕೇರಳ ಸಿಎಂ ವಿ.ಡಿ.ಸತೀಶನ್ ಪ್ರಧಾನಿಗೆ ಪತ್ರ ಬರೆದ ಮೇಲೂ ರಾಜ್ಯ ಸರಕಾರ ಮೌನವಾಗಿರುವುದು ನೋಡಿದರೆ ರಾಜ್ಯ ಕಾಂಗ್ರೆಸ್ಸಿಗರು ಕೇರಳಕ್ಕೆ ವಿಧೇಯರಾಗಿದ್ದಾರೆಯೇ ಎಂದೇ ಅನುಮಾನಿಸಬೇಕಾಗುತ್ತದೆ.
ಹಾಗಾದರೆ, ಕೇರಳ ಕಾಂಗ್ರೆಸ್ ಸರಕಾರ ವಿರೋಧಿಸಿದೆ ಎಂದ ಮಾತ್ರಕ್ಕೆ ಕರ್ನಾಟಕದ ರೈಲ್ವೆ ಹಿತಾ ಸಕ್ತಿ ಕಾಯುವ ತೀರ್ಮಾನ ಸ್ವಾಗತಿಸುವ ಸಣ್ಣ ಹೇಳಿಕೆಯೊಂದನ್ನು ನೀಡಲು ರಾಜ್ಯ ಕಾಂಗ್ರೆಸ್ ನಾಯಕರಿಗೆ ದಿಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಂತದ ನಾಯಕರ ಅನುಮತಿ ಬೇಕೇ? ಅಥವಾ ಪ್ರಿಯಾಂಕಾ ಗಾಂಧಿ ಅವರನ್ನು ಸಂಸದೆಯನ್ನಾಗಿ ಮಾಡಿದ್ದು ಕೇರಳದವರು. ಹೀಗಾಗಿ, ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಸೂಚನೆ ಇಲ್ಲದೆ ಏನೂ ಹೇಳುವುದು ಬೇಡ ಎಂದು ಸಿಎಂ ಆದಿಯಾಗಿ ಎಲ್ಲರೂ ಶಪಥ ಮಾಡಿದ್ದಾರೆಯೇ ಗೊತ್ತಿಲ್ಲ.
ಈ ಹಿನ್ನೆಲೆಯ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆ.24ರಂದು ಪತ್ರ ಬರೆದು, ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಸಂಸದರ ಸಭೆಯಲ್ಲಿ, ಪಕ್ಷಾತೀತವಾಗಿ ರಾಜ್ಯದ ಹಿತಾಸಕ್ತಿ ಕಾಪಾಡಲು ಶ್ರಮಿಸಬೇಕು ಎಂಬ ಮುಖ್ಯಮಂತ್ರಿಗಳ ಮಾತನ್ನೇ ನೆನಪಿಸುತ್ತಾ, ಅಧಿಸೂಚನೆಯನ್ನು ಬೆಂಬಲಿಸಿ ಎಂದು ತಿಳಿಸಿದ್ದಾರೆ.
ಕೇರಳದ ಜನಪ್ರತಿನಿಧಿಗಳು ಎಷ್ಟರಮಟ್ಟಿಗೆ ಪ್ರಬಲರಾಗಿದ್ದಾರೆ ಎಂದರೆ ರೈಲ್ವೆ ಇಲಾಖೆ ಅಧಿಸೂಚನೆ ಹೊರ ಬಿದ್ದ ಕೆಲವೇ ಗಂಟೆಗಳಲ್ಲಿ 9 ಮಂದಿ ಸಂಸದರು ಆನ್ಲೈನ್ ಮೀಟಿಂಗ್ ನಡೆಸಿ ಕೇಂದ್ರದ ಮೇಲೆ ಒತ್ತಡ ಹೇರುವುದು ಮತ್ತು ಪ್ರಧಾನಿಗೆ ಪತ್ರ ಬರೆಯುವ ಬಗ್ಗೆ ತೀರ್ಮಾನ ಮಾಡಿದ್ದರು. ಅದರಂತೆ ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರು ಪ್ರಧಾನಿ ಮೋದಿ ಅವರಿಗೆ ಪತ್ರವನ್ನೂ ಬರೆದು, ಕೇರಳದ ಜತೆ ಚರ್ಚಿಸದೆ ತೆಗೆದುಕೊಂಡ ಏಕಪಕ್ಷೀಯ ತೀರ್ಮಾನದಿಂದ ಅನ್ಯಾಯವಾಗಿದೆ. ತಕ್ಷಣವೇ ರೈಲ್ವೆ ಇಲಾಖೆ ಈ ಅಧಿಸೂಚನೆ ಹಿಂಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಕೇರಳ ಬಿಜೆಪಿ ಭಿನ್ನ ನಿಲುವು ತಳೆದಿದ್ದು, ಕೇಂದ್ರದ ಕ್ರಮವನ್ನು ಸ್ವಾಗತಿಸಿದೆ.
ಕಳೆದ 2-3 ದಶಕಗಳಿಂದ ಕೇಂದ್ರದ ವಿವಿಧ ರೈಲ್ವೆ ಸಚಿವರಿಗೆ ಪಾಲಕ್ಕಾಡ್ನಿಂದ ಮಂಗಳೂರು ಪ್ರದೇಶ ವನ್ನು ಬೇರ್ಪಡಿಸಿ, ಮಂಗಳೂರಿಗೆ ಪ್ರತ್ಯೇಕ ರೈಲ್ವೆ ಡಿವಿಷನ್ ಮಾಡಿ ಎಂದು ಕರಾವಳಿ ಭಾಗದ ಕಾಂಗ್ರೆಸ್, ಬಿಜೆಪಿ ಸೇರಿ ಎಲ್ಲಾ ಪಕ್ಷಗಳ ಮುಖಂಡರು ಮನವಿ ಮಾಡುತ್ತಿದ್ದರು.
ಯುಪಿಎ ಸರಕಾರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ, ಅಲ್ಪಾವಧಿಗೆ ಕೇಂದ್ರ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ಎನ್ಡಿಎ ಸರಕಾರದ ಆರಂಭದಲ್ಲಿ ರೈಲ್ವೆ ಸಚಿವರಾಗಿದ್ದ ಡಿ.ವಿ.ಸದಾನಂದ ಗೌಡರಿಗೆ ಈ ಕುರಿತ ಮನವಿಗಳು ಬಂದಿದ್ದನ್ನು ದೆಹಲಿಯಲ್ಲಿದ್ದಾಗ ನಾನೂ ನೋಡಿದ್ದೆ.
ರೈಲ್ವೆ ಹೋರಾಟಗಾರರು ಕೂಡ ರೈಲ್ವೆ ಭವನಕ್ಕೆ ಬಂದು ತಮ್ಮ ಬೇಡಿಕೆಯನ್ನು ಮುಂದಿಡುತ್ತಾ ಕನ್ನಡಿಗ ರಿಂದಲಾದರೂ ಈ ಐತಿಹಾಸಿಕ ಪ್ರಮಾದ ಸರಿಯಾಗಲಿ ಎಂದು ಪ್ರಾರ್ಥಿಸಿ ವಾಪಸಾಗು ತ್ತಿದ್ದರು. ಆದರೆ, ಅವರ್ಯಾರಿಂದಲೂ ಮಂಗಳೂರಿಗರ ಬೇಡಿಕೆಗೆ ನ್ಯಾಯ ಒದಗಿಸಲು ಸಾಧ್ಯ ವಾಗಲಿಲ್ಲ. ಸಂಸದ ಬ್ರಿಜೇಶ್ ಚೌಟರ ನಿರಂತರ ಫಾಲೋ-ಅಪ್, ರೈಲ್ವೆ ಮಂಡಳಿ ಅಧ್ಯಕ್ಷರು ಹಾಗೂ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ರನ್ನು ಭೇಟಿಯಾದಾಗಲೆ ಮಂಗಳೂರು ರೈಲ್ವೆ ಪ್ರದೇಶದ ಅಗತ್ಯತೆಯ ಮನವರಿಕೆ ಮಾಡುತ್ತಿದ್ದರು.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಈ ತೀರ್ಮಾನದ ರಾಜಕೀಯ ಪರಿಣಾಮದ ಬಗ್ಗೆ ಅರಿವಿತ್ತಾದರೂ, 1991ರಿಂದ ದಕ್ಷಿಣ ಕನ್ನಡದ ಜನರು ಬಿಜೆಪಿಯನ್ನು ಆಯ್ಕೆ ಮಾಡುತ್ತಾ ಬಂದಿರುವುದನ್ನು ಅವರು ಗಮನಿಸಿದ್ದಾರೆ. ಪಕ್ಷದ ಕುರಿತ ಅವರ ನಿಷ್ಠೆ ಬದಲಾಗಿಲ್ಲ ಎಂಬ ರಾಜಕೀಯ ಅಂಶವನ್ನು ಕೂಡ ಪರಿಗಣಿಸಿ ಇದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ ಎನ್ನುವುದು ಗುಟ್ಟಿನ ವಿಚಾರವೇನಲ್ಲ. ಯಾವುದೇ ಸರಕಾರವಿರಲಿ, ಒಂದು ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮುನ್ನ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರ ಹಾಕುತ್ತದೆ. ಹೀಗಾಗಿ, ಕೇಂದ್ರ ರೈಲ್ವೆ ಇಲಾಖೆಯ ಸಚಿವರು ಕೂಡ ಈ ರೀತಿ ಯೋಚಿಸಿದ್ದರೆ ಅದು ಅಚ್ಚರಿಯ ವಿಷಯವೇನಲ್ಲ.
ಮುಂದೆ ಆಗಬೇಕಾಗಿರುವುದೇನು?
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿರುವ ಪ್ಲಾಟ್ʼಫಾರ್ಮ್ ಸಂಖ್ಯೆ ಸಾಕಾಗುತ್ತಿಲ್ಲ. ಹೀಗಾಗಿ, ಜಿಲ್ಲೆಯಲ್ಲಿ ಮೆಗಾ ಟರ್ಮಿನಲ್ ರಚನೆಗೆ ಗಮನ ನೀಡುವ ಕೆಲಸಗಳು ಆಗಬೇಕು. ವಿಶೇಷವಾಗಿ ಬಂಟ್ವಾಳ, ಪುತ್ತೂರು, ಬೆಳ್ತಂಗಡಿಯಿಂದ ಉಜಿರೆಯ ಮೂಲಕ ಧರ್ಮಸ್ಥಳಕ್ಕೆ ರೈಲ್ವೆ ಜಾಲ ವಿಸ್ತರಿಸುವ ಕೆಲಸ ಆಗಬೇಕಿದೆ (ಈ ಹಿಂದೆ ಬಜೆಟ್ನಲ್ಲಿ ಘೋಷಣೆಯಾಗಿ ನನೆಗುದಿಗೆ ಬಿದ್ದಿದೆ). ಭೌಗೋಳಿಕ ಹಾಗೂ ಅರಣ್ಯದ ಕಾರಣದಿಂದ ಸಾಕಾರಗೊಂಡಿಲ್ಲ.
ಇದು ಸಾಧ್ಯವಾದರೆ, ಉಜಿರೆ, ದಿಡುಪೆ, ಸಂಸೆ, ಕಳಸ, ಮೂಡಿಗೆರೆ ಮೂಲಕ ರಾಜಧಾನಿಗೆ ಪರ್ಯಾಯ ಮಾರ್ಗ ಕಲ್ಪಿಸುವ ಕೆಲಸ ಮಾಡಬಹುದು. ಮೂಡಿಗೆರೆ ಸಮೀಪವೇ, ಬೇಲೂರು, ಹಳೆಬೀಡು ರೈಲು ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಮಾರ್ಗಕ್ಕೆ ಹೊಸ ಮಾರ್ಗ ಸೇರಿಸುವ ಕೆಲಸ ಮಾಡಬಹುದು. ಇದರಿಂದ ಶಿರಾಡಿ ಘಾಟಿಗೆ ಪರ್ಯಾಯ ರೈಲ್ವೆ ಜಾಲ ವಿಸ್ತರಿಸಲು ಅವಕಾಶವಿದೆ. ಇದು ಕೂಡ ಈ ಹಿಂದೆ ಹಲವು ಪ್ರಸ್ತಾಪವಾಗಿ, ಮುಂದೆ ಹೋಗಿಲ್ಲ.
ಒಂದೊಮ್ಮೆ ಈ ಯೋಜನೆ ಜಾರಿಗೊಂಡರೆ, ಮಳೆಗಾಲದಲ್ಲಿ ಪದೇ ಪದೆ ಕರಾವಳಿಗೆ ರೈಲು ಸಂಪರ್ಕ ಜಾಲ ಕಡಿತಗೊಳ್ಳುವ ಭಯದಿಂದಲೂ ಪಾರಾಗಲು ಅವಕಾಶವಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಕೂಡ ಹಲವು ಬಾರಿ ಧರ್ಮಸ್ಥಳಕ್ಕೆ ರೈಲು ಸಂಪರ್ಕ ಕಲ್ಪಿಸುವ ಮಾತ ನಾಡಿದ್ದರು. ರಾಜ್ಯದ ರೈಲ್ವೆ ಯೋಜನೆಗಳ ವಿಚಾರದಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದು, ದಶಕಗಳಿಂದ ಬಾಕಿ ಉಳಿದಿದ್ದ ಹಲವು ಮೇಲ್ಸೇತುವೆ, ಕೆಳ ಸೇತುವೆಗಳನ್ನು ಸಮಾರೋಪಾದಿಯಲ್ಲಿ ಮುಗಿಸಿದ್ದಾರೆ.
ಅದಕ್ಕಿಂತಲೂ ಹೆಚ್ಚಾಗಿ ಬೆಂಗಳೂರು-ಪಾವಗಡ-ರಾಯದುರ್ಗ ಮಾರ್ಗ, ಬೆಂಗಳೂರು-ತುಮಕೂರು-ಚಿತ್ರದುರ್ಗ, ದಾವಣಗೆರೆ ಹೊಸ ಮಾರ್ಗವನ್ನು ಮುಂದಿನ ವರ್ಷದ ಮಾರ್ಚ್ ಅಂತ್ಯದೊಳಗಾಗಿ ಪೂರ್ಣಗೊಳಿಸಲು ಪ್ರಯತ್ನ ನಡೆಸಿ, ಮಧ್ಯ, ಕಿತ್ತೂರು ಕರ್ನಾಟಕದ ಜನರಿಗೆ ನೆರವಾಗುತ್ತಿದ್ದಾರೆ. ಈಗಾಗಲೇ ಈ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ತುಮಕೂರು-ದಾವಣಗೆರೆ ರೈಲು ಸಂಪರ್ಕ ಸಾಧ್ಯವಾದರೆ 100 ಕಿ.ಮೀ ಅಂತರ ಕಡಿಮೆಯಾಗಿ, ಪ್ರಯಾಣದ ಅವಧಿಯು 2 ಗಂಟೆ ಕಡಿಮೆಯಾಗಲಿದೆ. ಇಷ್ಟು ದೊಡ್ಡ ಯೋಜನೆ ಮುಗಿಸುತ್ತಿರುವ ಸೋಮಣ್ಣರಿಗೆ ಕರಾವಳಿಯದ್ದು ದೊಡ್ಡ ವಿಚಾರವೇನಲ್ಲ.
ಕರಾವಳಿಯ ಹಳೆಯ ಮಾರ್ಗದ ರೈಲು ಸಂಚಾರಕ್ಕೆ ಮುಂದಿನ ಬಜೆಟ್ನಲ್ಲಿ ಸರ್ವೇಗೆ ಅನುಮೋದನೆ ನೀಡಿ, ಭೂ ಸ್ವಾಧೀನ ಕೆಲಸ ಆರಂಭಿಸಿದರೆ, ಮುಂದಿನ ದಶಕದಲ್ಲಿ ಯೋಜನೆ ಸಾಕಾರಗೊಳ್ಳುವಂತೆ ಮಾಡಬಹುದು. ಎಲ್ಲಕ್ಕಿಂತಲೂ ಹೆಚ್ಚಾಗಿ, 1991ರಿಂದಲೂ ಮಂಗಳೂರಿ ನಿಂದ ಬಿಜೆಪಿ ಸಂಸದರೇ ಆಯ್ಕೆಯಾಗುತ್ತಿದ್ದಾರೆ. ಹಿಂದುತ್ವದ ಪ್ರಯೋಗ ಶಾಲೆಯಾಗಿ ಮಾಡಿ ಕೊಂಡ ಮಂಗಳೂರಿಗೆ ಇದುವರೆಗೂ ಕೇಂದ್ರದಿಂದ ಹೇಳಿಕೊಳ್ಳುವಂತಹ ಯಾವುದೇ ಯೋಜನೆ ಗಳು ಜಾರಿಯಾಗಿಲ್ಲ.
ಜಿಲ್ಲೆಗೊಂದು ಸರಕಾರಿ ವೈದ್ಯಕೀಯ ಕಾಲೇಜು, ಸರಕಾರಿ ಎಂಜಿನಿಯರಿಂಗ್ ಕಾಲೇಜು, ಸರಕಾರಿ ಕಾನೂನು ಕಾಲೇಜು, ಸರಕಾರಿ ಹೆಣ್ಣು ಮಕ್ಕಳ ಪಿಯು-ಪದವಿ ಕಾಲೇಜುಗಳು ಜಿಲ್ಲೆಯಲ್ಲಿ ಇದುವರೆಗೂ ಜಾರಿಯಾಗದಂತೆ ಖಾಸಗಿ ಲಾಬಿ ಅಡ್ಡಿಪಡಿಸುತ್ತಿವೆ. ರೈಲ್ವೆ ಜಾಲ ವಿಸ್ತರಣೆಯಾಗ ದಂತೆ ತಡೆಯುವಲ್ಲಿ ಖಾಸಗಿಯವರ ಲಾಬಿಯೇ ದೊಡ್ಡ ಮಟ್ಟದಲ್ಲಿದೆ. ಒಂದೊಮ್ಮೆ ಇದೆಲ್ಲವನ್ನೂ ನಿವಾರಿಸಿ, ಯೋಜನೆ ಗಳನ್ನು ಕಾರ್ಯರೂಪಕ್ಕಿಳಿಸಿದರೆ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಹೆಸರು ಶಾಶ್ವತವಾಗಿ ಜನಮಾನಸ ದಲ್ಲಿ ಉಳಿಯಲು ಸಾಧ್ಯವಿದೆ.